ವಿಡಿಯೋ: ದರ್ಶನ್ ಅನ್ನು ಕಾಣಲು ಬಳ್ಳಾರಿ ಜೈಲಿಗೆ ವಿಜಯಲಕ್ಷ್ಮಿ ಎಂಟ್ರಿ

|

Updated on: Sep 01, 2024 | 12:56 PM

ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಅನ್ನು ಕಾಣಲು ಅವರ ಪತ್ನಿ ವಿಜಯಲಕ್ಷ್ಮಿ ಇಂದು ಬಳ್ಳಾರಿಗೆ ಆಗಮಿಸಿದ್ದರು. ಪತಿಗಾಗಿ ಚೀಲವೊಂದರಲ್ಲಿ ಕೆಲ ವಸ್ತುಗಳನ್ನು ಸಹ ತಂದಿದ್ದರು. ಸಂಪೂರ್ಣ ತಪಾಸಣೆ ನಡೆಸಿ ಪೊಲೀಸರು ವಿಜಯಲಕ್ಷ್ಮಿ ಅವರನ್ನು ಒಳಗೆ ಬಿಟ್ಟರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅನ್ನು ಹೊರಗೆ ತರಲು ಪತ್ನಿ ವಿಜಯಲಕ್ಷ್ಮಿ ನಾನಾ ಹೋರಾಟ ಮಾಡುತ್ತಿದ್ದಾರೆ. ಈ ಹಿಂದೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ದರ್ಶನ್​ ಅವರನ್ನು ಪ್ರತಿ ಸೋಮವಾರ ಭೇಟಿ ಮಾಡುತ್ತಿದ್ದರು. ಆದರೆ ಕಳೆದ ವಾರ, ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ಸಿಕ್ಕ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಭೇಟಿ ಮಾಡಿರಲಿಲ್ಲ. ಈ ಸೋಮವಾರವೂ ಸಹ ಭೇಟಿ ಮಾಡಲು ಸಾಧ್ಯ ಆಗಿರಲಿಲ್ಲ. ಈಗ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಿದ್ದು, ಇಂದು ವಿಜಯಲಕ್ಷ್ಮಿ ಅವರು ಜೈಲಿಗೆ ಬಂದು ದರ್ಶನ್ ಅನ್ನು ಭೇಟಿ ಆದರು. ದರ್ಶನ್ ಭೇಟಿಗೆ ಬಂದಿದ್ದ ವಿಜಯಲಕ್ಷ್ಮಿ ಅವರು ತಂದಿದ್ದ ಎಲ್ಲ ವಸ್ತುಗಳನ್ನು ಪರಿಶೀಲನೆ ನಡೆಸಿದ ಪೊಲೀಸರು ವಿಜಯಲಕ್ಷ್ಮಿ ಅವರನ್ನು ಒಳಗೆ ಕಳಿಸಿದರು. ದರ್ಶನ್​ಗಾಗಿ ಒಂದು ಚೀಲದಲ್ಲಿ ಕೆಲ ವಸ್ತುಗಳನ್ನು ವಿಜಯಲಕ್ಷ್ಮಿ ತಂದಿದ್ದರು. ಆ ವಸ್ತುಗಳನ್ನು ದರ್ಶನ್ ತಮ್ಮ ಬ್ಯಾರಕ್​ಗೆ ತೆಗೆದುಕೊಂಡು ಹೋದರು. ಮುಂದಿನ ಕಾನೂನು ಹೋರಾಟದ ಬಗ್ಗೆ ವಿಜಯಲಕ್ಷ್ಮಿ, ದರ್ಶನ್​ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:58 pm, Sat, 31 August 24

Follow us on