ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ; ಹಣಕ್ಕಾಗಿ ಪತಿಯೇ ಕೊಲೆ ಮಾಡಿದ್ನಾ?

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಆ ಜೋಡಿ ಮದುವೆಯಾಗಿ ಐದಾರು ವರ್ಷಗಳೇ ಕಳೆದಿದ್ದವು. ಆದ್ರೆ, ಪತಿರಾಯ ಮಾತ್ರ ದಿನೇ ದಿನೇ ಹಣದ ಪಿಶಾಚಿ ಆಗ ತೊಡಗಿದ್ದನು. ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸುತ್ತಲೇ ಇದ್ದನು. ಕೊನೆಗೂ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆಗಿದ್ದಾಳೆ. ಅಸಲಿಗೆ ಅಲ್ಲಿ ನಡೆದದ್ದೇನು. ಈ ಸ್ಟೋರಿ ಓದಿ.

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ; ಹಣಕ್ಕಾಗಿ ಪತಿಯೇ ಕೊಲೆ ಮಾಡಿದ್ನಾ?
ಮೃತ ಮಹಿಳೆ
Edited By: ಕಿರಣ್ ಹನುಮಂತ್​ ಮಾದಾರ್

Updated on: May 09, 2024 | 3:27 PM

ಚಿತ್ರದುರ್ಗ, ಮೇ.09: ಹೊಸದುರ್ಗ(Hosadurga) ಪಟ್ಟಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದ್ದು, ಪತಿ ಮತ್ತು ಕುಟುಂಬಸ್ಥರ ವಿರುದ್ಧ ಮೃತಳ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ. ಈ ಹಿನ್ನಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೌದು, ತುಮಕೂರು ಮೂಲದ ಗೀತಶ್ರೀ ಮೃತ ರ್ದುದೈವಿ. ಆಕೆ ಹೊಸದುರ್ಗದ ಗೊರವನಕಲ್ಲು ಗ್ರಾಮದ ಪ್ರಭುಕುಮಾರ್ ಜೊತೆ ಐದಾರು ವರ್ಷದ ಹಿಂದೆ ಮದುವೆ ಆಗಿದ್ದರು. ವಿದ್ಯಾವಂತನಾಗಿದ್ದ ಪ್ರಭುಕುಮಾರ್ ಇಂದಲ್ಲ, ನಾಳೆ ಸರ್ಕಾರಿ ಉದ್ಯೋಗ ಸಿಗುತ್ತದೆಂದು ನಂಬಿಸಿದ್ದನು.

ಪ್ರಭು ಖಾಸಗಿ ಬ್ಯಾಂಕ್​ನಲ್ಲಿ ಉದ್ಯೋಗ ಮಾಡುತ್ತಿದ್ದರೆ, ಪತ್ನಿ ಗೀತಶ್ರೀ ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಆಗಿದ್ದರು. ಇವರ ಸುಖ ದಾಂಪತ್ಯಕ್ಕೆ ಮುದ್ದಾದ ಮಗಳು ಸಾಕ್ಷಿ ಆಗಿದ್ದಳು. ಆದ್ರೆ, ಇತ್ತೀಚೆಗೆ ಹಣದ ಪಿಶಾಚಿಯಂತೆ ವರ್ತಿಸುತ್ತಿದ್ದ ಪ್ರಭು, ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಇತ್ತೀಚೆಗಷ್ಟೇ ಪತ್ನಿ ಜೊತೆ ಗಲಾಟೆ ಮಾಡಿ ತವರುಮನೆಗೆ ಕಳಿಸಿದ್ದನು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಗೀತಶ್ರೀ ಪತಿಯ ಮನೆಗೆ ಬಂದಿದ್ದಳು.

ಇದನ್ನೂ ಓದಿ:ಗಂಡ-ಹೆಂಡತಿ ಜಗಳ: ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಪತ್ನಿಯ ಭೀಕರ ಕೊಲೆ

ಪ್ರಕರಣ ದಾಖಲಿಸುತ್ತಿದ್ದಂತೆ ಆರೋಪಿ ನಾಪತ್ತೆ

ಅಷ್ಟೇ, ಮತ್ತೆ ವರದಕ್ಷಿಣೆ ಕಿರುಕುಳ ನೀಡಿ ಪತಿ ಪ್ರಭುಕುಮಾರ್ ಮತ್ತು ಕುಟುಂಬಸ್ಥರು ಗೀತಶ್ರೀಗೆ ಹೊಡೆದು ಹತ್ಯೆ ಮಾಡಿದ್ದಾರೆ.  ಬಳಿಕ ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ ನಡೆದಿದೆ ಎಂದು ಮೃತಳ ಸಹೋದರ ನಿರಂಜನ್ ಆರೋಪಿಸಿದ್ದಾರೆ. ಈ ಕುರಿತು ಪ್ರಭುಕುಮಾರ್ ವಿರುದ್ಧ ಮೃತಳ ಪೋಷಕರು ಕೊಲೆ ಆರೋಪ ಪ್ರಕರಣ ದಾಖಲಿಸುತ್ತಿದ್ದಂತೆ ಆರೋಪಿ ನಾಪತ್ತೆ ಆಗಿದ್ದಾನೆ. ಗೀತಶ್ರೀ ನಿಗೂಢ ಸಾವಿಗೀಡಾದ ಸುದ್ದಿ ತಿಳಿದು ಇಡೀ ಕುಟುಂಬ ಶಾಕ್​ಗೆ ಒಳಗಾಗಿದೆ. ಮಾತ್ರವಲ್ಲ ಹೊಸದುರ್ಗದ ಜನರು ಸಹ ದಿಗ್ಭಮೆಗೊಂಡಿದ್ದಾರೆ.

ರೀಲ್ಸ್ ಮಾಡುವ ಮೂಲಕ ಜನರ ಗಮನ ಸೆಳೆದಿದ್ದ ಜೋಡಿ

ಪ್ರಭುಕುಮಾರ್ ಮತ್ತು ಗೀತಶ್ರೀ ದಂಪತಿ ರೀಲ್ಸ್ ಮಾಡುವ ಮೂಲಕ ಜನರ ಗಮನ ಸೆಳೆದಿದ್ದರು. ಇದೀಗ ಮೃತ ಗೀತಶ್ರೀ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಒಟ್ಟಾರೆಯಾಗಿ ಹೊರಲೋಕಕ್ಕೆ ಅನ್ಯೋನ್ಯ ದಂಪತಿಯಂತೆ ಕಾಣುತ್ತಿದ್ದ ಪ್ರಭು ಮತ್ತು ಗೀತಶ್ರೀ ನಡುವೆ ವರದಕ್ಷಿಣೆ ಎಂಬ ಭೂತ ಬಿರುಕು ಮೂಡಿಸಿತ್ತು. ಅಷ್ಟೇ ಅಲ್ಲದೆ, ಹಣದ ವ್ಯಾಮೋಹಕ್ಕೆ ಬಿದ್ದ ಪತಿರಾಯ ಪತ್ನಿಯ ಜೀವವನ್ನೇ ನುಂಗಿದ್ದಾನೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ಬಯಲಾಗಬೇಕಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Thu, 9 May 24

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us