Karnataka Politics Highlights: ಎಲ್ಲ ಗೊಂದಲಕ್ಕೂ ಬುಧವಾರದೊಳಗೆ ತೆರೆ ಎಳೆಯಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ

| Updated By: Rakesh Nayak Manchi

Updated on:May 20, 2023 | 10:19 PM

ಕರ್ನಾಟಕ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಲೈವ್: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 12.30ಕ್ಕೆ ಕರ್ನಾಟಕದ 31ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಹಾಗೂ ಮೊದಲ ಬಾರಿಗೆ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ಪಡೆಯಿರಿ.

Karnataka Politics Highlights: ಎಲ್ಲ ಗೊಂದಲಕ್ಕೂ ಬುಧವಾರದೊಳಗೆ ತೆರೆ ಎಳೆಯಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ
ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ, ಟಗರು ಸಿದ್ದರಾಮಯ್ಯ(Siddaramaiah) ಹಾಗೂ ಟ್ರಬಲ್ ಶೂಟರ್, ಕನಕಪುರ ಬಂಡೆ ಡಿಕೆ ಶಿವಕುಮಾರ್​(DK Shivakumar) ಅವರ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಶುರುವಾಗಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ(Kanteerava stadium) ಮಧ್ಯಾಹ್ನ 12.30ಕ್ಕೆ ಕರ್ನಾಟಕದ 31ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಕೆ ಶಿವಕುಮಾರ್ ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಡಿಸಿಎಂ ಆಗಿ ಅಧಿಕಾರವನ್ನು ಸ್ವೀಕರಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳ ವಲಯದಲ್ಲಿ ಉತ್ಸಾಹ ಉತ್ತುಂಗಕ್ಕೇರಿದೆ. ಇನ್ನು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆ 8 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ನೋಡಿ.

LIVE NEWS & UPDATES

The liveblog has ended.
  • 20 May 2023 10:09 PM (IST)

    Karnataka Politics Live: ಎಲ್ಲ ಗೊಂದಲಕ್ಕೂ ಬುಧವಾರದೊಳಗೆ ತೆರೆ ಎಳೆಯಲು ಕಾಂಗ್ರೆಸ್ ನಿರ್ಧಾರ

    ಸಚಿವ ಸಂಪುಟ ರಚನೆ ವಿಚಾರವಾಗಿ ಇರುವ ಎಲ್ಲ ಗೊಂದಲಕ್ಕೂ ಬುಧವಾರದೊಳಗೆ ತೆರೆ ಎಳೆಯಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಈ ಬಗ್ಗೆ ಹೈಕಮಾಂಡ್‌ನಿಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ಗೆ ಸೂಚನೆ ನೀಡಲಾಗಿದೆ. ಬುಧವಾರದ ಬಳಿಕ ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಬಾಕಿ ಉಳಿದ 20 ಸಚಿವರ ಪ್ರಮಾಣವಚನ ಬಳಿಕವೇ 8 ಸಚಿವರಿಗೂ ಖಾತೆ ಹಂಚಿಕೆಯಾಗಲಿದೆ. ಆ ಮೂಲಕ ಒಟ್ಟಾಗಿಯೇ ಖಾತೆ ಹಂಚಿಕೆಗೆ ಕಾಂಗ್ರೆಸ್ ನಾಯಕರಿಂದ ತೀರ್ಮಾನ ಮಾಡಲಾಗಿದೆ.

  • 20 May 2023 07:57 PM (IST)

    Karnataka Politics Live: ಸಚಿವರಾದ ಮೊದಲ ದಿನವೇ ಫೀಲ್ಡಿಗೆ ಇಳಿದ ಸಚಿವ ರಾಮಲಿಂಗ ರೆಡ್ಡಿ

    ಬೆಂಗಳೂರು: ನಗರದಲ್ಲಿ ಸುರಿದ ಗಾಳಿ ಮಳೆಗೆ ಮರಗಳು ಉರುಳಿಬಿದ್ದಿವೆ. ಈ  ಬಗ್ಗೆ ಸಚಿವ ರಾಮಲಿಂಗರೆಡ್ಡಿ ಅವರು ಬಿಬಿಎಂಪಿ ಆಯುಕ್ತರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಸುಮಾರು 20 ಕಡೆ ಮರಗಳು ಬಿದ್ದಿರುವ ಬಗ್ಗೆ ಆಯುಕ್ತರು ಮಾಹಿತಿ ನೀಡಿದ್ದಾರೆ. ಬೆಸ್ಕಾಂ ಎಂಡಿಗೂ ಕರೆ ಮಾಡಿ ವಿದ್ಯುತ್‌ ವ್ಯತ್ಯಯ ಸರಿಪಡಿಸುವಂತೆ ಸೂಚನೆ ನೀಡಿದ್ದಾರೆ. ಸದ್ಯ ರಾಮಲಿಂಗ ರೆಡ್ಡಿ ಅವರ ಕಣ್ಣು ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣು ಬಿದ್ದಿದೆ.

  • 20 May 2023 07:53 PM (IST)

    Karnataka Politics Live: ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ನೀಡಿದ್ದು ಹೆಮ್ಮೆಯ ವಿಚಾರ: ಸೋನಿಯಾ ಗಾಂಧಿ

    ಮೊದಲ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ನೀಡಿದ್ದು ಹೆಮ್ಮೆಯ ವಿಚಾರ. ಕಾಂಗ್ರೆಸ್‌ ಪಕ್ಷಕ್ಕೆ ಐತಿಹಾಸಿಕ ಬಹುಮತ ನೀಡಿದ್ದಕ್ಕೆ ಕರ್ನಾಟಕ ರಾಜ್ಯದ ಜನತೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಈ ಬಹುಮತ ಜನಪರ ಹಾಗೂ ಬಡವರ ಪರವಾದ ಸರ್ಕಾರಕ್ಕಾಗಿ, ವಿಭಜನೆ ರಾಜಕೀಯ ಮತ್ತು ಭ್ರಷ್ಟಾಚಾರ ತಿರಸ್ಕರಿಸುವ ಜನಾದೇಶವಾಗಿದೆ. ಕಾಂಗ್ರೆಸ್ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದೆ. ರಾಜ್ಯದಲ್ಲಿ ಶಾಂತಿ, ಸಾಮರಸ್ಯ, ಪ್ರಗತಿ ಸಾಧಿಸಲು ಪಕ್ಷ ಬದ್ಧವಾಗಿದೆ ಎಂದರು.

  • 20 May 2023 07:51 PM (IST)

    Karnataka Politics Live: ಸಿಎಂ ಸಚಿವಾಲಯದಲ್ಲಿ ಕಾರ್ಯನಿರ್ವಹಿಸ್ತಿದ್ದ ಸಿಬ್ಬಂದಿ ಕಾರ್ಯಮುಕ್ತ

    ಸಿಎಂ ಸಚಿವಾಲಯದಲ್ಲಿ ಕಾರ್ಯನಿರ್ವಹಿಸ್ತಿದ್ದ ಸಿಬ್ಬಂದಿ ಕಾರ್ಯಮುಕ್ತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಸ್ಥಳ ನಿಯುಕ್ತಿ, ಒಪ್ಪಂದ, ನಿಯೋಜನೆ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಾರ್ಯಮುಕ್ತಗೊಳಿಸಲಾಗಿದೆ.

  • 20 May 2023 07:50 PM (IST)

    Karnataka Politics Live: ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ತಾತ್ವಿಕ ಆದೇಶ

    ಕಾಂಗ್ರೆಸ್​ನ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರವು ತಾತ್ವಿಕ ಆದೇಶ ಹೊರಡಿಸಿದೆ. ಷರತ್ತುಗಳು, ನಿಬಂಧನೆಗಳು, ನಿಯಮಗಳು ಮುಂದಿನ ದಿನಗಳಲ್ಲಿ ನರ್ಣಯಿಸಿ ಪ್ರಕಟಿಸಲಾಗುತ್ತದೆ.

  • 20 May 2023 06:37 PM (IST)

    Karnataka CM Swearing in Ceremony Live: 5 ಗ್ಯಾರಂಟಿಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿಲ್ಲ: ಮಾಜಿ ಸಿಎಂ ಬೊಮ್ಮಾಯಿ

    ಕಾಂಗ್ರೆಸ್​ ಸರ್ಕಾರದ ಮೊದಲ ಸಚಿವ ಸಂಪುಟ ನಡೆದಿದೆ. ಗ್ಯಾರಂಟಿಗಳ ಬಗ್ಗೆ ಜನರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿಗಳ ಬಗ್ಗೆ ಸ್ಪಷ್ಟನೆ ನೀಡಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವಾಗಿನಿಂದ ಜಾರಿ ಎಂಬುವ ಕುರಿತು ವಿವರಣೆ ನೀಡಿಲ್ಲ. ಸಂಪುಟ ಸಭೆಯಲ್ಲಿ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ನಾನು ಸಿಎಂ ಆಗಿದ್ದಾಗ ರಾಜ್ಯದ ಆದಾಯ ಹೆಚ್ಚಳ ಮಾಡಿದ್ದೆ. ಚುನಾವಣೆಯಾದ ಮೇಲೆ ಹೀಗೆ ಮಾತನಾಡುವುದು ಸರಿಯಲ್ಲ. ಮತದಾರರಿಗೆ ಎಷ್ಟು ಗೌರವಿಸುತ್ತಾರೆ ಎಂಬುವುದು ಗೊತ್ತಾಗುತ್ತಿದೆ ಎಂದರು.

