Gorakhpur Death: ಗೋರಖ್​ಪುರದಲ್ಲಿ ಉದ್ಯಮಿಯ ಸಾವು ಪ್ರಕರಣ; ಸಿಬಿಐ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಶಿಫಾರಸು

Manish Gupta Murder Case: ಶುಕ್ರವಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಯೋಗಿ ಆದಿತ್ಯನಾಥ್ ಸರ್ಕಾರ ಶಿಫಾರಸು ಮಾಡಿದೆ. ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವವರೆಗೂ ಎಸ್​ಐಟಿ ಈ ಕುರಿತು ತನಿಖೆ ನಡೆಸಲಿದೆ.

Gorakhpur Death: ಗೋರಖ್​ಪುರದಲ್ಲಿ ಉದ್ಯಮಿಯ ಸಾವು ಪ್ರಕರಣ; ಸಿಬಿಐ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಶಿಫಾರಸು
ಗೋರಖ್​ಪುರ ದಾಳಿಯಲ್ಲಿ ಸಾವನ್ನಪ್ಪಿದ ಉದ್ಯಮಿ ಮನೀಶ್ ಗುಪ್ತ
Updated By: ಸುಷ್ಮಾ ಚಕ್ರೆ

Updated on: Oct 02, 2021 | 7:25 PM

ಗೋರಖ್​ಪುರ: ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಗೋರಖ್​ಪುರದ ಹೋಟೆಲ್​ನಲ್ಲಿ ಪೊಲೀಸರ ದಾಳಿ ವೇಳೆ ಆ ಹೋಟೆಲ್​ನಲ್ಲಿದ್ದ ಕಾನ್ಪುರ ಮೂಲದ ಉದ್ಯಮಿ ಮನೀಶ್ ಗುಪ್ತ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಪೊಲೀಸರನ್ನು ಅಮಾನತು ಮಾಡಲಾಗಿತ್ತು. ಹಾಗೇ, ಸಾವನ್ನಪ್ಪಿದ ಮನೀಶ್ ಗುಪ್ತ ಅವರ ಕುಟುಂಬಸ್ಥರಿಗೆ ಉದ್ಯೋಗ ಘೋಷಣೆ ಮಾಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 10 ಲಕ್ಷ ರೂ. ಪರಿಹಾರವನ್ನೂ ಘೋಷಿಸಿದ್ದರು. ಆದರೆ, ಈ ಸಾವಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಶಿಫಾರಸು ಮಾಡಲಾಗಿದೆ.

ಮನೀಶ್ ಗುಪ್ತ ಅವರ ಅನುಮಾನಾಸ್ಪದ ಸಾವು ಉತ್ತರ ಪ್ರದೇಶದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಪೊಲೀಸರಿಂದಲೇ ನನ್ನ ಗಂಡ ಸಾವನ್ನಪ್ಪಿದ್ದಾರೆ. ನನ್ನ ಗಂಡನನ್ನು ಥಳಿಸಿ, ಹಿಂಸೆ ನೀಡಿ ಕೊಲ್ಲಲಾಗಿದೆ ಎಂದು ಆ ಉದ್ಯಮಿ ಮನೀಶ್ ಗುಪ್ತ ಅವರ ಹೆಂಡತಿ ವಿಡಿಯೋದಲ್ಲಿ ಆರೋಪಿಸಿದ್ದರು. ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳ ನಾಯಕರು ಕೂಡ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ 6 ಪೊಲೀಸರನ್ನು ಅಮಾನತು ಮಾಡಲಾಗಿದೆ. ಹಾಗೇ, ಉದ್ಯಮಿಯ ಹೆಂಡತಿ, ಮನೆಯವರನ್ನು ಭೇಟಿ ಮಾಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನೀಶ್ ಗುಪ್ತ ಅವರ ಪತ್ನಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಹಾಗೇ, 10 ಲಕ್ಷ ರೂ. ಪರಿಹಾರ ನೀಡುವುದಾಗಿಯೂ ಘೋಷಿಸಿದ್ದರು.

