ನಮ್ಮ ದೇಶದ ಮುಸಲ್ಮಾನರು ಕಾನೂನು ಗೌರವಿಸುವ ಜನರು, ಹೈಕೋರ್ಟ್ ಅದೇಶವನ್ನು ಪಾಲಿಸುತ್ತಾರೆ: ರಘುಪತಿ ಭಟ್, ಶಾಸಕ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 15, 2022 | 6:18 PM

ಮಧ್ಯಂತರ ಆದೇಶದಲ್ಲಿದ್ದ ಗೊಂದಲಗಳನ್ನು ಈಗಿನ ತೀರ್ಪಿನಲ್ಲಿ ನಿವಾರಿಸಲಾಗಿದೆ. ಹಿಜಾಬ್ ಧರಿಸುವುದು ಧಾರ್ಮಿಕ ಆಚರಣೆಯ ಭಾಗವಲ್ಲ ಅಂತ ತೀರ್ಪಿನಲ್ಲಿ ಹೇಳಲಾಗಿದೆಯೇ ಹೊರತು ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿಲ್ಲ ಎಂದು ಭಟ್ ಹೇಳುತ್ತಾರೆ.

ಬೆಂಗಳೂರು: ಹಿಜಾಬ್ ಧರಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ತೀರ್ಪನ್ನು ನೀಡಿದೆ. ಹಿಜಾಬ್ ಧಾರ್ಮಿಕ ಆಚರಣೆಯ (religious practice) ಭಾಗವಲ್ಲ ಎಂದು ಕೋರ್ಟ್ ಹೇಳಿರುವುದರಿಂದ ವಿವಾದ ಕೊನೆಗೊಂಡಿದೆ ಎಂದು ಭಾವಿಸಲಾಗುತ್ತಿದೆ. ಹಿಜಾಬ್ ವಿವಾದ್ (hijab row) ಸೃಷ್ಟಿಯಾದ ಉಡುಪಿ ಸರ್ಕಾರಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಭಾಗವಾಗಿರುವ ಬಿಜೆಪಿ ಶಾಸಕ ರಘುಪತಿ ಭಟ್ (Raghupati Bhat) ಅವರು ವಿಧಾನ ಮಂಡಲದಲ್ಲಿ ಬಜೆಟ್ ಆಧಿವೇಶನ ನಡೆಯುತ್ತಿರುವುದರಿಂದ ಬೆಂಗಳೂರಲ್ಲಿ ಇದ್ದಾರೆ. ಕೋರ್ಟ್ ತೀರ್ಪು ಹೊರಬಿದ್ದ ತಕ್ಷಣ ಮಾಧ್ಯಮದವರು ಮೊದಲು ಮಾತಾಡಿಸಿದ್ದು ಭಟ್ ಅವರನ್ನೇ. ಕೋರ್ಟ್ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿಲ್ಲ ಅಂತ ಹೇಳಿದ ಅವರು, ಹಿಜಾಬ್ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೇಳಿದೆ. ಅದೇಶ ಸ್ಪಷ್ಟವಾಗಿರುವ ಕಾರಣ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಅದನ್ನು ಪಾಲಿಸಬೇಕು ಮತ್ತು ಕನಿಷ್ಟ ಶಿಕ್ಷಣ ಸಂಸ್ಥೆಗಳಲ್ಲಾದರೂ ಹಿಂದೂ-ಮುಸ್ಲಿಂ ಎಂಬ ಬೇದಭಾವವಿಲ್ಲದೆ ವಿದ್ಯಾಬ್ಯಾಸ ಮಾಡುವ ಮನೋಬಾವ ಬೆಳೆಸಿಕೊಳ್ಳಬೇಕು ಅಂತ ಮನವಿ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಭಟ್ ಹೇಳಿದರು.

