AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; ಆಸ್ಪತ್ರೆಗೆ ಭೇಟಿ ನೀಡಿದ ದೆಹಲಿ ಬಿಜೆಪಿ ನಿಯೋಗ

ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಆಸ್ಪತ್ರೆಗೆ ದೆಹಲಿ ಬಿಜೆಪಿ ನಿಯೋಗ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿ ಮಾಹಿತಿ ಕಲೆಹಾಕುತ್ತಿದೆ. ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ತಂಡ ಕೂಡ ಭೇಟಿ ನೀಡಿದೆ.

ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; ಆಸ್ಪತ್ರೆಗೆ ಭೇಟಿ ನೀಡಿದ ದೆಹಲಿ ಬಿಜೆಪಿ ನಿಯೋಗ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ದೆಹಲಿ ಬಿಜೆಪಿ ನಿಯೋಗ
Sahadev Mane
| Updated By: Rakesh Nayak Manchi|

Updated on:Dec 16, 2023 | 11:26 AM

Share

ಬೆಳಗಾವಿ, ಡಿ.16: ಜಿಲ್ಲೆಯ (Belagavi) ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ದೆಹಲಿ ಬಿಜೆಪಿ (BJP) ನಿಯೋಗ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತ ಮಹಿಳೆಯ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದೆ. ಬಿಜೆಪಿ ಸತ್ಯ ಶೋಧನಾ ತಂಡದಲ್ಲಿ ಸಂಸದರಾದ ಅಪರಾಜಿತ್ ಸಾರಂಗಿ, ಸುನೀತಾ ದುಗ್ಗಲ್, ರಂಜಿತಾ ಕೋಳಿ, ಲಾಕೆಟ್ ಚಟರ್ಜಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಕ್ರಾ ಇದ್ದಾರೆ. ಸದ್ಯ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ನಿಯೋಗ ಬಳಿಕ ಘಟನಾ ಸ್ಥಳ ವಂಟಮೂರಿ ಹಾಗೂ ಕಾಕತಿ ಪೊಲೀಸ್ ಠಾಣೆಗೆ ಭೇಟಿ ನೀಡಲಿದೆ.

ದಲಿತ ಮಹಿಳೆಯ ಮೇಲಿನ ಅಮಾನವೀಯ ಘಟನೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಇಂದು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲಾ ಅಂತಾ ಆರೋಪಿಸಿ ಪ್ರತಿಭಟನೆ ನಡೆಸಲಿದೆ. ಪ್ರಕರಣದಲ್ಲಿ ಕೇವಲ ಎಂಟು ಆರೋಪಿಗಳನ್ನು ಬಂಧಿಸಿ ಉಳಿದ ಆರೋಪಿಗಳ ಬಂಧನ ಮಾಡದ ಪೊಲೀಸರ ವಿರುದ್ಧವೂ ಆಕ್ರೋಶ ಹೊರಹಾಕಲಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ನೀಡಿದ ಮಾನವ ಹಕ್ಕುಗಳ ಆಯೋಗ

ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕರೆ ಕೊಟ್ಟಿದ್ದಾರೆ. ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಬೆಳಗಾವಿಯಲ್ಲೇ ಮುಖ್ಯಮಂತ್ರಿ ಇದ್ದರೂ ಸಂತ್ರಸ್ತ ಮಹಿಳೆಯನ್ನು ಭೇಟಿಯಾಗದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಈ ಎಲ್ಲ ವಿಚಾರಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ಗೆ ಡ್ಯಾಮೇಜ್ ಮಾಡಲು ಬಿಜೆಪಿ ಪ್ಲ್ಯಾನ್ ಮಾಡಿಕೊಂಡಿದೆ.

ಬಿಮ್ಸ್ ಆಸ್ಪತ್ರೆಗೆ ಬಿಜೆಪಿ ಸತ್ಯಶೋಧನಾ ತಂಡ ಭೇಟಿ ಹಿನ್ನೆಲೆ ಸಂತ್ರಸ್ತೆ ಚಿಕಿತ್ಸೆ ಪಡೆಯುತ್ತಿರುವ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಎಪಿಎಂಸಿ ಠಾಣೆಯ ಸಿಪಿಐ, ಮಹಿಳಾ ಪಿಎಸ್ಐ, ಸಿಬ್ಬಂದಿಯಿಂದ ಭದ್ರತೆ ಕಲ್ಪಿಸಲಾಗಿದೆ.

