ಜೆಡಿಎಸ್​ಗೆ ಮತ ಹಾಕಿದರೆ ಕಾಂಗ್ರೆಸ್​ಗೆ ಹಾಕಿದಂತೆ, ಕಾಂಗ್ರೆಸ್ ವೋಟ್ ಹಾಕಿದರೆ ಪಿಎಫ್​​ಐಗೆ ನೀಡಿದಂತೆ: ಜೆಪಿ ನಡ್ಡಾ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಧರ್ಮಧಾರಿತ ಮೀಸಲಾತಿ ರದ್ದು ಮಾಡಿದ್ದನ್ನು ಸಮರ್ಥಿಸಿಕೊಂಡರು.

ಜೆಡಿಎಸ್​ಗೆ ಮತ ಹಾಕಿದರೆ ಕಾಂಗ್ರೆಸ್​ಗೆ ಹಾಕಿದಂತೆ, ಕಾಂಗ್ರೆಸ್ ವೋಟ್ ಹಾಕಿದರೆ ಪಿಎಫ್​​ಐಗೆ ನೀಡಿದಂತೆ: ಜೆಪಿ ನಡ್ಡಾ
ಜೆಪಿ ನಡ್ಡಾ
Image Credit source: PTI

Updated on: May 05, 2023 | 6:41 PM

ಕೊಪ್ಪಳ: ಕುಮಾರಸ್ವಾಮಿ (HD Kumaraswamy) ಮುಖ್ಯಮಂತ್ರಿಯಾಗಿದ್ದಾಗ ಕಿಸಾನ್ ಸಮ್ಮಾನ್ ಯೋಜನೆ ಕೇವಲ‌ 17 ರೈತರ ಹೆಸರುಗಳನ್ನ ಕಳುಹಿಸಿದ್ದರು. ಇದು ಸತ್ಯವೋ ಸುಳ್ಳೋ ಅಂತ ಅವರನ್ನೇ ಪ್ರಶ್ನಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಹೇಳಿದರು. ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಕ್ಷ ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ (Pradhan Mantri Kisan Samman Nidhi) ನೀಡಿದ್ದೇವೆ. ಇದು ಡಬಲ್‌ ಇಂಜಿನ್ ಸರ್ಕಾರ ಎಂದರು.

ಸಿದ್ದರಾಮಯ್ಯ ಮೀಸಲಾತಿ ಬಗ್ಗೆ ಮಾತನಾಡುತ್ತಾರೆ. ಆದರೆ ಅದನ್ನ ಜಾರಿಗೆ ತಂದಿದ್ದು ನಾವು. ಸದ್ಯ ಧರ್ಮಧಾರಿತ ಮೀಸಲಾತಿಯನ್ನು (ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ) ರದ್ದು ಮಾಡಿದ್ದೇವೆ ಎಂದು ಹೇಳಿದ ನಡ್ಡಾ, ಇವರು ಮೊದಲು ಶ್ರೀರಾಮನ ಬಗ್ಗೆ ಮಾತನಾಡಿದ್ದರು. ಈಗ ಆಂಜನೇಯ ಅನುಯಾಯಿಗಳನ್ನ ಬ್ಯಾನ್ ಮಾಡುತ್ತಾರಂತೆ. ಇಂತಹ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್​ನವರು ಪಿಎಫ್​ಐ ಸಂಘಟನೆಯ ಕೇಸ್ ವಾಪಸ್ ತೆಗೆದುಕೊಂಡಿದ್ದರು. ಇಂತವರು ಇವತ್ತು ಭ್ರಷ್ಟಾಚಾರದ ಬಗ್ಗೆ ಮತನಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಶಿಕ್ಷಕರ ನೇಮಕಾತಿ ಹಗರಣ ನಡೆದಿತ್ತು. ಅರ್ಕಾವತಿ ಹಗರಣ ನಡೆದಿತ್ತು, ಮಲಪ್ರಭಾ ಕಾಲುವೆ ಹಗರಣ, ಸೋಲಾರ್ ಹಗರಣ, ಸ್ಲಂ ಬೋರ್ಡ್ ಹಗರಣ ಎಲ್ಲವೂ ಆಗಿದ್ದು ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ. ಬಿಬಿಎಂಪಿಯ ಬೋರ್ ವೇಲ್ ಹಗರಣ ನಡೆದಿದ್ದು ಇದೇ ಸಿದ್ದು ಸಿಎಂ ಆಗಿದ್ದಾಗ ಎಂದರು.

