Mangaluru: ಶಾರದೋತ್ಸವಕ್ಕೆ ಅಳವಡಿಸಿದ್ದ ಬ್ಯಾನರ್ ಹರಿದು ಕೋಮು ಗಲಭೆಗೆ ಯತ್ನ

ಶಾರದೋತ್ಸವಕ್ಕೆ ಅಳವಡಿಸಿದ್ದ ಬ್ಯಾನರ್ ಹರಿದು ಕೋಮು ಗಲಭೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ಬರ್ತಡೇ ಪಾರ್ಟಿ ವೇಳೆ ರೌಡಿಶೀಟರ್ ವ್ಯಕ್ತಿಗೆ ಚಾಕು ಇರಿದು ಕೊಲೆ ಯತ್ನ ನಡೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Mangaluru: ಶಾರದೋತ್ಸವಕ್ಕೆ ಅಳವಡಿಸಿದ್ದ ಬ್ಯಾನರ್ ಹರಿದು ಕೋಮು ಗಲಭೆಗೆ ಯತ್ನ
ಶಾರದೋತ್ಸವಕ್ಕೆ ಅಳವಡಿಸಿದ್ದ ಬ್ಯಾನರ್ ಹರಿದು ಕೋಮು ಗಲಭೆಗೆ ಯತ್ನ
Edited By:

Updated on: Oct 11, 2022 | 1:27 PM

ಮಂಗಳೂರು: ಶಾರದೋತ್ಸವಕ್ಕೆ ಅಳವಡಿಸಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದುಹಾಕಿ ಕೋಮು ಗಲಭೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ವಾಮಂಜೂರು ಬಳಿ ನಡೆದಿದೆ. ಶಾರದೋತ್ಸವ ಹಿನ್ನೆಲೆ ವಾಮಂಜೂರು ಫ್ರೆಂಡ್ಸ್ ಟೀಂ ಅಳವಡಿಸಿದ್ದ ಐದಾರು ಬ್ಯಾನರ್​ಗಳನ್ನು ಹರಿದು ಹಾಕಿ ಕೋಮು ಸಂಘರ್ಷಕ್ಕೆ ಯತ್ನಿಸಲಾಗಿದೆ. ಅನ್ಯ ಧರ್ಮೀಯರ ಮೇಲೆ ಅನುಮಾನ ಮೂಡುವಂತೆ ಮಾಡಲು ಬ್ಯಾನರ್​ಗೆ ಹಾನಿಗೊಳಿಸಲಾಗಿದ್ದು, ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯ ಕೆಲ ಗಾಂಜಾ ವ್ಯಸನಿಗಳಿಂದ ಕೃತ್ಯ ನಡೆದಿರುವ ಆರೋಪ ಕೇಳಿಬಂದಿದೆ.

ವಾಮಂಜೂರು ಬಳಿ ಶಾರದೋತ್ಸವ ಆಯೋಜಿಸಲಾಗಿದ್ದು, ಈ ಹಿನ್ನೆಲೆ ವಾಮಂಜೂರು ಫ್ರೆಂಡ್ಸ್ ಟೀಂ ರಸ್ತೆ ಅಕ್ಕಪಕ್ಕದಲ್ಲಿ ಐದಾರು ಬ್ಯಾನರ್​ಗಳನ್ನು ಅಳವಡಿಸಿದ್ದರು. ಆದರೆ ಕೋಮು ಗಲಭೆ ಸೃಷ್ಟಿಸುವ ಮನಸ್ಥಿತಿ ಉಳ್ಳ ಕೆಲವು ವ್ಯಕ್ತಿಗಳು ಬ್ಯಾನರ್​ಗಳನ್ನು ಹರಿದುಹಾಕಿದ್ದಾರೆ. ಅನ್ಯಧರ್ಮೀಯರು ಕೃತ್ಯ ಎಸಗಿರುವಂತೆ ಅನುಮಾನ ಮೂಡಿಸುವ ದುರುದ್ದೇಶ ಇದರ ಹಿಂದೆ ಇದ್ದು, ಕೆಲ ಗಾಂಜಾ ವ್ಯಸನಿಗಳಿಂದ ಕೃತ್ಯ ನಡೆದಿರುವ ಆರೋಪಿಸಲಾಗಿದೆ.

ದೂರು ದಾಖಲಿಸಲು ಪೊಲೀಸರ ಹಿಂದೇಟು; ದೈವದ ಮೊರೆ ಹೋದ ಟೀಂ

ಕಿಡಿಗೇಡಿಗಳ ಕೃತ್ಯದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದನ್ನು ಆಧರಿಸಿ ವಾಮಂಜೂರು ಫ್ರೆಂಡ್ಸ್ ತಂಡ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸುವಂತೆ ಮನವಿ ಮಾಡಿದೆ. ಆದರೆ ಸಿಸಿಟಿವಿ ಸಾಕ್ಷಿ ಇದ್ದರೂ ಪೊಲೀಸರು ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ವಾಮಂಜೂರು ಫ್ರೆಂಡ್ಸ್ ತಂಡದ ಸದಸ್ಯರು ಗೇಡಿಗಳ ಕೃತ್ಯದ ವಿರುದ್ದ ಗುಳಿಗ ದೈವದ ಮೊರೆ ಹೋಗಿದ್ದಾರೆ.

ರೌಡಿಶೀಟರ್​​ನಿಂದ ಯುವಕನಿಗೆ ಚಾಕು ಇರಿತ

ಶಿವಮೊಗ್ಗ: ಹುಟ್ಟುಹಬ್ಬದ ಪಾರ್ಟಿ ವೇಳೆ ಯುವಕನೊಬ್ಬನಿಗೆ ರೌಡಿಶೀಟರ್​​ ಚಾಕು ಇರಿದ ಘಟನೆ ನಗರದ ಇಲಿಯಾಸ್ ಏರಿಯಾದಲ್ಲಿ ನಡೆದಿದೆ. ಹುಟ್ಟುಹಬ್ಬದ ಆಚರಣೆಗೆಂದು ಚನ್ನಗಿರಿಯಿಂದ ಶಿವಮೊಗ್ಗಕ್ಕೆ ಬಂದಿದ್ದ ಮೊಹ್ಮದ್ ಮುಸಾನ್​ನ ಮೇಲೆ ವೈಯಕ್ತಿಕ ದ್ವೇಷಕ್ಕೆ ಗಲಾಟೆ ಮಾಡಿಕೊಂಡ ಟಿಪ್ಪುನಗರದ ನಿವಾಸಿ ರೌಡಿಶೀಟರ್ ಸೈಯದ್ ರಜಾಕ್ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಮುಸಾನ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯ ಬಂಧನಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