ಕೈದಿಗಳಿಗೆ ರಾಜಾತಿಥ್ಯ ವಿಡಿಯೋ ವೈರಲ್ ಹಿಂದೆ ಷಡ್ಯಂತ್ರ?: ಅಸಲಿ ಟಾರ್ಗೆಟ್ ಯಾರು?
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಐಷಾರಾಮಿ ಜೀವನದ ವಿಡಿಯೋಗಳು ಒಂದೊಂದೇ ವೈರಲ್ ಅಗುತ್ತಿವೆ. ಅಧಿಕಾರಿಗಳ ವರ್ಗಾವಣೆ ಅಥವಾ ಹಣಕಾಸಿನ ಲಾಭಕ್ಕಾಗಿ ಈ ವಿಡಿಯೋಗಳು ಹೊರಬಂದಿರಬಹುದೆಂಬ ಸಂಶಯ ವ್ಯಕ್ತವಾಗಿದ್ದು, ಎಡಿಜಿಪಿ ದಯಾನಂದ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮತ್ತೊಂದೆಡೆ ಇದೇ ವಿಚಾರವಾಗಿ ಗೃಹಸಚಿವರೂ ಸಭೆ ನಡೆಸಿದ್ದಾರೆ.
ಬೆಂಗಳೂರು, ನವೆಂಬರ್ 10: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದ್ದು, ಮೊಬೈಲ್ ಮತ್ತು ಟಿವಿಗಳ ಬಳಕೆಯ ವಿಡಿಯೋಗಳು ವೈರಲ್ ಆಗಿವೆ. ಜೈಲಿನಲ್ಲಿ ಭಯೋತ್ಪಾದಕರು ಮತ್ತು ಅತ್ಯಾಚಾರಿಗಳ ಕೈಯಲ್ಲಿ ಮೊಬೈಲ್ ಫೋನ್ಗಳು ಪತ್ತೆಯಾಗಿವೆ. ಜೈಲಿನಲ್ಲೇ ವಿಚಾರಣಾಧೀನ ಕೈದಿ ಜನ್ಮದಿನ ಆಚರಿಸಿಕೊಂಡ ದೃಶ್ಯಗಳೂ ಈ ಹಿಂದೆ ವೈರಲ್ ಆಗಿದ್ದವು. ಈ ಅಕ್ರಮಗಳ ಹಿಂದೆ ಅಧಿಕಾರಿಗಳ ಕೈವಾಡವಿದ್ದು, ಹುದ್ದೆಗಳಿಗಾಗಿ ಅಥವಾ ಹಣಕಾಸಿನ ಲಾಭಕ್ಕಾಗಿ ವ್ಯವಸ್ಥಿತ ಪಿತೂರಿ ನಡೆಯುತ್ತಿದ್ಯಾ ಎಂಬ ಅನುಮಾನ ವ್ಯಕ್ತವಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಉನ್ನತ ಹುದ್ದೆಗಳಿಗೆ ಭಾರಿ ಬೇಡಿಕೆ ಇದ್ದು, ಇಲ್ಲಿ ವಿಐಪಿ ಖೈದಿಗಳಿಗೆ ಸೌಲಭ್ಯ ನೀಡಿಯೇ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಲಾಗುತ್ತೆ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಹಿರಿಯ ಅಧಿಕಾರಿಗಳನ್ನ ಟಾರ್ಗೆಟ್ ಮಾಡುವ ಉದ್ದೇಶದಿಂದ ಸಿಬ್ಬಂದಿಯೇ ಈ ಕೆಲಸ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ವಿಚಾರವನ್ನು ಗೃಹ ಸಚಿವ ಜಿ. ಪರಮೇಶ್ವರ್ ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಕಾರಾಗೃಹ ಎಡಿಜಿಪಿ ಬಿ.ದಯಾನಂದ ವಿದೇಶದಲ್ಲಿರುವ ಹಿನ್ನೆಲೆ ಅವರ ಅನುಪಸ್ಥಿತಿಯಲ್ಲಿ ಸಭೆ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
