ಎಪಿಗ್ಯಾಮಿಯಾ ಸಂಸ್ಥಾಪಕ ರೋಹನ್ ಮಿರ್​ಚಂದಾನಿ ನಿಧನ; ಹೃದಯಸ್ತಂಭನದಿಂದ ಮೃತರಾದ ಸಿಇಒಗಳ ಸಾಲಿಗೆ ರೋಹನ್

Rohan Mirchandani passes away: ಎಪಿಗ್ಯಾಮಿಯಾ ಸಂಸ್ಥಾಪಕ 41 ವರ್ಷದ ರೋಹನ್ ಮಿರ್​ಚಂದಾನಿ ಡಿಸೆಂಬರ್ 21ರಂದು ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. 2013ರಲ್ಲಿ ಅವರು ಡ್ರಮ್ಸ್ ಫೂಡ್ ಇಂಟರ್​ನ್ಯಾಷನಲ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅವರ ನೇತೃತ್ವದಲ್ಲಿ ಎಪಿಗ್ಯಾಮಿಯಾ ಎನ್ನುವ ಪ್ರಬಲ ಬ್ರ್ಯಾಂಡ್ ರೂಪುಗೊಂಡಿತ್ತು. ಈ ಹಿಂದೆ ರೋಹನ್ ಮಲ್ಹೋತ್ರಾ, ಅಂಬರೀಷ್ ಮೂರ್ತಿ, ರಂಜನ್ ದಾಸ್ ಮೊದಲಾದ ಯುವ ಸಿಇಒಗಳು ಇದೇ ಕಾರ್ಡಿಯಾಕ್ ಅರೆಸ್ಟ್​ನಿಂದ ಮೃತಪಟ್ಟಿದ್ದುಂಟು.

ಎಪಿಗ್ಯಾಮಿಯಾ ಸಂಸ್ಥಾಪಕ ರೋಹನ್ ಮಿರ್​ಚಂದಾನಿ ನಿಧನ; ಹೃದಯಸ್ತಂಭನದಿಂದ ಮೃತರಾದ ಸಿಇಒಗಳ ಸಾಲಿಗೆ ರೋಹನ್
ರೋಹನ್ ಮಿರ್​ಚಂದಾನಿ

Updated on: Dec 23, 2024 | 12:10 PM

ನವದೆಹಲಿ, ಡಿಸೆಂಬರ್ 23: ಯುವ ಉದ್ಯಮಿ ರೋಹನ್ ಮಿರ್​ಚಂದಾನಿ ಹೃದಯಸ್ತಂಭನಗೊಂಡು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಕೇವಲ 41-42 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಶನಿವಾರ ಅವರು ನಿಧನರಾಗಿರುವುದು ತಿಳಿದುಬಂದಿದೆ. ಎಪಿಗ್ಯಾಮಿಯಾದ ಮಾತೃ ಸಂಸ್ಥೆಯಾದ ಡ್ರಮ್ಸ್ ಫೂಡ್ ಇಂಟರ್ನ್ಯಾಷನಲ್ ಅಧಿಕೃತ ಹೇಳಿಕೆಯಲ್ಲಿ ಈ ಸುದ್ದಿಯನ್ನು ನಿವೇದಿಸಿದೆ. ಎಪಿಗ್ಯಾಮಿಯಾ ಗ್ರೀಕ್ ಯೋಗರ್ಟ್, ಪಾನೀಯ ಇತ್ಯಾದಿ ಆಹಾರ ಉತ್ಪನ್ನಗಳ ಖ್ಯಾತ ಬ್ರ್ಯಾಂಡ್ ಆಗಿದೆ. ಡ್ರಮ್ಸ್ ಫೂಡ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು 2013ರಲ್ಲಿ ಸ್ಥಾಪಿಸಿದ್ದ ರೋಹನ್ ಮಿರ್​ಚಂದಾನಿ ಅವರ ನೇತೃತ್ವದಲ್ಲಿ ಎಪಿಗ್ಯಾಮಿಯಾ ಪ್ರಬಲ ಬ್ರ್ಯಾಂಡ್ ಆಗಿ ಬೆಳೆದಿತ್ತು.

ಉದ್ಯಮ ವಲಯದಲ್ಲಿ ಸಿಇಒಗಳು ಹೃದಯಾಘಾತ ಮತ್ತು ಹೃದಯ ಸ್ತಂಭನದಿಂದ ನಿಧನರಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಕೆಲ ವರ್ಷಗಳಲ್ಲಿ ಕೆಲ ಪ್ರಮುಖ ಸ್ಟಾರ್ಟಪ್​ಗಳ ಸಂಸ್ಥಾಪಕರು ಸಣ್ಣ ವಯಸ್ಸಿನಲ್ಲಿ ಇದೇ ಕಾರ್ಡಿಯಾಕ್ ಅರೆಸ್ಟ್ ಆಗಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಸಾಫ್ಟ್​ಪವರ್​ಗಿಂತಲೂ ಮಿಗಿಲಾದ ಶಕ್ತಿ ಭಾರತದ್ದು; ಭಾರತವಿಲ್ಲದೇ ಜಗತ್ತು ನಡೆಯಲ್ಲ: ಮಾಜಿ ಜರ್ಮನ್ ರಾಯಭಾರಿ ಲಿಂಡ್ನರ್

