ಬೆಂಗಳೂರು: ನಿಮಗೆ ನೆನಪಿರಬಹುದು. ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ನಿನ್ನೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಚರ್ಚೆಗೆ ಅವಕಾಶ ಕೋರಿದ್ದರು. ಆದರೆ, ಕೊಬ್ಬರಿಗೆ ಬೆಂಬಲ ಬೆಲೆ ವಿಷಯ ಅದಕ್ಕಿಂತ ಮೊದಲೇ ಲಿಸ್ಟ್ ಆಗಿದ್ದರಿಂದ ಅವಕಾಶ ಸಿಗಲಿಲ್ಲ ಮತ್ತು ಅಡಳಿತ ಪಕ್ಷದ ನಾಯಕರು ಸಹ ಚರ್ಚೆಗೆ ಸಿದ್ಧರಿರಲಿಲ್ಲ ಅನ್ನೋದು ಸತ್ಯ. ಇಂದಿನ ಕಾರ್ಯಕಲಾಪ ಶುರುವಾಗುತ್ತಿದ್ದಂತೆಯೇ ಅಶೋಕ ಕಾನೂನು ಮತ್ತು ಸುವ್ಯವಸ್ಥೆ ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಿದಾಗ ಗೃಹ ಸಚಿವ ಜಿ ಪರಮೇಶ್ವರ್ (G Parameshwara), ಕಾನೂನು ಮತ್ತು ಸುವ್ಯವಸ್ಥೆ ವಿಷಯದಲ್ಲಿ ನಿಲುವಳಿ ಸೂಚನೆ (adjournment motion) ಮಂಡಿಸಲು ಆಗದು ಅಂತ 70 ರ ದಶಕದಲ್ಲಿ ಅಗಿರುವ ರೂಲಿಂಗ್ ಅನ್ನು ನಿಯಮಾವಳಿ ಪುಸ್ತಕದಿಂದ ಓದಿ ಹೇಳಿದರು.
ಆಗ ಅಶೋಕ ಬೆಂಬಲಕ್ಕೆ ಬಂದ ಹಿರಿಯ ಬಿಜೆಪಿ ಶಾಸಕ ಸುರೇಶ್ ಕುಮಾರ್, ನಿಯಮಾವಳಿಯ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆ ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಲು ಬಾರದು ಅನ್ನೋದನ್ನ ಒಪ್ಪುತ್ತೇನೆ, ಅದರೆ ಇದಕ್ಕೆ ಮೊದಲು ಹತ್ತಾರು ಬಾರಿ ಚರ್ಚೆಗೆ ಅವಕಾಶ ಸಿಕ್ಕಿದೆ, ಅದು ನಿಮಗೂ ಗೊತ್ತಿದೆ ಅಂದಾಗ ಪರಮೇಶ್ವರ್, ವಿಷಯವನ್ನು ಸ್ಫೀಕರ್ ಒಪ್ಪಿಗೆ ಮೇರೆಗೆ ಬೇರೆಯದರಲ್ಲಿ ಚರ್ಚೆಗೆ ತೆಗೆದುಕೊಳ್ಳಬಹುದು, ನಿಯಮ ಏನು ಹೇಳುತ್ತದೆ ಅಂತಷ್ಟೇ ತಾನು ಹೇಳಿದ್ದು ಅನ್ನುತ್ತಾರೆ. ಮಧ್ಯೆ ಪ್ರವೇಶ ಮಾಡಿದ ಸ್ಪೀಕರ್ ಯುಟಿ ಖಾದರ್ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:41 am, Wed, 14 February 24