  • 20 May 2023 06:02 PM (IST)

    Karnataka CM Swearing in Ceremony Live: ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಅಧಿಕೃತ ಆದೇಶ

    ಗೃಹ ಲಕ್ಷ್ಮೀ ಯೋಜನೆ ಜಾರಿಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟಗೊಂಡಿದೆ. ಸಂಪುಟದ ತೀರ್ಮಾನದಂತೆ ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಅದರಂತೆ ರಾಜ್ಯದ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ ಸರ್ಕಾರ 2 ಸಾವಿರ ರೂಪಾಯಿ ವರ್ಗಾವಣೆ ಮಾಡಲಿದೆ.

  • 20 May 2023 04:29 PM (IST)

    Karnataka CM Swearing in Ceremony Live: ಹಂಗಾಮಿ ಸ್ಪೀಕರ್​ ಆಗಿ ನೇಮಕಗೊಳ್ಳುವ ಆರ್​.ವಿ.ದೇಶಪಾಂಡೆ

    ಬೆಂಗಳೂರು: ಹಂಗಾಮಿ ಸ್ಪೀಕರ್​ ಆಗಿ ಆರ್​.ವಿ.ದೇಶಪಾಂಡೆ ನೇಮಕಗೊಳ್ಳಲಿದ್ದಾರೆ. ಧಾನಸಭೆ ಹಂಗಾಮಿ ಸ್ಪೀಕರ್ ಆಗಿ ನೇಮಕಗೊಳ್ಳಲಿರುವ ಹಳಿಯಾಳ ಶಾಸಕರಾಗಿದ್ದಾರೆ.

  • 20 May 2023 04:24 PM (IST)

    Karnataka CM Swearing in Ceremony Live: ಮುಂದಿನ ಸಂಪುಟ ಸಭೆ ನಂತರ ಪಂಚ ಯೋಜನೆಗಳ ಜಾರಿ

    ಬೆಂಗಳೂರು: ಮುಂದಿನ ಸಚಿವ ಸಂಪುಟ ಸಭೆ ನಂತರ ಪಂಚ ಯೋಜನೆಗಳ ಜಾರಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸೋಮವಾರ, ಮಂಗಳವಾರ, ಬುಧವಾರ ವಿಧಾನಸಭೆ ಅಧಿವೇಶನ ಕರೆಯುತ್ತಿದ್ದೇವೆ, ಹೊಸ ಸಭಾಪತಿಯನ್ನು ಆಯ್ಕೆ ಮಾಡಲಾಗುವುದು ಎಂದರು.

  • 20 May 2023 04:21 PM (IST)

    Karnataka CM Swearing in Ceremony Live: ಪಂಚ ಗ್ಯಾರಂಟಿ ಘೋಷಣೆ ಮಾಡಿದ ಸಿದ್ದರಾಮಯ್ಯ

    ಕಟ್ಟು ನಿಟ್ಟಾಗಿ ತೆರಿಗೆಯನ್ನು ವಸೂಲಿ ಮಾಡಿ ಗ್ಯಾರಂಟಿ ಜಾರಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಗೃಹ ಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್ ಉಚಿತ​​ ವಿದ್ಯುತ್​ ನೀಡುತ್ತೇವೆ. ಇದಕ್ಕೆ ಸುಮಾರು ತಿಂಗಳಿಗೆ 1200 ಕೋಟಿ ರೂ. ಆಗಬಹುದು. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 200 ರೂ. ಹಾಕಲಾಗುವುದು. ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ, ಈ ವರ್ಷದ ಪದವೀದರ, ಪಿಎಚ್​ಡಿ, ಎಂಬಿಬಿಎಸ್ ಪದವೀದರ ನಿರುದ್ಯೋಗಿಗಳಿಗೆ ಎರಡೂವರೆ ವರ್ಷಗಳ ವರೆಗೆ ತಿಂಗಳಿಗೆ ಮೂರು ಸಾವಿರ ರೂ. ನೀಡಲಾಗುವುದು. ಈ ನಡುವೆ ಉದ್ಯೋಗ ಸಿಕ್ಕರೆ ಯುವ ನಿಧಿ ನೀಡಲಾಗುವುದಿಲ್ಲ. ಡಿಪ್ಲಮಾ ಪಾಸ್ ಮಾಡಿದ ನಿರುದ್ಯೋಗಿಗಳಿ ಒಂದೂವರೆ ಸಾವಿರ ರೂ., ಎಲ್ಲಾ ಸರ್ಕಾರಿ ಬಸ್​ನಲ್ಲಿ ಪ್ರಯಾಣಿಸುವ ಕರ್ನಾಟಕದ ಮಹಿಳೆಯರಿಗೆ ಫ್ರೀ ಪಾಸ್ ನೀಡಲಾಗುವುದು, ಬೇರೆ ರಾಜ್ಯಗಳ ಮಹಿಳೆಯರಿಗೆ ಈ ಭಾಗ್ಯ ಇರುವುದಿಲ್ಲ ಎಂದರು. 5 ಗ್ಯಾರಂಟಿಗಳಿಗೆ ತಾತ್ವಿಕವಾಗಿ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದೇವೆ ಎಂದರು.

  • 20 May 2023 04:14 PM (IST)

    Karnataka CM Swearing in Ceremony Live: ಕರ್ನಾಟಕವನ್ನು ಆರ್ಥಿಕ ದಿವಾಳಿಗೆ ಸಿಲುಕಿಸದೆ ಗ್ಯಾರಂಟಿಗಳ ಈಡೇರಿಕೆ: ಸಿದ್ದರಾಮಯ್ಯ

    ನ್ಯಾಯಯುತವಾಗಿ ಕರ್ನಾಟಕಕ್ಕೆ ಸಿಗಬೇಕಿದ್ದ 5495 ಕೋಟಿ ರೂ.ವನ್ನು ಬಿಜೆಪಿ ರಾಜ್ಯ ಸರ್ಕಾರ ಕೇಳಿಲ್ಲ. ರಾಜ್ಯದ ಸಂಸದರು ಕೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈ ದೇಶದ ಸಾಲ 53 ಲಕ್ಷದ 11 ಸಾವಿರ ಕೋಟಿ ಇತ್ತು. ಮೋದಿ ಅಧಿಕಾರಕ್ಕೆ ಬಂದ ನಂತರ 9 ವರ್ಷಗಳಲ್ಲಿ ದೇಶದ ಮೇಲೆ 155 ಲಕ್ಷ ಕೋಟಿ ಆಗಿದೆ. ಬೊಮ್ಮಾಯಿ ಯಡಿಯೂರಪ್ಪ ಸರ್ಕಾರದಲ್ಲಿ 4 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ನಾನು ಐದು ವರ್ಷಗಳ ಕಾಲ ಸರ್ಕಾರ ನಡೆಸಿದಾಗಲೂ ಇಷ್ಟೊಂದು ಸಾಲ ಮಾಡಿರಲಿಲ್ಲ. ಹೀಗಾಗಿ ನಾವು ಕರ್ನಾಟಕವನ್ನು ಆರ್ಥಿಕ ದಿವಾಳಿಗೆ ಸಿಲುಕಿಸದೆ ನಾವು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದರು.

  • 20 May 2023 04:05 PM (IST)

    Karnataka CM Swearing in Ceremony Live: ನಮ್ಮ ಯೋಜನೆಗಳಿಗೆ ಸುಮಾರು 50 ಸಾವಿರ ಕೋಟಿ ಆಗಬಹುದು: ಸಿದ್ದರಾಮಯ್ಯ

    ಬೆಂಗಳೂರು: ನಮ್ಮ ಯೋಜನೆಗಳಿಗೆ ಸುಮಾರು 50 ಸಾವಿರ ಕೋಟಿ ಆಗಬಹುದು ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕೇಂದ್ರದಿಂದ ಈ ವರ್ಷ 50 ಸಾವಿರ ಕೋಟಿ ರೂ. ಬರುತ್ತದೆ. ಕರ್ನಾಟಕದಿಂದ 4 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ. ಆದರೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮಗೆ ಅನ್ಯಾಯವಾಗಿದೆ ಎಂದರು.

  • 20 May 2023 03:58 PM (IST)

    Karnataka CM Swearing in Ceremony Live: ನಾವು ಕೊಟ್ಟ ಗ್ಯಾರಂಟಿಗಳು ಒಂದು ವರ್ಷದಲ್ಲಿ ಈಡೇರಿಸುವ ಭರವಸೆ ಅಲ್ಲ: ಸಿದ್ದರಾಮಯ್ಯ

    ಬೆಂಗಳೂರು: ಪ್ರಣಾಳಿಕೆಯಲ್ಲಿ ಜನರಿಗೆ ಅನೇಕ ಭರವಸೆಗಳನ್ನು ಕೊಟ್ಟಿದ್ದೆವು. ಇದು ಕೇವಲ ಒಂದು ವರ್ಷದಲ್ಲಿ ಈಡೇರಿಸುವ ಭರವಸೆ ಅಲ್ಲ. ಅಲ್ಲದೇ ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿದ್ದೆವು. ಮೊದಲ ಸಂಪುಟದಲ್ಲಿ 5 ಗ್ಯಾರಂಟಿ ಜಾರಿ ಬಗ್ಗೆ ಹೇಳಿದ್ದೆವು ಎಂದು ಸಿದ್ದರಾಮಯ್ಯ ಹೇಳಿದರು. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ. ಕಳೆದ ಬಾರಿ ನಾವು 158 ಭರವಸೆಗಳನ್ನು ಈಡೇರಿಸಿದ್ದೆವು. ಹೆಚ್ಚುವರಿಯಾಗಿ 30 ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು ಎಂದರು.

