ವಿಶ್ವದ ಅತಿದೊಡ್ಡ ವ್ಯಾಪಾರ ಬಳಗವಾದ ಆರ್​ಸಿಇಪಿಯಿಂದ ಭಾರತ ಹೊರಬೀಳಲು ಏನು ಕಾರಣ?

Why India left RCEP: ರೀಜನಲ್ ಕಾಂಪ್ರಹೆನ್ಸಿವ್ ಎಕನಾಮಿಕ್ ಕೋ ಆಪರೇಶನ್ (ಆರ್​ಸಿಇಪಿ) ಯೋಜನೆಯಿಂದ ಭಾರತ 2019ರಲ್ಲಿ ಹೊರಬಂದಿತ್ತು. 15 ದೇಶಗಳು ಸದ್ಯ ಆರ್​ಸಿಇಪಿಗೆ ಸಹಿ ಹಾಕಿವೆ. 12 ದೇಶಗಳಲ್ಲಿ ಒಪ್ಪಂದ ಜಾರಿಯಲ್ಲಿದೆ. ಆರ್​ಸಿಇಪಿ ರೂಪಿಸುವ ಆರಂಭದಲ್ಲಿ ಭಾರತವೂ ಇತ್ತು. ಬೇರೆ ಬೇರೆ ಕಾರಣಗಳಿಗೆ ಭಾರತ ಹೊರ ಬಂದಿತು.

ವಿಶ್ವದ ಅತಿದೊಡ್ಡ ವ್ಯಾಪಾರ ಬಳಗವಾದ ಆರ್​ಸಿಇಪಿಯಿಂದ ಭಾರತ ಹೊರಬೀಳಲು ಏನು ಕಾರಣ?
ವ್ಯಾಪಾರ

Updated on: Sep 04, 2024 | 5:03 PM

ನವದೆಹಲಿ, ಸೆಪ್ಟೆಂಬರ್ 4: ಜಾಗತಿಕವಾಗಿ ವಿವಿಧ ದೇಶಗಳು ವಿವಿಧ ರೀತಿಯ ಗುಂಪುಗಳನ್ನು ರಚಿಸುತ್ತವೆ. ಜಿ8, ಜಿ20, ಬ್ರಿಕ್ಸ್ ಹೀಗೆ ನಾನಾ ಗುಂಪುಗಳಿವೆ. ಕೆಲವು ರಾಜಕೀಯ ಒಪ್ಪಂದಗಳನ್ನು ಮಾಡಿಕೊಂಡಿರುತ್ತವೆ. ಕೆಲ ಗುಂಪುಗಳು ವ್ಯಾಪಾರ ಉದ್ದೇಶದಿಂದ ಸೃಷ್ಟಿಯಾಗಿರುತ್ತವೆ. ಇದರಲ್ಲಿ ಆರ್​ಸಿಇಪಿಯೂ ಒಂದು. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್​ಸಿಇಪಿ) ಒಪ್ಪಂದಲ್ಲಿ ವಿವಿಧ ದೇಶಗಳ ಮಧ್ಯೆ ಎಫ್​ಟಿಎ ಮಾಡಲಾಗಿದೆ. ಇದು ವಿಶ್ವದ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಈ ಗುಂಪಿನಲ್ಲಿರುವ 15 ದೇಶಗಳ ಒಟ್ಟಾರೆ ಜಿಡಿಪಿ 38 ಟ್ರಿಲಿಯನ್ ಡಾಲರ್ ಇದೆ. ಜಾಗತಿಕ ಜಿಡಿಪಿಯ ಶೇ. 30ರಷ್ಟು ಪಾಲನ್ನು ಈ ದೇಶಗಳು ಹೊಂದಿವೆ.

ಈ ಮಹತ್ವದ ಆರ್​ಸಿಇಪಿಯಲ್ಲಿ ಭಾರತವೂ ಒಂದು ಭಾಗವಾಗಿತ್ತು. ಆದರೆ, 2019ರಲ್ಲಿ ಈ ಗುಂಪಿನಿಂದ ಭಾರತ ಹೊರಬಂದಿತ್ತು. ಚೀನಾ, ಜಪಾನ್, ಸೌತ್ ಕೊರಿಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ಆಸಿಯಾನ್ ಕೂಟದ 10 ಸದಸ್ಯ ದೇಶಗಳು ಆರ್​ಸಿಇಪಿಗೆ ಸಹಿ ಹಾಕಿವೆ. ಆಸಿಯಾನ್ ದೇಶಗಳಾದ ಇಂಡೋನೇಷ್ಯಾ, ಮಯನ್ಮಾರ್ ಮತ್ತು ಫಿಲಿಪ್ಪೈನ್ಸ್ ದೇಶಗಳು ಒಪ್ಪಂದವನ್ನು ಇನ್ನೂ ರೆಟಿಫೈ ಮಾಡಿಲ್ಲ. ಒಟ್ಟಾರೆ ಆರ್​ಸಿಇಪಿಗೆ ಸಹಿ ಹಾಕಿದ 15 ದೇಶಗಳ ಪೈಕಿ 12 ದೇಶಗಳಲ್ಲಿ ಒಪ್ಪಂದ ಸದ್ಯ ಜಾರಿಯಲ್ಲಿದೆ.

