Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣದುಬ್ಬರ, ಆರ್ಥಿಕ ಬೆಳವಣಿಗೆ ಮಧ್ಯೆ ಸಮತೋಲನ ಸಾಧಿಸುವ ಕೆಲಸವಾಗಬೇಕು: ಹೊಸ ಆರ್​ಬಿಐ ಗವರ್ನರ್​ಗೆ ದಾಸ್ ಸಲಹೆಗಳು…

Challenges for RBI governor: ಆರ್ಥಿಕ ಬೆಳವಣಿಗೆಗೆ ಪೂರಕವಾಗಿದ್ದು, ಹಣದುಬ್ಬರ ದರ ನಿಯಂತ್ರಿಸುವುದು ಆರ್​ಬಿಐಗೆ ಇರುವ ದೊಡ್ಡ ಸವಾಲು ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ಸೈಬರ್ ಅಪಾಯಗಳನ್ನು ಎದುರಿಸುವುದು, ಹೊಸ ತಂತ್ರಜ್ಞಾನ ಆವಿಷ್ಕಾರಗಳಿಗೆ ಉತ್ತೇಜಿಸುವುದು ಇತ್ಯಾದಿ ಸವಾಲುಗಳು ಆರ್​ಬಿಐ ಮುಂದಿವೆ ಎಂದಿದ್ದಾರೆ. ಶಕ್ತಿಕಾಂತದಾಸ್ ಆರ್​ಬಿಐ ಗವರ್ನರ್ ಆಗಿ ಇಂದು ನಿವೃತ್ತರಾಗುತ್ತಿದ್ದಾರೆ. ಸಂಜಯ್ ಮಲ್ಹೋತ್ರಾ 26ನೇ ಆರ್​ಬಿಐ ಗವರ್ನರ್ ಆಗಿದ್ದಾರೆ.

ಹಣದುಬ್ಬರ, ಆರ್ಥಿಕ ಬೆಳವಣಿಗೆ ಮಧ್ಯೆ ಸಮತೋಲನ ಸಾಧಿಸುವ ಕೆಲಸವಾಗಬೇಕು: ಹೊಸ ಆರ್​ಬಿಐ ಗವರ್ನರ್​ಗೆ ದಾಸ್ ಸಲಹೆಗಳು...
ಶಕ್ತಿಕಾಂತದಾಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 10, 2024 | 2:40 PM

ಮುಂಬೈ, ಡಿಸೆಂಬರ್ 10: ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ ತಮ್ಮ ಅಧಿಕಾರಾವಧಿಯ ಕೊನೆಯ ದಿನವಾದ ಇಂದು ರಿಸರ್ವ್ ಬ್ಯಾಂಕ್​ನ ಹಿಂದಿನ ಸಾಧನೆಗಳು ಹಾಗು ಮುಂದಿನ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಕ್ತಿಕಾಂತ ದಾಸ್, ಹಣದುಬ್ಬರವನ್ನು ನಿಯಂತ್ರಿಸುವುದು ಮುಂದಿನ ಆರ್​ಬಿಐ ಗವರ್ನರ್ ಬಳಿ ಇರುವ ಅತಿದೊಡ್ಡ ಸವಾಲು ಎಂದು ಅಭಿಪ್ರಾಯಪಟ್ಟಿದ್ದಾರೆ. ‘ರಿಸರ್ವ್ ಬ್ಯಾಂಕ್ ವಿಚಾರಕ್ಕೆ ಬಂದರೆ ಅತಿಮುಖ್ಯ ಕೆಲಸ ಎಂದರೆ ಹಣದುಬ್ಬರದ ಸಮತೋಲನ ಸಾಧಿಸುವುದು. ಹೊಸ ಗವರ್ನರ್ ನೇತೃತ್ವದಲ್ಲಿ ಟೀಮ್ ಆರ್​ಬಿಐ ಈ ಸವಾಲನ್ನು ಯಶಸ್ವಿಯಾಗಿ ಎದುರಿಸಬಲ್ಲುದು ಎಂದು ಭಾವಿಸಿದ್ದೇನೆ’ ಎಂದು ಶಕ್ತಿಕಾಂತ ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆ ನಡುವೆ ಸಮತೋಲನ ಸಾಧಿಸುವುದು ಬಹಳ ಮುಖ್ಯ. ಹಣದುಬ್ಬರ ನಿಯಂತ್ರಣ ಎಷ್ಟು ಮುಖ್ಯವೋ ಆರ್ಥಿಕ ಪ್ರಗತಿಯ ಸಂಗತಿಯನ್ನೂ ಗಮನಿಸುವುದು ಮುಖ್ಯ. ಹೀಗಾಗಿ, ಪರಿಸ್ಥಿತಿಗನುಗುಣವಾಗಿ ಹಣದುಬ್ಬರ ದರದ ಗುರಿ ಇರಬೇಕು ಎಂದ ಹೃತ್ಪೂರ್ವಕ ಆರ್​ಬಿಐ ಗವರ್ನರ್, ತಮ್ಮ ಅವಧಿಯಲ್ಲಿ ಈ ಸಮತೋಲನ ಸಾಧಿಸಲು ಪ್ರಯತ್ನಿಸಿದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಾಸಾರ್ಹತೆಯಲ್ಲಿ ಆರ್​ಬಿಐ ಇನ್ನೂ ಎತ್ತರಕ್ಕೇರಲಿ: ಭಾವನಾತ್ಮಕ ಸಂದೇಶ ಬರೆದ ಶಕ್ತಿಕಾಂತದಾಸ್