  • 20 May 2023 03:56 PM (IST)

    Karnataka CM Swearing in Ceremony Live: ಸಿದ್ದರಾಮಯ್ಯ ಸುದ್ದಿಗೋಷ್ಠಿ

    ಬೆಂಗಳೂರು: ಸಚಿವ ಸಂಪುಟ ಸಭೆ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಸರ್ಕಾರ ರಚನೆ ಮೇಲೆ ಇದು ಮೊದಲ ಸುದ್ದಿಗೋಷ್ಠಿ. ನಾನು, ಡಿಕೆ ಶಿವಕುಮಾರ್, 8 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದೇವೆ. ಬೇರೆ ರಾಜ್ಯಗಳ ಸಿಎಂಗಳು, ವಿಪಕ್ಷ ನಾಯಕರು ಬಂದಿದ್ದರು. ಬಿಜೆಪಿಯೇತರ ಪಕ್ಷಗಳ ಅಧ್ಯಕ್ಷರು ಬಂದು ಶುಭಕೋರಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್​, ಸುರ್ಜೇವಾಲ ಶುಭ ಕೋರಿದ್ದಾರೆ. ನಾವು ಸಹ ರಾಜ್ಯದ ಜನರಿಗೆ ಧನ್ಯವಾದ ಸಲ್ಲಿಸಿದ್ದೇವೆ ಎಂದರು.

  • 20 May 2023 03:43 PM (IST)

    Karnataka CM Swearing in Ceremony Live: ಕ್ಯಾಬಿನೇಟ್ ಸಭೆ ಅಂತ್ಯ

    ಬೆಂಗಳೂರು: ಕಾಂಗ್ರೆಸ್ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದೆ. ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್​, ಕೆ.ಹೆಚ್​.ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಜಮೀರ್​ ಅಹ್ಮದ್ ಖಾನ್ ಉಪಸ್ಥಿತರಿದ್ದರು.

  • 20 May 2023 03:18 PM (IST)

    Karnataka CM Swearing in Ceremony Live: ಸಿದ್ದು ಡಿಕೆಶಿಗೆ ಶುಭಕೋರಿದ ಕುಮಾರಸ್ವಾಮಿ

    ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರಕಾರಕ್ಕೆ ಶುಭವಾಗಲಿ. ನೂತನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಗೆ ಹಾರ್ದಿಕ ಶುಭಾಶಯಗಳು ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು, ರಾಜ್ಯದ ಜನತೆಗೆ ಅರ್ಪಣಾ ಮನೋಭಾವದಿಂದ ಅವರೆಲ್ಲರೂ ಸೇವೆ ಮಾಡಲಿ. ಕನ್ನಡನಾಡಿನ ಜನಹಿತಕ್ಕಾಗಿ ಕಾಂಗ್ರೆಸ್ ಸರಕಾರ ಕೈಗೊಳ್ಳುವ ಪ್ರತಿಯೊಂದು ಕ್ರಮಕ್ಕೂ ನಮ್ಮ ಜೆಡಿಎಸ್ ಪಕ್ಷ ಪರಿಪೂರ್ಣ ಬೆಂಬಲ ನೀಡಲಿದೆ ಎಂದರು.

  • 20 May 2023 03:16 PM (IST)

    Karnataka CM Swearing in Ceremony Live: ಟಗರು ಬರುತ್ತೆ ಗುಮ್ಮತ್ತೆ ಅಂತಾ ಮೊದಲೇ ಹೇಳಿದ್ದೆ: ವಿಜಯಾನಂದ್ ಕಾಶಪ್ಪನವರ್

    ಟಗರು ಬರುತ್ತೆ ಗುಮ್ಮತ್ತೆ ಅಂತಾ ನಾನು ಮೊದಲೇ ಹೇಳಿದ್ದೆ. ಇದೀಗ ಸಿದ್ದರಾಮಯ್ಯ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ವಿಜಯಾನಂದ ಕಾಶಪ್ಪನವರ್​ ಹೇಳಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಒಳ್ಳೆಯ ಆಡಳಿತ ಸಿಗಲಿದೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತಾರೆ. ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದರು.

  • 20 May 2023 02:43 PM (IST)

    Karnataka CM Swearing in Ceremony Live: ನಾವೂ ಒಳ್ಳೆ ಆಡಳಿತ ಕೊಡುತ್ತೇವೆ: ರಾಮಲಿಂಗ ರೆಡ್ಡಿ

    ಜನ ನಮ್ಮನ್ನು ಗೆಲ್ಲಿಸಿದ್ದಾರೆ, ಒಳ್ಳೆಯ ಆಡಳಿತ ಕೊಡುತ್ತೇವೆ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ. ಜನ ನಮ್ಮನ್ನ ಬಯಸಿ ಗೆಲ್ಲಿಸಿದ್ದಾರೆ. ನಾನು ಯಾವುದೇ ಖಾತೆ ಕೊಟ್ಟರೂ ನಿರ್ವಹಿಸುತ್ತೇನೆ. ಬೆಂಗಳೂರಿಗೆ ಒಳ್ಳೆ ಕೊಡುಗೆ ನೀಡುತ್ತೇವೆ ಎಂದರು.

  • 20 May 2023 02:42 PM (IST)

    Karnataka CM Swearing in Ceremony Live: ಪ್ರಮಾಣ ವಚನದಿಂದ ದೂರ ಉಳಿದ ಮಧು ಬಂಗಾರಪ್ಪ

    ಸಿಎಂ ಮತ್ತು ಡಿಸಿಎಂ ಪ್ರಮಾಣ ವಚಬ ಬೆನ್ನಲ್ಲೆ ಕಾಂಗ್ರೆಸ್​ನಲ್ಲಿ ಅಸಮಾಧಾನದ ಹೊಗೆಯಾಡಲು ಆರಂಭವಾಗಿದೆ. ಇಂದಿನ ಪ್ರಮಾಣ ವಚನ ಕಾರ್ಯಕ್ರಮದಿಂದ ಶಾಸಕ ಮಧು ಬಂಗಾರಪ್ಪ ಅವರು ದೂರ ಉಳಿದಿದ್ದಾರೆ. ನಿನ್ನೆ ಮಂತ್ರಿಯಾಗಿ ಪ್ರಮಾಣ ವಚನ ಸ್ಬೀಕರಿಸಲು ರೆಡಿ ಆಗಿ ಎಂದು ಸೂಚನೆ ಕೊಡಲಾಗಿತ್ತು. ಆದರೆ ಇಂದು ಬೆಳಿಗ್ಗೆ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಹಿನ್ನಲೆ ಪಕ್ಷದ ನಾಯಕರನ್ನ ಮಧು ಬಂಗಾರಪ್ಪ ಸಂಪರ್ಕಿಸಿದ್ದಾರೆ. ಆದರೆ ನಾಯಕರಿಂದ ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನಲೆ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಮಲೆನಾಡಿನಲ್ಲಿ ಹೆಚ್ಚೆಚ್ಚು ಕ್ಷೇತ್ರ ಗೆಲ್ಲಲು ಕೊಡುಗೆ ಇದೆ. ಒಬಿಸಿ ಸೆಲ್ ಮುಖ್ಯಸ್ಥರಾಗಿ ಕೆಲಸ ಮಾಡಿದ್ದೇನೆ. ಸಮುದಾಯ ಕಾಂಗ್ರೆಸ್ ಕೈ ಹಿಡಿದಿದೆ ಆದರೂ ಸಚಿವ ಸ್ಥಾನ ನೀಡಿಲ್ಲ ಎಂದು ತನ್ನ ಆಪ್ತರ ಬಳಿ ಮಧು ಬಂಗಾರಪ್ಪ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

  • 20 May 2023 02:39 PM (IST)

    Karnataka CM Swearing in Ceremony Live: ನನಗೆ ಯಾವುದೇ ಖಾತೆ ಕೊಟ್ಟರೂ ನಾನು ನಿಭಾಯಿಸುತ್ತೇನೆ: ಜಮೀರ್

    ನನಗೆ ಯಾವುದೇ ಖಾತೆ ಕೊಟ್ಟರೂ ನಾನು ನಿಭಾಯಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆ ನೀಡಿದ್ದಾರೆ. ರಾಜ್ಯದ ಜನತೆ ಸಾಕಷ್ಟು ಅಭಿಮಾನ ಪ್ರೀತಿ ತೋರಿಸಿದ್ದಾರೆ. ಬೆಂಗಳೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಡುತ್ತಾರೆ ಎಂದರು.