  • ಗುಡ್ ಕ್ಯಾಪಿಟಲ್ ಸಹ-ಸಂಸ್ಥಾಪಕ ರೋಹನ್ ಮಲ್ಹೋತ್ರಾ 2024ರ ಅಕ್ಟೋಬರ್ 1ರಂದು ಕಾರ್ಡಿಯಾಕ್ ಅರೆಸ್ಟ್ ಆಗಿ ನಿಧನರಾಗಿದ್ದರು.
  • ಪೆಪ್ಪರ್​ಫ್ರೈ ಸಿಇಒ ಅಂಬರೀಷ್ ಮೂರ್ತಿ ಅವರು 51 ವರ್ಷ ವಯಸ್ಸಿನಲ್ಲಿ 2023ರಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು.
  • ರಾಯಲ್ ಎನ್​ಫೀಲ್ಡ್ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಆಗಿದ್ದ ರುದ್ರತೇಜ್ ಸಿಂಗ್ ಅವರು 2020ರಲ್ಲಿ ಹೃದಯ ಸ್ತಂಭನದಿಂದ ಇಹಲೋಕ ತ್ಯಜಿಸಿದ್ದರು. ಅವರಿಗೆ 42 ವರ್ಷ ವಯಸ್ಸು ಮಾತ್ರವೇ ಆಗಿದ್ದು.
  • ಎಸ್​ಎಪಿ ಇಂಡಿಯಾ ಸಂಸ್ಥೆಯ ಸಿಇಒ ಹಾಗೂ ಎಂಡಿ ರಂಜನ್ ದಾಸ್ 2009ರಲ್ಲಿ ಕೇವಲ 39ರ ವಯಸ್ಸಿಗೆ ಹೃದಯಸ್ತಂಭನಕ್ಕೊಳಗಾಗಿ ಕೊನೆಯುಸಿರೆಳೆದಿದ್ದರು.

ಇವತ್ತು ಸ್ಟಾರ್ಟಪ್​ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅಂತೆಯೇ, ಬಿಸಿನೆಸ್ ಪೈಪೋಟಿ ಬಹಳ ಉತ್ತುಂಗದಲ್ಲಿದೆ. ಸ್ಟಾರ್ಟಪ್​ಗಳ ಸಂಸ್ಥಾಪಕರಿಗೆ ಹಿಂದೆಂದಿಗಿಂತಲೂ ಒತ್ತಡಗಳು ಹೆಚ್ಚುತ್ತಿದೆ. ಒಂದೆಡೆ, ಬಿಸಿನೆಸ್ ಬೆಳೆಸಬೇಕು, ಇನ್ನೊಂದೆಡೆ ಹಣಕಾಸು ವ್ಯವಸ್ಥೆ ಮಾಡಬೇಕು. ಇದು ಸವಾಲಿನ ಸಂಗತಿಯಾಗಿದೆ. ಈ ಮಧ್ಯೆ ವೈಯಕ್ತಿಕ ಆರೋಗ್ಯವನ್ನು ಕಡೆಗಣಿಸುವವರೇ ಹೆಚ್ಚು. ಇದು ಸಣ್ಣ ವಯಸ್ಸಿನಲ್ಲಿ ಅಕಾಲಿಕ ಮರಣಕ್ಕೆ ಒಳಗಾಗುವಂತೆ ಮಾಡುತ್ತಿದೆ.

ಇದನ್ನೂ ಓದಿ: ಜಿಎಸ್​ಟಿ ದರಗಳಲ್ಲಿ ಬದಲಾವಣೆ; ಯಾವುವು ಅಗ್ಗ, ಯಾವುವು ದುಬಾರಿ, ಇಲ್ಲಿದೆ ಪಟ್ಟಿ

ಡಿ. 21ರಂದು ಮೃತಪಟ್ಟ ರೋಹನ್ ಮಿರ್​ಚಂದಾನಿ ಬಹಳ ಮಹತ್ವಾಕಾಂಕ್ಷಿ ಗುರಿ ಹೊಂದಿದ್ದ ಯುವ ಉದ್ಯಮಿ ಎನಿಸಿದ್ದರು. ಎಪಿಗ್ಯಾಮಿಯಾ ಬ್ರ್ಯಾಂಡ್ ಅಡಿಯಲ್ಲಿ ಯೋಗರ್ಟ್ ಹಾಗೂ ಇತರ ಡೈರಿ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ ಸೃಷ್ಟಿಸಿದ್ದರು. 30 ನಗರಗಳಲ್ಲಿ 20,000ಕ್ಕೂ ಹೆಚ್ಚು ರೀಟೇಲ್ ಟಚ್​ಪಾಯಿಂಟ್​ಗಳನ್ನು ಸಂಸ್ಥೆ ಬೆಳೆಸಿದೆ. ಮುಂದಿನ ವರ್ಷದೊಳಗೆ ಮಧ್ಯಪ್ರಾಚ್ಯ ದೇಶಗಳಿಗೂ ವಿಸ್ತರಿಸುವ ಆಲೋಚನೆಯಲ್ಲಿ ರೋಹನ್ ಇದ್ದರೆನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us