ಇದನ್ನೂ ಓದಿ: ನಡ್ಡಾ ರೋಡ್​ ಶೋನಲ್ಲಿ ಜ್ಯೂನಿಯರ್ ಮೋದಿ ಹವಾ; ಇಲ್ಲಿವೆ ನೋಡಿ ಫೋಟೋಸ್

ಅಲ್ಲದೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿಕೆ ಶಿವಕುಮಾರ್ ಬೇಲ್ ಮೇಲೆ ಇದ್ದಾರೆ ಎಂದು ಹೇಳಿದ ನಡ್ಡಾ, ಅರ್ಧ ಜನ ಬೇಲನಲ್ಲಿ, ಅರ್ಧ ಜನ ಜೈಲ್​ನಲ್ಲಿ ಇದ್ದಾರೆ. ಇಂತವರು ಭ್ರಷ್ಟಾಚಾರದ ಬಗ್ಗೆ ಮತನಾಡುತ್ತಾರೆ. ನೀವು ವಿಚಾರ ಮಾಡಿ ಮತ ಹಾಕಿ. ಜೆಡಿಎಸ್​ಗೆ ಮತ ಹಾಕಿದರೆ ಅದು ಕಾಂಗ್ರೆಸ್​ಗೆ ಹಾಕಿದಂತೆ. ಕಾಂಗ್ರೆಸ್ ಮತ ನೀಡಿದರೆ ಪಿಎಫ್​​ಐಗೆ ನೀಡಿದಂತೆ. ಎಲ್ಲರೂ ಬಿಜೆಪಿಗೆ ಮತ ಚಲಾಯಿಸಿ, ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುತ್ತೇವೆ ಎಂದರು.

ಇವತ್ತು ಭಾರತ ದೇಶ ವಿಕಾಸದತ್ತ ಸಾಗುತ್ತಿದೆ. ಕಳೆದ 9 ವರ್ಷಗಳಿಂದ ಮೋದಿ ನೇತೃತ್ವದಲ್ಲಿ ನವಭಾರತ ನಿರ್ಮಾಣ ಆಗುತ್ತಿದೆ ಎಂದ ಹೇಳಿದ ಜೆಪಿ ನಡ್ಡಾ, ಇಡೀ ವಿಶ್ವದಲ್ಲಿ ನಮ್ಮ ಆರ್ಥಿಕ ವ್ಯವಸ್ಥೆ 5ನೇ ಸ್ಥಾನ ಪಡೆದಿದೆ. ಕರ್ನಾಟಕವೂ ಕೂಡಾ ಅಭಿವೃದ್ಧಿಯತ್ತ ಸಾಗುತ್ತಿದೆ. ಬೊಮ್ಮಾಯಿ ವಿಧ್ಯಾನಿಧಿ ಯೋಜನೆ ನೀಡಿದೆ. ಈಗ ಹೇಳಿ ನಿಮಗೆ ಡಬಲ್ ಏಂಜಿನ್ ಸರ್ಕಾರ ಬೇಕಾ ಬೇಡ್ವಾ? ಎಂದು ಪ್ರಶ್ನಿಸಿದಾಗ ಬೇಕು ಎಂದು ಸಮಾವೇಶದಲ್ಲಿ ನೆರೆದಿದ್ದ ಜನರು ಹೇಳಿದರು.