  • 20 May 2023 02:38 PM (IST)

    Karnataka CM Swearing in Ceremony Live: ನೂತನ ಸಿಎಂ ಸಿದ್ದರಾಮಯ್ಯಗೆ ಶುಭಕೋರಿದ ಮಾಜಿ ಸಿಎಂ ಬೊಮ್ಮಾಯಿ

    ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ ಅವರು ಹಾಗೂ ಅವರ ಸಚಿವ ಸಂಪುಟ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮೂಲಕ ಶುಭಕೋರಿದ್ದಾರೆ.

  • 20 May 2023 02:36 PM (IST)

    Karnataka CM Swearing in Ceremony Live: ಸಚಿವ ಸ್ಥಾನ ಮುಖ್ಯ ಅಲ್ಲ: ಕೆ.ಜೆ.ಜಾರ್ಜ್

    ಸಚಿವ ಸ್ಥಾನ ಮುಖ್ಯ ಅಲ್ಲ, ಒಳ್ಳೆಯ ಕೆಲಸ ಮಾಡಬೇಕು ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಸಚಿವ ಕೆ.ಜೆ.ಜಾರ್ಜ್ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೊಂದಾಣಿಕೆಯಿಂದ ಕೆಲಸ ಮಾಡುತ್ತಾರೆ. ಬೆಂಗಳೂರು ನಗರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.​

  • 20 May 2023 02:31 PM (IST)

    Karnataka CM Swearing in Ceremony Live: ಒಂದು ದಿನ ನಮ್ಮ ತಂದೆ ರಾಜ್ಯದ ಸಿಎಂ ಆಗುತ್ತಾರೆ: ಡಿಕೆಶಿ ಪುತ್ರಿ ಐಶ್ವರ್ಯ

    ಒಂದಲ್ಲ ಒಂದು ದಿನ ನಮ್ಮ ತಂದೆ ರಾಜ್ಯದ ಸಿಎಂ ಆಗುತ್ತಾರೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹೇಳಿದ್ದಾರೆ.  ನಮ್ಮ ತಂದೆ ಡಿಕೆಶಿ ಮುಖ್ಯಮಂತ್ರಿ ಆಗುವುದನ್ನು ನೋಡುತ್ತೇವೆ ಎಂದರು. ಇದೇ ವೇಳೆ ಮಾತನಾಡಿದ ಶಿವಕುಮಾರ್ ಪತ್ನಿ ಉಷಾ, ಯಾಕೋ ಸಿಎಂ ಸ್ಥಾನ ಸಿಗಲಿಲ್ಲ. ನೋಡೋಣ ಕಾಯುತ್ತೇವೆ ಎಂದರು.

  • 20 May 2023 02:08 PM (IST)

    Karnataka CM Swearing in Ceremony Live: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮೊದಲ ಸಂಪುಟ ಸಭೆ ಆರಂಭ

    ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮೊದಲ ಸಂಪುಟ ಸಭೆ ಆರಂಭವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್​, ಕೆ.ಹೆಚ್​.ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಜಮೀರ್​ ಅಹ್ಮದ್ ಖಾನ್ ಉಪಸ್ಥಿತರಿದ್ದಾರೆ.

  • 20 May 2023 01:45 PM (IST)

    Karnataka CM Swearing in Ceremony Live: ಇಂದೇ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಘೋಷಿಸಿದ ಸಿದ್ದರಾಮಯ್ಯ

    ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪದಗ್ರಹಣ ಸಮಾರಂಭದಲ್ಲಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದೇ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಘೋಷಿಸಿದ್ದಾರೆ. ಕರ್ನಾಟಕದ ಜನರ ಆಶೀರ್ವಾದಿಂದ ನಮ್ಮ ಸರ್ಕಾರ ಬಂದಿದೆ. ರಾಹುಲ್, ಖರ್ಗೆ, ಪ್ರಿಯಾಂಕಾ ಸೇರಿ ಅನೇಕರು ಪ್ರಚಾರ ಮಾಡಿದ್ದರು. ಕಾಂಗ್ರೆಸ್​ ಪಕ್ಷದ ಪರ ಪ್ರಚಾರ ಮಾಡಿದ ಎಲ್ಲರಿಗೂ ಧನ್ಯವಾದ. ಸಾಹಿತಿಗಳು, ಚಿಂತಕರು, ಸಂಘಟನೆಗಳಿಗೂ ಧನ್ಯವಾದ ಹೇಳುತ್ತೇನೆ. ವಿವಿಧ ರಾಜ್ಯಗಳ ನಾಯಕರು ನಮಗೆ ಶುಭ ಹಾರೈಸಲು ಬಂದಿದ್ದರು. ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ನಾವು ಆಡಳಿತ ನಡೆಸುತ್ತೇವೆ. ಇಂದೇ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಕರ್ನಾಟಕದ ಜನರಿಗೆ ನಾವು ನೀಡಿದ ಭರವಸೆ ಈಡೇರಿಸುತ್ತೇವೆ. ನಾವು ನುಡಿದಂತೆ ನಡೆಯುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

  • 20 May 2023 01:37 PM (IST)

    Karnataka CM Swearing in Ceremony Live: ಮೊದಲ ಕ್ಯಾಬಿನೆಟ್​​ನಲ್ಲಿ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ -ಮಲ್ಲಿಕಾರ್ಜುನ ಖರ್ಗೆ

    ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದಾರೆ. ಮೊದಲ ಕ್ಯಾಬಿನೆಟ್​​ನಲ್ಲಿ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಹಿಂದಿನ ಸರ್ಕಾರದಲ್ಲೂ ನಾವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ನುಡಿದಂತೆ ನಾವು ನಡೆಯುತ್ತೇವೆ. ಈ ಹಿಂದೆ ಮೋದಿ ಜಪಾನ್​ಗೆ ಹೋಗಿದ್ದಾಗ ನೋಟ್​ ಬ್ಯಾನ್​ ಆಗಿತ್ತು. ಈಗಲೂ ಮೋದಿ ಜಪಾನ್​ ಪ್ರವಾಸ ವೇಳೆ $2000 ಬ್ಯಾನ್ ಆಗಿದೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ನಮ್ಮ ಸರ್ಕಾರ ಎಂದರು.

  • 20 May 2023 01:35 PM (IST)

    Karnataka CM Swearing in Ceremony Live: ವೇದಿಕೆ ಮೇಲೆ ರಾಹುಲ್ ಗಾಂಧಿ ಅಬ್ಬರದ ಭಾಷಣ

    ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪದಗ್ರಹಣ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಬ್ಬರದ ಭಾಷಣ ಮಾಡಿದ್ದಾರೆ. ಕರ್ನಾಟಕದ ಜನರಿಗೆ ನನ್ನ ಮನಃಪೂರ್ವಕವಾಗಿ ಅಭಿನಂದನೆಗಳು. ಕಾಂಗ್ರೆಸ್​​ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಕ್ಕೆ ಅಭಿನಂದನೆಗಳು. ಭಾರತ್ ಜೋಡೋ ಯಾತ್ರೆಯಿಂದ ದ್ವೇಷ ಸೋತಿದೆ, ಪ್ರೀತಿ ಗೆದ್ದಿದೆ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ನೀಡಿತ್ತು. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಯುವನಿಧಿ ಗ್ಯಾರಂಟಿಗಳನ್ನು ನಾವು ನೀಡಿದ್ದೆವು, ಎಲ್ಲವನ್ನೂ ಈಡೇರಿಸುತ್ತೇವೆ. ಕೆಲವೇ ಹೊತ್ತಿನಲ್ಲಿ ನೂತನ ಸರ್ಕಾರ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಗ್ಯಾರಂಟಿಗಳು ಅನುಮೋದನೆ ಆಗಲಿದೆ. ಜನರು ಪ್ರೀತಿ, ಶಕ್ತಿ ಕಾಂಗ್ರೆಸ್​​ಗೆ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದರು.

  • 20 May 2023 01:23 PM (IST)

    Karnataka CM Swearing in Ceremony Live: ಡಿಕೆಶಿಗೆ ತಂಜಾವೂರ್​ ಪೈಂಟಿಂಗ್​ ನೀಡಿ, ಶಾಲು ಹೊದಿಸಿದ ಎಂಕೆ ಸ್ಟ್ಯಾಲಿನ್

    ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿಕೆ ಶಿವಕುಮಾರ್​ ಅವರಿಗೆ ತಂಜಾವೂರ್​ ಪೈಂಟಿಂಗ್​ ನೀಡಿ, ಶಾಲು ಹೊದಿಸಿದರು.

  • 20 May 2023 01:21 PM (IST)

    Karnataka CM Swearing in Ceremony Live: ಸಿಎಂ, ಡಿಸಿಎಂ ಹಾಗೂ 8 ನೂತನ ಸಚಿವರಿಂದ ಪ್ರಮಾಣವಚನ

    ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಹಾಗೂ 8 ನೂತನ ಸಚಿವರಿಂದ ಪ್ರಮಾಣವಚನ ಸ್ವೀಕರಿಸಲಾಗಿದೆ.