ಬಿಜೆಪಿ ಪ್ರತಿಭಟನೆ ಕರೆ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ

ಪ್ರಕರಣ ಸಂಬಂಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಕರೆ ಕೊಡುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಸಂಜೆಯೇ ಸಂತ್ರಸ್ತ ಮಹಿಳೆಗೆ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೂ ಐವತ್ತು ಸಾವಿರ ರೂ. ಪರಿಹಾರ ಘೋಷಿಸಿದೆ.

ಘಟನೆ ನಡೆದ ಗ್ರಾಮಕ್ಕೆ ನಿನ್ನೆ ಸಂಜೆ ಸ್ಥಳೀಯ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ ಸಂತ್ರಸ್ತ ಮಹಿಳೆಯ ಕುಟುಂಬಸ್ಥರಿಂದ ಮಾಹಿತಿ ಪಡೆದರು. ಇದರ ಬೆನ್ನಲ್ಲೇ ತಡವಾಗಿ ಘಟನಾ ಸ್ಥಳಕ್ಕೆ ಆಗಮಿಸಿದ ಕಾಕತಿ ಠಾಣೆಯ ಪೊಲೀಸ್ ಇನ್​ಸ್ಪೆಕ್ಟರ್​ ವಿಜಯ್ ಸಿನ್ನೂರ್ ಅವರನ್ನು ಅಮಾನತು ಮಾಡಿದ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಆದೇಶಿಸಿದ್ದರು.

ಬೆಳಗಾವಿಗೆ ರಾಷ್ಟ್ರೀಯ ಮಹಿಳಾ ಆಯೋಗ, ಪರಿಶಿಷ್ಟ ಪಂಗಡಗಳ ಆಯೋಗ ತಂಡ

ರಾಷ್ಟ್ರೀಯ ಮಹಿಳಾ ಆಯೋಗ ತಂಡ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿದೆ. ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ತಂಡ ಕೂಡ ಆಸ್ಪತ್ರೆಗೆ ಭೇಟಿ ನೀಡಿದೆ. ಆಯೋಗದ ಉಪ ನಿರ್ದೇಶಕ ಆರ್.ಕೆ.ದುಬೆ, ಹಿರಿಯ ತನಿಖಾಧಿಕಾರಿ ಅಮೃತಾ ಸೋಲಂಕಿ, ವಿಶೇಷ ತನಿಖಾಧಿಕಾರಿ ರಾಧಾಕಾಂತ್ ತ್ರಿಪಾಠಿ ತಂಡದಲ್ಲಿದ್ದಾರೆ.

ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಂಸದೆ ಮಂಗಳಾ ಅಂಗಡಿ ಸಂತ್ರಸ್ತ ಮಹಿಳೆಯ ಆರೋಗ್ಯ ವಿಚಾರಿಸಿದರು. ಇದರ ಬೆನ್ನಲ್ಲೇ ಬೆಳಗಾವಿ ಮೇಯರ್ ಶೋಭಾ ಸೋಮನಾಚೆ ಅವರು ಭೇಟಿ ನೀಡಿ ಸಂತ್ರಸ್ತೆಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಈ ವೇಳೆ ಉಪ ಮೇಯರ್ ರೇಷ್ಮಾ ಪಾಟೀಲ್ ಸೇರಿದಂತೆ ಬಿಜೆಪಿ ಕಾರ್ಯಕರ್ತೆಯರು ಜೊತೆಗಿದ್ದರು.

ಕಣ್ಣೀರಿಟ್ಟ ಸಂತ್ರಸ್ತೆ ಮಹಿಳೆ

ಘಟನೆ ಕುರಿತು ಸಂತ್ರಸ್ತ ಮಹಿಳೆಯಿಂದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡೆಲಿನಾ ಅವರು ಮಾಹಿತಿ ಕಲೆ ಹಾಕುತ್ತಿದ್ದಾರೆ.  ರವಿವಾರ ರಾತ್ರಿ ಹೇಗೆ ಘಟನೆ ಸಂಭವಿಸಿತು ಅನ್ನೋದನ್ನ ವಿವರಿಸುತ್ತಿದ್ದಾಗ ಸಂತ್ರಸ್ತೆ ಮಹಿಳೆ ಕಣ್ಣೀರು ಹಾಕಿದರು. ಘಟನೆಯ ದಿನ ಪೊಲೀಸರು ಬರದೇ ಇದ್ದಿದ್ದರೆ ಕೊಂದೇ ಬಿಡುತ್ತಿದ್ದರು ಎಂದಿದ್ದಾರೆ. ಸದ್ಯ ಮಹಿಳೆ ಹೇಳುತ್ತಿರುವ ಎಲ್ಲಾ ಹೇಳಿಕೆಗಳನ್ನು ಡೆಲಿನಾ ಅವರು ದಾಖಲಿಸಿಕೊಳ್ಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:16 am, Sat, 16 December 23