
ಬೆಳಗಾವಿ, ಜುಲೈ 15: ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ (Ramdurga) ತಾಲೂಕಿನ ಖಾನಪೇಟ್ ಬಳಿ ಬುಧವಾರ (ಜುಲೈ.7) ದಂದು ಭೀಕರವಾಗಿ ಹತ್ಯೆಯಾದ ಸ್ಥಿತಿಯಲ್ಲಿ ಒಂದು ಮೃತದೇಹ ಪತ್ತೆಯಾಗಿತ್ತು. ಕುತ್ತಿಗೆಗೆ ಟವಲ್ನಿಂದ ಸುತ್ತಿ ಹತ್ಯೆ ಮಾಡಿ, ಬಳಿಕ ಮರ್ಮಾಂಗಕ್ಕೆ ಒದ್ದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡ ರಾಮದುರ್ಗ ಠಾಣೆ ಪೊಲೀಸರು ಪ್ರಕರಣ ತನಿಖೆ ನಡೆಸಲು ಆರಂಭಿಸಿದರು. ಧಾರವಾಡದ ಅಮ್ಮಿನಬಾವಿ ಗ್ರಾಮದ ನಿವಾಸಿಯಾಗಿದ್ದ ಈರಪ್ಪ ಆಡಿನ್ ಕೊಲೆಯಾದ ವ್ಯಕ್ತಿ. ಖಾನ್ಪೇಟ್ ಬಳಿ ಈರಪ್ಪ ಕೊಲೆಯಾಗಿದ್ದ ಏಕೆ? ಯಾರು ಮಾಡಿದ್ದು? ಎಂದು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಕೊಲೆಯದ ಈರಪ್ಪ ಆಡಿನ್ರ ಪತ್ನಿಯ ಹೆಸರು ಕಮಲವ್ವ. ದಂಪತಿ ಮದುವೆಯಾಗಿ 11 ವರ್ಷಗಳು ಕಳೆದಿವೆ. ಕೆಲ ವರ್ಷ ಚೆನ್ನಾಗಿದ್ದ ಈರಪ್ಪ, ಬಳಿಕ ಪತ್ನಿಗೆ ಕಿರಕುಳ ನೀಡಲು ಆರಂಭಿಸಿದ್ದಾನೆ. ಕಮಲವ್ವ ಧಾರವಾಡದಲ್ಲಿನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಕಮಲವ್ವಳ ಸಂಪಾದನೆಯ ಹಣದಲ್ಲಿ ಈರಪ್ಪ ಎಣ್ಣೆಹೊಡೆಯುತ್ತಿದ್ದನು. ಎಣ್ಣೆಯ ನಶೆಯಲ್ಲಿ ಈರಪ್ಪ ಪತ್ನಿ ಕಮಲವ್ವಗೆ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತಿದ್ದ ಕಮಲವ್ವಗೆ ಎರಡು ವರ್ಷಗಳ ಹಿಂದೆ ಜಾನುವಾರು ಮಾರಾಟದ ದಲ್ಲಾಳಿ ಸಾಬಪ್ಪ ಎಂಬುವನ ಪರಿಚಯ ಆಗಿದೆ. ಕೆಲ ದಿನಗಳಲ್ಲಿಯೇ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿದೆ.
ಪತಿ ಈರಪ್ಪನನ್ನು ಒಂದು ಗತಿ ಕಾಣಿಸಿ ಎಂದು ಪ್ರಿಯಕರ ಸಾಬಪ್ಪನಿಗೆ ಕಮಲವ್ವ ಒತ್ತಾಯ ಮಾಡಿದ್ದಾಳೆ. ಇಲ್ಲದಿದ್ದರೇ ನಾನೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪ್ರಿಯಕರ ಸಾಬಪ್ಪನಿಗೆ ಬೆದರಿಕೆ ಹಾಕಿದ್ದಾಳೆ. ಒಂದೇ ದಿನ ಪ್ರಿಯಕರ ಸಾಬಪ್ಪನಿಗೆ 30 ಸಲ ಕರೆ ಮಾಡಿ ಬಲವಂತ ಮಾಡಿದ್ದಾಳೆ. ಬಳಿಕ ಕಮಲವ್ವ ಹಾಗೂ ಆಕೆಯ ಪ್ರಿಯಕರ ಸಾಬಪ್ಪ ಹಾಗೂ ಈತನ ಸ್ನೇಹಿತ ಫಕೀರಪ್ಪ ಮೂವರು ಸೇರಿಕೊಂಡು ಅಮ್ಮಿನಬಾವಿಗೆ ಬರುತ್ತಾರೆ. ಇಲ್ಲಿ ಬಾರ್ನಲ್ಲಿದ್ದ ಈರಪ್ಪನಿಗೆ ಮತ್ತಷ್ಟು ಮದ್ಯಪಾನ ಮಾಡಿಸಿ ಬೈಕ್ ಮೇಲೆ ಖಾನಪೇಟ ಬಳಿ ಕರೆದುಕೊಂಡು ಹೋಗಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಮುನವಳ್ಳಿಯಲ್ಲಿ ಪಾರ್ಟಿ ಮಾಡಿದ ನಾಲ್ವರು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು.
ಇದನ್ನೂ ಓದಿ: ಮದುವೆ ಪಾರ್ಟಿಯಲ್ಲಿ ಚಿಕನ್ ಪೀಸ್ಗಾಗಿ ಜಗಳ, ಸ್ನೇಹಿತನ ಕೊಲೆ
ತಂತ್ರಿಕ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಪತಿಯ ಕೊಲೆಯಲ್ಲಿ ಪತ್ನಿಯ ಪಾತ್ರ ಇರುವುದು ಒತ್ತಾಗಿದೆ. ಪತಿಯ ಹತ್ಯೆ ಬಳಿಕ ಬಿಂದಾಸ್ ಆಗಿದ್ದ ಪತ್ನಿ ಕಮಲವ್ವಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಭೀಕರ ಕೊಲೆಯ ರಹಸ್ಯ ಬಯಲಾಗಿದೆ. ಸದ್ಯ ರಾಮದುರ್ಗ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
Published On - 4:31 pm, Tue, 15 July 25