ಬೆಳಗಾವಿ: ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಬಹಳ ಎಚ್ಚರಿಕೆಯಿಂದ ಯಾರಿಗೂ ನೋವಾಗದ ಹಾಗೆ ಮಾತಾಡುತ್ತಾರೆ. ನಗರದ ಸಾಂಬ್ರಾ ವಿಮಾನ ನಿಲ್ದಾಣದ ಬಳಿ ಪತ್ರಿಕಾಗೋಷ್ಟಿ ನಡೆಸಿ ಮಾತಾಡಿದ ಅವರು ಕಾಂಗ್ರೆಸ್ ಪಕ್ಷದ ನಡುವೆ ಭಿನ್ನಾಭಿಪ್ರಾಯಗಳಿದ್ದಾಗ್ಯೂ ಪಕ್ಷದ ಸಮಗ್ರತೆ ವಿಷಯ ಬಂದಾಗ ಮತ್ತು ಚುನಾವಣೆ ಸಮಯದಲ್ಲಿ ಎಲ್ಲರೂ ಒಂದಾಗುತ್ತೇವೆ ಅಂತ ಹೇಳಿದರು. ಅಪರೋಕ್ಷವಾಗಿ ಅವರು ಡಿಕೆ ಶಿವಕುಮಾರ್ (DK Shivakumar) ಜೊತೆ ಮುನಿಸಿರುವುದನ್ನು ಅಂಗೀಕರಿಸಿದರಾದರೂ ಅದೇನು ಗಂಭೀರ ವಿಷಯವೇ ಅನ್ನುವ ದೋರಣೆ ಪ್ರದರ್ಶಿಸಿದರು. ಅಧಿಕಾರಿಗಳ ವರ್ಗಾವಣೆ ವಿಷಯ ಅಪ್ರಸ್ತುತ ಎನ್ನುವ ಧಾಟಿಯಲ್ಲಿ ಮಾತಾಡಿದ ಸತೀಶ್, ತಾವ್ಯಾವತ್ತೂ ತಮ್ಮ ಆಯ್ಕೆಯ ಅಧಿಕಾರಿಗಳು ಬೇಕೆಂದು ಕೇಳಿಲ್ಲ, ಬೆಳಗಾವಿಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದವರೇ ಮುಂದುವರಿದಿದ್ದಾರೆ, ಸರ್ಕಾರ ಮತ್ತು ಜನರ ಪರ ಕೆಲಸ ಮಾಡುವ ಅಧಿಕಾರಿಗಳಿದ್ದರೆ ಸಾಕು ಎಂದರು. ಎಲ್ಲ ವಿಷಯಗಳನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಥಳುಕು ಹಾಕಬೇಡಿ, ಅವರ ಮತ್ತು ತಮ್ಮ ನಡುವೆಯೂ ಯಾವುದೇ ಮನಸ್ತಾಪವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