ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Assembly Elections 2023) ನೀತಿ ಸಂಹಿತೆ ಹಿನ್ನೆಲೆ ವಿವಿಧ ಇಲಾಖೆಗಳ ಕಾರ್ಯಾಚರಣೆಯಲ್ಲಿ ಕೋಟಿ ಕೋಟಿ ಮೌಲ್ಯದ ವಸ್ತುಗಳು ಹಾಗೂ ನಗದು ವಶಕ್ಕೆ ಪಡೆದಿದ್ದು, ಕಳೆದ ಆರು ದಿನಗಳ ಕಾರ್ಯಚರಣೆಯಲ್ಲಿ ಒಟ್ಟಾರೆ 47 ಕೋಟಿ 43 ಲಕ್ಷದ 85 ಸಾವಿರ ರೂ. ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ಈ ಕುರಿತಾಗಿ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ನೀತಿ ಸಂಹಿತೆ ಜಾರಿ ಬಳಿಕ 6 ದಿನಗಳ ಕಾರ್ಯಾಚರಣೆಯಲ್ಲಿ 12 ಕೋಟಿ 82 ಲಕ್ಷ 94 ಸಾವರ ರೂ. ನಗದು, ರಾಜ್ಯದಲ್ಲಿ 16 ಕೋಟಿ ಮೌಲ್ಯದ 2,78,798 ಲೀಟರ್ ಮದ್ಯ, 41 ಲಕ್ಷ ರೂಪಾಯಿ ಮೌಲ್ಯದ 79.44 ಕೆ.ಜಿ ಮಾದಕವಸ್ತು, 6 ಕೋಟಿ 72 ಲಕ್ಷ ರೂಪಾಯಿ ಮೌಲ್ಯದ 13.575 ಕೆ.ಜಿ ಚಿನ್ನ, 63 ಲಕ್ಷ 98 ಸಾವಿರ ಮೌಲ್ಯದ 88.763 ಕೆಜಿ ಬೆಳ್ಳಿ ಆಭರಣ ಸೀಜ್ ಮಾಡಲಾಗಿದೆ.
ರಾಜ್ಯದಲ್ಲಿ ಈವರೆಗೆ 10 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಗಿಫ್ಟ್ಗಳು ವಶ ಪಡೆಸಿಕೊಂಡಿದ್ದು, ನಗದು, ಮದ್ಯ, ಡ್ರಗ್ಸ್ ಜಪ್ತಿ ಸಂಬಂಧ ಒಟ್ಟು 316 ಪ್ರಕರಣ ದಾಖಲು ಮಾಡಲಾಗಿದೆ. 31,486 ಶಸ್ತ್ರಾಸ್ತ್ರ ಠೇವಣಿ, 10 ಶಸ್ತ್ರಾಸ್ತ್ರಗಳನ್ನ ಠೇವಣಿ ಮಾಡಿಲ್ಲ. ರಾಜ್ಯದಲ್ಲಿ ಈವರೆಗೆ 7 ಗನ್ ಲೈಸೆನ್ಸ್ಗಳನ್ನು ರದ್ದುಗೊಳಿಸಲಾಗಿದೆ. ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ 1,416 ಜನರ ವಿರುದ್ಧ ಮೊಕದ್ದಮೆ ಹೂಡಲಾಗಿದೆ.
ಇದೇ ಮೇ 10ರಂದು ಮತದಾನ ನಡೆಯಲಿದ್ದು, ಮೇ.13ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಮತದಾರರ ಓಲೈಕೆಗಾಗಿ ಹಣ, ಅಡುಗೆ ಸಾಮಾಗ್ರಿಗಳು, ಸೀರೆ ಸೇರಿದಂತೆ ನಾನಾ ಗಿಫ್ಟ್ಗಳನ್ನು ಹಂಚಲಾಗುತ್ತಿದೆ. ಅಲ್ಲದೇ ದಾಖಲೆಗಳಿಲ್ಲದ ಕೋಟ್ಯಾನುಗಟ್ಟಲೇ ಹಣ ಪತ್ತೆಯಾಗುತ್ತಿವೆ.
ರಾಜ್ಯದ ವಿಧಾನಸಭಾ ಚುನಾವಣೆ ಅಕ್ರಮಗಳ ಮೇಲೆ ಕಣ್ಗಾವಲು ಇಟ್ಟಿರುವ ಚುನಾವಣಾ ಆಯೋಗವು ಇತ್ತೀಚೆಗೆ 15 ಕೋಟಿ ರೂ. ನಗದು ಸೇರಿದಂತೆ 57.72 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಮನೋಜ್ ಕುಮಾರ್ ಮೀನಾ ಕೂಡ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಬಹಳ ವರ್ಷಗಳಿಂದ ಕಾಂಗ್ರೆಸ್-ಬಿಜೆಪಿ ನಡುವೆ ಒಳ ಒಪ್ಪಂದವಿದೆ: ಹೊಸ ಬಾಂಬ್ ಸಿಡಿಸಿದ ಹೆಚ್ಡಿ ಕುಮಾರಸ್ವಾಮಿ
ಚುನಾವಣಾ ಅಕ್ರಮಗಳ ಮೇಲೆ ನಿಗಾವಹಿಸಲು ವಿವಿಧ ತನಿಖಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪೊಲೀಸ್ ಇಲಾಖೆಯು 34.36 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ. 14.24 ಕೋಟಿ ರೂ. ನಗದು, 530 ಕೆಜಿ ಮಾದಕ ವಸ್ತುಗಳು, 15 ಕೆಜಿ ಚಿನ್ನ, 135 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ಇನ್ನು ಅಬಕಾರಿ ಇಲಾಖೆಯು 6.84 ಕೋಟಿ ರೂ. ಮೌಲ್ಯದ 1,38,847 ಲೀಟರ್. ಮದ್ಯ ಮತ್ತು 43 ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಆದಾಯ ತೆರಿಗೆ ಇಲಾಖೆಯು 1.16 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದ್ದು, ವಾಣಿಜ್ಯ ತೆರಿಗೆ ಇಲಾಖೆಯು ಒಟ್ಟು 5.02 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:57 pm, Mon, 3 April 23