ಪೂಜೆ, ಪುನಸ್ಕಾರ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವಾ? ಶಾಸ್ತ್ರಗಳು ಹೇಳೋದೇನು ನೋಡಿ
ಕಷ್ಟ-ಸುಖಗಳು ಜೀವನದ ಸಹಜ ಭಾಗ. ಪೂಜೆ, ಪುನಸ್ಕಾರಗಳು ಕರ್ಮಫಲವನ್ನು ಪೂರ್ಣವಾಗಿ ನಿವಾರಿಸದಿದ್ದರೂ, ಸಮಸ್ಯೆಗಳನ್ನು ಎದುರಿಸುವ ಶಕ್ತಿ, ಧನಾತ್ಮಕ ಚಿಂತನೆ ಹಾಗೂ ಸರಿಯಾದ ಮಾರ್ಗವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತವೆ. ಭಗವಂತನಿಗೆ ಕಷ್ಟಗಳನ್ನು ನಿವಾರಿಸಲು ಕೇಳುವುದಕ್ಕಿಂತ, ಅವುಗಳನ್ನು ಎದುರಿಸುವ ಶಕ್ತಿ ನೀಡುವಂತೆ ಪ್ರಾರ್ಥಿಸುವುದು ಮುಖ್ಯ. ಮಾನಸಿಕ ಭಕ್ತಿಯು ಹೆಚ್ಚಿನ ಪ್ರಾಶಸ್ತ್ಯ ಪಡೆಯುತ್ತದೆ.
ಪೂಜೆ-ಪುನಸ್ಕಾರಗಳನ್ನು ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆಯೇ ಎಂಬ ಪ್ರಶ್ನೆಯ ಬಗ್ಗೆ ‘ಟಿವಿ9’ ಕನ್ನಡ ಡಿಜಿಟಲ್ನ ‘ನಿತ್ಯ ಭಕ್ತಿ’ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿಶ್ಲೇಷಿಸಿದ್ದಾರೆ. ಮಾನವರಾಗಿ ಜನಿಸಿದ ಮೇಲೆ ಕಷ್ಟ-ಸುಖಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಣೆಬರಹ ಅಥವಾ ಕರ್ಮಫಲವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಪೂಜೆ, ಪುನಸ್ಕಾರ, ಹೋಮ, ಹವನ, ಯಜ್ಞ, ಯಾಗಾದಿ ಮತ್ತು ಜಪಗಳು ಕಷ್ಟಗಳನ್ನು ಸಂಪೂರ್ಣವಾಗಿ ನಿವಾರಿಸದಿದ್ದರೂ, ಅವುಗಳನ್ನು ಎದುರಿಸುವ ವಿಶೇಷ ಶಕ್ತಿಯನ್ನು ನೀಡುತ್ತವೆ. ಪೂಜೆ, ಮಂತ್ರಗಳನ್ನು ಮಾಡುವಾಗ ‘ಮನನಾತ್ ತ್ರಾಯತೇ ಇತಿ ಮಂತ್ರಃ’ ಎಂಬಂತೆ ನಮ್ಮ ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳು ಮೂಡಿ, ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಮೂಡುತ್ತದೆ. ಕಷ್ಟ ಬಂದಾಗ ಭಗವಂತನನ್ನು ಕಷ್ಟ ನಿವಾರಣೆ ಮಾಡು ಎಂದು ಕೇಳುವ ಬದಲು, ಕಷ್ಟಗಳನ್ನು ಎದುರಿಸುವ ಶಕ್ತಿ ನೀಡು ಎಂದು ಪ್ರಾರ್ಥಿಸಬೇಕು. ನಿತ್ಯ ಪೂಜೆ, ನಾಮಸ್ಮರಣೆ, ಜಪ, ತಪಗಳಿಗಿಂತ ಮಾನಸಿಕ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ‘ಯದ್ಭಾವಂ ತದ್ಭವತಿ’ ಎಂಬಂತೆ ಸರಳ ಮತ್ತು ಶುದ್ಧ ಹೃದಯದ ಭಕ್ತಿಗೆ ಭಗವಂತ ಒಲಿಯುತ್ತಾನೆ ಎಂದು ಗುರೂಜಿ ವಿಶ್ಲೇಷಿಸಿದ್ದಾರೆ.
