ಒತ್ತಡ, ನಿದ್ರೆಯ ಕೊರತೆಯಿಂದ ಭಾರತದ ವೈದ್ಯರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ: ಸಂಶೋಧನೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 14, 2023 | 6:06 PM

ಐಎಂಎ ಪುಣೆ ಅಧ್ಯಾಯದ ಪ್ರಕಾರ ವೈದ್ಯರು ಸರಾಸರಿ ವ್ಯಕ್ತಿಗಿಂತ ಕಡಿಮೆ ಜೀವಿತಾವಧಿಯನ್ನು ಜೀವಿಸುತ್ತಾರೆ. ಹಾಗಾದರೆ ಜೀವ ರಕ್ಷಕರಿಗೆ ಏನು ತೊಂದರೆಯಾಗಿದೆ? ಏನು ಮಾಡಬೇಕು? ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಒತ್ತಡ, ನಿದ್ರೆಯ ಕೊರತೆಯಿಂದ ಭಾರತದ ವೈದ್ಯರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ: ಸಂಶೋಧನೆ
ಸಾಂದರ್ಭಿಕ ಚಿತ್ರ
Follow us on

ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಅಂದರೆ ವೈದ್ಯನು ಸಾಕ್ಷಾತ್ ನಾರಾಯಣನೆಂದು, ರಕ್ಷಕನೆಂದೂ, ದೇವರ ಸಮಾನನೆಂದೂ ಇದರ ಅರ್ಥ ಬರುತ್ತದೆ. ಅವರು ರೋಗಿಗಳಿಗೆ ಜೀವ ರಕ್ಷಕರಿದ್ದಂತೆ. ಸರಿಯಾದ ಸಮಯದಲ್ಲಿ ರೋಗನಿರ್ಣಯ ಮಾಡಿ ಜೀವ ಉಳಿಸಲು ಶ್ರಮಿಸುತ್ತಾರೆ. ಅವರು ಬಿಡುವಿಲ್ಲದೆ ಕೆಲಸ ಮಾಡುವುದರಿಂದ ಬೇರೆಯವರಿಗೆ ಒಳ್ಳೆಯದು ಆದರೆ ಸ್ವಯಂ ಆರೈಕೆ ಇಲ್ಲದೆ ತಮ್ಮ ಕೆಲಸಗಳಿಗೆ ಸಮಯವನ್ನು ನೀಡದೆಯೇ ದುಡಿಯುವುದರಿಂದ ವೈದ್ಯರ ಆರೋಗ್ಯವೂ ಹಳ್ಳ ಹಿಡಿಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಇದಕ್ಕೆ ಪೂರಕವೆಂಬ ಹಾಗೇ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಪುಣೆ ಅಧ್ಯಯನ ನಡೆಸಿದ್ದು ಅವರ ಪ್ರಕಾರ, ಭಾರತೀಯ ವೈದ್ಯರ ಸರಾಸರಿ ಜೀವಿತಾವಧಿ 55-59 ವರ್ಷಗಳು, ಇದು ಸರಾಸರಿ 69-72 ವರ್ಷಗಳವರೆಗೆ ಬದುಕಬಲ್ಲ ಸಾಮಾನ್ಯ ಜನಸಂಖ್ಯೆಗಿಂತ ಸುಮಾರು 10 ವರ್ಷಗಳು ಕಡಿಮೆ. ವೈದ್ಯರ ಆರಂಭಿಕ ಸಾವುಗಳು ಹೃದಯ ಸ್ತಂಭನ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಅಂತಹ ಇತರ ಕಾಯಿಲೆಗಳಿಂದ ಆಗಿರಬಹುದು. ವೈದ್ಯರು ವಿವಿಧ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ವಾಸ್ತವಾಂಶಗಳು, ಜ್ಞಾನ ಮತ್ತು ಜಾಗೃತಿಯೊಂದಿಗೆ ಸಜ್ಜುಗೊಂಡಿದ್ದರೂ, ದೀರ್ಘ ಸಮಯ ಮತ್ತು ಕೆಲಸದ ಒತ್ತಡದಿಂದಾಗಿ ಅವರು ತಮಗಾಗಿ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ವೈದ್ಯಕೀಯ ಭ್ರಾತೃತ್ವದ ಸದಸ್ಯರು ಹೇಳುತ್ತಾರೆ. 41ನೇ ವಯಸ್ಸಿನಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ. ಗೌರವ್ ಗಾಂಧಿ ಅವರ ನಿಧನವು ವೈದ್ಯರಿಗೆ ಸ್ವಯಂ ಆರೈಕೆ ಮತ್ತು ತಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಲು ಎಚ್ಚರಿಕೆಯ ಕರೆಯಾಗಿದೆ.

