ಸಿಬಿಎಸ್​ಇ ಶಾಲೆಗಳಲ್ಲಿ ಎಐ ಕೋರ್ಸ್; 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಕಲಿಕೆ

AI courses at CBSE schools: ದೇಶಾದ್ಯಂತ ಇರುವ 30 ಸಾವಿರಕ್ಕೂ ಅಧಿಕ ಸಿಬಿಎಸ್​ಇ ಶಾಲೆಗಳ ಪೈಕಿ 4,538 ಶಾಲೆಗಳಲ್ಲಿ ಎಐ ಕೋರ್ಸ್​ಗಳಿವೆ. 2024-25ರ ಶೈಕ್ಷಣಿಕ ವರ್ಷದಲ್ಲಿ 9ರಿಂದ 12ನೇ ತರಗತಿಯವರೆಗೂ ಎಂಟು ಲಕ್ಷಕ್ಕೂ ಅಧಿಕ ಮಕ್ಕಳು ಎಐ ಕೋರ್ಸ್ ಕಲಿಯುತ್ತಿದ್ದಾರೆ. ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ಅವರು ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ.

ಸಿಬಿಎಸ್​ಇ ಶಾಲೆಗಳಲ್ಲಿ ಎಐ ಕೋರ್ಸ್; 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಕಲಿಕೆ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್

Updated on: Dec 10, 2024 | 4:09 PM

ನವದೆಹಲಿ, ಡಿಸೆಂಬರ್ 10: ಸಿಬಿಎಸ್​ಇ ಶಾಲೆಗಳಿಂದ (CBSE affiliated schools) ಸುಮಾರು ಎಂಟು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಎಐ ಕೋರ್ಸ್​ಗಳಿಗೆ ಸೇರಿದ್ದಾರೆ. ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಕಲಿಯುವ ಹಪಾಹಪಿ ಶಾಲಾ ಮಟ್ಟದಲ್ಲೇ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ಈ ಮಾಹಿತಿ ಹಂಚಿಕೊಂಡಿದ್ದಾರೆ. 2024-25ರ ಸಾಲಿನಲ್ಲಿ 4,538 ಶಾಲೆಗಳಿಂದ 9 ಮತ್ತು 10ನೇ ತರಗತಿ ಮಟ್ಟದಲ್ಲಿ ಓದುತ್ತಿರುವ 7,90,999 ವಿದ್ಯಾರ್ಥಿಗಳು ಎಐ ಕೋರ್ಸ್​ಗಳಿಗೆ ಸೇರಿದ್ದಾರೆ. ಸಿಬಿಎಸ್​ಇ 944 ಶಾಲೆಗಳಲ್ಲಿ ಹತ್ತು ಮತ್ತು ಹನ್ನೊಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 50,363 ವಿದ್ಯಾರ್ಥಿಗಳು ಎಐ ಕೋರ್ಸ್ ಕಲಿಯುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನ ಕೋರ್ಸ್​ಗಳನ್ನು ಸಿಬಿಎಸ್​ಇ ಶಾಲೆಗಳಲ್ಲಿ 2019ರಿಂದ ನಡೆಸಲಾಗುತ್ತಿದೆ. ಆಗಿನಿಂದಲೂ ಇವು ಜನಪ್ರಿಯತೆ ಪಡೆದಿವೆ. ಎಂಟನೇ ಇಯತ್ತೆಯಲ್ಲಿ ಮೊದಲಿಗೆ 15 ಗಂಟೆ ಎಐ ಫೌಂಡೇಶನ್ ಮಾಡ್ಯೂಲ್ ಇದೆ. 9ರಿಂದ 12ನೇ ತರಗತಿಯವರಗೂ ಒಂದು ಎಐ ಸ್ಕಿಲ್ ಕಲಿಯುವ ಅವಕಾಶ ಇರುತ್ತದೆ.

ಇದನ್ನೂ ಓದಿ: ಹಣದುಬ್ಬರ ನವೆಂಬರ್​ನಲ್ಲಿ 70 ಮೂಲಾಂಕಗಳಷ್ಟು ಇಳಿಕೆ ಸಾಧ್ಯತೆ: ಮಾರ್ಗನ್ ಸ್ಟಾನ್ಲೀ ಅಂದಾಜು

‘ಕೃತಕ ಬುದ್ಧಿಮತ್ತೆಯನ್ನು ಅರಿತು, ನಮ್ಮ ಜೀವನದಲ್ಲಿ ಅದರ ಬಳಕೆ ಮಾಡುವ ಕುರಿತು ಅರಿವು ಹೊಂದುವುದು ಎಐ ಪಠ್ಯಕ್ರಮದ ಉದ್ದೇಶವಾಗಿದೆ’ ಎಂದು ಸಚಿವರು ಹೇಳಿದ್ದಾರೆ.

ಸಿಬಿಎಸ್​ಇ ಪಠ್ಯಕ್ರಮ ಅಳವಡಿಸಿಕೊಂಡಿರುವ 30,373 ಶಾಲೆಗಳ ಪೈಕಿ 29,719 ಸಾಲೆಗಳಲ್ಲಿ ಸೂಕ್ತ ಐಟಿ ಇನ್​ಫ್ರಾಸ್ಟ್ರಕ್ಚರ್ ಇದೆ. ಇದರಿಂದ ಎಐ ಹಾಗೂ ಇತರ ಐಟಿ ಆಧಾರಿತ ಕೋರ್ಸ್​ಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಹಣದುಬ್ಬರ, ಆರ್ಥಿಕ ಬೆಳವಣಿಗೆ ಮಧ್ಯೆ ಸಮತೋಲನ ಸಾಧಿಸುವ ಕೆಲಸವಾಗಬೇಕು: ಹೊಸ ಆರ್​ಬಿಐ ಗವರ್ನರ್​ಗೆ ದಾಸ್ ಸಲಹೆಗಳು…

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು 21ನೇ ಶತಮಾನಕ್ಕೆ ಬೇಕಾದ ಕೌಶಲ್ಯಗಳನ್ನು ಹೊಂದಿರುವ ವ್ಯಕ್ತಿಗಳನ್ನು ನಿರ್ಮಿಸಲು ಆದ್ಯತೆ ಕೊಡುತ್ತದೆ. ಮೆಷಿನ್ ಲರ್ನಿಂಗ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನ ಮಹತ್ವವನ್ನು ಹೊಸ ನೀತಿಯಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ,’ ಎಂದು ಕೇಂದ್ರ ಸಚಿವ ಜಯಂತ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Tue, 10 December 24

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us