    Karnataka Oath taking

    ಸಿಎಂ, ಡಿಸಿಎಂ, ಸಚಿವರ ಪ್ರಮಾಣವಚನ

  • 20 May 2023 01:13 PM (IST)

    Karnataka CM Swearing in Ceremony Live: ಸಚಿವರಾಗಿ ಜಮೀರ್​​ ಅಹ್ಮದ್​ರಿಂದ ಪ್ರಮಾಣ ವಚನ ಸ್ವೀಕಾರ

    ಸಚಿವರಾಗಿ ಜಮೀರ್​​ ಅಹ್ಮದ್​​​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​​ ಪ್ರತಿಜ್ಞಾವಿಧಿ ಬೋಧನೆ ಮಾಡಿದ್ದು ಇಂಗ್ಲೀಷ್​ನಲ್ಲಿ ಜಮೀರ್​​ ಅಹ್ಮದ್​​ ಅವರು ಅಲ್ಲಾಹ್ ಮತ್ತು ತಾಯಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

  • 20 May 2023 01:10 PM (IST)

    Karnataka CM Swearing in Ceremony Live: ಸಚಿವರಾಗಿ ರಾಮಲಿಂಗಾರೆಡ್ಡಿ ಪ್ರಮಾಣ ವಚನ ಸ್ವೀಕಾರ

    ಸಚಿವರಾಗಿ ರಾಮಲಿಂಗಾರೆಡ್ಡಿ​​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​​ ಪ್ರತಿಜ್ಞಾವಿಧಿ ಬೋಧನೆ ಮಾಡಿದ್ದು ರಾಮಲಿಂಗಾರೆಡ್ಡಿ​ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

  • 20 May 2023 01:09 PM (IST)

    Karnataka CM Swearing in Ceremony Live: ಸಚಿವರಾಗಿ ಪ್ರಿಯಾಂಕ್ ಖರ್ಗೆ ಪ್ರಮಾಣ ವಚನ ಸ್ವೀಕಾರ

    ಸಚಿವರಾಗಿ ಪ್ರಿಯಾಂಕ್ ಖರ್ಗೆ​​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​​ ಪ್ರತಿಜ್ಞಾವಿಧಿ ಬೋಧನೆ ಮಾಡಿದ್ದು ಪ್ರಿಯಾಂಕ್ ಖರ್ಗೆ​ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅಪ್ಪ, ಎಐಸಿಸಿ ಅಧಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಪುತ್ರ ಪ್ರಿಯಾಂಕ್ ಖರ್ಗೆ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

  • 20 May 2023 01:06 PM (IST)

    Karnataka CM Swearing in Ceremony Live: ಸಚಿವರಾಗಿ ಸತೀಶ್ ಜಾರಕಿಹೊಳಿ ಪ್ರಮಾಣ ವಚನ ಸ್ವೀಕಾರ

    ಸಚಿವರಾಗಿ ಸತೀಶ್ ಜಾರಕಿಹೊಳಿ​​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​​ ಪ್ರತಿಜ್ಞಾವಿಧಿ ಬೋಧನೆ ಮಾಡಿದ್ದು ಸತೀಶ್ ಜಾರಕಿಹೊಳಿ​ ಅವರು ಬುದ್ಧ, ಬಸವ, ಅಂಬೇಡ್ಕರ್​ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

  • 20 May 2023 01:01 PM (IST)

    Karnataka CM Swearing in Ceremony Live: ಸಚಿವರಾಗಿ ಎಂ.ಬಿ.ಪಾಟೀಲ್ ಪ್ರಮಾಣ ವಚನ ಸ್ವೀಕಾರ

    ಸಚಿವರಾಗಿ ಎಂ.ಬಿ.ಪಾಟೀಲ್​​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​​ ಪ್ರತಿಜ್ಞಾವಿಧಿ ಬೋಧನೆ ಮಾಡಿದ್ದು ಎಂ.ಬಿ.ಪಾಟೀಲ್​ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

  • 20 May 2023 01:00 PM (IST)

    Karnataka CM Swearing in Ceremony Live: ಸಚಿವರಾಗಿ ಕೆ.ಜೆ.ಜಾರ್ಜ್ ಪ್ರಮಾಣ ವಚನ ಸ್ವೀಕಾರ

    ಸಚಿವರಾಗಿ ಕೆ.ಜೆ.ಜಾರ್ಜ್​​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​​ ಪ್ರತಿಜ್ಞಾವಿಧಿ ಬೋಧನೆ ಮಾಡಿದ್ದು ಕೆ.ಜೆ.ಜಾರ್ಜ್​ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

  • 20 May 2023 12:54 PM (IST)

    Karnataka CM Swearing in Ceremony Live: ಸಚಿವರಾಗಿ ಕೆ.ಹೆಚ್.ಮುನಿಯಪ್ಪ ಪ್ರಮಾಣ ವಚನ ಸ್ವೀಕಾರ

    ಸಚಿವರಾಗಿ ಕೆ.ಹೆಚ್.ಮುನಿಯಪ್ಪ​​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​​ ಪ್ರತಿಜ್ಞಾವಿಧಿ ಬೋಧನೆ ಮಾಡಿದ್ದು ಕೆ.ಹೆಚ್.ಮುನಿಯಪ್ಪ​ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

  • 20 May 2023 12:51 PM (IST)

    Karnataka CM Swearing in Ceremony Live: ಸಚಿವರಾಗಿ ಡಾ.ಜಿ.ಪರಮೇಶ್ವರ್​​ ಪ್ರಮಾಣ ವಚನ ಸ್ವೀಕಾರ

    ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪದಗ್ರಹಣ ಸಮಾರಂಭ ನಡೆಯುತ್ತಿದ್ದು ಸಚಿವರಾಗಿ ಡಾ.ಜಿ.ಪರಮೇಶ್ವರ್​​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​​ ಪ್ರತಿಜ್ಞಾವಿಧಿ ಬೋಧನೆ ಮಾಡಿದ್ದು ಡಾ.ಪರಮೇಶ್ವರ್​ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

  • 20 May 2023 12:47 PM (IST)

    Karnataka CM Swearing in Ceremony Live: ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್

    ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​​ ಅವರು ಪ್ರತಿಜ್ಞಾವಿಧಿ ಬೋಧಿಸಿದ್ದು ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಡಿಸಿಎಂ ಆಗಿ ಡಿಕೆ ಶಿವಕುಮಾರ್​ ಪ್ರಮಾಣವಚನ ಸ್ವೀಕರಿಸಿದ್ದಾರೆ.​​

  • 20 May 2023 12:43 PM (IST)

    Karnataka CM Swearing in Ceremony Live: ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಪ್ರತಿಜ್ಞಾವಿಧಿ ಸ್ವೀಕಾರ

    ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪದಗ್ರಹಣ ಸಮಾರಂಭ ನಡೆಯುತ್ತಿದ್ದು ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯಗೆ ಪ್ರತಿಜ್ಞಾವಿಧಿ ಬೋಧಿಸಿದ್ದು ದೇವರ ಹೆಸರಿನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದರು.

  • 20 May 2023 12:37 PM (IST)

    Karnataka CM Swearing in Ceremony Live: ವಿಧಾನಸೌಧದಲ್ಲಿರುವ ಸಿಎಂ ಕಚೇರಿಯ ನಾಮಫಲಕ ಬದಲಾವಣೆ

    ವಿಧಾನಸೌಧದ ಸಿಎಂ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ಹೆಸರು ತೆಗೆದು ಸಿಎಂ ಸಿದ್ದರಾಮಯ್ಯ ಎಂದು ಹೆಸರು ಬದಲಾಯಿಸಿ ನೇಮ್ ಪ್ಲೇಟ್ ಚೇಂಜ್ ಮಾಡಲಾಗಿದೆ. ವಿಧಾನ ಸೌಧದ ಮೂರನೇ ಮಹಡಿಯಲ್ಲಿ ರೂಂ ನಂಬರ್ 323ರ ಸಿಎಂ ಕಚೇರಿ ಬಳಿ ನೇಮ್ ಪ್ಲೇಟ್ ಚೇಂಜ್ ಮಾಡಲಾಗಿದೆ.

  • 20 May 2023 12:33 PM (IST)

    Karnataka CM Swearing in Ceremony Live: ವೇದಿಕೆಗೆ ಆಗಮಿಸಿದ ಗಣ್ಯರು

    ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವೇದಿಕೆಗೆ ಆಗಮಿಸಿದ್ದಾರೆ.

  • 20 May 2023 12:25 PM (IST)

    Karnataka CM Swearing in Ceremony Live: ನಮ್ಮ ತಂದೆಗೆ ಡಿಸಿಎಂ ಸ್ಥಾನ ನೀಡಬೇಕಿತ್ತು -ಝೈದ್ ಖಾನ್

    ನಮ್ಮ ತಂದೆಗೆ ಡಿಸಿಎಂ‌ ಸ್ಥಾನ ನಿರೀಕ್ಷೆ ಮಾಡಿದ್ದೆ. ಯಾಕಂದ್ರೆ ನಮ್ಮ ಸಮುದಾಯದ ಪ್ರತಿ ಒಬ್ರು ಕಾಂಗ್ರೆಸ್ ಗೆ ವೋಟ್ ಹಾಕಿದ್ದಾರೆ. ಹೈಕಮಾಂಡ್ ನಮ್ಮ ತಂದೆಗೆ ಕೊಡಬೇಕಾಗಿತ್ತು ಸಮಾಜಕ್ಕೆ ಒಳ್ಳೆದು ಮಾಡ್ತಿದ್ರು. ಅವ್ರು ಯಾವತ್ತು ಕೈಚಾಚಿಲ್ಲ‌.ಕೊಟ್ಟಿರೋದನಷ್ಟೇ ಸ್ವೀಕರಿಸಿದ್ದಾರೆ. ಡಿಕೆಶಿ ಅವ್ರು ಮುಂದಿನ ದಿನಗಳಲ್ಲಿ ಸಿಎಂ ಅದಾಗ ನಮ್ಮ ತಂದೆಗೆ ಡಿಸಿಎಂ ಕೊಡಬಹುದು ನೋಡೋಣ. ನಮ್ಮ ತಂದೆ ಮೂರನೇ ಬಾರಿ ಸಚಿವರಾಗ್ತಿರೋದು ಖುಷಿ ಇದೆ ಎಂದು ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ತಿಳಿಸಿದ್ದಾರೆ.

