ಬೆಂಗಳೂರು: ನಗರದ ಗಾಂಧಿಭವನದಲ್ಲಿ ನಡೆದ ಕವಿ ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸು ಹೋಗುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಅರೆಮನಸ್ಸಿನಿಂದ ಉತ್ತರ ನೀಡಿದರು. ಕರ್ನಾಟಕ ಸರ್ಕಾರ ತಮಿಳುನಾಡುಗೆ ಕಳೆದ 10 ದಿನಗಳಲ್ಲಿ ಹರಿಬಿಟ್ಟಿರುವ ಕಾವೇರಿ ನದಿ ನೀರಿನ ಪ್ರಮಾಣವನ್ನು ಪರಿಶೀಲಿಸುವಂತೆ ಸುಪ್ರೀಮ್ ಕೋರ್ಟ್ ಹೇಳಿರುವುದಕ್ಕೆ ಅವರ ಪ್ರತಿಕ್ರಿಯೆ ಕೇಳಿದಾಗ, ತಮಗೆ ವಿಷಯ ಗೊತ್ತಿಲ್ಲ, ವಿಚಾರಿಸಿ ಹೇಳುವುದಾಗಿ ತಿಳಿಸಿದರು. ಮಾಧ್ಯಮಗಳೊಂದಿಗೆ ಮುಖ್ಯಮಂತ್ರಿ ಎಂದಿನಂತೆ ಮಾತಾಡುವ ವ್ಯವಧಾನ ತೋರಲಿಲ್ಲ, ಬಹಳ ಅವಸರದಲ್ಲಿದ್ದಂತೆ ಕಂಡುಬಂದರು. ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳನ್ನು (ISRO scientists) ಅಭಿನಂದಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ನಾಳೆ ಬೆಂಗಳೂರಿಗೆ ಆಗಮಿಸುತ್ತಿರುವುದನ್ನು ಹೇಳಿದಾಗ ಸಿದ್ದರಾಮಯ್ಯ, ಬರಲಿ ಅವರಿಗೆ ಸ್ವಾಗತವಿದೆ ಎಂದು ಹೇಳಿ ರೋಡ್ ಶೋ ನಡೆಸುವುದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