
ಬೆಂಗಳೂರು, ಅ.24: ಬೆಂಗಳೂರಿನ ಶ್ರೀರಾಂಪುರ (Srirampura Metro) ಮೆಟ್ರೋ ನಿಲ್ದಾಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಂದ ವ್ಯಕ್ತಿಯೊಬ್ಬ ಪೆಟ್ರೋಲ್ ಕದಿಯುತ್ತಿದ್ದಿರುವ ಘಟನೆ ಮಂಗಳವಾರ (ಅ.21) ನಡೆದಿದ್ದು, ತಡೆಯಲು ಬಂದ ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ ಮೂವರು ಭದ್ರತಾ ಸಿಬ್ಬಂದಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡವರನ್ನು ಗಿರೀಶ್ (ಗೃಹರಕ್ಷಕ ದಳದ ಸಿಬ್ಬಂದಿ), ಚೇತನ್ ಕುಮಾರ್ ಮತ್ತು ಶಂಕರ್ ಎಂದು ಗುರುತಿಸಲಾಗಿದ್ದು, ಇದರಲ್ಲಿ ಇಬ್ಬರೂ ಮೆಟ್ರೋ ಭದ್ರತಾ ಸಿಬ್ಬಂದಿ ಎಂದು ಹೇಳಲಾಗಿದೆ.
ಇನ್ನು ಈ ಬಗ್ಗೆ ಪೊಲೀಸರು ಹೇಳಿರುವ ಪ್ರಕಾರ, ಕಾನ್ಕೋರ್ಸ್ ಮಟ್ಟದಲ್ಲಿ ನಿಯೋಜನೆಗೊಂಡಿದ್ದ ಗಿರೀಶ್ ಪಾರ್ಕಿಂಗ್ ಪ್ರದೇಶದಲ್ಲಿ ