ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಾಧ್ಯಮದವರ ಜೊತೆ ಆಗಾಗ ಕಣ್ಣಾ ಮುಚ್ಚಾಲೆ ಆಟ ಆಡುತ್ತಿರುತ್ತಾರೆ. ಹಾಗಂತ ಅವರಿಗೆ ಮಾಧ್ಯಮದವರು ಅಂದರೆ ಅಲರ್ಜಿ ಅಂತೇನೂ ಇಲ್ಲ. ಆದರೆ ಕೆಲವು ಸಲ ಮಾಧ್ಯಮ ಪ್ರತಿನಿಧಿಗಳು ತಮಗಾಗಿ ಕಾಯುತ್ತಿದ್ದರೂ ಮುಖ ಓರೆ ಮಾಡಿಕೊಂಡು, ಇಲ್ಲವೇ ಬೆನ್ನು ಹಾಕಿ ಹೋಗಿ ಬಿಡುತ್ತಾರೆ. ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ (Krishna) ನಗರದ ಶಾಸಕರ ಜೊತೆ ಸಭೆ ನಡೆಸಿ ಹೊರ ಬಂದ ಸಿಎಂ ನಾವು ವಿವರಿಸಿದ ಹಾಗೆಯೇ ಮಾಡಿದರು. ಮೊದಲು ಹೊರಬಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ಸುದ್ದಿಗಾರರೊಂದಿಗೆ ಮಾತಾಡಲು ಮೈಕ್ ಗಳ ಬಳಿ ಬರುತ್ತಿರುವಾಗಲೇ ಮುಖ್ಯಮಂತ್ರಿ ಸಹ ಹೊರ ಬೀಳುತ್ತಾರೆ. ಆದರೆ ಮಾಧ್ಯಮದವರನ್ನು ಕಂಡ ಕೂಡಲೇ ಬೆನ್ನುಹಾಕಿ ವಾಪಸ್ಸು ಹೋಗುತ್ತಾರೆ. ಪತ್ರಕರ್ತರು ಸಾರ್ ಅಂತ ಕೂಗಿದರೂ ಕಾರಲ್ಲಿ ಕುಳಿತು ಹೊರಟೇ ಬಿಡುತ್ತಾರೆ. ಅವರು ಹೀಗೆ ಮಾಡೋದು ಮೊದಲ ಸಲವೇನೂ ಅಲ್ಲದ ಕಾರಣ ಸುದ್ದಿಗಾರರಿಗೆ ನಿರಾಸೆಯಾಗುವುದಿಲ್ಲ. ಮುಂಬರಲಿರುವ ಲೋಕ ಸಭಾ ಚುನಾವಣೆಯ ಸಿದ್ಧತೆ ಬಗ್ಗೆ ಅವರು ಬೆಂಗಳೂರು ಶಾಸಕರೊಂದಿಗೆ ಚರ್ಚಿಸಿದರು ಅಂತ ಮಾಹಿತಿ ಲಭ್ಯವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