ತಮಿಳುನಾಡಿನವರಿಗೆ ಕಾವೇರಿ ಒಂದು ರಾಜಕೀಯ ದಾಳ; ಅವರ ನಿರ್ಧಾರಕ್ಕೆ ಯಾವುದೇ ಬೆಲೆ ಇಲ್ಲ: ಸಿಎಂ ಬೊಮ್ಮಾಯಿ

ಇದು ರಾಜಕೀಯ ಸ್ಟಂಟ್ ಅಷ್ಟೇ. ನಾವು ಸರ್ವಪಕ್ಷ ಸಭೆಯಲ್ಲಿ ಏನು ನಿರ್ಧಾರ ಮಾಡಿದ್ವಿ. ಡಿಪಿಆರ್‌ನಿಂದ ಎಲ್ಲವೂ ಇತ್ಯರ್ಥ ಮಾಡಿಕೊಳ್ಳುತ್ತೇವೆ. ತಮಿಳುನಾಡಿನ ನಿರ್ಧಾರಕ್ಕೆ ಯಾವುದೇ ಬೆಲೆ ಇಲ್ಲ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ತಮಿಳುನಾಡಿನವರಿಗೆ ಕಾವೇರಿ ಒಂದು ರಾಜಕೀಯ ದಾಳ; ಅವರ ನಿರ್ಧಾರಕ್ಕೆ ಯಾವುದೇ ಬೆಲೆ ಇಲ್ಲ: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಾಂದರ್ಭಿಕ ಚಿತ್ರ)
Edited By:

Updated on: Mar 22, 2022 | 3:17 PM

ಬೆಂಗಳೂರು: ತಮಿಳುನಾಡಿನವರಿಗೆ ಕಾವೇರಿ ಒಂದು ರಾಜಕೀಯ ದಾಳ. ಸ್ವಾತಂತ್ರ್ಯ ಬಂದಾಗಿನಿಂದಲೂ ಅವರು ಹೀಗೆ ಮಾಡ್ತಿದ್ದಾರೆ. ಟ್ರಿಬ್ಯುನಲ್‌ ಮೂಲಕ ಕಾವೇರಿ ನೀರು ಹಂಚಿಕೆ ಆಗುತ್ತಿದೆ. ಸರ್ವಪಕ್ಷ ಸಭೆ ಮಾಡಿದ್ದಕ್ಕೆ ಅವರು ಹಾಗೆ ಮಾಡಿದ್ದಾರೆ. ಇದು ರಾಜಕೀಯ ಸ್ಟಂಟ್ ಅಷ್ಟೇ. ನಾವು ಸರ್ವಪಕ್ಷ ಸಭೆಯಲ್ಲಿ ಏನು ನಿರ್ಧಾರ ಮಾಡಿದ್ವಿ. ಡಿಪಿಆರ್‌ನಿಂದ ಎಲ್ಲವೂ ಇತ್ಯರ್ಥ ಮಾಡಿಕೊಳ್ಳುತ್ತೇವೆ. ತಮಿಳುನಾಡಿನ ನಿರ್ಧಾರಕ್ಕೆ ಯಾವುದೇ ಬೆಲೆ ಇಲ್ಲ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪ್ರಮಾಣವಚನಕ್ಕೆ ತೆರಳುವ ವಿಚಾರದ ಬಗ್ಗೆ ಸಂಜೆ ನಿರ್ಧಾರ ಮಾಡ್ತೇನೆ ಎಂದು ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಾಶ್ಮೀರ್ ಫೈಲ್ಸ್​ನಂತೆ ಬೆಳಗಾವಿ ಫೈಲ್ಸ್ ಬರಬೇಕೆಂಬ ಶಿವಸೇನೆ ನಾಯಕ ಸಂಜಯ್ ರಾವತ್ ಟ್ವೀಟ್ ಹಿನ್ನೆಲೆ ಬೆಳಗಾವಿ ಗಡಿ ವಿಚಾರ ಈಗಾಗಲೇ ಮುಗಿದ ಅಧ್ಯಾಯ. 1956ರ ಅನ್ವಯ ಬೆಳಗಾವಿ ವಿಚಾರ ನಿರ್ಧಾರವಾಗಿದೆ. ಹಾಗಾಗಿ ಈಗ ಮಾಡುತ್ತಿರುವುದು ರಾಜಕೀಯ ಸ್ಟಂಟ್ ಎಂದು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

