
ಮೈಸೂರು, ಅ. 14: ಉದ್ಯೋಗ ಮೇಳಗಳು (Job Fairs) ಕೇವಲ ಉದ್ಯೋಗ ಪಡೆಯುವ ವೇದಿಕೆಯಾಗದೆ, ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ವೃತ್ತಿಜೀವನದಲ್ಲಿ ಮುಂದುವರೆಯಲು ಒಂದು ಉತ್ತಮ ಮಾರ್ಗವಾಗಿದೆ. ಕರ್ನಾಟಕದಲ್ಲಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) ಮತ್ತು ಇತರ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಈ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡುತ್ತಿವೆ. ಕರ್ನಾಟಕದ ಯುವಜನತೆಯ ಕೌಶಲ್ಯ ಮತ್ತು ಉದ್ಯೋಗದ ಕನಸುಗಳಿಗೆ ರೆಕ್ಕೆ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು (Job Fair) ಆಯೋಜಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಘನ ನೇತೃತ್ವದಲ್ಲಿ ನಡೆಯಲಿರುವ ಈ ಮೇಳವು ನಿರುದ್ಯೋಗಿಗಳಿಗೆ ಉದ್ಯೋಗದ ಬಾಗಿಲು ತೆರೆಯಲಿದೆ.
ಮೈಸೂರಿನಲ್ಲಿ ಮೆಗಾ ಉದ್ಯೋಗ ಮೇಳ ನಡೆಯಲಿದ್ದು, ಇದರಲ್ಲಿ 200 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಎಸ್. ಯುಕೇಶ್ ಕುಮಾರ್ ಮಾತನಾಡಿ, ವಿವಿಧ ಕ್ಷೇತ್ರಗಳ, ವಿವಿಧ ಹುದ್ದೆಗಳಿಗಾಗಿ ನಡೆಯುವ ಈ ನೇರ ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ನಿಮ್ಮ ಅರ್ಹತೆಗೆ ತಕ್ಕ ಉದ್ಯೋಗವನ್ನು ಒಂದೇ ದಿನದಲ್ಲಿ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ, ಆದ್ದರಿಂದ ಈ ಉದ್ಯೋಗ ಮೇಳದಲ್ಲಿ ಯುವಜನರು ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಉದ್ಯೋಗ ಮೇಳವು ಮೈಸೂರಿನ ಐತಿಹಾಸಿಕ ಮಹಾರಾಜ ಮೈದಾನದಲ್ಲಿ, ಅಕ್ಟೋಬರ್ 17, 2025 ರಂದು ಮೈಸೂರು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಡೆಯಲಿದೆ.
ನೀವು SSLC, PUC, ಪದವಿ, ಸ್ನಾತಕೋತ್ತರ ಪದವಿ, ಐಟಿಐ ಅಥವಾ ಡಿಪ್ಲೊಮಾ ವಿದ್ಯಾರ್ಹತೆಯನ್ನು ಹೊಂದಿದ್ದರೆ, ಈ ಮೇಳದಲ್ಲಿ ಭಾಗವಹಿಸಲು ಅರ್ಹರಾಗಿರುತ್ತೀರಿ. ಉದ್ಯೋಗ ಮೇಳದಲ್ಲಿ ಹಲವು ಕಂಪನಿಗಳು ಭಾಗವಹಿಸುತ್ತವೆ. ಅವು ಯಾವ ರೀತಿಯ ಕೌಶಲ್ಯಗಳು, ಜ್ಞಾನ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಹುಡುಕುತ್ತಿವೆ ಎಂಬುದನ್ನು ನೀವು ನೇರವಾಗಿ ತಿಳಿದುಕೊಳ್ಳಬಹುದು.
ನೀವು ಸಂದರ್ಶನಕ್ಕೆ ಹಾಜರಾದಾಗ ಅಥವಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದಾಗ, ನಿಮ್ಮಲ್ಲಿರುವ ಕೌಶಲ್ಯ ಮತ್ತು ಉದ್ಯಮಕ್ಕೆ ಬೇಕಾದ ಕೌಶಲ್ಯದ ನಡುವೆ ಇರುವ ಅಂತರವನ್ನು ಅರಿತುಕೊಳ್ಳಬಹುದು. ಇದು ಮುಂದೆ ಯಾವ ವಿಷಯದಲ್ಲಿ ತರಬೇತಿ ಪಡೆಯಬೇಕು ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನೇಮಕಾತಿ; 10th, ಪಿಯುಸಿ ಪಾಸಾಗಿದ್ರೆ ಸಾಕು
ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೀವು ಅರ್ಹರಾಗಿದ್ದರೆ ಈ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಿ: udyogamela.ksdckarnataka.com
ಸಿದ್ಧರಾಗಿ ಬನ್ನಿ: ಸಂದರ್ಶನಕ್ಕೆ ಹಾಜರಾಗುವಾಗ ನಿಮ್ಮ ರೆಸ್ಯೂಮ್ನ ಸಾಕಷ್ಟು ಪ್ರತಿಗಳನ್ನು ತರಲು ಮರೆಯಬೇಡಿ.
ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನಿರುದ್ಯೋಗವನ್ನು ದೂರ ಮಾಡಿ. ಹೆಚ್ಚಿನ ಮಾಹಿತಿ ಮತ್ತು ಸ್ಪಷ್ಟೀಕರಣಕ್ಕಾಗಿ 9606494308 ಸಹಾಯವಾಣಿಗೆ ಕರೆ ಮಾಡಿ
ಉದ್ಯೋಗ ಮೇಳವು ಕೇವಲ ಪದವೀಧರರಿಗೆ ಸೀಮಿತವಾಗಿಲ್ಲ ಮತ್ತು ಎಸ್ಎಸ್ಎಲ್ಸಿ ಅಥವಾ ಪಿಯು ವಿದ್ಯಾರ್ಹತೆ ಹೊಂದಿರುವವರೂ ಸಹ ನೋಂದಾಯಿಸಿಕೊಂಡು ಸೂಕ್ತ ಉದ್ಯೋಗವನ್ನು ಪಡೆಯಲು ಈ ಮೇಳದಲ್ಲಿ ಭಾಗವಹಿಸಬಹುದು ಎಂದು ಶ್ರೀ ಯುಕೇಶ್ ಕುಮಾರ್ ಹೇಳಿದರು. ಯುವ ನಿಧಿಯಡಿಯಲ್ಲಿ ನೋಂದಾಯಿಸಿಕೊಂಡಿರುವ ಯುವಕರನ್ನು ಸಹ ಪರಿಗಣಿಸಿಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
Published On - 12:58 pm, Tue, 14 October 25