  • 20 May 2023 12:21 PM (IST)

    Karnataka CM Swearing in Ceremony Live: ಶಾಂಗ್ರಿಲಾ ಹೋಟೆಲ್​ನಿಂದ ಆಗಮಿಸಿದ ‘ಕೈ’ ನಾಯಕರು, ಗಣ್ಯರು

    ವಿಶೇಷ ಬಸ್ ಮೂಲಕ ಶಾಂಗ್ರಿಲಾ ಹೋಟೆಲ್​ನಿಂದ ಕಂಠೀರವ ಕ್ರೀಡಾಂಗಣಕ್ಕೆ ‘ಕೈ’ ನಾಯಕರು, ಗಣ್ಯರು ಆಗಮಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ, ನಿಯೋಜಿತ ಸಿಎಂ ಸಿದ್ದರಾಮಯ್ಯ, ನಟ ಕಮಲ್​ ಹಾಸನ್, ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಒಂದೇ ಬಸ್​​ನಲ್ಲಿ ಪದಗ್ರಹಣ ಸಮಾರಂಭಕ್ಕೆ ಆಗಮಿಸಿದ್ದಾರೆ.

  • 20 May 2023 12:17 PM (IST)

    Karnataka CM Swearing in Ceremony Live: ಪದಗ್ರಹಣ ಸಮಾರಂಭದಲ್ಲಿ ಸಿನಿಮಾ ನಟ ನಟಿಯರು ಉಪಸ್ಥಿತಿ

    ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದ್ದು ಪದಗ್ರಹಣ ಸಮಾರಂಭದಲ್ಲಿ ಸಿನಿಮಾ ನಟ ನಟಿಯರು ಉಪಸ್ಥಿತರಿರಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​​, ಗೀತಾ ಶಿವರಾಜ್​ಕುಮಾರ್​​, ಕಮಲ್​ ಹಾಸನ್,​ ರಮ್ಯಾ, ದುನಿಯಾ ವಿಜಯ್​, ನಿಶ್ವಿಕಾ ನಾಯ್ಡು, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

  • 20 May 2023 12:16 PM (IST)

    Karnataka CM Swearing in Ceremony Live: ಸಮಾರಂಭದ ವೇದಿಕೆಗೆ ಆಗಮಿಸಿದ ತಮಿಳುನಾಡು ಸಿಎಂ ಸ್ಟಾಲಿನ್

    ಸಿಎಂ ಡಿಸಿಎಂ ಪದಗ್ರಹಣ ಸಮಾರಂಭದ ವೇದಿಕೆಗೆ ತಮಿಳುನಾಡು ಸಿಎಂ ಸ್ಟಾಲಿನ್ ಆಗಮಿಸಿದ್ದು ನಿಯೋಜಿತ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಸ್ಟಾಲಿನ್ ಅವರಿಗೆ ಸ್ವಾಗತಿಸಿದ್ರು.

  • 20 May 2023 12:12 PM (IST)

    Karnataka News Live Updates: ಬೆಂಗಳೂರಿನಲ್ಲಿ ಪದಗ್ರಹಣ ಸಂಭ್ರಮ, ಬೆಳಗಾವಿಯಲ್ಲಿ ರೈತರ ಪ್ರತಿಭಟನೆ

    ಇಂದು ಎರಡನೇ ಬಾರಿ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚ‌ನ ಸ್ವೀಕರಿಸುತ್ತಿದ್ದು ಬೆಂಗಳೂರಿನಲ್ಲಿ ಪದಗ್ರಹಣ ಸಂಭ್ರಮವಿದ್ರೆ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ಶುರುವಾಗಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಹೊಸ ಸರ್ಕಾರದ ಪ್ರಮಾಣವಚನ ಸಮಾರಂಭ ಮಾಡದಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಬೆಳಗಾವಿ ಸುವರ್ಣ ವಿಧಾನಸೌಧ ಎದುರು ಖಾಲಿ ಕೊಡವಿಟ್ಟು ರೈತರು ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

  • 20 May 2023 12:10 PM (IST)

    Karnataka News Live Updates: ಕಂಠೀರವ ಕ್ರೀಡಾಂಗಣದ ಒಳಗೆ ಹೋಗಲು ನೂಕುನುಗ್ಗಲು

    ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದ್ದು ಕಂಠೀರವ ಕ್ರೀಡಾಂಗಣದ ಒಳಗೆ ಹೋಗಲು ನೂಕುನುಗ್ಗಲು ಉಂಟಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ಒಳನುಗ್ಗಿದ್ದು ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.

  • 20 May 2023 12:04 PM (IST)

    Karnataka News Live Updates: ಇಂದಿರಾ ಕ್ಯಾಂಟಿನ್​ನಲ್ಲಿ ಜನರಿಗೆ ಸಿಹಿ ಊಟ

    2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಇಂದಿರಾ ಕ್ಯಾಂಟಿನ್ ಮೂಲಕ ಜನರಿಗೆ ಸಿಹಿ ಊಟ ಹಂಚಲಾಗುತ್ತಿದೆ. ಬಾಗಲಕೋಟೆಯ ಇಂದಿರಾ ಕ್ಯಾಂಟೀನ್​ಗಳಲ್ಲಿ ಇಂದು ಮಯೂರ ಮೋರೆ ಟ್ರಸ್ಟ್ ಅವರು ಜನರಿಗೆ ಹೋಳಿಗೆ ಊಟ ಉಣಬಡಿಸ್ತಿದ್ದಾರೆ. 10 ರೂನಲ್ಲಿ ಒಂದು ಹೋಳಿಗೆ ಅನ್ನ ಸಾಂಬಾರು, ಮೊಸರನ್ನ ವಿತರಣೆ ಮಾಡಲಾಗುತ್ತಿದೆ.

  • 20 May 2023 12:02 PM (IST)

    Karnataka News Live Updates: ವಿವಿಧ ಬಗೆಯ ಹೂಗಳಿಂದ ಸಿಎಂ ಕೊಠಡಿಗೆ ಶೃಂಗಾರ

    ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಗೆ ಹೂಗಳಿಂದ ಸಿಂಗಾರ ಮಾಡಲಾಗಿದೆ. ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 323ರ ಬಾಗಿಲಿಗೆ ಹೊಸದಾಗಿ ಪಾಲಿಶ್ ಮಾಡಲಾಗಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಬಳಿಕ ನಾಮಫಲಕ ಬದಲಾವಣೆ ಮಾಡಲಾಗುತ್ತೆ.

  • 20 May 2023 12:00 PM (IST)

    Karnataka News Live Updates: ಸಿದ್ದು, ಡಿಕೆಶಿ ಪಟ್ಟಾಭಿಷೇಕಕ್ಕೆ ಬಂದ ವಿಶೇಷ ಅಭಿಮಾನಿ

    ತಲೆ ಫುಲ್ ಕಾಂಗ್ರೆಸ್ ಹೇರ್​ಸ್ಟೈಲ್ ಮಾಡಿಸಿಕೊಂಡು ಎಲ್ಲರ ಗಮನಸೆಳೆಯುತ್ತಿರುವ ಅಭಿಮಾನಿ

  • 20 May 2023 11:37 AM (IST)

    Karnataka News Live Updates: ಶಾಂಗ್ರಿಲಾ ಹೋಟೆಲ್​​ನಲ್ಲಿರುವ ಕಾಂಗ್ರೆಸ್​ ನಾಯಕರು, ಗಣ್ಯರು

    ಕಾಂಗ್ರೆಸ್​ ನಾಯಕರು, ಗಣ್ಯರು ಶಾಂಗ್ರಿಲಾ ಹೋಟೆಲ್​​ನಲ್ಲಿದ್ದಾರೆ. ರಾಹುಲ್, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್​ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್​, ನಿಯೋಜಿತ ಡಿಸಿಎಂ ಡಿ.ಕೆ.ಶಿವಕುಮಾರ್​​, ನಟ ಕಮಲ್​ ಹಾಸನ್​, ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಸೇರಿದಂತೆ ಕಾಂಗ್ರೆಸ್​ ನಾಯಕರು, ಗಣ್ಯರು ಶಾಂಗ್ರಿಲಾ ಹೋಟೆಲ್​​ನಲ್ಲಿದ್ದಾರೆ.