ಗೋರಖ್​ಪುರ ಪೊಲೀಸ್ ದಾಳಿ ಪ್ರಕರಣದಲ್ಲಿ ಉದ್ಯಮಿ ಸಾವನ್ನಪ್ಪಿದ ಕೇಸ್​ಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಆರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದರು. ಶುಕ್ರವಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಯೋಗಿ ಆದಿತ್ಯನಾಥ್ ಸರ್ಕಾರ ಶಿಫಾರಸು ಮಾಡಿದೆ. ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವವರೆಗೂ ಎಸ್​ಐಟಿ ಈ ಕುರಿತು ತನಿಖೆ ನಡೆಸಲಿದೆ.

ಸೆ. 28ರಂದು ರಾತ್ರಿ ಗೋರಖ್​ಪುರದ ಹೋಟೆಲ್ ಮೇಲೆ ಪೊಲೀಸರ ರೇಡ್ ಮಾಡಿದ್ದರು. ಅದಾದ ಬಳಿಕ ಹೋಟೆಲ್​ನಲ್ಲಿ 38 ವರ್ಷದ ಪ್ರಾಪರ್ಟಿ ಡೀಲರ್ ಮನೀಶ್ ಗುಪ್ತ ಅವರು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು. ಪೊಲೀಸರೇ ನನ್ನ ಗಂಡನನ್ನು ಕೊಂದಿದ್ದಾರೆ ಎಂದು ಉದ್ಯಮಿಯ ಹೆಂಡತಿ ಆರೋಪಿಸಿದ್ದರು. ಆದರೆ, ಪೊಲೀಸ್ ದಾಳಿ ವೇಳೆ ತಪ್ಪಿಸಿಕೊಳ್ಳಲು ಕೆಳಗೆ ಹಾರಿದಾಗ ಗಾಯವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಈ ನಿಗೂಢ ಸಾವು ಭಾರೀ ಚರ್ಚೆಗೆ ಕಾರಣವಾಗಿತ್ತು.

ಮನೀಶ್ ಗುಪ್ತ ಮತ್ತು ಅವರ ಸ್ನೇಹಿತರು ಕಾರ್ಯದ ನಿಮಿತ್ತ ಆಗಮಿಸಿದ್ದು ಹೋಟೆಲ್ ನಲ್ಲಿ ತಂಗಿದ್ದರು. ಪೊಲೀಸರೇ ಥಳಿಸಿ ಅವರನ್ನು ಕೊಂದಿದ್ದಾರೆ ಎಂಬ ಆರೋಪ ಬಂದಿದ್ದರಿಂದ ಮನೀಶ್ ಗುಪ್ತ ಅವರ ಹೆಂಡತಿ ನೀಡಿದ ದೂರಿನ ಅನ್ವಯ 6 ಪೊಲೀಸರನ್ನು ಕೊಲೆ ಆರೋಪದಲ್ಲಿ ಅಮಾನತು ಮಾಡಲಾಗಿತ್ತು. ಈ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು.

ಇದನ್ನೂ ಓದಿ: Murder: ಪ್ರಿಯಕರನ ಜೊತೆ ಸೇರಿ ಗಂಡ, ಮೂವರು ಮಕ್ಕಳನ್ನು ಬೆಂಕಿ ಹಚ್ಚಿ ಕೊಂದ ಮಹಿಳೆ

Murder: ಲೇಡಿ ಪೊಲೀಸ್​ಗಾಗಿ ಹೆಂಡತಿ, ಮಕ್ಕಳನ್ನೇ ಕೊಂದ ಗಂಡ; ಸತ್ತು ಹೋಗಿದ್ದ ಕೊಲೆಗಾರ ಎದ್ದು ಬಂದ ಕತೆಯಿದು!

Published On - 7:24 pm, Sat, 2 October 21