ಮೇಲೆ ಉರಿ ಬಿಸಿಲು, ಆದರೂ 9 ದಿನಗಳ ಕಾಲ ಚಪ್ಪಲಿಯನ್ನೂ ಹಾಕದೆ ಗ್ರಾಮದಲ್ಲಿ ಜನರ ಓಡಾಟ, ದೀಪ ಹೊತ್ತ ಮಹಿಳೆಯರಿಂದ ಜಾತ್ರೆ ಸಂಭ್ರಮ

|

Updated on: Apr 12, 2023 | 11:18 AM

Jadigenahalli: ಜಡಿಗೇನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಕರಗದಮ್ಮಗೆ ವಿಶಿಷ್ಟ ಜಾತ್ರೆ ನಡೆಯಿತು. ಕೊರೊನಾ ಕಾರಣ ಜಾತ್ರೆಗೆ ಬ್ರೇಕ್ ಬಿದ್ದಿತ್ತು. ಆದರೆ ನಿನ್ನೆ ಮಂಗಳವಾರ ಅದ್ದೂರಿ ವಿಶಿಷ್ಟ ಜಾತ್ರೆಯನ್ನ ಗ್ರಾಮಸ್ಥರು ಭಕ್ತಿ ಭಾವದಿಂದ ಆಚರಣೆ ಮಾಡಿದರು.

ಮೇಲೆ ಉರಿ ಬಿಸಿಲು, ಆದರೂ 9 ದಿನಗಳ ಕಾಲ ಚಪ್ಪಲಿಯನ್ನೂ ಹಾಕದೆ ಗ್ರಾಮದಲ್ಲಿ ಜನರ ಓಡಾಟ, ದೀಪ ಹೊತ್ತ ಮಹಿಳೆಯರಿಂದ ಜಾತ್ರೆ ಸಂಭ್ರಮ
ಜಡಿಗೇನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಕರಗದಮ್ಮಗೆ ವಿಶಿಷ್ಟ ಜಾತ್ರೆ
Follow us on

ಎಲ್ಲೆಡೆ ಬಿಸಿಲಿನ ತಾಪಮಾನ ತಾರಕಕ್ಕೇರಿದ್ದು ಜನ ರಸ್ತೆ ಮೇಲೆ ಓಡಾಡುವುದಕ್ಕೂ ಭಾರೀ ಯೋಚಿಸುಂತಹ ಪರಿಸ್ಥಿತಿ ಸುತ್ತಮುತ್ತಲ ವಾತಾವರಣದಲ್ಲಿದೆ. ಆದ್ರೆ ಇಷ್ಟು ಉರಿ ಬಿಸಿಲಿನ ನಡುವೆಯೂ ಇಲ್ಲೊಂದು ಗ್ರಾಮದಲ್ಲಿ ಮಾತ್ರ ಕಳೆದ 9 ದಿನಗಳಿಂದ ಕಾಲಿಗೆ ಚಪ್ಪಲಿ ಸಹ ಹಾಕಿಕೊಳ್ಳದೆ ಜನರು ಓಡಾಡ್ತಿದ್ದು, 15 ವರ್ಷಗಳ ಬಳಿಕ ಕಠಿಣ ವ್ರತದ ಜಾತ್ರೆಯನ್ನ ಸಾವಿರಾರು ಜನ ಸೇರಿ ಮಾಡ್ತಿದ್ದಾರೆ. ಅದು ಎಲ್ಲಿ ಅನ್ನೂದನ್ನ ತಿಳಿಯಲು ಈ ಸ್ಟೋರಿ ಓದಿ. ತಲೆ ಮೇಲೆ ಸೂರ್ಯ ನೆತ್ತಿ ಸುಡುವಂತೆ ರಣ ರಣ ಆರ್ಭಟಿಸುತ್ತಿದ್ದಾನೆ, ಗ್ರಾಮದ ರಸ್ತೆಗಳೆಲ್ಲ ಬಿಸಿಲಿನ ಬೇಗೆಗೆ ಬೆಂದಿದ್ದು, ಜನರು ಮಾತ್ರ ಚಪ್ಪಲಿಯೂ ಇಲ್ಲದೆ ಓಡಾಡ್ತಿದ್ದಾರೆ. ಇನ್ನು ಮತ್ತೊಂದೆಡೆ ತಲೆಯ ಮೇಲೆ ಮಹಿಳೆಯರು ದೀಪಗಳನ್ನ ಹೊತ್ತು ಸಾಗ್ತಿದ್ರೆ ಇತ್ತ ಪುರುಷರು ಕಬ್ಬಿನ ಜಳಕ್ಕೆ ಸೀರೆ ಉಟ್ಟು ಗ್ರಾಮದಲ್ಲಿ ರೌಂಡ್ಸ್ ಹಾಕ್ತಿದ್ದು ನೋಡುಗರು ಭಕ್ತಿಯಿಂದ ನಮಿಸುತ್ತಿದ್ದಾರೆ. ಮಗದೊಂದೆಡೆ 15 ವರ್ಷಗಳ ಬಳಿಕದ ಜಾತ್ರೆಗೆ ನೂರಾರು ಕುರಿಗಳು ಬಂದಿದ್ದು ಬಾಡೂಟಕ್ಕೆ ಆಹಾರವಾಗಲು ಮಂದೆಯಲ್ಲಿ ನಿಂತಿವೆ. ಅಂದಹಾಗೆ ಇಂತಹ ಅಪರೂಪದ ವಿಶಿಷ್ಟ ಜಾತ್ರೆ (Special Jaathre Village fair) ನಡೆಯುತ್ತಿರುವುದು ರಾಜಧಾನಿ ಪಕ್ಕದಲ್ಲೇ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಗ್ರಾಮದಲ್ಲಿ (Jadigenahalli, Hoskote).