  • 20 May 2023 11:17 AM (IST)

    Karnataka News Live Updates: ಇಬ್ಬರೂ ನಾಯಕರಿಂದ ಉತ್ತಮ ಆಡಳಿತ ನೀಡುವ ವಿಶ್ವಾಸವಿದೆ -ಕುಸುಮಾ

    ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ನಮ್ಮ ನಾಯಕರು. ಇಬ್ಬರೂ ನಾಯಕರಿಂದ ಉತ್ತಮ ಆಡಳಿತ ನೀಡುವ ವಿಶ್ವಾಸವಿದೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕಿ ಕುಸುಮಾ ತಿಳಿಸಿದ್ದಾರೆ. ರಾಜ್ಯದಲ್ಲಿ ಜನಪರ ಕೆಲಸಗಳು ಆಗಲಿವೆ. ನಾನು ಯಾವುದೇ ಹುದ್ದೆ ಆಕಾಂಕ್ಷಿಯಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತಳಾಗಿ ಕೆಲಸ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕಿ ಕುಸುಮಾ ಹೇಳಿದ್ರು.

  • 20 May 2023 11:11 AM (IST)

    Karnataka News Live Updates: ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ -ವಿನಯ್ ಕುಲಕರ್ಣಿ

    ನನಗೂ ಸಚಿವ ಸ್ಥಾನ ನೀಡುವ ವಿಶ್ವಾಸ ಇದೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ನಾನು ಒಬ್ಬ ಹಿರಿಯ ನಾಯಕ ಇದ್ದೀನಿ. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.

  • 20 May 2023 10:53 AM (IST)

    Karnataka News Live Updates: ರಾಹುಲ್ ಗಾಂಧಿ ಸ್ವಾಗತಿಸಲು ಏರ್ಪೋಟ್ ಗೆ ಬಂದ ಡಿಕೆ ಶಿವಕುಮಾರ್

    ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಹುಲ್ ಗಾಂಧಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದು ರಾಹುಲ್ ಸ್ವಾಗತಿಸಲು ಡಿಕೆ ಶಿವಕುಮಾರ್ ತಾಜ್‌ ಹೋಟೆಲ್ ನಿಂದ ಏರ್ಪೋಟ್ ಗೆ ಆಗಮಿಸಿದ್ದಾರೆ. ರಾತ್ರಿ ನಿದ್ದೆಯಿಲ್ಲದ ಕಾರಣ ತಾಜ್ ಹೋಟೆಲ್ ನಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದು ಇದೀಗ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ.

  • 20 May 2023 10:36 AM (IST)

    Karnataka News Live Updates: ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ 8 ಸಿಎಂಗಳು

    ಇಂದು ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆಶಿ ಪ್ರಮಾಣವಚನ ಸಮಾರಂಭದಲ್ಲಿ 8 ಸಿಎಂಗಳು ಪಾಲ್ಗೊಳ್ಳಲಿದ್ದಾರೆ. ಪಶ್ಚಿಮಬಂಗಾಳ ಸಿಎಂ ಮಮತಾ, ರಾಜಸ್ಥಾನ ಸಿಎಂ ಗೆಹ್ಲೋಟ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್, ಬಿಹಾರ ಸಿಎಂ ನಿತೀಶ್, ಹಿಮಾಚಲಪ್ರದೇಶದ ಸಿಎಂ ಸುಖ್‌ವಿಂದರ್ ಸಿಂಗ್ ಸುಖು, ಪುದುಚೆರಿ ಸಿಎಂ ರಂಗಸ್ವಾಮಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

  • 20 May 2023 10:33 AM (IST)

    Karnataka News Live Updates: ರಾಜ್ಯದ ಗತವೈಭವವನ್ನು ಮರುಕಳಿಸುವ ಕೆಲಸ ಮಾಡುತ್ತೇವೆ -ಎಂ.ಬಿ.ಪಾಟೀಲ್​

    ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ನೂತನ ಸಚಿವ ಎಂ.ಬಿ.ಪಾಟೀಲ್​ ತಿಳಿಸಿದ್ದಾರೆ. ರಾಜ್ಯದ ಗತವೈಭವವನ್ನು ಮರುಕಳಿಸುವ ಕೆಲಸ ಮಾಡುತ್ತೇವೆ. ಒಟ್ಟು 10 ಜನ ಪ್ರಮಾಣ ವಚನ ಸ್ವೀಕಾರ ಮಾಡುತ್ತೇವೆ. ಖಾತೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುವೆ ಎಂದರು.

  • 20 May 2023 10:28 AM (IST)

    Karnataka News Live Updates: ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವಂತೆ ಸಲಹೆ ನೀಡ್ತೇನೆ -ಸತೀಶ್ ಜಾರಕಿಹೊಳಿ

    ಪ್ರಥಮ ಹಂತದಲ್ಲಿ 8 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ.ಡಿ.ಕೆ.ಶಿವಕುಮಾರ್ ಮಾತ್ರ ಉಪಮುಖ್ಯಮಂತ್ರಿ ಆಗಿರುತ್ತಾರೆ. ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವಂತೆ ಸಲಹೆ ನೀಡ್ತೇನೆ ಎಂದು ಟಿವಿ9ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು. 2 ಮತ್ತು 3ನೇ ಹಂತದಲ್ಲಿ ಉಳಿದ ಸ್ಥಾನಗಳನ್ನು ಭರ್ತಿ ಮಾಡ್ತೇವೆ. ಕನಿಷ್ಠ 10 ಮಂದಿಗಾದರೂ ಹೊಸಬರಿಗೆ ಸಚಿವ ಸ್ಥಾನ ಕೊಡಬೇಕು. ಮೊದಲ ಸಂಪುಟದಲ್ಲೇ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಖಾತೆ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಎಂದು ಟಿವಿ9ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ರು.

  • 20 May 2023 10:19 AM (IST)

    Karnataka News Live Updates: ಪಾಸ್ ಇಲ್ಲದವರಿಗೆ ಗೇಟ್​ನಿಂದಲೇ ವಾಪಸ್ ಕಳಿಸುತ್ತಿರುವ ಖಾಕಿ

    ವಿವಿಐಪಿ, ವಿಐಪಿಗಳಿಗೆ ಆರ್ ಆರ್ಎಂಆರ್ ರೋಡ್ ಮೂಲಕ ಎಂಟ್ರಿ ನೀಡಲಾಗುತ್ತಿದ್ದು ಪಾಸ್ ಇಲ್ಲದವರನ್ನು ಪೊಲೀಸರು ವಾಪಸ್ ‌ಕಳಿಸುತ್ತಿದ್ದಾರೆ. ವಿಐಪಿ, ವಿವಿಐಪಿ ಪಾಸ್ ಇದ್ದವರಿಗೆ ಮಾತ್ರ ಗೇಟ್ - 5 ರಲ್ಲಿ ಎಂಟ್ರಿ. ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ.

  • 20 May 2023 10:18 AM (IST)

    Karnataka News Live Updates: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​ ಹೆಸರಿನಲ್ಲಿ ವಿಶೇಷ ಪೂಜೆ

    ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ ಹಿನ್ನೆಲೆ ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

  • 20 May 2023 09:43 AM (IST)

    Karnataka News Live Updates: ನಾವು ಹೇಳಿದ ಗ್ಯಾರಂಟಿಗಳನ್ನು ಮಾಡೇ ಮಾಡುತ್ತೇವೆ -ಡಾ ಜಿ ಪರಮೇಶ್ವರ್

    ನನಗೂ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಎಐಸಿಸಿ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸ್ತೇನೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ಗೆ ಅಭಿನಂದನೆ ಸಲ್ಲಿಸ್ತೇನೆ ಎಂದು ಡಾ.ಜಿ ಪರಮೇಶ್ವರ ಸಂತಸ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ಕೂಡ ಇದು ಅತಿ ದೊಡ್ಡ ಸವಾಲು. ರಾಜ್ಯದ ಜನ ಬಹಳಷ್ಡು ನಿರೀಕ್ಷೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಜನರಿಗೆ ತಿಳಿಸಿದ್ದೇವೆ. ಐದೂ ಗ್ಯಾರಂಟಿ ಜಾರಿ ಮಾಡುವುದು ಬಹಳ ಪ್ರಾಮುಖ್ಯ. ಈಗ ಸದ್ಯದ ಸ್ಥಿತಿಯಲ್ಲಿ ಮೊದಲ ಕ್ಯಾಬಿನೆಟ್ ನಲ್ಲಿ ಐದೂ ಗ್ಯಾರಂಟಿ ಗಳನ್ನು ಅಪ್ರೂವ್ ಮಾಡ್ತೇವೆ ಅಂತ ಹೇಳಿದ್ವಿ. ಅದನ್ನು ಇಂದೇ ಮಾಡುವ ಪ್ರಯತ್ನ ಮಾಡ್ತೇವೆ. ಸಣ್ಣಪುಟ್ಟ ವ್ಯತ್ಯಾಸಗಳನ್ನು ಬಿಟ್ಟು ಕೆಲಸ ಮಾಡಬೇಕಿದೆ. ನನಗೆ ಯಾವುದೂ ಬೇಸರ ಇಲ್ಲ. ಎಲ್ಲವನ್ನು ಸಂತೋಷದಿಂದಲೇ ಸ್ವೀಕಾರ ಮಾಡ್ತೇನೆ. ಗ್ಯಾರಂಟಿ ಜಾರಿಗೆ ಅನುಷ್ಟಾನ ಸಂದರ್ಭದಲ್ಲಿ ಕೆಲವು ನಿಯಮ ಮಾಡಬೇಕಾಗುತ್ತದೆ ಎಂದರು.