ಸಿದ್ದರಾಮಯ್ಯ ನೀವು ಕ್ಷಮೆ ಕೇಳಲೇ ಬೇಕು: ಜೆಪಿ ನಡ್ಡಾ

ರಾಯಚೂರಿನ ಲಿಂಗಸುಗೂರು ಪಟ್ಟಣದಲ್ಲಿ ನಡೆದ ರೋಡ್​ ಶೋ ವೇಳೆ ಮಾತನಾಡಿದ ಜೆಪಿ ನಡ್ಡಾ, ಸಿದ್ದರಾಮಯ್ಯ ನೀವು ಕ್ಷಮೆ ಕೇಳಲೇ ಬೇಕು. ಏಕೆಂದರೆ ಪಿಎಫ್​ಐನ 175 ಕೇಸ್ ವಾಪಸ್ ಪಡೆದಿದ್ದೀರಿ. ನೂರಾರು ಜನರನ್ನ ಜೈಲಿನಿಂದ ಬಿಟ್ಟಿದ್ದೀರಿ. ನೀವೇನು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀರಿ? ಎಂದು ಪ್ರಶ್ನಿಸಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಸಾಲುಸಾಲು ಹಗರಣಗಳ ಹೆಸರನ್ನು ಹೇಳಿದರು. ಅಲ್ಲದೆ, ಮೇಲಿನಿಂದ ಕೆಳಗೆ‌ ಭ್ರಷ್ಟಾಚಾರ ಇರುವ ನೀವು, ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ನಿಮಗೆ ಶೋಭೆಯಲ್ಲ ಎಂದರು.

ಡಿಕೆ ಶಿವಕುಮಾರ್ ನೀವು ಹೇಳಿ, ನಿಮ್ಮ ಮೇಲೆ‌ ಸಿಬಿಐ ಕೇಸ್ ಇದೆಯೋ ಇಲ್ಲವೋ? ನೀವು ಬೇಲ್‌ ಮೇಲೆ ಹೊರಗಿದ್ದೀರೋ ಇಲ್ವೋ? ಕಾಂಗ್ರೆಸ್ ಪಾರ್ಟಿ ಕಥೆಯೇ ಅದು, ಜೇರ್ ಮೇಲೆ ಇಲ್ಲ, ಬೇಲ್ ಮೇಲೆ ಇರುವುದು. ಸಿದ್ದರಾಮಯ್ಯ ಸಮಯದಲ್ಲಿ ಅರ್ಕಾವತಿ ಸಂಬಂಧ 8 ಸಾವಿರ ರೈತರಿಗೆ ಅನ್ಯಾಯ ಮಾಡಲಾಗಿದೆ. ಹೀಗಾಗಿ ಬಿಜೆಪಿ ಗೆಲ್ಲಿಸಿ ಎಂದು ಕರೆ ನೀಡಿದರು.

ಸಾಮಾಜಿಕ ನ್ಯಾಯವನ್ನ ನಿಲ್ಲಿಸುವ‌ ಕೆಲಸ ಕಾಂಗ್ರೆಸ್ ಮಾಡಿತ್ತು. ಆದರೆ ಬೊಮ್ಮಾಯಿ ಮೀಸಲಾತಿ ಹೆಚ್ಚಿಸಿದ್ದಾರೆ. ನಾವು ಧರ್ಮದ ಆಧಾರದ ಮೀಸಲಾತಿ ಮುಕ್ತಾಯಗೊಳಿಸಿದ್ದೇವೆ. ಆದರೆ ಕಾಂಗ್ರೆಸ್ ಪಾರ್ಟಿ ಬಂದರೆ ಮತ್ತೆ ಧರ್ಮಾಧಾರಿತ ಮೀಸಲಾತಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ರಿವರ್ಸ್ ಗೇರ್ ಹಾಕುವವರು. ಇವರನ್ನ ಮನೆಯಲ್ಲೇ ಕೂರಿಸಬೇಕು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವಶ್ಯಕತೆ ಇಲ್ಲ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:39 pm, Fri, 5 May 23

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Read More
Follow Us