ತೈಲ, ಅನಿಲ ಅನ್ವೇಷಣಾ ವಲಯಕ್ಕೆ ಪುಷ್ಟಿ ನೀಡಲು ಸರ್ಕಾರದಿಂದ ತಿದ್ದುಪಡಿ ಕಾಯ್ದೆ

Oil and Gas exploration sector: ತೈಲ ಮತ್ತು ಅನಿಲ ಅನ್ವೇಷಣಾ ಕ್ಷೇತ್ರಕ್ಕೆ ಪುಷ್ಟಿ ನೀಡುವ ನಿಯಮಗಳನ್ನು ಒಳಗೊಂಡಿರುವ ಆಯಿಲ್​ಫೀಲ್ಡ್ಸ್ ಅಮೆಂಡ್ಮೆಂಟ್ ಬಿಲ್​ಗೆ ರಾಜ್ಯಸಭೆ ಅನುಮೋದನೆ ನೀಡಿದೆ. ಒಎನ್​ಜಿಸಿಯಂತಹ ದೊಡ್ಡ ಸಂಸ್ಥೆಗಳಿಗೆ ಮಾತ್ರವೇ ದಕ್ಕುವ ಈ ಕ್ಷೇತ್ರದಲ್ಲಿ ಸಣ್ಣ ಕಂಪನಿಗಳನ್ನು ಬೆಳೆಸಲು ಮತ್ತು ಹೊಸ ಕಂಪನಿಗಳ ಆಗಮನಕ್ಕೆ ಉತ್ತೇಜಿಸಲು ಈ ಕಾಯ್ದೆ ಸಹಾಯಕವಾಗಲಿದೆ.

ತೈಲ, ಅನಿಲ ಅನ್ವೇಷಣಾ ವಲಯಕ್ಕೆ ಪುಷ್ಟಿ ನೀಡಲು ಸರ್ಕಾರದಿಂದ ತಿದ್ದುಪಡಿ ಕಾಯ್ದೆ
ತೈಲ, ಅನಿಲ ಅನ್ವೇಷಣಾ

Updated on: Dec 04, 2024 | 5:54 PM

ನವದೆಹಲಿ, ಡಿಸೆಂಬರ್ 4: ತೈಲ ಮತ್ತು ಅನಿಲ ಅನ್ವೇಷಣೆ ಮತ್ತು ಉತ್ಪಾದನಾ ವಲಯಕ್ಕೆ ಅನುಕೂಲವಾಗುವಂತಹ ನಿಯಮಗಳಿರುವ ಕಾಯ್ದೆಯೊಂದು ಶೀಘ್ರದಲ್ಲೇ ಜಾರಿಗೆ ಬರಲಿದೆ. ಆಯಿಲ್​ಫೀಲ್ಡ್ ತಿದ್ದುಪಡಿ ಮಸೂದೆಗೆ ನಿನ್ನೆ ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಮೈನಿಂಗ್ ಚಟುವಟಿಕೆಗಳಿಂದ ಪೆಟ್ರೋಲಿಯಂ ಅನ್ನು ಪ್ರತ್ಯೇಕಗೊಳಿಸುವ ಈ ಕಾಯ್ದೆಯಿಂದಾಗಿ ಇ ಅಂಡ್ ಪಿ ಸೆಕ್ಟರ್​ಗೆ ಹೆಚ್ಚಿನ ಹೂಡಿಕೆಗಳು ಬರುವ ನಿರೀಕ್ಷೆ ಇದೆ.