ಸರ್ಕಾರದ ಆದೇಶ ಮತ್ತು ಹೈಕೋರ್ಟ್ ಆದೇಶದ ಹೊರತಾಗಿಯೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜುಗಳಿಗೆ ಬರುತ್ತಿದ್ದರು, ಈಗ ಹೊಸ ಆದೇಶದ ಪಾಲನೆಯಾಗುತ್ತಾ ಎಂದು ಮಾಧ್ಯಮದವರು ಕೇಳಿದಾಗ ಶಾಸಕ ಭಟ್ ಅವರು, ಹಿಂದೆ ಕೋರ್ಟ್ ನೀಡಿದ್ದು ಮಧ್ಯಂತರ ಆದೇಶವಾಗಿತ್ತು. ಆದರೆ ಈಗಿನ ಆದೇಶದಲ್ಲಿ ಸಂಪೂರ್ಣ ಮಾಹಿತಿ ಇದೆ. ಯಾವ್ಯಾವ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಅಂತ ಹೇಳಲಾಗಿದೆಯೋ ಅಲ್ಲಿ ಧಾರ್ಮಿಕ ವಸ್ತ್ರಗಳನ್ನು ಧರಿಸುವ ಅವಕಾಶವಿಲ್ಲ. ಮಧ್ಯಂತರ ಆದೇಶದಲ್ಲಿದ್ದ ಗೊಂದಲಗಳನ್ನು ಈಗಿನ ತೀರ್ಪಿನಲ್ಲಿ ನಿವಾರಿಸಲಾಗಿದೆ. ಹಿಜಾಬ್ ಧರಿಸುವುದು ಧಾರ್ಮಿಕ ಆಚರಣೆಯ ಭಾಗವಲ್ಲ ಅಂತ ತೀರ್ಪಿನಲ್ಲಿ ಹೇಳಲಾಗಿದೆಯೇ ಹೊರತು ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿಲ್ಲ ಎಂದು ಭಟ್ ಹೇಳುತ್ತಾರೆ.

ಮುಂದುವರಿದು ಮಾತಾಡಿದ ಬಿಜೆಪಿ ಶಾಸಕರು, ನಮ್ಮ ದೇಶದ ಮುಸಲ್ಮಾನರು ಕಾನೂನು ಗೌರವಿಸುವಂಥವರು. ಮೊದಲಿಗೆ ಅವರಲ್ಲಿ ಹಿಜಾಬ್ ಶಾಲಾ ಕಾಲೇಜುಗಳಿಗೆ ಹೋಗುವ ಬಗ್ಗೆ ಗೊಂದಲವಿತ್ತು. ಕೆಲವರು ಮೊದಲು ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದರು. ನಮ್ಮ ಉಡುಪಿ ಕಾಲೇಜಿನಲ್ಲಂತೂ ವಿದ್ಯಾರ್ಥಿನಿಯರು ಅದನ್ನು ಧರಿಸುತ್ತಲೇ ಇರಲಿಲ್ಲ. ಶಾಲಾ ಕಾಲೇಜು ಅಭಿವೃದ್ಧಿ ಸಮಿತಿಗಳು ಸಮವಸ್ತ್ರ ಕಡ್ಡಾಯ ಮಾಡಿದ್ದರೆ ಅಲ್ಲಿ ಧಾರ್ಮಿಕ ವಸ್ತ್ರಗಳಿಗೆ ಅವಕಾಶವಿರಲಿಲ್ಲ. ಸಮವಸ್ತ್ರ ಕಡ್ಡಾಯವಲ್ಲದ ಕಾಲೇಜುಗಳಲ್ಲಿ ಅವರು ಧರಿಸಬಹುದಾಗಿತ್ತು ಎಂದು ರಘುಪತಿ ಭಟ್ ಹೇಳಿದರು.

ಇದನ್ನೂ ಓದಿ:  ಹಿಜಾಬ್ ತೀರ್ಪು: ಭಟ್ಕಳದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಂ ವರ್ತಕರು

Follow us on