  • 20 May 2023 09:27 AM (IST)

    Karnataka News Live Updates: ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ಗೆ ದುನಿಯಾ ವಿಜಯ್ ವಿಶ್

    ಸಿಎಂ‌ ಸಿದ್ದರಾಮಯ್ಯ ಹಾಗು ಡಿಸಿಎಂ‌ ಡಿಕೆ‌ ಶಿವಕುಮಾರ್ ಗೆ ನಟ ದುನಿಯಾ ವಿಜಯ್ ವಿಶ್ ಮಾಡಿದ್ದಾರೆ. ಇಬ್ಬರು ರಾಜ್ಯವನ್ನ ಅಭಿವೃದ್ಧಿಯತ್ತ ಕರೆದುಕೊಂಡು ಹೋಗಿ ಬಡವರ ಬಗ್ಗೆ ದೀನ‌ದಲಿತರ ಉದ್ಧಾರಕ್ಕಾಗಿ ಶ್ರಮಿಸುತ್ತೀರ ಎಂಬ ನಂಬಿಕೆ ಇದೆ ಅದನ್ನೂ ಈಡೇರಿಸಿ ಎಂದು ದುನಿಯಾ ವಿಜಯ್ ವಿಶ್ ಮಾಡಿದ್ದಾರೆ.

  • 20 May 2023 09:25 AM (IST)

    Karnataka News Live Updates: ಕಂಠೀರವ ಕ್ರೀಡಾಂಗಣದ ಬಳಿ ಲಘು ಲಾಠಿ ಪ್ರಹಾರ

    ಕಂಠೀರವ ಕ್ರೀಡಾಂಗಣದಲ್ಲಿ ಇಂದು (ಮೇ.20) ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್​ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪದಗ್ರಹಣ ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುತ್ತಿರುವ ಹಿನ್ನೆಲೆ ಕ್ರೀಡಾಂಗಣದ ಸಾರ್ವಜನಿಕ ಪ್ರವೇಶ ದ್ವಾರದಲ್ಲಿ ಕಾರ್ಯಕರ್ತರ ನಡುವೆ ನೂಕುನುಗ್ಗಲಾಗಿದೆ. ಈ ವೇಳೆ ಪೊಲೀಸರು ಲಘು ಲಾಠಿ ಚಾರ್ಜ್‌ ಮಾಡಿದ್ದು, ಇಬ್ಬರಿಗೆ ಗಂಭೀರವಾಗಿ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಪೊಲೀಸರಿಗೂ ಗಾಯಗಳಾಗಿವೆ.

  • 20 May 2023 09:17 AM (IST)

    Karnataka News Live Updates: ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕೇಂದ್ರದ ಘಟಾನುಘಟಿ ನಾಯಕರ ಆಗಮನ

    ಇಂದು ಕಂಠೀರವ ಸ್ಟೇಡಿಯಂನಲ್ಲಿ ನೂತನ ಸಿಎಂ, ಡಿಸಿಎಂ ಪದಗ್ರಗಣ ಹಿನ್ನಲೆ ಕಾರ್ಯಕ್ರಮಕ್ಕೆ ಕೇಂದ್ರದ ಘಟಾನುಘಟಿ ನಾಯಕರು ಆಗಮಿಸುತ್ತಿದ್ದಾರೆ. ಜೊತೆಗೆ ಕಾರ್ಯಕ್ರಮದಲ್ಲಿ ಹಲವು ರಾಜ್ಯಗಳ ಸಿಎಂಗಳು ಭಾಗಿಯಾಗಲಿದ್ದಾರೆ. ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ. ವಿಶೇಷ ಸರ್ಕಾರಿ ವಾಹನಗಳಲ್ಲಿ ಪೊಲೀಸ್ ಭದ್ರತೆಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿಲಿದ್ದಾರೆ.

  • 20 May 2023 09:13 AM (IST)

    Karnataka News Live Updates: ನಾನು ಯಾವುದೇ ಖಾತೆಯ ನಿರೀಕ್ಷೆ, ಬೇಡಿಕೆ ಕೂಡ ಇಡುವುದಿಲ್ಲ -ರಾಮಲಿಂಗಾರೆಡ್ಡಿ

    ತಮಗೆ ಸಚಿವ ಸ್ಥಾನ ಸಿಕ್ಕ ಬಗ್ಗೆ ಬಿಟಿಎಂ ಲೇಔಟ್​​ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡ್ತೀವಿ. ನಾನು ಯಾವುದೇ ಖಾತೆಯ ನಿರೀಕ್ಷೆ, ಬೇಡಿಕೆ ಕೂಡ ಇಡುವುದಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಆದಷ್ಟು ಬೇಗ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮಾಡ್ತೇವೆ. ಮಳೆ ಸಂದರ್ಭದಲ್ಲಿ ಜನರಿಗೆ ಆಗುತ್ತಿದ್ದ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

  • 20 May 2023 08:44 AM (IST)

    Karnataka News Live Updates: ಸಿದ್ದರಾಮಯ್ಯ ಮನೆ ಮುಂದೆ ತಿಂಡಿ ವ್ಯವಸ್ಥೆ ಮಾಡಿಸಿದ ಅಭಿಮಾನಿಗಳು

    ಸಿದ್ದರಾಮಯ್ಯ ನೋಡಲು ಸಿದ್ದು ನಿವಾಸಕ್ಕೆ ಅಭಿಮಾನಿಗಳ ತಂಡೇ ಹರಿದು ಬಂದಿದ್ದು ಸಿದ್ದರಾಮಯ್ಯ ಅಭಿಮಾನಿಗಳು 5000 ಜನಕ್ಕೆ ತಿಂಡಿ ವ್ಯವಸ್ಥೆ ಕಲ್ಪಿಸಿದ್ದಾರೆ. ಕೇಸರಿ ಬಾತ್ ಹಾಗೂ ಟೊಮೆಟೋ ಬಾತ್ ತಿಂಡಿ ಮಾಡಿಸಿದ್ದಾರೆ.

  • 20 May 2023 08:41 AM (IST)

    Karnataka News Live Updates: ತೋಳಿನ ಮೇಲೆ ಸಿದ್ದರಾಮಯ್ಯ ಅಚ್ಚೆ

    ಇಂದು ಸಿದ್ದರಾಮಯ್ಯ ಸಿಎಂ ಆಗಿ ಪದಗ್ರಹಣ ಹಿನ್ನಲೆ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಗಮನ ಸೆಳೆದಿದ್ದಾರೆ. ತಮ್ಮ ತೋಳ ಮೇಲೆ ಸಿದ್ದರಾಮಯ್ಯರ ಚಿತ್ರ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇನ್ನು ರಾಜ್ಯದ ಬೇರೆ ಬೇರೆ ಭಾಗಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಬಳ್ಳಾರಿ, ದಾವಣಗೇರೆ, ಯಾದಗಿರಿ, ರಾಯಚೂರಿನಿಂದ, ಗುಲ್ಬರ್ಗದಿಂದ ಅಭಿಮಾನಿಗಳು ಬರ್ತಿದ್ದಾರೆ.

  • 20 May 2023 08:31 AM (IST)

    Karnataka News Live Updates: ಸಿಇಟಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆ

    ಪ್ರಮಾಣವಚನ ಸಮಾರಂಭದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಂಭವವಿದೆ. ಒಂದು ವೇಳೆ ವಿದ್ಯಾರ್ಥಿಗಳು ಸಂಚಾರ ದಟ್ಟಣೆಗೆ ಸಿಲುಕಿಕೊಂಡಲ್ಲಿ ಪರೀಕ್ಷಾ ಪ್ರವೇಶಪತ್ರವನ್ನು ಪೊಲೀಸರಿಗೆ ತೋರಿಸಬೇಕು. ಪೊಲೀಸರು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಅಗತ್ಯ ವ್ಯವಸ್ಥೆ ಮಾಡುತ್ತಾರೆ.

  • 20 May 2023 08:29 AM (IST)

    Karnataka News Live Updates: ಸಿದ್ದು, ಡಿಕೆಶಿ ಪ್ರಮಾಣವಚನ ಸಮಾರಂಭಕ್ಕೆ ಭರ್ಜರಿ ಸಿದ್ಧತೆ

    ನೂತನ ಸರ್ಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಹಾಗೂ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಈ ಹಿನ್ನಲೆ ಕಂಠೀರವ ಸ್ಟೇಡಿಯಂ ಸುತ್ತು ಎಲ್ಲೆಲ್ಲೂ ಸಿದ್ದರಾಮಯ್ಯ, ಡಿಕೆಶಿ ಫ್ಲೆಕ್ಸ್, ಬ್ಯಾನರ್​ಗಳು ರಾರಾಜಿಸುತ್ತಿವೆ. ಇನ್ನು ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಭಿಮಾನಿಗಳು, ಕಾರ್ಯಕರ್ತರು. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ.

Published On - May 20,2023 8:27 AM

Follow us
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್