ಹೊಸ ಗವರ್ನರ್ ಮುಂದಿರುವ ಸವಾಲುಗಳು…

  • ಹಣದುಬ್ಬರ ದರವನ್ನು ನಿಗದಿತ ಗುರಿಗೆ ತಂದು ನಿಲ್ಲಿಸುವುದು
  • ಕ್ಷಿಪ್ರ ವೇಗದಲ್ಲಿ ಬದಲಾಗುತ್ತಿರುವ ಜಾಗತಿಕ ರಾಜಕೀಯ ಬೆಳವಣಿಗೆಗಳ ಬಗ್ಗೆ ಆರ್​ಬಿಐನ ಕಣ್ಣು, ಕಿವಿ ಚುರುಕಾಗಿರಬೇಕು.
  • ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುವ ಕೆಲಸ
  • ಸೈಬರ್ ದಾಳಿಗಳ ಅಪಾಯಗಳನ್ನು ನಿಗ್ರಹಿಸುವ ಕೆಲಸ

ಹೊಸ ಗವರ್ನರ್​ರಿಂದ ನಿರೀಕ್ಷಿಸುವುದಿವು…

  • ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ- ಇ-ರುಪೀ) ಮತ್ತು ಯೂನಿಫೈಡ್ ಲೆಂಡಿಂಗ್ ಇಂಟರ್​ಫೇಸ್ (ಯುಎಲ್​ಐ) ಮೊದಲಾದ ಉಪಕ್ರಮಗಳನ್ನು ಮುಂದುವರಿಸುವುದು.
  • ಹಣಕಾಸು ಒಳಗೊಳ್ಳುವಿಕೆಯ ಕಾರ್ಯಕ್ಕೆ ಉತ್ತೇಜನ

ಇದನ್ನೂ ಓದಿ: ಸಂಜಯ್ ಮಲ್ಹೋತ್ರಾ ಹೊಸ ಆರ್​ಬಿಐ ಗವರ್ನರ್ ಆಗಿ ನೇಮಕ; ಶಕ್ತಿಕಾಂತ ದಾಸ್ ಅವಧಿ ಡಿ. 10ಕ್ಕೆ ಅಂತ್ಯ

ಶಕ್ತಿಕಾಂತ ದಾಸ್ 2018ರ ಡಿಸೆಂಬರ್ 18ರಂದು ಆರ್​​ಬಿಐನ 25ನೇ ಗವರ್ನರ್ ಆಗಿ ಪದಗ್ರಹಣ ಮಾಡಿದ್ದರು. ಮೂರು ವರ್ಷಗಳಿಗೆ ಇದ್ದ ಅವರ ಅಧಿಕಾರಾವಧಿ ಒಮ್ಮೆ ವಿಸ್ತರಣೆ ಆಗಿದೆ. ಒಟ್ಟು ಆರು ವರ್ಷ ಸುದೀರ್ಘ ಕಾಲ ಆರ್​ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಡಿಸೆಂಬರ್ 11, ನಾಳೆ ಸಂಜಯ್ ಮಲ್ಹೋತ್ರಾ ಅವರು 26ನೇ ಆರ್​ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