ಸನ್ನಡತೆ ಆಧಾರದ ಮೇಲೆ ಜೀವಾವಧಿ ಶಿಕ್ಷಿತರ ಬಿಡುಗಡೆ: ಹೊಸ ಬದುಕಿನತ್ತ 31 ಕೈದಿಗಳು
ನಾನಾ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕರ್ನಾಟಕದ 31 ಕೈದಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ 31 ಖೈದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವವಾಗಿ ಬಿಡುಗಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಕಾರಾಗೃಹದಲ್ಲಿ ಉತ್ತಮ ನಡವಳಿಕೆ ತೋರಿ ಕೈದಿಗಳಿಗೆ ಹೊಸ ಬದುಕು ಕಟ್ಟಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ಹಾಗಾದ್ರೆ, ಯಾವ್ಯಾವ ಜೈಲಿನಿಂದ ಎಷ್ಟು ಕೈದಿಗಳು ಬಿಡುಗಡೆಯಾಗಲಿದ್ದಾರೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಮಾರ್ಚ್ 12): ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕರ್ನಾಟಕದ (Karnataka) ವಿವಿಧ ಜೈಲಿನಲ್ಲಿರುವ ಒಟ್ಟು 31 ಕೈದಿಗಳ (Prisoners) ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೈದಿಗಳನ್ನು ಅವರ ‘ಸನ್ನಡತೆ’ಯ ಆಧಾರದ ಮೇಲೆ ಅವಧಿಪೂರ್ವವಾಗಿ ಬಿಡುಗಡೆಗೊಳಿಸಿ ಇಂದು (ಮಾರ್ಚ್ 12) ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದ ಕೈದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಮಾನವೀಯ ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ನಾಳೆ (ಮಾರ್ಚ್ 13) 31 ಕೈದಿಗಳು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮಹಾನಿರ್ದೇಶಕರು ಸಲ್ಲಿಸಿದ ಪ್ರಸ್ತಾವನೆಯನ್ನು ಆಧರಿಸಿ, ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಒಟ್ಟು 54 ಜೀವಾವಧಿ ಶಿಕ್ಷೆ ಕೈದಿಗಳ ಪ್ರಕರಣಗಳನ್ನು ಕೂಲಂಕಷವಾಗಿ ಚರ್ಚಿಸಲಾಗಿದ್ದು, ಸಮಿತಿಯು ಪರಿಶೀಲಿಸಿದ 54 ಪ್ರಕರಣಗಳ ಪೈಕಿ ಬಿಡುಗಡೆಗೆ 31 ಮಂದಿಯನ್ನು ಶಿಫಾರಸ್ಸು ಮಾಡಲಾಗಿತ್ತು. ಇನ್ನುಳಿದಂತೆ 21 ಕೈದಿಗಳ ಬಿಡುಗಡೆ ಅರ್ಜಿಯನ್ನು ತಿರಸ್ಕರಿಸಲಾಗಿದೆ. 2 ಪ್ರಕರಣಗಳು ಕೇಂದ್ರ ಗೃಹ ಸಚಿವಾಲಯದ ಅನುಮೋದನೆಗಾಗಿ ಬಾಕಿ ಉಳಿದಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಜೈಲುಗಳಲ್ಲಿ ಅಕ್ರಮ ಚಟುವಟಿಕೆ ತಡೆಗೆ ಅಲೋಕ್ ಕುಮಾರ್ ದಿಟ್ಟ ಕ್ರಮ: ಕೈದಿಗಳ ಭೇಟಿಗೆ ಹೊಸ ರೂಲ್ಸ್
ಸಂವಿಧಾನವು ರಾಜ್ಯಪಾಲರಿಗೆ ಶಿಕ್ಷೆಗೊಳಗಾದ ಕೈದಿಗಳ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ಅಥವಾ ಕ್ಷಮಾದಾನ ನೀಡುವ ವಿಶೇಷ ಅಧಿಕಾರವನ್ನು ನೀಡಿದೆ. ದೀರ್ಘಕಾಲ ಜೈಲುವಾಸ ಅನುಭವಿಸಿ, ಪಶ್ಚಾತ್ತಾಪದೊಂದಿಗೆ ಉತ್ತಮ ನಡವಳಿಕೆ ರೂಢಿಸಿಕೊಂಡ ಕೈದಿಗಳನ್ನು ಸಮಾಜಕ್ಕೆ ಮರಳಿಸುವುದು ಹಾಗೂ ಅವರ ಕುಟುಂಬದ ಪುನರ್ವಸತಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಪ್ರಮುಖ ನೀತಿಗಳಲ್ಲಿ ಒಂದಾಗಿದೆ. ಈ ಆಶಯದಡಿಯೇ ಬಿಡುಗಡೆ ಮಾಡಲಾಗುತ್ತಿದೆ.
ಯಾವ ಕಾರಾಗೃಹದಿಂದ ಎಷ್ಟು ಕೈದಿಗಳ ಬಿಡುಗಡೆ?
- ಬೆಂಗಳೂರು ಕೇಂದ್ರ ಕಾರಾಗೃಹ: 14 ಕೈದಿಗಳು
- ವಿಜಯಪುರ: 5 ಕೈದಿಗಳು
- ಬಳ್ಳಾರಿ: 3 ಕೈದಿಗಳು
- ಮೈಸೂರು: 2 ಕೈದಿಗಳು
- ಬೆಳಗಾವಿ: 2 ಕೈದಿಗಳು
- ಕಲಬುರಗಿ: 2 ಕೈದಿಗಳು
- ಶಿವಮೊಗ್ಗ (ಪುರುಷ ಮತ್ತು ಮಹಿಳಾ ವಿಭಾಗ): 2 ಕೈದಿಗಳು
- ಧಾರವಾಡ: 1 ಕೈದಿ
ಅವಧಿ ಪೂರ್ವ ಬಿಡುಗಡೆಯಾಗುತ್ತಿರುವ ಕೈದಿಗಳು
ಶ್ರೀನಿವಾಸ್ ಅಲಿಯಾಸ್ ಡ್ರೈವರ್ ಶ್ರೀನಿವಾಸ್, ಬಾಲರಾಜು, ವೆಂಕಟೇಶ್, ರಂಜಿತ್ @ ಬಟ್ಟ, ಭುವನೇಶ್ವರ ಟಿಪಿ, ಛತ್ರಪತಿ ನಾಯಕ್, ಲಿಂಗರಾಜು, ಶ್ರೀನಿವಾಸ್ ಮೂರ್ತಿ, ಯಮನಪ್ಪ, ನಿಲಕಂಠಾಚಾರ್ @ ಶಂಕರ್, ಬಾಬು, ರಾಜಾಚಾರಿ, ನಾರಾಯಣಗೌಡ, ವೆಂಕಟೇಶ್, ಚಂದ್ರಮ್ಮ, ತುಕಾರಾಮ್, ಜಯಮ್ಮ, ಸುಭಾಷ್, ತಿಮ್ಮಪ್ಪ, ಅಶೋಕ್, ಶಿವಪ್ಪ, ಆನಂದ, ಪ್ರಕಾಶ್, ಸುರೇಶ್, ಹೆಚ್ಕೆ ರವಿಕುಮಾರ್, ಜಿ.ಎಲ್ ಮೋಹನ್ ಕುಮಾರ್, ಮಂಜೆ ನಾಯ್ಕ್, ಲಕ್ಷ್ಮಿ ಕಾಂತ್, ಸರಸ್ವತಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:19 pm, Thu, 12 March 26
