ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಎಫ್​​ಐಆರ್

Sanjay Leela Bhansali: ‘ದೇವದಾಸ್’, ‘ಹಮ್ ದಿಲ್ ದೇಚುಕೆ ಸನಮ್’, ‘ಸಾವರಿಯಾ’, ‘ರಾಮ್​​ಲೀಲಾ’, ‘ಬ್ಲಾಕ್’ ಇನ್ನೂ ಹಲವು ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ಸಂಜಯ್ ಲೀಲಾ ಬನ್ಸಾಲಿ ಮೇಲೆ ಇದೀಗ ವಂಚನೆ ಹಾಗೂ ನಂಬಿಕೆ ದ್ರೋಹದ ಆರೋಪ ಕೇಳಿ ಬಂದಿದ್ದು, ನಿರ್ದೇಶಕನ ಸೇರಿ ಇನ್ನೂ ಇಬ್ಬರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಎಫ್​​ಐಆರ್
Sanjay Leela Bhansali

Updated on: Sep 03, 2025 | 6:06 PM

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರ ಸಾಲಿನಲ್ಲಿ ನಿಲ್ಲುವ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ವಿರುದ್ಧ ಎಫ್​​ಐಆರ್ ದಾಖಲಾಗಿದೆ. ‘ದೇವದಾಸ್’, ‘ಹಮ್ ದಿಲ್ ದೇಚುಕೆ ಸನಮ್’, ‘ಸಾವರಿಯಾ’, ‘ರಾಮ್​​ಲೀಲಾ’, ‘ಬ್ಲಾಕ್’ ಇನ್ನೂ ಹಲವು ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ಸಂಜಯ್ ಲೀಲಾ ಬನ್ಸಾಲಿ ಮೇಲೆ ಇದೀಗ ವಂಚನೆ ಹಾಗೂ ನಂಬಿಕೆ ದ್ರೋಹದ ಆರೋಪ ಕೇಳಿ ಬಂದಿದೆ.

ಸಂಜಯ್ ಲೀಲಾ ಬನ್ಸಾಲಿ ಪ್ರಸ್ತುತ ‘ಲವ್ ಆಂಡ್ ವಾರ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಆಲಿಯಾ ಭಟ್, ರಣ್​​ಬೀರ್ ಕಪೂರ್, ವಿಕ್ಕಿ ಕೌಶಲ್​​ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ ಆದರೆ ಇದೀಗ ಸಿನಿಮಾದ ಭಾಗವಾಗಿದ್ದ ವ್ಯಕ್ತಿಯೊಬ್ಬರು ಸಂಜಯ್ ಲೀಲಾ ಬನ್ಸಾಲಿಯ ವಿರುದ್ಧ ದೂರು ನೀಡಿದ್ದಾರೆ.

ಸಿನಿಮಾದ ಲೈನ್ ಪ್ರೊಡ್ಯೂಸರ್ ಆಗಿ ಹಾಸ್ಪಿಟಾಲಿಟಿ ಸಂಸ್ಥೆಯ ಸಿಇಓ ರಾಜ್ ಮಾಥುರ್ ಅವರನ್ನು ಸಂಜಯ್ ಲೀಲಾ ಬನ್ಸಾಲಿ ನೇಮಿಸಿದ್ದರು. ಆದರೆ ಇತ್ತೀಚೆಗಷ್ಟೆ ರಾಜ್ ಮಾಥುರ್ ಅವರನ್ನು ಲೈನ್ ಪ್ರೊಡ್ಯೂಸರ್ ಸ್ಥಾನದಿಂದ ತೆಗೆದು ಹಾಕಲಾಗಿದೆಯಂತೆ. ಇದೇ ವಿಷಯವಾಗಿ ರಾಜ್ ಮಾಥುರ್ ದೂರು ನೀಡಿದ್ದು, ಸಂಜಯ್ ವಿರುದ್ಧ ವಂಚನೆ ಹಾಗೂ ದ್ರೋಹದ ಆರೋಪ ಹೊರಿಸಿದ್ದಾರೆ.

