ಈ ಅಪ್ರಾಪ್ತ ಬಾಲಕಿ ಅನುಭವಿಸಿದ ಲೈಂಗಿಕ ಹಿಂಸೆ ಮತ್ತು ಸಾವಿಗೆ ನ್ಯಾಯ ದೊರಕೀತೆ?

ತೆಲಂಗಾಣದ ಸಂಗಾರೆಡ್ಡಿ‌ ಜಿಲ್ಲೆಯ ಅಮೀನಪುರದಲ್ಲಿ‌‌ ನಡೆದಿರುವ ಅತ್ಯಂತ ದಾರುಣ ಮತ್ತು ಹೇಯಕರ ಘಟನೆಯೊಂದರಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಸುಮಾರು ಒಂದು ವರ್ಷಕಾಲ ನಿರಂತರವಾಗಿ ಲೈಂಗಿಕ ಶೋಷಣೆಗೊಳಗಾಗಿ, ಗರ್ಭವೂ ಧರಿಸಿ, ಅಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ. ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥೆಯಾಗಿದ್ದ ನತದೃಷ್ಟ ಬಾಲಕಿಯ ಸಂಬಂಧಿಕರು ಆಕೆಯನ್ನು, ಅಮೀನಪುರದಲ್ಲಿರುವ ಮಾರುತಿ ಅನಾಥಾಶ್ರಮಕ್ಕೆ ಸೇರಿಸಿದ್ದರು. ಸದರಿ ಆಶ್ರಮದ ಮೇಲ್ವಿಚಾರಣೆಗಾಗಿ ವೇಣುಗೋಪಾಲ ಎಂಬ ಹೆಸರಿನ ರಾಕ್ಷಸೀ ಪ್ರವೃತ್ತಿಯ ವಿಕೃತಕಾಮಿಯನ್ನು ನೇಮಿಸಲಾಗಿದೆ. ಬಾಲಕಿಗೆ ಹಿಂದೆಮುಂದೆ ಯಾರೂ ಇಲ್ಲ ಎಂಬುದನ್ನು ಮನಗಂಡಿದ್ದ ಈ ಕಾಮುಕ ಅವಳಿಗೆ ನೀಡುತ್ತಿದ್ದ ಆಹಾರದಲ್ಲಿ […]

ಈ ಅಪ್ರಾಪ್ತ ಬಾಲಕಿ ಅನುಭವಿಸಿದ ಲೈಂಗಿಕ ಹಿಂಸೆ ಮತ್ತು ಸಾವಿಗೆ ನ್ಯಾಯ ದೊರಕೀತೆ?
ಸಾಂದರ್ಭಿಕ ಚಿತ್ರ
ಅರುಣ್​ ಕುಮಾರ್​ ಬೆಳ್ಳಿ

Updated on: Aug 13, 2020 | 9:08 PM

ತೆಲಂಗಾಣದ ಸಂಗಾರೆಡ್ಡಿ‌ ಜಿಲ್ಲೆಯ ಅಮೀನಪುರದಲ್ಲಿ‌‌ ನಡೆದಿರುವ ಅತ್ಯಂತ ದಾರುಣ ಮತ್ತು ಹೇಯಕರ ಘಟನೆಯೊಂದರಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಸುಮಾರು ಒಂದು ವರ್ಷಕಾಲ ನಿರಂತರವಾಗಿ ಲೈಂಗಿಕ ಶೋಷಣೆಗೊಳಗಾಗಿ, ಗರ್ಭವೂ ಧರಿಸಿ, ಅಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ.

ತಂದೆತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥೆಯಾಗಿದ್ದ ನತದೃಷ್ಟ ಬಾಲಕಿಯ ಸಂಬಂಧಿಕರು ಆಕೆಯನ್ನು, ಅಮೀನಪುರದಲ್ಲಿರುವ ಮಾರುತಿ ಅನಾಥಾಶ್ರಮಕ್ಕೆ ಸೇರಿಸಿದ್ದರು. ಸದರಿ ಆಶ್ರಮದ ಮೇಲ್ವಿಚಾರಣೆಗಾಗಿ ವೇಣುಗೋಪಾಲ ಎಂಬ ಹೆಸರಿನ ರಾಕ್ಷಸೀ ಪ್ರವೃತ್ತಿಯ ವಿಕೃತಕಾಮಿಯನ್ನು ನೇಮಿಸಲಾಗಿದೆ.

