ವಿಷ ಕುಡಿಯಲು ತಾಯಿ, ತಂಗಿಯರಿಗೆ 2 ಗಂಟೆ ಮನವೊಲಿಸಿದ: ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ, ಮೂವರು ಸಾವು
ಬೆಳಗಾವಿಯ ಜೋಷಿಮಾಳ್ ಎಂಬಲ್ಲಿ ಬುಧವಾರ ಬೆಳಗ್ಗೆಯೇ ಮನಕಲಕುವ ಘಟನೆ ನಡೆದಿದ್ದು, ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಒಬ್ಬಾಕೆ ಯುವತಿ ಬದುಕುಳಿದಿದ್ದಾಳೆ. ಅಂದಹಾಗೆ, ವಿಷ ಕುಡಿಯಲು ತಾಯಿ ಮತ್ತು ತಂಗಿಯನ್ನು ಸಂತೋಷ್ ಎರಡು ಗಂಟೆ ಕಾಲ ಮನವೊಲಿಸಿದ್ದ ಎಂಬುದೂ ತಿಳಿದುಬಂದಿದೆ. ದಾರುಣ ಘಟನೆಯ ವಿವರ ಇಲ್ಲಿದೆ.

ಬೆಳಗಾವಿ, ಜುಲೈ 9: ಬೆಳಗಾವಿ (Belagavi) ನಗರದ ಜೋಷಿಮಾಳ್ ಎಂಬಲ್ಲಿ ಮನಕಲಕುವ ಘಟನೆ ನಡೆದಿದ್ದು, ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಮೂವರು ಮೃತಪಟ್ಟಿದ್ದು, ಒಬ್ಬಾಕೆಯ ಸ್ಥಿತಿ ಗಂಭೀರವಾಗಿದೆ. ಸಂತೋಷ ಕುರಡೇಕರ್, ಸುವರ್ಣ ಕುರಡೇಕರ್, ಮಂಗಳಾ ಕುರಡೇಕರ್ ಮೃತಪಟ್ಟಿದ್ದು, ಸುನಂದಾ ಕುರಡೇಕರ್ ಸ್ಥಿತಿ ಚಿಂತಾಜನಕವಾಗಿದೆ. ತಾಯಿ, ಮಗ, ಮಗಳು ಸಾವಿಗೀಡಾದವರು. ಮತ್ತೊಬ್ಬ ಮಗಳು ಸುನಂದಾ ಕುರಡೇಕರ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ 9 ಗಂಟೆಗೆ ಕುಟುಂಬಸ್ಥರು ವಿಷ ಸೇವಿಸಿದ್ದಾರೆ. ಗಂಭೀರವಾಗಿರುವ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚೀಟಿ ವ್ಯವಹಾರ, ಚಿನ್ನದ ವಂಚನೆಯೇ ಕಾರಣ!
ಸಂತೋಷ್ ಹಾಗೂ ಕುಟುಂಬದವರು ಡೆತ್ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಇದರ ಪ್ರಕಾರ, ಚೀಟಿ ವ್ಯಹಾರ ಮತ್ತು ರಾಜು ಎಂಬಾತ ಚಿನ್ನ ತೆಗೆದುಕೊಂಡು ಹೋಗಿ ವಾಪಸ್ ಕೊಡದೆ ವಂಚಿಸಿದ್ದೇ ಘಟನೆಗೆ ಕಾರಣ ಎಂಬುದು ತಿಳಿದುಬಂದಿದೆ.
ಸಂತೋಷ್ ಕುರಡೇಕರ್ ಡೆತ್ನೋಟ್ನಲ್ಲೇನಿದೆ?
