Coffee Day: ಕಾಫಿ ಡೇ ಎಂಟರ್​ಪ್ರೈಸಸ್​ಗೆ 26 ಕೋಟಿ ರೂ. ದಂಡ ವಿಧಿಸಿದ ಸೆಬಿ; ಕಾರಣ ಇಲ್ಲಿದೆ

ಕಾಫಿ ಡೇ ಎಂಟರ್​ಪ್ರೈಸಸ್​​ನ ಅಂಗಸಂಸ್ಥೆಗಳ ಮೂಲಕ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್​​ಗೆ ವರ್ಗಾವಣೆ ಮಾಡಲಾದ ಹಣ ಕಂಪನಿಯ ಪ್ರವರ್ತಕರ (ವಿಜಿ ಸಿದ್ಧಾರ್ಥ), ಅವರ ಕುಟುಂಬದವರ ವೈಯಕ್ತಿಕ ಖಾತೆಗೆ ವರ್ಗಾವಣೆಯಾಗಿತ್ತು ಎಂದು ಸೆಬಿ ಹೇಳಿದೆ.

Coffee Day: ಕಾಫಿ ಡೇ ಎಂಟರ್​ಪ್ರೈಸಸ್​ಗೆ 26 ಕೋಟಿ ರೂ. ದಂಡ ವಿಧಿಸಿದ ಸೆಬಿ; ಕಾರಣ ಇಲ್ಲಿದೆ
ಕೆಫೆ ಕಾಫಿ ಡೇ (ಸಂಗ್ರಹ ಚಿತ್ರ)

Updated on: Jan 25, 2023 | 12:37 PM

ಮುಂಬೈ: ಕೆಫೆ ಕಾಫಿ ಡೇಯ (Cafe Coffee Day) ಮಾಲೀಕತ್ವ ಹೊಂದಿರುವ ಕಾಫಿ ಡೇ ಎಂಟರ್​ಪ್ರೈಸಸ್​ಗೆ (Coffee Day Enterprises) ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ (Sebi) 26 ಕೋಟಿ ರೂ. ದಂಡ ವಿಧಿಸಿದೆ. ದಂಡದ ಮೊತ್ತವನ್ನು 45 ದಿನಗಳ ಒಳಗೆ ಪಾವತಿಸುವಂತೆ ಸೂಚಿಸಿದೆ. ಪ್ರವರ್ತಕರಿಗೆ ಸಂಬಂಧಿಸಿದ ಕಂಪನಿಗೆ ಕಾಫಿ ಡೇ ಎಂಟರ್​ಪ್ರೈಸಸ್ ಅಂಗಸಂಸ್ಥೆಗಳ ಮೂಲಕ ಹಣವನ್ನು ವರ್ಗಾವಣೆ ಮಾಡಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ ಎಂದು ಸೆಬಿ ಆದೇಶದಲ್ಲಿ ತಿಳಿಸಿದೆ. ಜತೆಗೆ, ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್​​ಗೆ​​ (MACEL) ಮತ್ತು ಅದಕ್ಕೆ ಸಂಬಂಧಿತ ಸಂಸ್ಥೆಗಳಿಗೆ ನೀಡಿರುವ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾಫಿ ಡೇ ಎಂಟರ್​ಪ್ರೈಸಸ್​​ಗೆ ಸೆಬಿ ಸೂಚಿಸಿದೆ. ಬಾಕಿ ಇರುವ ಮೊತ್ತದ ವಸೂಲಾತಿಗಾಗಿ ಕಂಪನಿಯು ಎನ್​ಎಸ್​ಇಯೊಂದಿಗೆ ಸಮಾಲೋಚಿಸಿ ಸ್ವತಂತ್ರ ಕಾನೂನು ಸಂಸ್ಥೆಯೊಂದನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ ಎಂದೂ ಸೆಬಿ ಹೇಳಿದೆ.

ಎಷ್ಟು ಹಣ ವರ್ಗಾವಣೆ ಮಾಡಿತ್ತು ಕಾಫಿ ಡೇ ಎಂಟರ್​ಪ್ರೈಸಸ್?

ಕಾಫಿ ಡೇ ಎಂಟರ್​ಪ್ರೈಸಸ್​​ನ 7 ಅಂಗಸಂಸ್ಥೆಗಳ ಮೂಲಕ ಕಂಪನಿಯ ಪ್ರವರ್ತಕರಿಗೆ ಸಂಬಂಧಿಸಿದ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್​​ಗೆ​​ 3,535 ಕೋಟಿ ರೂ. ವರ್ಗಾವಣೆ ಮಾಡಿರುವುದು ತಿಳಿದುಬಂದಿದೆ ಎಂದು ಸೆಬಿ 43 ಪುಟಗಳ ಆದೇಶದಲ್ಲಿ ತಿಳಿಸಿದೆ. ಕಾಫಿ ಡೇ ಗ್ಲೋಬಲ್, ಟಂಗ್ಲಿಂನ್ ರಿಟೇಲ್ ರಿಯಲ್ಟಿ ಡೆವಲಪ್​ಮೆಂಟ್ಸ್, ಟಂಗ್ಲಿಂನ್ ಡೆವಲಪ್​ಮೆಂಟ್ಸ್, ಗಿರಿ ವಿದ್ಯುತ್ (ಇಂಡಿಯಾ) ಲಿಮಿಟೆಡ್, ಕಾಫಿ ಡೇ ಹೋಟೆಲ್ಸ್ ಆ್ಯಂಡ್ ರೆಸಾರ್ಟ್ಸ್, ಕಾಫಿ ಡೇ ಟ್ರೇಡಿಂಗ್ ಆ್ಯಂಡ್ ಕಾಫಿ ಡೇ ಎಕಾನ್ ಕಂಪನಿಗಳ ಮೂಲಕ ಹಣ ವರ್ಗಾವಣೆ ಮಾಡಲಾಗಿತ್ತು ಎಂದು ಸೆಬಿ ಹೇಳಿದೆ.

ಇದನ್ನೂ ಓದಿ: Gold Price Today: ಮುಂದುವರಿದ ಬೆಳ್ಳಿ ಬೆಲೆ ಏರಿಕೆ, ಚಿನ್ನವೂ ದುಬಾರಿ; ಇಲ್ಲಿದೆ ನೋಡಿ ಪೂರ್ಣ ವಿವರ

ಕಾಫಿ ಡೇ ಎಂಟರ್​ಪ್ರೈಸಸ್​​ನ ಅಂಗಸಂಸ್ಥೆಗಳ ಮೂಲಕ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್​​ಗೆ ವರ್ಗಾವಣೆ ಮಾಡಲಾದ ಹಣ ಕಂಪನಿಯ ಪ್ರವರ್ತಕರ (ವಿಜಿ ಸಿದ್ಧಾರ್ಥ), ಅವರ ಕುಟುಂಬದವರ ವೈಯಕ್ತಿಕ ಖಾತೆಗೆ ವರ್ಗಾವಣೆಯಾಗಿತ್ತು ಎಂದು ಸೆಬಿ ಹೇಳಿದೆ. ವಿಜಿ ಸಿದ್ಧಾರ್ಥ ಅವರು ಕಾಫಿ ಡೇ ಸಮೂಹದ ಅಧ್ಯಕ್ಷರಾಗಿದ್ದರು. 2019ರ ಜುಲೈಯಲ್ಲಿ ಮಂಗಳೂರು ಸಮೀಪ ನೇತ್ರಾವತಿ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಸ್ತುತ ಕಂಪನಿಯು ಅವರ ಕುಟುಂಬದವರ ಒಡೆತನದಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:09 am, Wed, 25 January 23

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us