ಸ್ಪಂದನ ವಿಜಯ್ ಸಾವು: ಮಗಳಂಥ ಸೊಸೆಯನ್ನು ಕಳೆದುಕೊಂಡು ಅಘಾತಕ್ಕೊಳಗಾಗಿರುವ ಎಸ್ ಎ ಚಿನ್ನೇಗೌಡರಿಗೆ ಮಾಧ್ಯಮದವರೊಂದಿಗೆ ಮಾತಾಡಲಾಗಲಿಲ್ಲ

ಅರುಣ್​ ಕುಮಾರ್​ ಬೆಳ್ಳಿ

Updated on: Aug 07, 2023 | 5:59 PM

ಚಿನ್ನೇಗೌಡರ ಸೊಸೆ ದೂರದ ದೇಶದಲ್ಲಿ ಹೃದಯಾಘಾತದಿಂದ ಮರಣವನ್ನಪ್ಪಿದ್ದರೆ ಮಗ ವಿಜಯ ರಾಘವೇಂದ್ರ ಕೂಡ ಅಲ್ಲೇ ಇದ್ದಾರೆ.

ಬೆಂಗಳೂರು: ವಿಜಯರಾಘವೇಂದ್ರ ತಂದೆ ಮತ್ತು ಇಂದು ಬೆಳಗಿನ ಜಾವ ಅಕಾಲಿಕ ಮರಣಕ್ಕೆ ತುತ್ತಾದ ಸ್ಪಂದನ ವಿಜಯ್ (Spandana Vijay) ಮಾವ ಎಸ್ ಎ ಚಿನ್ನೇಗೌಡ (SA Chinne Gowda) ಅಪಾರ ದುಃಖದಲ್ಲಿದ್ದಾರೆ. ಮಗಳಂಥ ಸೊಸೆಯನ್ನು ಕಳೆದುಕೊಂಡಿರುವ ಅವರ ಮೇಲೆ ಆಕಾಶವೇ ಕಳಚಿಬಿದ್ದಂತಾಗಿದೆ. ಸೊಸೆ ದೂರದ ದೇಶದಲ್ಲಿ ಹೃದಯಾಘಾತದಿಂದ ಮರಣವನ್ನಪ್ಪಿದ್ದರೆ ಮಗ ವಿಜಯರಾಘವೇಂದ್ರ (Vijay Raghavendra) ಕೂಡ ಅಲ್ಲೇ ಇದ್ದಾರೆ. ಮಗನ ಮನೆಗೆ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ ಚಿನ್ನೇಗೌಡರು ಹಾಕುತ್ತಿದ್ದ ಹೆಜ್ಜೆಗಳಲ್ಲಿ ಸ್ಥರತೆ ಇರಲಿಲ್ಲ. ಕನ್ನಡ ಚಿತ್ರರಂಗದ ದಿಗ್ಗಜ ದಿವಂಗತ ಡಾ ರಾಜ್ ಕುಮಾರ್ ಅವರ ಬಾಮೈದನಾಗಿರುವ (ದಿವಂಗತ ಪಾರ್ವತಮ್ಮ ರಾಜಕುಮಾರ್ ಚಿನ್ನೇಗೌಡರ ಹಿರಿಯ ಸಹೋದರಿ) ಚಿನ್ನೇಗೌಡರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಲಿಲ್ಲ. ಸುದ್ದಿಗಾರರಿಗೆ ಕೈ ಮುಗಿಯುತ್ತಾ ಅವರು ಅಲ್ಲಿಂದ ಹೊರಟರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.