YouTube video player

ಕಾಲು ಕೆರೆದುಕೊಂಡು ಬರುವವರನ್ನು ನಾವು ಕನ್ನಡಿಗರಿಗಾಗಿ ಸಹಿಸಿಕೊಳ್ಳಬೇಕಾ? ಕೇಂದ್ರ ಸರ್ಕಾರದ ಬಳಿ ಸರ್ವ ಪಕ್ಷ‌ ನಿಯೋಗ ಹೋಗೋಣ

ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆಗೆ ಅಡ್ಡಗಾಲು ಕಲು ಕಾನೂನು ಬಾಹಿರ ನಿರ್ಣಯ ಮಾಡಿದ್ದಾರೆ. ಕಾನೂನು ಬಾಹಿರ ನಿರ್ಣಯ ಮಾಡಲು, ತಮಿಳುನಾಡಿಗೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ರಾಜಕೀಯ ಕ್ಯಾತೆ ತೆಗೆಯಲು ಕಾನೂನು ಬಾಹಿರ ನಿರ್ಣಯ ಮಾಡಿದ್ದಾರೆ. 2018ರಲ್ಲಿ ಸುಪ್ರೀಂ ಕೋರ್ಟ್ ನಿಂದ ಅಂತಿಮ ತೀರ್ಪು ಬಂದಿದೆ. ಆ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ, ಅವರೂ ಕೂಡ ಒಪ್ಪಿಕೊಂಡಿದ್ದಾರೆ. ಪ್ರತಿ ವರ್ಷ 177.25 ಟಿಎಂಸಿ ನೀರನ್ನು ಅವರಿಗೆ ಕೊಡಬೇಕು. ರಾಜಕಾರಣಕ್ಕಾಗಿ ಕಾಲು ಕೆರೆದುಕೊಂಡು ಬರುವವರನ್ನು ನಾವು ಕನ್ನಡಿಗರಿಗಾಗಿ ಸಹಿಸಿಕೊಳ್ಳಬೇಕಾ? ಕೇಂದ್ರ ಸರ್ಕಾರದ ಬಳಿ ಸರ್ವ ಪಕ್ಷ‌ ನಿಯೋಗ ಹೋಗೋಣ. ಎರಡೂ ಸದನಗಳಲ್ಲಿ ನಿರ್ಣಯ ಮಾಡೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ ನೀಡಿದ್ದಾರೆ.

ಕರ್ನಾಟಕಕ್ಕಿಂತ ನೀರಾವರಿ ವಲಯದಲ್ಲಿ ಅನ್ಯಾಯಕ್ಕೆ ತುತ್ತಾದ ರಾಜ್ಯ ಮತ್ತೊಂದಿಲ್ಲ: ಹೆಚ್.ಡಿ ಕುಮಾರಸ್ವಾಮಿ

