ಬಾಗಲಕೋಟೆ, ಫೆಬ್ರವರಿ 15: ವಿರಳವಾಗಿ ಲಭ್ಯವಾಗುವ “ಬಾಂಬೆ ರಕ್ತದ ಗುಂಪು” (Bombay Blood Group) ಅನ್ನು ದಾನ (Blood Donation) ಮಾಡುವ ಮೂಲಕ ವಿಜಯಪುರ (Vijayapur) ಜಿಲ್ಲೆಯ ಯಲಗೂರು ಗ್ರಾಮದ ಯುವಕ ಮಹಾಂತೇಶ್ ತುಮ್ಮರಮಟ್ಟಿ ಮಾನವೀಯತೆ ಮೆರದಿದ್ದಾರೆ.
ಬಾಗಲಕೋಟೆಯ ವಿದ್ಯಾಗಿರಿ ನಿವಾಸಿ ಶಿಲ್ಪಾ ಮುತ್ತಗಿ (15 ವರ್ಷ) ಅವರಿಗೆ ಪಿಟ್ಸ್ ಬಂದು ಹಿಮೊಗ್ಲೊಬಿನ್ ಕೊರತೆಯಾಗಿ, ಅಶಕ್ತಿಯಾಗಿ ಸೋಮವಾರ ಇಲ್ಲಿನ ಕುಮಾರೇಶ್ವರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ವೇಳೆ ವೈದ್ಯರು ರೋಗಿಯ ದೇಹದಲ್ಲಿ ರಕ್ತ ಕಡಿಮೆ ಇದೆ, ಶಿಲ್ಪಾರದ್ದು “ಬಾಂಬೆ ಬ್ಲಡ್ ಗ್ರುಪ್” ಎಂದು ಹೇಳಿದ್ದರು. ಅಲ್ಲದೆ ಕೂಡಲೆ ರಕ್ತ ಹಾಕಬೇಕು ಇಲ್ಲದಿದ್ದರೆ ಬದಕುವುದು ಕಷ್ಟ ಎಂದು ವೈದ್ಯರು ಹೇಳಿದ್ದರು.
ಈ ರಕ್ತದ ಗುಂಪು ವಿರಳಾತಿ ವಿರಳ ಆಗಿದ್ದರಿಂದ ಸಿಗುವುದು ಕಷ್ಟ. ಹೀಗಾಗಿ ಆಸ್ಪತ್ರೆಯ ಸಿಬ್ಬಂದಿ ಕುಮಾರೇಶ್ವರ ಬ್ಲಡ್ ಬ್ಯಾಂಕಿನಲ್ಲಿನ ಬ್ಲಡ್ ಗ್ರುಪ್ ಸದಸ್ಯರ ಹೆಸರಿನ ಪಟ್ಟಿ ಪರಿಶೀಲಿಸಿದ್ದಾರೆ. ಆಗ ಮಹಾಂತೇಶ್ ತುಮ್ಮರಮಟ್ಟಿ ಪತ್ತೆಯಾಗಿದೆ. ಕೂಡಲೆ ಆಸ್ಪತ್ರೆ ಸಿಬ್ಬಂದಿ ಶಿಲ್ಪಾ ಪೋಷಕರಿಗೆ ವಿಷಯ ತಿಳಿಸಿ, ಮಹಾಂತೇಶ್ ಅವರ ದೂರವಾಣಿ ನಂಬರ್ ನೀಡಿದ್ದಾರೆ. ಶಿಲ್ಪಾ ಪೋಷಕರು ಮಹಾಂತೇಶ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿ, ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಾವೇರಿ ಜಿಲ್ಲೆಯ ಯುವಕರಲ್ಲಿ ಹೆಚ್ಚುತ್ತಿದೆ ರಕ್ತದಾನದ ಅರಿವು; ಹೋರಿಯ ಹೆಸರಿನಲ್ಲಿ ರಕ್ತದಾನ
ಇನ್ನು ಮಹಾಂತೇಶ್ ತುಮ್ಮರಮಟ್ಟಿ ಓರ್ವ ಬಾಡಿಗೆ ವಾಹನ ಚಾಲಕನಾಗಿದ್ದು, ಬುಧವಾರ (ಫೆ.14) ಶ್ರೀಶೈಲಕ್ಕೆ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ ರಕ್ತ ಸಲುವಾಗಿ ಕರೆ ಬಂದಿದೆ. ಕೂಡಲೆ ಮಹಾಂತೇಶ್ ಬೇರೊಬ್ಬ ಚಾಲಕನನ್ನು ಸ್ಥಳಕ್ಕೆ ಕರೆಸಿ, ಶ್ರೀಶೈಲಕ್ಕೆ ಕಳುಹಿಸಿದ್ದಾರೆ. ಬಳಿಕ ಮಹಾಂತೇಶ್ ಬಸ್ ಹಿಡಿದು, ಬಾಗಲಕೋಟೆ ಬಂದು, ಕುಮಾರೇಶ್ವರ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಬಾಂಬೆ ರಕ್ತದಾನ ಮಾಡಿ ಹೋಗಿದ್ದಾರೆ. ಮಹಾಂತೇಶ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ದೇಹದಲ್ಲಿ ಹೆಚ್ ಆ್ಯಂಟಿಜನ್ ಇರದೆ ಇರುವ ವ್ಯಕ್ತಿಗಳ ರಕ್ತಕ್ಕೆ ಬಾಂಬೆ ಬ್ಲಡ್ ಗ್ರುಪ್ ಎಂದು ಕರೆಯುತ್ತಾರೆ. “ಬಾಂಬೆ ರಕ್ತದ ಗುಂಪು” ಇದು ಅತ್ಯಂತ ವಿರಳವಾಗ ರಕ್ತ ಗುಂಪಾಗಿದೆ. ಸುಮಾರ 50 ಲಕ್ಷ ಜನರಲ್ಲಿ ಒಬ್ಬರಿಗೆ ಇರುವಂತ ರಕ್ತದ ಗುಂಪಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