ಬಾಲಕಿಗೆ ಹಿಂದೆಮುಂದೆ ಯಾರೂ ಇಲ್ಲ ಎಂಬುದನ್ನು ಮನಗಂಡಿದ್ದ ಈ ಕಾಮುಕ ಅವಳಿಗೆ ನೀಡುತ್ತಿದ್ದ ಆಹಾರದಲ್ಲಿ ಮತ್ತು ಬರಿಸುವ ಪದಾರ್ಥವನ್ನು ಬೆರೆಸುತ್ತಿದ್ದ. ಆಹಾರ ಸೇವಿಸಿದ ನಂತರ ಗಾಢ ನಿದ್ರೆಗೆ ಜಾರುತ್ತಿದ್ದ ಮುಗ್ಧ ಹುಡುಗಿಯ ಮೇಲೆ ಅತ್ಯಾಚಾರವೆಸಗುತ್ತಿದ್ದ. ಒಂದೆರಡು ದಿನಗಳ ನಂತರ ಅವಳಿಗೆ ತನ್ನ ದೇಹದ ಮೇಲೆ ನಡೆಯುತ್ತಿದ್ದ ಹಿಂಸೆ ಗಮನಕ್ಕೆ ಬಂದಿತ್ತು. ಅವಳು ಪ್ರತಿಭಟಿಸಿದಾಗ, ಕೊಂದು ಹಾಕುವುದಾಗಿ ಬೆದರಿಸಿ, ವೇಣುಗೋಪಾಲ ತನ್ನ ಪೈಶಾಚಿಕ ಕೃತ್ಯವನ್ನು ಮುಂದುವರಿಸಿದ್ದ. ಶೋಷಿತ ಬಾಲಕಿಯ ಸಂಬಂಧಿಕರು ಹೇಳುವ ಪ್ರಕಾರ ಅವಳು ಒಂದು ವರ್ಷದವರೆಗೆ ತನ್ನ ಪುಟ್ಟ ದೇಹದ ಮೇಲೆ ನಡೆಯುತ್ತಿದ್ದ ಲೈಂಗಿಕ ಹಿಂಸೆಯನ್ನು ಮೌನವಾಗಿ ಸಹಿಸಿಕೊಂಡಿದ್ದಾಳೆ.

ಕೊನೆಗೊಂದು ದಿನ ಅವಳು ಗರ್ಭಿಣಿಯಾಗಿರುವುದನ್ನು ಮನಗಂಡ ಕಾಮಪಿಪಾಸು, ಸಂಬಂಧಿಕರ ಬಳಿಗೆ ಅವಳನ್ನು ಕರೆದೊಯ್ದು, ಅವಳ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಗರ್ಭಿಣಿ ಬಾಲಕಿಯನ್ನು ಅವರಲ್ಲಿ ಬಿಟ್ಟು ವಾಪಸ್ಸಾಗಿದ್ದಾನೆ.

ಗಾಬರಿಗೊಂಡ ಸಂಬಂಧಿಕರು ಆಕೆಯನ್ನು ಡಾಕ್ಟರ್ ಬಳಿ ಕರೆದುಕೊಂಡು ಹೋದಾಗ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿದೆ. ಹೇಗೆ, ಏನು ಅಂತ ವಿಚಾರಿಸಿದಾಗ ಅವಳು ರೋದಿಸುತ್ತಾ ಎಲ್ಲವನ್ನೂ ಹೇಳಿದ್ದಾಳೆ. ಬಹಳ ಗಂಭೀರ ಸ್ಥಿತಿಯಲ್ಲಿದ್ದ ಅವಳನ್ನು ಉಳಿಸುವ ಪ್ರಯತ್ನ ವೈದ್ಯರು ಮಾಡಿದರಾದರೂ ಅದು ಸಫಲವಾಗಲಿಲ್ಲ. ವರ್ಷವಿಡೀ ಹಲ್ಲೆಗೊಳಗಾಗಿ ನಿಸ್ತೇಜಿತಳಾಗಿದ್ದ ಹುಡುಗಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಳು.

ಅವಳ ಸಂಬಂಧಿಕರು ಪೊಲೀಸ್ ಮತ್ತು ಮಹಿಳಾ ಹಕ್ಕುಗಳ ಆಯೋಗಕ್ಕೆ ದೂರು ನೀಡಿ ಪ್ರತಿಭಟನೆ ನಡೆಸಿದ ನಂತರ ಪೋಲಿಸರು, ವೇಣುಗೋಪಾಲ ಹಾಗೂ ಅವನ ಪಾಶವೀ ಕೃತ್ಯಕ್ಕೆ ಸಹಾಯ ಮಾಡಿದರೆನ್ನಲಾಗಿರುವ ಅನಾಥಾಶ್ರಮದ ಇಬ್ಬರು ನಿರ್ವಾಹಕರನ್ನು ಬಂಧಿಸಿದ್ದಾರೆ. ಈ ರಾಕ್ಷಸನಿಗೆ ನ್ಯಾಯಾಲಯ ಯಾವ ಶಿಕ್ಷೆ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕು. ಒಬ್ಬ ವಿಕೃತಕಾಮಿಯ ಲೈಂಗಿಕ ತೃಷೆಗೆ ಅಮಾಯಕ ಹಾಗೂ ಅಪ್ರಾಪ್ತ ಬಾಲಕಿಯೊಬ್ಬಳು ಬಲಿಯಾಗಿರುವುದನ್ನು ಮಾತ್ರ ನಾಗರಿಕ ಸಮಾಜ ಯಾವತ್ತೂ ಕ್ಷಮಿಸಲಾರದು.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us