ಅಭಿವೃದ್ಧಿ ಹೆಸರಲ್ಲಿ ಹಸಿರು ಬಲಿ?: ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮಕ್ಕೆ ಮುಂದಾದ ಬಿಡಿಎ

Updated on: May 21, 2026 | 1:48 PM

ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್‌ನಲ್ಲಿ ಬಿ.ಡಿ.ಎ. ವಾಣಿಜ್ಯ ಸಂಕೀರ್ಣ ಪುನರ್‌ನಿರ್ಮಾಣಕ್ಕಾಗಿ 180 ಮರಗಳನ್ನು ಕಡಿಯುವ ಪ್ರಸ್ತಾವನೆಗೆ ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹಳೆಯ ಮರಗಳನ್ನು ಉಳಿಸಿಕೊಂಡೇ ಹೊಸ ಸಂಕೀರ್ಣ ನಿರ್ಮಿಸುವಂತೆ ಆಗ್ರಹ ಕೇಳಿಬಂದಿದೆ. ಬಿ.ಡಿ.ಎ. ಅಧಿಕಾರಿಗಳು ಜಿ.ಬಿ.ಎ. ಅರಣ್ಯ ವಿಭಾಗಕ್ಕೆ ಮನವಿ ಸಲ್ಲಿಸಿದ್ದು, ಅನುಮತಿಗಾಗಿ ಕಾಯುತ್ತಿದ್ದಾರೆ.

ಬೆಂಗಳೂರು, ಮೇ.21: ರಾಜಧಾನಿ ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಗಿಡಮರಗಳನ್ನು ಉಳಿಸಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿದೆ. ಇದೀಗ ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್‌ನಲ್ಲಿರುವ ಬಿ.ಡಿ.ಎ. ವಾಣಿಜ್ಯ ಸಂಕೀರ್ಣದ ಸುತ್ತಲೂ ಇರುವ 180 ಮರಗಳಿಗೆ ಕುತ್ತು ಎದುರಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ಹಳೆಯ ವಾಣಿಜ್ಯ ಸಂಕೀರ್ಣವನ್ನು ಕೆಡವಿ ಹೊಸದಾಗಿ ನಿರ್ಮಿಸಲು ಬಿ.ಡಿ.ಎ. ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ, ಸಂಕೀರ್ಣದ ಆವರಣದಲ್ಲಿರುವ ಸುಮಾರು 180 ವಿವಿಧ ಜಾತಿಯ ಮರಗಳನ್ನು ಕಡಿಯಲು ಅನುಮತಿ ಕೋರಿ ಬಿ.ಡಿ.ಎ. ಅಧಿಕಾರಿಗಳು ಜಿ.ಬಿ.ಎ. ಅರಣ್ಯ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮರಗಳನ್ನು ಕಡಿಯುವ ಈ ಪ್ರಸ್ತಾವನೆಗೆ ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮರಗಳಿದ್ದ ಸ್ಥಳದಲ್ಲಿ ತಾತ್ಕಾಲಿಕ ಅಂಗಡಿಗಳನ್ನು ನಿರ್ಮಿಸುವಾಗ ಬಿ.ಡಿ.ಎ. ಅನುಮತಿ ಇಲ್ಲದೆ ಎರಡು ಮರಗಳನ್ನು ಮತ್ತು ರೆಂಬೆಕೊಂಬೆಗಳನ್ನು ಕಡಿದ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಜಿ.ಬಿ.ಎ. ಅರಣ್ಯ ವಿಭಾಗವು ಬಿ.ಡಿ.ಎ. ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಜನರು ಮತ್ತು ಪರಿಸರ ಪ್ರೇಮಿಗಳು ಮರಗಳನ್ನು ಉಳಿಸಿಕೊಂಡೇ ಹೊಸ ಸಂಕೀರ್ಣವನ್ನು ನಿರ್ಮಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ಮರಗಳು ಸಾರ್ವಜನಿಕರಿಗೆ ಆಶ್ರಯ ತಾಣಗಳಾಗಿದ್ದು, ಇವುಗಳನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಜಿ.ಬಿ.ಎ. ಅರಣ್ಯ ವಿಭಾಗವು ಮರಗಳನ್ನು ಕಡಿಯಲು ಅನುಮತಿ ನೀಡಬಾರದು ಎಂಬುದು ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More