ಮೇಕೆದಾಟು ಯೋಜನೆಯ ವಿರುದ್ಧ ನಿರ್ಣಯ ವಿಚಾರವಾಗಿ ತಮಿಳುನಾಡಿನ ನಿರ್ಣಯಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ಸರ್ಕಾರ ಬದ್ಧತೆ ತೋರಿಸಬೇಕು. ನಮ್ಮ ನೀರನ್ನು ಪಡೆಯುವುದರಲ್ಲಿ ಅನ್ಯಾಯವಾಗಿದೆ. ಅದನ್ನು ರಾಜ್ಯ ಸರ್ಕಾರ ತ್ವರಿತಗತಿಯಲ್ಲಿ ಸರಿಪಡಿಸಬೇಕು ಎಂದು ಇತ್ತ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಕರ್ನಾಟಕಕ್ಕಿಂತ ನೀರಾವರಿ ವಲಯದಲ್ಲಿ ಅನ್ಯಾಯಕ್ಕೆ ತುತ್ತಾದ ರಾಜ್ಯ ಮತ್ತೊಂದಿಲ್ಲ. ಎಪ್ಪತ್ತೈದು ವರ್ಷಗಳ ಈ ಅಸಹಾಯಕತೆ ಇನ್ನೆಷ್ಟು ದಿನ? ರಾಜ್ಯವನ್ನು ಜಲಶ್ಯಾಮಲಗೊಳಿಸಿ ಸಸ್ಯಶ್ಯಾಮಲವಾಗಿಸೋಣ. ಸಂಕಲ್ಪ ಮಾಡೋಣ. ಜಲಮೂಲಗಳನ್ನು ಜತನದಿಂದ ಸಂರಕ್ಷಿಸೋಣ. ರಾಜ್ಯದಲ್ಲಿ ಜಲ ಸಮಾನತೆ ಸಾಧಿಸೋಣ. ಎಲ್ಲರಿಗೂ ವಿಶ್ವ ಜಲದಿನದ ಶುಭಾಶಯಗಳು ಎಂದು ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಕೂಡ ಮಾಡಿದ್ದಾರೆ.

ಸಿದ್ದರಾಮಯ್ಯನವರದ್ದು ಜಾಣ ಮರೆವು, ಜಾಣ ಕುರುಡು: ಸಿಟಿ ರವಿ ವಾಗ್ದಾಳಿ

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ನಿರ್ಣಯ ಕೈಗೊಂಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್​ನಿಂದ ಮೇಕೆದಾಟು ಪಾದಯಾತ್ರೆ ಮಾಡಿದೆ. ತಮಿಳುನಾಡಿನಲ್ಲಿ ಮೇಕೆದಾಟು ಯೋಜನೆಗೆ ಕೈ ವಿರೋಧ ಇದೆ. ಕರ್ನಾಟಕ ಬಿಜೆಪಿ ಮೇಕೆದಾಟು ಯೋಜನೆ ಪರವಾಗಿದೆ. ಆಯಾ ರಾಜ್ಯದ ಹಿತಾಸಕ್ತಿಗೆ ಆಯಾ ರಾಜ್ಯಗಳು ಮಾಡುತ್ತವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಊರಿಗೆಲ್ಲಾ ಪಾಠ ಮಾಡ್ತಾರೆ. ತಮಿಳುನಾಡಿನಲ್ಲಿ ನಮ್ಮದಾ ಮೈತ್ರಿ ಸರ್ಕಾರ ಇರುವುದು? ತಮಿಳುನಾಡಲ್ಲಿ ನಿರ್ಣಯ ಮಂಡಿಸಿದ್ದು ಬಿಜೆಪಿನಾ? ತಮಿಳುನಾಡಲ್ಲಿ ನಿರ್ಣಯ ಮಂಡಿಸಿದ್ದು DMK, ಕಾಂಗ್ರೆಸ್. ಸಿದ್ದರಾಮಯ್ಯನವರದ್ದು ಜಾಣ ಮರೆವು, ಜಾಣ ಕುರುಡು. ತಮಿಳುನಾಡಿನಲ್ಲಿ ಕಾಂಗ್ರೆಸ್ ನಿಲುವು ಬಗ್ಗೆ ಸ್ಪಷ್ಟ ನಿಲುವಿಲ್ಲ. ಕರ್ನಾಟಕದಲ್ಲಿ ಎಲ್ಲಾ ಜನಾಂಗದವರು ಇದ್ದಾರೆ. ಕರ್ನಾಟಕದಲ್ಲಿ ಶೇಕಡಾ 30ರಷ್ಟು ತಮಿಳಿಗರು ಇದ್ದಾರೆ. ಡಿಕೆಶಿ, ಸಿದ್ದರಾಮಯ್ಯಾಗೆ ಯಾಕೆ ಜಾಣ ಕುರುಡು? ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