ಇದನ್ನೂ ಓದಿ:ಸಂಜಯ್ ಲೀಲಾ ಬನ್ಸಾಲಿ ಚಿತ್ರೀಕರಣ ವಿಧಾನದ ಬಗ್ಗೆ ನಟ ಟೀಕೆ

ಸಂಜಯ್ ಲೀಲಾ ಬನ್ಸಾಲಿ ಮಾತ್ರವೇ ಅಲ್ಲದೆ ಸಿನಿಮಾಕ್ಕೆ ಸಂಬಂಧಿಸಿದ ಅರವಿಂದ್ ಗಿಲ್ ಮತ್ತು ಉತ್ಕರ್ಷ್ ಬಾಲಿ ವಿರುದ್ಧವೂ ಸಹ ದೂರು ದಾಖಲಾಗಿದ್ದು, ಹಣಕಾಸು ವಂಚನೆ, ನಂಬಿಕೆ ದ್ರೋಹ ಆರೋಪಗಳಡಿ ಎಫ್​​ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ರಾಜ್ ಮಾಥುರ್ ಆರೋಪಿಸಿರುವಂತೆ, ಮೊದಲಿಗೆ ರಾಜ್ ಮಾಥುರ್ ಅವರನ್ನು ‘ಲವ್ ಆಂಡ್ ವಾರ್’ ಸಿನಿಮಾದ ಲೈನ್ ಪ್ರೊಡ್ಯೂಸರ್ ಆಗಿ ಒಪ್ಪಂದ ಮಾಡಿಕೊಳ್ಳಲಾಯ್ತಂತೆ. ಬಳಿಕ ವಿನಾಕಾರಣ ಅವರನ್ನು ತೆಗೆದು ಹಾಕಲಾಯ್ತಂತೆ. ತಮಗೆ ಸಂಬಳ ಸಹ ನೀಡದೆ ತೆಗೆದು ಹಾಕಲಾಗಿದೆ ಎಂದು ರಾಜ್ ಆರೋಪ ಮಾಡಿದ್ದಾರೆ.

ರಾಜಸ್ಥಾನದಲ್ಲಿ ಶೂಟಿಂಗ್ ಮಾಡುವ ವೇಳೆ ತಮಗೆ ಬನ್ಸಾಲಿಯ ಪ್ರೊಡಕ್ಷನ್ ಹೌಸ್​​ನಿಂದ ಇಮೇಲ್ ಬಂದಿತ್ತು. ಅದರಂತೆ ನಾನು ರಾಜಸ್ಥಾನದಲ್ಲಿ ಸಿನಿಮಾ ಶೂಟಿಂಗ್​​ಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದೆ. ನಟ-ನಟಿಯರ ಭದ್ರತೆ, ಚಿತ್ರತಂಡದ ವಸತಿ, ಆಹಾರ ಎಲ್ಲದರ ವ್ಯವಸ್ಥೆ ಮಾಡಿದ್ದೆ. ಶೂಟಿಂಗ್​​ಗೆ ಬೇಕಾದ ಒಪ್ಪಿಗೆಗಳನ್ನು ಸರ್ಕಾರದಿಂದ ಪಡೆದುಕೊಂಡೆ, ಆದರೆ ಚಿತ್ರೀಕರಣದ ಬಳಿಕ ನನ್ನನ್ನು ತೆಗೆದು ಹಾಕಲಾಗಿದೆ. ನಾನು ಸಂಜಯ್ ಲೀಲಾ ಬನ್ಸಾಲಿಯವರನ್ನು ಭೇಟಿ ಆಗಲು ಯತ್ನಿಸಿದೆ. ಆದರೆ ಬನ್ಸಾಲಿ ಪ್ರೊಡಕ್ಷನ್ ಹೌಸ್​​ನ ಮ್ಯಾನೇಜರ್​​ಗಳಾದ ಉತ್ಕರ್ಷ್ ಬಾಲಿ ಮತ್ತು ಅರವಿಂದ್ ಗಿಲ್ ನನ್ನೊಟ್ಟಿಗೆ ಕೆಟ್ಟದಾಗಿ ನಡೆದುಕೊಂಡರು ಎಂದು ರಾಜ್ ಮಾಥುರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