ಹರ್ಯಾಣ: ಹೊಲಕ್ಕೆ ನುಗ್ಗಿದ ಹಸುವನ್ನು ಟ್ರ್ಯಾಕ್ಟರ್​​​ಗೆ ಕಟ್ಟಿ ನೂರಾರು ಮೀಟರ್ ಎಳೆದ ವ್ಯಕ್ತಿ

ಹಸು ಹೊಲಕ್ಕೆ ನುಗ್ಗಿದ್ದರಿಂದ ಕೋಪಗೊಂಡ ಹರ್ಯಾಣದ ವ್ಯಕ್ತಿಯೊಬ್ಬರು ಆ ಹಸುವನ್ನು ಟ್ರ್ಯಾಕ್ಟರ್ ಗೆ ಕಟ್ಟಿ ನೂರಾರು ಮೀಟರ್ ಎಳೆದುಕೊಂಡ ಘಟನೆ ನಡೆದಿದೆ. ಈ ಕೃತ್ಯವನ್ನು ವ್ಯಕ್ತಿಯೊಬ್ಬರು ವಿಡಿಯೊ ಮಾಡಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಹಿಸಾರ್ ನವೆಂಬರ್ 28: ಹರ್ಯಾಣದಲ್ಲಿ (Haryana) ವ್ಯಕ್ತಿಯೊಬ್ಬರು ತನ್ನ ಹೊಲಕ್ಕೆ ನುಗ್ಗಿದ ಹಸುವನ್ನು ಟ್ರ್ಯಾಕ್ಟರ್‌ಗೆ ಕಟ್ಟಿ ನೂರಾರು ಮೀಟರ್‌ಗಳವರೆಗೆ ಎಳೆದೊಯ್ದಿದ್ದಾರೆ. ಹಿಸಾರ್ ಜಿಲ್ಲೆಯ ಹನ್ಸಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಇದರ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಹಸು ನೋವಿನಿಂದ ನರಳುತ್ತಿರುವಾಗ ವ್ಯಕ್ತಿ ಹಸುವನ್ನು ಟ್ರ್ಯಾಕ್ಟರ್ ಹಿಂದೆ ಕ್ರೂರವಾಗಿ ಎಳೆದುಕೊಂಡು ಹೋಗುತ್ತಿರುವುದನ್ನು ವೈರಲ್ ವಿಡಿಯೊ ತೋರಿಸುತ್ತದೆ. ಘಟನೆಯ ಕುರಿತು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಚಿರಂಜೀವ್ ಎಂದು ಗುರುತಿಸಲಾದ ವ್ಯಕ್ತಿಯ ಹೊಲಕ್ಕೆ ಹಸು ನುಗ್ಗಿದ್ದು, ಇದರಿಂದ ಕೋಪಗೊಂಡು ಆತ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.

ಆ ವ್ಯಕ್ತಿ ತನ್ನ ಟ್ರ್ಯಾಕ್ಟರ್‌ನೊಂದಿಗೆ ಗ್ರಾಮಕ್ಕೆ ಪ್ರವೇಶಿಸಿದಾಗ ಘಟನೆಯ ವಿಡಿಯೊವನ್ನು ಗ್ರಾಮದ ಯುವಕನೊಬ್ಬ ರೆಕಾರ್ಡ್ ಮಾಡಿದ್ದಾನೆ. ಬಳಿಕ ಯುವಕರು ವಿಡಿಯೊವನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊವನ್ನು ಸ್ಥಳೀಯ ಶಾಸಕ ವಿನೋದ್ ಭಯಾನಾ ಅಪ್ಲೋಡ್ ಮಾಡಿದ್ದು, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಚಿರಂಜೀವ್ ವಿರುದ್ಧ ಬಜರಂಗದಳದ ನಾಯಕ ದೂರು ದಾಖಲು

ಘಟನೆಯ ನಂತರ ಸ್ಥಳೀಯ ಬಜರಂಗದಳ ಮುಖಂಡರು ಹಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿ ರೈತನ ಹೊಲಕ್ಕೆ ನುಗ್ಗಿದ್ದು ಹಸುವಿನ ಅಪರಾಧ ಎಂದು ವಿಡಿಯೊ ಚಿತ್ರೀಕರಿಸಿದ ವ್ಯಕ್ತಿ ಹೇಳಿದ್ದಾನೆ. ಬಳಿಕ ಆರೋಪಿ ಈ ಅಮಾನುಷ ಕೃತ್ಯಕ್ಕೆ ಕೈ ಹಾಕಿದ್ದಾನೆ.

ಇದನ್ನೂ ಓದಿ: Haryana Earthquake: ಹರ್ಯಾಣದ ಸೋನಿಪತ್​ನಲ್ಲಿ 3.0 ತೀವ್ರತೆಯ ಭೂಕಂಪ

ಗೋರಕ್ಷಾ ದಳದ ಅಧ್ಯಕ್ಷ ಅನಿಲ್ ಆರ್ಯ ಅವರ ಪ್ರಕಾರ, ಅವರ ಸ್ನೇಹಿತರೊಬ್ಬರು ವಿಡಿಯೊ ಬಗ್ಗೆ ಹೇಳಿದ್ದಾರೆ. ಬಳಿಕ ಆರ್ಯ ತಂಡದೊಂದಿಗೆ ಗ್ರಾಮಕ್ಕೆ ತೆರಳಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದರು. ರಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಟ್ರ್ಯಾಕ್ಟರ್‌ನೊಂದಿಗೆ ವ್ಯಕ್ತಿಯೊಬ್ಬ ಹಸುವನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಈ ಸಂಬಂಧ ದೂರು ಸ್ವೀಕರಿಸಿ ಎಫ್‌ಐಆರ್‌ ದಾಖಲಿಸಿದ್ದೇವೆ. ಚಿಕಿತ್ಸೆ ಬಳಿಕ ಹಸುವನ್ನು ಗೋಶಾಲೆಗೆ ಬಿಡಲಾಯಿತು. ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹನ್ಸಿ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸುಮೀರ್ ಸಿಂಗ್ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 5:46 pm, Tue, 28 November 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us