‘20ಕ್ಕೂ ಹೆಚ್ಚು ವರ್ಷ ನಮಗೆ ತೈಲ ಮತ್ತು ಅನಿಲ ವಲಯದ ಅವಶ್ಯಕತೆ ಇದೆ. ಹೀಗಾಗಿ, ಉದ್ಯಮ ಭಾಗಿದಾರರಿಗೆ ವಿಶ್ವಾಸ ಮೂಡಿಸಲು ಈ ಕಾಯ್ದೆಯ ಅಗತ್ಯತೆ ಇದೆ. ನಮ್ಮವರಿಗೆ ಮಾತ್ರವಲ್ಲ ವಿದೇಶೀ ಹೂಡಿಕೆದಾರರೂ ಇಲ್ಲಿಗೆ ಬಂದು ವ್ಯವಹಾರ ನಡೆಸಲು ಅನುಕೂಲವಾಗುವಂತೆ ವಾತಾವರಣ ನಿರ್ಮಿಸಲು ಇದು ಬೇಕಾಗಿದೆ’ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಆಯಿಲ್​ಫೀಲ್ಡ್ಸ್ ತಿದ್ದುಪಡಿ ಕಾಯ್ದೆಯಿಂದ ಏನು ಅನುಕೂಲ?

ತೈಲ ಮತ್ತು ಅನಿಲ ಅನ್ವೇಷಣಾ ಕ್ಷೇತ್ರದಲ್ಲಿ ಇನ್​ಫ್ರಾಸ್ಟ್ರಕ್ಚರ್ ಮತ್ತಿತರ ಸೌಲಭ್ಯಗಳ ನಿರ್ಮಾಣಕ್ಕೆ ಬಹಳ ವೆಚ್ಚವಾಗುತ್ತದೆ. ಒಎನ್​ಜಿಸಿ, ಇಂಡಿಯನ್ ಆಯಿಲ್, ಹೆಚ್​​ಪಿ, ಬಿಪಿ, ನಯಾರ ಎನರ್ಜಿ, ಕೇರ್ನ್ ಆಯಿಲ್, ಜಿಎಐಎಲ್ ಇತ್ಯಾದಿ ದೈತ್ಯ ಕಂಪನಿಗಳು ಇಲ್ಲಿ ಅಸ್ತಿತ್ವ ಹೊಂದಿವೆ. ಸಣ್ಣ ಕಂಪನಿಗಳಿಗೆ ಇಲ್ಲಿ ನೆಲೆಯೂರಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಮೂಲಸೌಕರ್ಯಗಳನ್ನು ವಿವಿಧ ಕಂಪನಿಗಳು ಹಂಚಿಕೊಂಡು ಬಳಸಿಕೊಳ್ಳಲು ಸಾಧ್ಯವಾಗುವಂತೆ ನಿಯಮ ರೂಪಿಸಲು ಈ ಕಾಯ್ದೆ ಅನುವು ಮಾಡಿಕೊಡುತ್ತದೆ. ಇದರಿಂದ ಸಣ್ಣ ಕಂಪನಿಗಳು ಮತ್ತು ಹೊಸ ಕಂಪನಿಗಳು ಈ ಕ್ಷೇತ್ರದಲ್ಲಿ ನೆಲೆಯೂರಲು ಸಾಧ್ಯವಾಗಬಲ್ಲುದು.

ಇದನ್ನೂ ಓದಿ: ಬ್ಯಾಂಕಿಂಗ್ ಕಾನೂನಿಗೆ ತಿದ್ದುಪಡಿ, ಬ್ಯಾಂಕಿಂಗ್ ವಲಯ ಇನ್ನಷ್ಟು ಪ್ರಬಲ: ನಿರ್ಮಲಾ ಸೀತಾರಾಮನ್

ಹೂಡಿಕೆದಾರರಿಗೆ ಅನನುಕೂಲವಾಗುವ ರೀತಿಯಲ್ಲಿ ಲೀಸ್​ನ ಅವಧಿಯಲ್ಲಿ ಬದಲಾವಣೆ ಮಾಡಲಾಗುವುದಿಲ್ಲ. ಯಾವುದಾದರೂ ವ್ಯಾಜ್ಯ ಎದುರಾದಲ್ಲಿ ಪರ್ಯಾಯ ವ್ಯಾಜ್ಯ ಪರಿಹಾರ ಮಾರ್ಗಗಳಿಗೆ ಈ ಕಾಯ್ದೆಯು ಅನುವು ಮಾಡಿಕೊಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us