ಹೃದ್ರೋಗ ತಜ್ಞರು ಹೇಳುವ ಪ್ರಕಾರ, ಶಸ್ತ್ರಚಿಕಿತ್ಸೆಗಳು, ಆಸ್ಪತ್ರೆಯಲ್ಲಿ ದೀರ್ಘ ಸಮಯ ಕಳೆಯುವುದು, ತಿಂಡಿ, ನಿದ್ರೆಯ ಕೊರತೆಯು ವೈದ್ಯರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಕುಂಬಲ್ಲಾ ಹಿಲ್ ಆಸ್ಪತ್ರೆಯ ಸೈಫಿ ಆಸ್ಪತ್ರೆಯ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್, ಎಫ್ಎಸಿಸಿ ಎಫ್ಎಸ್ಸಿಎಐ ಎಫ್ಇಎಸ್ಸಿಯ ಎಂಡಿ ಡಿಎಂ ಡಾ.ಕೌಶಲ್ ಛತ್ರಪತಿ, ಜೀವನಶೈಲಿಯ ಬದಲಾವಣೆಗಳ ವಿಷಯಕ್ಕೆ ಬಂದಾಗ ವೈದ್ಯರು ತಮ್ಮದೇ ಆದ ಸಲಹೆಗೆ ಕಿವಿಗೊಡಬೇಕಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ.

ಇದನ್ನೂ ಓದಿ:Health Tips: ಚಿಪ್ಸ್, ನೂಡಲ್ಸ್, ಸಂಸ್ಕರಿಸಿದ ಆಹಾರದಿಂದ ಅಕಾಲಿಕ ಮರಣಕ್ಕೆ ಆಹ್ವಾನ; ವಿಶ್ವ ಆರೋಗ್ಯ ಸಂಘಟನೆ ವರದಿ

ಹೆಚ್ಚಾಗಿ ಕಾಫಿ, ಸಮೋಸಾ ತಿಂಡಿಗಳನ್ನು ತಿನ್ನುವುದರಿಂದ ಹಾನಿಯನ್ನುಂಟು ಮಾಡುತ್ತವೆ:

ವೈದ್ಯರ ಜೀವನದ ಬಗ್ಗೆ ಯೋಚಿಸಿದಾಗ, ಧೂಮಪಾನವು ಸಾಮಾನ್ಯ ಜನಸಂಖ್ಯೆಗಿಂತ ವೈದ್ಯರಲ್ಲಿ ಕಡಿಮೆ. ಕುಡಿಯುವುದೂ ತೀರಾ ಕಡಿಮೆ. ಆದರೆ ಕಾರ್ಯನಿರತ ವೈದ್ಯರಲ್ಲಿ ಉತ್ತಮ ನಿದ್ರೆಯೂ ಅಪರೂಪ. ವೈದ್ಯರು ಅತ್ಯಂತ ಅಸ್ವಸ್ಥ ಆಹಾರ ವೇಳಾ ಪಟ್ಟಿಗೆ ಹೊಂದಿಕೊಂಡಿರುತ್ತಾರೆ. ಜೊತೆಗೆ ಜಂಕ್ ಫುಡ್ ಸಾಮಾನ್ಯವಾಗಿ ಬೇರೆ ರೀತಿಯ ಆಹಾರ ಸೇವನೆಗಿಂತ ಹೆಚ್ಚಾಗಿರುತ್ತದೆ. ಆಪರೇಷನ್ ಥಿಯೇಟರ್ ಗಳಲ್ಲಿ ಸೇವಿಸುವ ವಡಾ-ಪಾವ್, ಸಮೋಸಾ ಕೊನೆಯಿಲ್ಲದ ಕಪ್ ಕಾಫಿ ಕೂಡ ಹಾನಿಯನ್ನುಂಟುಮಾಡುತ್ತದೆ. ಬೇರೆಯವರಿಗೆ ಆರೋಗ್ಯ ಪರೀಕ್ಷೆ ಮಾಡುವವರು, ವರ್ಷಗಳಿಂದ ಆರೋಗ್ಯ ತಪಾಸಣೆ ಮಾಡಿಸದ ಬಹಳಷ್ಟು ವೈದ್ಯರಿದ್ದಾರೆ ಎನ್ನುತ್ತಾರೆ ಹಲವು ಹೃದ್ರೋಗ ತಜ್ಞರು. ಕೊಲೆಸ್ಟರಾಲ್, ಸಕ್ಕರೆ ಕಾಯಿಲೆ, ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯ ನಿರ್ವಹಣೆಯನ್ನು ದಿನಕ್ಕೆ ಒಂದು ಡಜನ್ ಬಾರಿ ಪರೀಕ್ಷಿಸಲು ನಾವು ಸೂಚಿಸುತ್ತೇವೆ. ಆದರೆ ಅದನ್ನು ನಾವು ಪರೀಕ್ಷಿಸಲು ಎಂದಿಗೂ ಹೋಗುವುದಿಲ್ಲ ಎಂಬುದು ಕುಂಬಲ್ಲಾ ಹಿಲ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞರ ಅಭಿಪ್ರಾಯವಾಗಿದೆ.

ಡಾ. ಛತ್ರಪತಿ ಹೇಳುವ ಪ್ರಕಾರ “ನಾನು ಒಬ್ಬರ ಜೀವ ಉಳಿಸುವ ಆಂಜಿಯೋಪ್ಲಾಸ್ಟಿ ಮಾಡಿದ ದಿನದಂದು ನನಗೆ ಕಣ್ಣು ಮಿಟುಕಿಸಲು ಸಾಧ್ಯವಾಗುತ್ತಿಲ್ಲ’ ಅಷ್ಟು ಒತ್ತಡ ಮನೆ ಮಾಡಿತ್ತು. ನನ್ನ ಹಾಗೇ ಅದೆಷ್ಟೋ ಸಾವಿರ ವೈದ್ಯರು ವಿಶ್ರಾಂತಿ ಪಡೆಯಲು ಹೆಣಗಾಡುತ್ತಾರೆ ಎನ್ನುತ್ತಾರೆ. ” ಶಸ್ತ್ರಚಿಕಿತ್ಸೆಗಳನ್ನು ಮಾಡುವುದು, ದಿನಕ್ಕೆ ನೂರಾರು ಕರೆಗಳಿಗೆ ಹಾಜರಾಗುವುದು, ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ಓಡುವುದು, ಹೀಗೆ ಪ್ರತಿದಿನವೂ ಈ ರೀತಿಯ ದೀರ್ಘಕಾಲದ ಒತ್ತಡಗಳು ವೈದ್ಯರಲ್ಲಿ ಮಾರಣಾಂತಿಕ ಖಾಯಿಲೆಗಳನ್ನು ಆಹ್ವಾನಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ” ಎಂದು ತಜ್ಞರು ಹೇಳುತ್ತಾರೆ.

ವೈದ್ಯರು, ವಿಶೇಷವಾಗಿ ಭಾರತದಲ್ಲಿ ಅಕಾಲಿಕ ಮರಣಕ್ಕೆ ಹೆಚ್ಚು ಒಳಗಾಗುತ್ತಾರೆ ಮತ್ತು ಅವರು ತಮ್ಮ ಜೀವನಶೈಲಿಯನ್ನು ಬದಲಾಯಿಸುವವರೆಗೂ ಅವರು ಅಪಾಯದಲ್ಲಿದ್ದಾರೆ ಎಂದು ಡಾ. ಛತ್ರಪತಿ ಹೇಳುತ್ತಾರೆ. ಮುಂಬೈನ ಸರ್ ಎಚ್. ಎನ್. ರಿಲಯನ್ಸ್ ಫೌಂಡೇಶನ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ನ ಕನ್ಸಲ್ಟೆಂಟ್ ಕಾರ್ಡಿಯಾಕ್ ಸರ್ಜನ್ ಡಾ. ಬೀಪೀನ್ಚಂದ್ರ ಭಾಮ್ರೆ, ವೈದ್ಯರು ಸಹ ಸಾಕಷ್ಟು ನಕಾರಾತ್ಮಕತೆಯನ್ನು ನಿಭಾಯಿಸಿ ಅದರಿಂದ ಪರಿಣಾಮ ಎದುರಿಸಿದ್ದಾರೆ ಎಂದು ಹೇಳುತ್ತಾರೆ.

“ಸಾಮಾನ್ಯ ಜನರಿಗಿಂತ ವೈದ್ಯರಲ್ಲಿ ಹಠಾತ್ ಸಾವು ಹೆಚ್ಚಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ವೈದ್ಯರು ಬಹಳ ವಿಚಿತ್ರವಾದ ಗಂಟೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ತಡರಾತ್ರಿ, ವಾರದ ಹೆಚ್ಚಿನ ದಿನಗಳಲ್ಲಿ ದಿನಕ್ಕೆ 14 ರಿಂದ 16 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ. ವೈದ್ಯರಿಗೆ ಅವರು ಕೆಲಸ ಮಾಡುವ ವಾತಾವರಣವು ತುಂಬಾ ಕಠಿಣವಾಗಿದೆ ಏಕೆಂದರೆ ಅವರು ರೋಗಿ ಮತ್ತು ಕುಟುಂಬಕ್ಕೆ ಇಬ್ಬರಿಗೂ ಭರವಸೆಯನ್ನು ತರಲು ಸಾಕಷ್ಟು ನಕಾರಾತ್ಮಕತೆಯನ್ನು ಹೀರಿಕೊಳ್ಳಬೇಕಾಗುತ್ತದೆ. ಸಮಾಜವು ಸಾಮಾನ್ಯವಾಗಿ ವೈದ್ಯರ ಈ ಸಮರ್ಪಿತ ನಡವಳಿಕೆಯನ್ನು ಸಮಾಜದ ಕಲ್ಯಾಣಕ್ಕಾಗಿ ಸಾಕಷ್ಟು ಗೌರವದೊಂದಿಗೆ ವಿನಿಮಯ ಮಾಡಿಕೊಳ್ಳುತ್ತದೆ. ಎಲ್ಲಾ ಅಂಶಗಳು ವೈದ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ನಾವು ದೀರ್ಘಕಾಲ ನಿಂತುಕೊಂಡೇ ಇರಬೇಕಾಗುತ್ತದೆ. ಸರಿಯಾಗಿ ಹೊಟ್ಟೆ ತುಂಬಿಸಿಕೊಳ್ಳಲು ಸಮಯ ಸಿಗುವುದಿಲ್ಲ. ಜೊತೆಗೆ ಹೆಚ್ಚಿನ ಸಮಯದಲ್ಲಿ ನಿದ್ರೆಗೂ ತೊಂದರೆಯಾಗುತ್ತದೆ.
ವೈದ್ಯರು ಕೂಡ ಮನುಷ್ಯರೇ. ರೋಗಿಗಳ ಗಂಭೀರ ಸ್ಥಿತಿಯನ್ನು ನೋಡಿದ ನಂತರ, ವೈದ್ಯರು ಸಹ ಕಡಿಮೆ ಮತ್ತು ಕೆಲವೊಮ್ಮೆ ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಅವರು ಅದೇ ಉತ್ಸಾಹ ಮತ್ತು ಭರವಸೆಯೊಂದಿಗೆ ಮುಂದಿನ ರೋಗಿಗೆ ಹಾಜರಾಗಬೇಕು” ಎಂದು ಡಾ. ಭಾಮ್ರೆ ಹೇಳುತ್ತಾರೆ.