ಸಂತೋಷ್ ಕುರಡೇಕರ್ ಬರೆದಿಟ್ಟ ಡೆತ್ ನೋಟ್ ಪೊಲೀಸರಿಗೆ ಲಭ್ಯವಾಗಿದೆ. ಅದರಲ್ಲಿ, ‘‘ನಾನು ಬಹಳಷ್ಟು ಜನರ ಬಳಿ ಚೀಟಿ ವ್ಯವಹಾರ ಮಾಡಿಸಿದ್ದೆ. ಹಲವರಿಗೆ ಇದೇ ಚೀಟಿ ಹಣ ನೀಡಬೇಕಾಗಿತ್ತು. ವಡಗಾವಿಯ ಗೊಲ್ಡ್ ಸ್ಮಿತ್ ರಾಜು ಕುಡತರ್ಕರ್ ಬಳಿ ಚಿನ್ನ ನೀಡಿದ್ದೆ. ಬೇರೆಯವರ ಜನರಿಂದ ಪಡೆದು ರಾಜುಗೆ 500ಗ್ರಾಂ ಚಿನ್ನ ನೀಡಿದ್ದೆ. ವಾಪಾಸ್ ಚಿನ್ನ ಕೇಳಿದರೆ ಅವನ ಹೆಂಡತಿ ಹಾಗು ರಾಜು ಸೇರಿ ಧಮಕಿ ಹಾಕಿದ್ದಾರೆ. ಅದಲ್ಲದೇ ಚಿನ್ನ ತೆಗೆದುಕೊಂಡು ಊರು ಬಿಟ್ಟಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ನನ್ನ ಮಾನ ಹರಾಜು ಮಾಡಿದ್ದಾರೆ. ಎರಡರಿಂದ ಮೂರು ಕೆಜಿ ಚಿನ್ನ ತೆಗೆದುಕೊಂಡು ಓಡಿ ಹೋಗಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದರಿಂದ ನನಗೆ ಬದುಕಲು ಕಷ್ಟವಾಗಿದೆ. ಹಲವಾರು ಜನ ನನ್ನ ಮನಗೆ ಬಂದು ಟಾರ್ಚರ್ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಪೊಲೀಸರು ರಾಜುವಿನಿಂದ ಚಿನ್ನ ಮರಳಿ ಪಡೆದು ಜನರಿಗೆ ನೀಡಬೇಕು. ಮೋಸ ಮಾಡಿದ ರಾಜುಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ವಿನಂತಿ’’ ಎಂದು ಉಲ್ಲೇಖಿಸಿರುವುದು ಗೊತ್ತಾಗಿದೆ.
ಆತ್ಮಹತ್ಯೆಗೆ ತಾಯಿ, ತಂಗಿಯರನ್ನು 2 ಗಂಟೆ ಕಾಲ ಮನವೊಲಿಸಿದ್ದ ಸಂತೋಷ್
ಜನರಿಂದ ತಂದಿದ್ದ ಚಿನ್ನವನ್ನ ರಾಜು ಕುಡತರ್ಕರ್ ಮೇಲೆ ನಂಬಿಕೆಯಿಂದ ಸಂತೋಷ್ ನೀಡಿದ್ದರು. ಆದರೆ, ವಾಪಸ್ ಕೊಡದೆ ಸತಾಯಿಸಿದ್ದರಿಂದ ಮತ್ತು ಇತ್ತ ಹಣ ಪಡೆದ ಜನರಿಂದಲೂ ಕಿರುಕುಳ ಆರಂಭವಾಗಿದ್ದರಿಂದ ತಾಳಲಾರದೆ ಸಂತೋಷ್ ಕುಟುಂಬ ಆತ್ಮಹತ್ಯೆಗೆ ಮುಂದಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ತಾಯಿ ಮತ್ತು ತಂಗಿಯರಿಗೆ ಎರಡು ಗಂಟೆಗಳ ಕಾಲ ಸಂತೋಷ್ ಮನವೊಲಿಕೆ ಮಾಡಿದ್ದರು. ಸಾವೇ ತಮಗೆ ಕೊನೆ ದಾರಿ ಅನ್ನೋದನ್ನ ಕುಟುಂಬಸ್ಥರಿಗೆ ಮನವರಿಕೆ ಮಾಡಲು ಯತ್ನಿಸಿದ್ದರು. ಬಳಿಕ ತಂದಿದ್ದ ವಿಷವನ್ನು ಕುಟುಂಬಸ್ಥರಿಗೆ ನೀಡಿ ಬಳಿಕ ತಾನೂ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ದೇವಸ್ಥಾನಕ್ಕೆ ಹೋದವರು ಮಸಣಕ್ಕೆ: ಕಾಪಾಡಲಿಲ್ಲ ಕೊಲ್ಲಾಪುರದ ಮಹಾಲಕ್ಷ್ಮೀ
ಆದರೆ, ಸುನಂದಾ ಆರಂಭದಲ್ಲಿ ವಿಷ ಕುಡಿಯುವುದಕ್ಕೆ ವಿರೋಧ ಮಾಡಿದ್ದರು. ಹೀಗಾಗಿ ಆಕೆಯನ್ನು ಬಿಟ್ಟು ಮೂರು ಜನ ಮೊದಲು ವಿಷ ಸೇವನೆ ಮಾಡಿದ್ದರು. ಆ ನಂತರ, ಎಲ್ಲರೂ ಹೋದ ಮೇಲೆ ತಾನೇನು ಮಾಡುವುದು ಎಂದು ಕೊನೆಯಲ್ಲಿ ಸುನಂದಾ ವಿಷ ಸೇವಿಸಿದ್ದಾರೆ. ಅವರು ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:01 pm, Wed, 9 July 25