ಇದನ್ನೂ ಓದಿ: ರಫ್ತು ಕ್ಷೇತ್ರದಲ್ಲಿ ಭಾರತವನ್ನು ಹಿಂದಿಕ್ಕುತ್ತಿವೆ ವಿಯೆಟ್ನಾಂ, ಬಾಂಗ್ಲಾದಂಥ ಸಣ್ಣ ಪುಟ್ಟ ದೇಶಗಳು: ವಿಶ್ವಬ್ಯಾಂಕ್ ವರದಿ

ಭಾರತ ಆರ್​ಸಿಇಪಿ ಒಪ್ಪಂದದ ಎಲ್ಲಾ 27 ಸುತ್ತಿನ ಸಂಧಾನಗಳಲ್ಲಿ ಪಾಲ್ಗೊಂಡಿತ್ತು. ಬಹಳಷ್ಟು ವಿಷಯಗಳಲ್ಲಿ ಭಾರತ ಭಿನ್ನಾಭಿಪ್ರಾಯ ಮತ್ತು ಅಸಂತುಷ್ಟಿ ಹೊಂದಿತ್ತು. ಇದು ಒಪ್ಪಂದ ಅಂತಿಮಗೊಳ್ಳಲು ತೊಡಕಾಗಿತ್ತು. 2019ರಲ್ಲಿ ಭಾರತ ಆರ್​ಸಿಇಪಿ ಸಂಧಾನದಿಂದ ಹೊರ ನಡೆದಿತ್ತು.

ಭಾರತ ಹೊರಬೀಳಲು ಏನು ಕಾರಣ?

ಆರ್​ಸಿಇಪಿಯಿಂದ ಭಾರತ ಹೊರ ಬರಲು ಹಲವು ಕಾರಣಗಳು ಮೇಲ್ನೋಟಕ್ಕೆ ಕಾಣುತ್ತವೆ. ಟ್ರೇಡ್ ಬ್ಯಾಲನ್ಸ್ ಒಮ್ಮುಖವಾಗಿರುವುದು, ಹೈನುಗಾರಿಕೆ ವಲಯಕ್ಕೆ ಹಿನ್ನಡೆ, ಹಿಂದಿನ ಎಫ್​ಟಿಎಗಳ ಕಹಿ ಅನುಭವ, ಮೂಲ ಯಾವುದೆನ್ನುವ ನಿಯಮ ಹೀಗೆ ಹಲವು ವಿಷಯಗಳ ಬಗ್ಗೆ ಭಾರತ ಸತತವಾಗಿ ಅಸಮಾಧಾನ ವ್ಯಕ್ತಪಡಿಸಿತ್ತು. ತಜ್ಞರ ಪ್ರಕಾರ ಆರ್​ಸಿಇಪಿಯಲ್ಲಿ ಚೀನಾ ಉಪಸ್ಥಿತಿ ಇರುವುದೇ ಭಾರತ ಹಿಂದಕ್ಕೆ ಸರಿಯಲು ಕಾರಣ ಇರಬಹುದು.

2011ರಲ್ಲಿ ಆಗ್ನೇಯ ಏಷ್ಯನ್ ದೇಶಗಳ ಕೂಟವಾದ ಆಸಿಯಾನ್​ನ ಸದಸ್ಯ ದೇಶಗಳು ಆರ್​​ಸಿಇಪಿ ಯೋಜನೆ ರೂಪಿಸಿದ್ದವು. ಭಾರತವೂ ಇದರ ಭಾಗವಾಯಿತು. ಚೀನಾ ಸೇರಿದಂತೆ ಏಷ್ಯಾದ ಪ್ರಬಲ ಆರ್ಥಿಕತೆಗಳನ್ನು ಒಳಗೊಳ್ಳಲಾಯಿತು. ಚೀನಾ ಈ ಯೋಜನೆಯ ನಿಯಂತ್ರಣ ತೆಗೆದುಕೊಂಡಿತೋ, ಭಾರತ ಹಿಂದಕ್ಕೆ ಸರಿಯಲು ನಿರ್ಧರಿಸಿತು.

ಇದನ್ನೂ ಓದಿ: ಶ್ರೀಮಂತರ ಶ್ರೀಮಂತಿಕೆ ಹೆಚ್ಚುತ್ತಿದೆ, ಭಾರತದ ಆರ್ಥಿಕತೆಗೇನೂ ಉಪಯೋಗ ಆಗುತ್ತಿಲ್ಲ: ವಿರಲ್ ಆಚಾರ್ಯ

ಆರ್​ಸಿಇಪಿ 2022ರಿಂದ ಚಾಲನೆಯಲ್ಲಿದೆ. ವಿವಿಧ ದೇಶಗಳಿಗೆ ಈಗಾಗಲೇ ಚೀನಾದ ಬಿಸಿ ತಾಕಿದೆ. ಮುಕ್ತ ವ್ಯಾಪಾರ ಒಪ್ಪಂದವಾದ್ದರಿಂದ ಯಾವ ದೇಶವೂ ರಫ್ತು ನಿರಾಕರಿಸುವಂತಿಲ್ಲ. ಈ ದೇಶಗಳ ನಡುವಿನ ವ್ಯಾಪಾರದಲ್ಲಿ ಚೀನಾದ ಪಾಲು ದಿನೇ ದಿನೇ ಏರುತ್ತಿದೆ. ಚೀನಾದೊಂದಿಗೆ ಬೇರೆ ದೇಶಗಳ ವ್ಯಾಪಾರ ಅಂತರವೂ ಹೆಚ್ಚುತ್ತಿದೆ. ಭಾರತ ಇದೇ ಕಾರಣಕ್ಕೆ ಆರ್​ಸಿಇಪಿಯಿಂದ ಹೊರಬಂದಿತ್ತು.

ಭಾರತಕ್ಕೆ ಆರ್​ಸಿಇಪಿ ತೀರಾ ಅಗತ್ಯವೂ ಇಲ್ಲ. ಯಾಕೆಂದರೆ ಈ ಗುಂಪಿನ ಹೆಚ್ಚಿನ ದೇಶಗಳೊಂದಿಗೆ ಭಾರತ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us