ವೈದ್ಯರ ಜೀವನಶೈಲಿಯಲ್ಲಿ ಬದಲಾವಣೆಗಳು:

1. ನೀವು ಏನನ್ನು ಬೋಧಿಸುತ್ತೀರೋ ಅದನ್ನು ಅಭ್ಯಾಸ ಮಾಡಿರಿ. ದೇಹಕ್ಕೆ ಆರೋಗ್ಯಕರವಾಗಿರುವ ತಿಂಡಿ, ತಿನಿಸುಗಳನ್ನು ತಿನ್ನಿ. ಧೂಮಪಾನ ಮಾಡಬೇಡಿ. ಅತಿಯಾಗಿ ಕುಡಿಯಬೇಡಿ.

2. ಪ್ರತಿದಿನ ವ್ಯಾಯಾಮ ಮಾಡಿ. ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ಪಾರ್ಕ್ ಅಥವಾ ತೋಟದಲ್ಲಿ ಒಂದು ತಾಸು ನಡೆದು ಬನ್ನಿ. ಸಂಗೀತ ಆಲಿಸಿ. ಧ್ಯಾನ ಮಾಡಿ.

3. ನಿಮ್ಮ ರಕ್ತ ಪರೀಕ್ಷೆಗಳು ಮತ್ತು ಆರೋಗ್ಯ ತಪಾಸಣೆಯನ್ನು ವಾರ್ಷಿಕವಾಗಿ ಮಾಡಿಸಿಕೊಳ್ಳಿ. ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಮಧುಮೇಹಕ್ಕೆ ಚಿಕಿತ್ಸೆ ನೀಡಿ. ನಿಮ್ಮ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

4. ದಿನಕ್ಕೆ ಕನಿಷ್ಠ 8 ಗಂಟೆಗಳ ಕಾಲ ನಿದ್ರಿಸಿ. ಏಕೆಂದರೆ ನಿದ್ರೆಗೆ ಪರ್ಯಾಯ ಯಾವುದೂ ಇಲ್ಲ.

5. ಹಣ ಒಳ್ಳೆಯದು, ಆದರೆ ಸಮಾಧಿಯ ಮೇಲೆ ಇಡುವಂತಾಗಬಾರದು. ರಜೆ ತೆಗೆದುಕೊಳ್ಳಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ಏಕೆಂದರೆ ಆರೋಗ್ಯವೇ ದೊಡ್ಡ ಸಂಪತ್ತು.

ಇಡೀ ದೇಶದ ಆರೋಗ್ಯ ವೈದ್ಯರ ಮೇಲೆ ಅವಲಂಬಿತವಾಗಿದೆ. ಆದರೆ, ಆ ಗುರಿಯನ್ನು ಸಾಧಿಸಲು, ಮೊದಲು, ಅವರು ಆರೋಗ್ಯಕರ ವಾಗಿರಬೇಕು. ಇತರರಿಗೆ ಸಹಾಯ ಮಾಡುವ ಮೊದಲು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎನ್ನುವ ಮಾತು ವೈದ್ಯರಿಗೆ ಹೇಳಿ ಮಾಡಿಸಿದಂತಿದೆ.