ಹೌದು ಹಲವು ವರ್ಷಗಳಿಂದ ಜಡಿಗೇನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಕರಗದಮ್ಮಗೆ ಈ ರೀತಿ ವಿಶಿಷ್ಟ ಜಾತ್ರೆ ಆಚರಿಸಿಕೊಂಡು ಬರ್ತಿದ್ದಾರೆ. ಆದ್ರೆ ಕಳೆದ ಬಾರಿ ಕೊರೊನಾ ಬಂದಿದ್ದ ಕಾರಣ ಈ ಜಾತ್ರೆಗೆ ಬ್ರೇಕ್ ಬಿದ್ದಿದ್ದು ನಿನ್ನೆ ಮಂಗಳವಾರ ಅದ್ದೂರಿ ವಿಶಿಷ್ಟ ಜಾತ್ರೆಯನ್ನ ಗ್ರಾಮಸ್ಥರು ಭಕ್ತಿ ಭಾವದಿಂದ ಆಚರಣೆ ಮಾಡಿದರು. ಗ್ರಾಮದ ತುಂಬಾ ರಸ್ತೆಗಳಲ್ಲಿ ವಿವಿಧ ಬಣ್ಣದ ರಂಗೋಲಿಗಳನ್ನ ಹಾಕಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ತೀರ್ಥ ಪ್ರಸಾದ ವಿನಿಯೋಗ ಮಾಡುವ ಮೂಲಕ ಕರಗದಮ್ಮನ ಜಾತ್ರೆಯಲ್ಲಿ ಭಕ್ತಿಯ ಪರಾಕಾಷ್ಠೆಯನ್ನ ಮೆರೆದ್ರು.

ಇದನ್ನೂ ಓದಿ:  ತಮ್ಮ ಏರಿಯಾದ ಸಮಸ್ಯೆಗಳಿಗೆ ಪರ್ಯಾಯ ಮಾರ್ಗ ಕಂಡುಕೊಂಡು ಮಾದರಿಯಾದ ಬ್ರೂಕ್‌ಫೀಲ್ಡ್ ಲೇಔಟ್ ನಿವಾಸಿಗಳು

1950 ರಲ್ಲಿ ಆರಂಭವಾಗಿದೆ ಎನ್ನಲಾದ ಈ ಜಾತ್ರೆಯಲ್ಲಿ ಅಂದು ಗ್ರಾಮಗಳಲ್ಲಿ ಪ್ಲೇಗ್ ಮತ್ತು ಕಾಲರಾ ರೋಗಗಳಿದ್ದ ಕಾರಣ ಚಪ್ಪಲಿ ಮತ್ತು ವಾಹನಗಳು ಓಡಾಡದೆ 9 ದಿನಗಳ ಕಾಲ ಗ್ರಾಮದ ಸುತ್ತಾ ದಿಗ್ಬಂದನ ಹಾಕಿ ಜಾತ್ರೆ ಶುರು ಮಾಡಿದರಂತೆ. ಹೀಗಾಗಿ ಅಂದು ಆರಂಭವಾದ ಜಾತ್ರೆ ಪ್ರತಿ 9 ವರ್ಷಕ್ಕೊಮ್ಮೆ ಇದೇ ರೀತಿ ನಡೆಸಿಕೊಂಡು ಬರ್ತಿದ್ದು ಈ ಬಾರಿಯೂ ಉರಿ ಬಿಸಿಲಿನ ನಡುವೆ ಜನ 9 ದಿನಗಳ ಕಾಲ ಚಪ್ಪಲಿ ಹಾಕಿಕೊಳ್ಳದೆ ಕಠಿಣ ವ್ರತ ನಡೆಸಿ ಆಚರಣೆ ಮಾಡಿದ್ರು. ಜತೆಗೆ ಗ್ರಾಮದಲ್ಲಿ ಜಾತ್ರೆ ನಡೆಯುವ 9 ದಿನಗಳ ಕಾಲ ಅಂಟು-ಮುಟ್ಟು ತಗಲದಂತೆ ಗ್ರಾಮಸ್ಥರು ಬೇರೆಯವರು ಊರಿಗೆ ಬರುವುದನ್ನು ನಿಷೇಧಿಸಿದ್ದು ಇಂದು ಗುರುವಾರದ ಬಾಡೂಟಕ್ಕೆ ಇಂದೇ ನೂರಾರು ಕುರಿಗಳನ್ನ ತಂದು ದೇವಾಲಯದ ಮುಂದೆ ಕಡಿಯುವ ಮೂಲಕ ಹಿರಿಯರು ನಡೆಸಿಕೊಂಡು ಬಂದಿದ್ದ ಜಾತ್ರೆಯನ್ನ 15 ವರ್ಷಗಳ ಬಳಿಕ ಮುಂದುವರೆಸಿದ್ರು.

ಇನ್ನು ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಅನಾದಿ ಕಾಲದಿಂದಲೂ ನಡೆಸಿಕೊಂಡು ಬರ್ತಿರುವ ಈ ಜಾತ್ರೆಗೆ ಈ ಬಾರಿಯೂ ಸಾವಿರಾರು ಜನರು ಉರಿ ಬಿಸಿಲಿನ ನಡುವೆ ಚಪ್ಪಲಿಯನ್ನೂ ಧರಿಸದೆ ಆಗಮಿಸಿ ದೇವರಲ್ಲಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿ ಸಂಭ್ರಮಿಸಿದರು.

ವರದಿ: ನವೀನ್, ಟಿವಿ 9, ದೇವನಹಳ್ಳಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