YouTube video player

ಕಾಶ್ಮೀರ್ ಫೈಲ್ಸ್‌ನಂತೆ ಬೆಳಗಾವಿ ಫೈಲ್ಸ್ ಬರಬೇಕೆಂಬ ಸಂಜಯ್ ರಾವತ್ ಟ್ವೀಟ್‌ಗೆ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ. ಸಂಜಯ್ ರಾವತ್ ಡೈವರ್ಟ್ ಮಾಡುವುದನ್ನ ಬಿಡಬೇಕು. ಕಾಶ್ಮೀರ್ ಫೈಲ್ಸ್ ವಿಚಾರದಲ್ಲಿ ಶಿವಸೇನೆಯ ನಿಲುವೇನು? ಶಿವಸೇನೆಯ ನಿಲುವಿನ ಬಗ್ಗೆ ಮೊದಲು ಸ್ಪಷ್ಟಪಡಿಸಬೇಕು. ಶಿವಸೇನೆ ಪಕ್ಷ ಯಾವ ಅಧಾರದ ಮೇಲೆ ಬಂದಿದೆ. ಸುಮ್ನೆ ವಿವಾದ ಮಾಡುವುದು ಬೇಡ ಎಂದು ವಿಧಾನಸೌಧದಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ. ಏಪ್ರಿಲ್ 16-17ಕ್ಕೆ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಾಧ್ಯತೆ ಇದೆ ಎಂದು ಈ ವೇಳೆ ಅವರು ತಿಳಿಸಿದ್ದಾರೆ.

ಕೇಂದ್ರದಿಂದ ಯಾವುದೇ ಹಣ ಕೂಡ ಬೇಕಿಲ್ಲ. ಭೂಮಿಯೂ ಬೇಕಾಗಿಲ್ಲ, ನಮಗೆ ಬೇಕಿರುವುದು ಅನುಮತಿ: ಡಿಕೆ ಸುರೇಶ್

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ನಿರ್ಣಯ ವಿಚಾರಕ್ಕೆ ಸಂಬಂಧಿಸಿ ಯೋಜನೆಯಿಂದ ತಮಿಳುನಾಡಿಗೆ ಅನ್ಯಾಯ ಆಗುವುದಿಲ್ಲ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತಾಡಬೇಕು. ನಮಗೆ ಕೇಂದ್ರದಿಂದ ಯಾವುದೇ ಹಣ ಕೂಡ ಬೇಕಿಲ್ಲ. ಭೂಮಿಯೂ ಬೇಕಾಗಿಲ್ಲ, ನಮಗೆ ಬೇಕಿರುವುದು ಅನುಮತಿ. ಕೇಂದ್ರದಿಂದ ಅನುಮತಿ ಪಡೆಯುವ ಕೆಲಸವಾಗಬೇಕು. ಅನುಮತಿ ಪಡೆಯದಿದ್ದರೆ ರಾಜ್ಯದ ಜನರಿಗೆ ಮಾಡಿದ ದ್ರೋಹ ಎಂದು ಹಾಸನದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ಇದನ್ನೂ ಓದಿ: World Water Day 2022: ಜಲವೇ ಜೀವ ಜೀವಾಳ; ನೀರಿಂದಲೇ ಎಲ್ಲ

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಕೆಲಸ ದೊರೆತು ಆದಾಯ ಹೆಚ್ಚಾದರೆ, ರಾಜ್ಯದ ತಲಾ ಆದಾಯ ಕೂಡ ಹೆಚ್ಚಾಗುತ್ತದೆ: ಸಿಎಂ ಬೊಮ್ಮಾಯಿ

Published On - 12:22 pm, Tue, 22 March 22

Loading...
Unable to load recommendations.
Follow Us