ಬೆಂಗಳೂರು: ಸದನದಲ್ಲಿಂದು ಆಡಳಿತ ಪಕ್ಷದ ಬೆವರಿಳಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಸದನದ ಹೊರಗೆ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ವಿಧಾನ ಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ (pro Pakistan slogan) ಕೂಗಿದ ಸಂಗತಿ ದೇಶ ವಿದೇಶಗಳಲ್ಲಿ ಪ್ರತಿಧ್ವನಿಸುತ್ತಿದ್ದರೂ ಸರ್ಕಾರ (Karnataka government) ಮಾತ್ರ ಏನೂ ನಡೆದಿಲ್ಲ ಎಂಬಂತೆ ವರ್ತಿಸುತ್ತಿದೆ. ಮಾಧ್ಯಮಗಳ ವರದಿಯನ್ನು ಕಾಂಗ್ರೆಸ್ ನಂಬಲು ತಯಾರಿಲ್ಲ, ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ, ನಿನ್ನೆ ಘಟನೆ ನಡೆದ ಸಂಗತಿ ಗೊತ್ತಾದ ಕೂಡಲೇ ಸಚಿವ ಸಂಪುಟದ ಸಭೆ ಕರೆದು ವಿಷಯವನ್ನು ಚರ್ಚಿಸಬೇಕಿತ್ತು ಮತ್ತು ಖಂಡಿಸಬೇಕಿತ್ತು, ಇವತ್ತು ಅಧಿವೇಶನದಲ್ಲಿ ಒಂದು ವಾಕ್ಯದ ನಿರ್ಣಯ ಮಂಡಿಸಬೇಕಿತ್ತು ಎಂದು ಅಶೋಕ ಹೇಳಿದರು. ವಿಧಾನ ಸೌಧಕ್ಕೆ ಒಬ್ಬೇಒಬ್ಬ ಮಂತ್ರಿ ಬಂದಿಲ್ಲ, ಪಾಕ್ ಪರ ಘೋಷಣೆಗಳನ್ನು ವಿಧಾನಸೌಧದಲ್ಲಿ ಕೂಗಿದರೂ ಅದಕ್ಕೆ ಪುರಾವೆ ಕೇಳುತ್ತಾರೆ, ನಾಚಿಕೆಯಾಗಬೇಕು ಈ ಸರ್ಕಾರಕ್ಕೆ ಎಂದು ಅಶೋಕ್ ಜರಿದರು. ರಾಜ್ಯಸಭೆಗೆ ಆಯ್ಕೆಯಾಗಿರುವ ನಾಸೀರ್ ಹುಸ್ಸೇನ್ ಮಾಧ್ಯಮದವರನ್ನು ಅವಾಚ್ಯ ಪದಗಳಲ್ಲಿ ನಿಂದಿಸುತ್ತಾರೆ. ಸದನದಲ್ಲಿ ಗೃಹ ಸಚಿವರು, ಇಂಥ ಕೃತ್ಯಗಳನ್ನು ಸಹಿಸಲ್ಲ, ಶಿಕ್ಷೆಗೊಳಪಡಿಸುತ್ತೇವೆ ಅಂತ ಹೇಳುತ್ತಾರೆ, ಅದರೆ 24 ಗಂಟೆ ಕಳೆದರೂ ಯಾರನ್ನೂ ಬಂಧಿಸಿಲ್ಲ ಎಂದು ಅಶೋಕ ಕಿಡಿಕಾರಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Wed, 28 February 24