My India My Life Goals: ಅವಿದ್ಯಾಂತನಾದರೂ ಒಡಿಶಾದ ಬೀಚಿಭಾಯ್ ಲಕ್ಷಾಂತರ ಆಮೆಗಳನ್ನು ಸಂರಕ್ಷಿಸುತ್ತಾ ವಿದ್ಯಾವಂತರಿಗೆ ಪ್ರೇರಣೆಯಾಗಿದ್ದಾರೆ!

|

Updated on: Jul 25, 2023 | 12:17 PM

ಆಮೆಗಳಾಗಲೀ ಅಥವಾ ಮರಗಳಾಗಲೀ ಪ್ರತಿಯೊಬ್ಬ ಭಾರತೀಯ ಅವುಗಳನ್ನು ಸಂರಕ್ಷಿಸಿ, ಕಾಪಾಡಿ ಮತ್ತು ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ಉಡುಗೊರೆಯಾಗಿ ನೀಡಬೇಕು ಎಂದು ಅವರು ಹೇಳುತ್ತಾರೆ.

ಬೆಂಗಳೂರು: ಹಾಗೆ ನೋಡಿದರೆ ಒಡಿಶಾದ ಗುಂಡಾಬಾಲ್ ನಿವಾಸಿಯಾಗಿರುವ ಇವರ ಹೆಸರು ಬಿಚಿತ್ರಾನಂದ್ ಬಿಸ್ವಾಲ್ (Bichitrananda Biswal). ಆದರೆ ಅವರು ಗುರುತಿಸಿಕೊಳ್ಳೋದು, ಜನಪ್ರಿಯತೆ ಮತ್ತು ಖ್ಯಾತಿ ಗಳಿಸಿರೋದು ಬೀಚಿ ಭಾಯ್ (Bichi Bhai) ಅಂತ! ಹೌದು, ವನ್ಯಜೀವಿ ಸಂರಕ್ಷಣೆಗೆ (wildlife conservation) ಒಡಿಶಾ ಸರ್ಕಾರದ ಬಿಜು ಪಟ್ನಾಯಕ್ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಬೀಚಿ ಭಾಯ್ ಕಳೆದ 27 ವರ್ಷಗಳಿಂದ ಸಮುದ್ರ ತೀರಕ್ಕೆ ಮೊಟ್ಟೆಯಿಡಲು ಬರುವ ಸಮಯದಲ್ಲಿ ಸಾವಿಗೀಡಾಗುತ್ತಿದ್ದ ಆಮೆಗಳನ್ನು (turtles) ಸಂರಕ್ಷಿಸುತ್ತಿದ್ದಾರೆ. ಹೆಚ್ಚು ಓದಿರದ ಬೀಚಿ ಭಾಯ್ 1996 ರಲ್ಲಿ ಬೀಚ್ ಗೆ ವಾಕ್ ಗೆಂದು ಬಂದಾಗ ತೀರದಲ್ಲಿ ಸಾವಿರಾರು ಆಮೆಗಳು ಸತ್ತು ಬಿದ್ದಿರುವುದನ್ನು ಕಂಡು ಗರಬಡಿದವರಂತಾಗಿದ್ದರು. ಅದೇ ದಿನ ಅವರು ಅವುಗಳನ್ನು ಸಂರಕ್ಷಿಸುವ ಪಣತೊಟ್ಟು ಅ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ತಮ್ಮೊಂದಿಗೆ ಸಮಾನ ಮನಸ್ಕ ಯುವಕರನ್ನು ಜೊತೆಗೂಡಿಸಿಕೊಂಡು ಮೊಟ್ಟೆಯಿಡಲು ತೀರಕ್ಕೆ ಬರುವ ಆಮೆಗಳಿಗೆ ಸೂಕ್ತ ಜಾಗ ಕಲ್ಪಸಿ, ಮೊಟ್ಟೆಗಳನ್ನು ಅವರು ಸಂರಕ್ಷಿಸುತ್ತಿದ್ದಾರೆ. ಮೊಟ್ಟೆಯಿಂದ ಮರಿಗಳು ಹೊರಬಂದ ಬಳಿಕ ಅವುಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಬಿಡುವ ಕೆಲಸ ಅವರು ಎರಡೂವರೆ ದಶಕಗಳಿಂದ ಮಾಡುತ್ತಿದ್ದಾರೆ. ಆಮೆಗಳ ಸಂರಕ್ಷಣೆಗೆ ಬೀಚಿ ಭಾಯ್ ಮದುವೆ ಕೂಡ ಆಗದೆ ತಮ್ಮಿಡೀ ಬದುಕನ್ನು ಮುಡುಪಾಗಿಟ್ಟಿದ್ದಾರೆ. ಪ್ರತಿಯೊಬ್ಬ ಭಾರತೀಯ, ಆಮೆಗಳಾಗಲೀ ಅಥವಾ ಮರಗಳಾಗಲೀ ಸಂರಕ್ಷಿಸಿ ಕಾಪಾಡಿ ಮತ್ತು ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ಉಡುಗೊರೆಯಾಗಿ ನೀಡಬೇಕು ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on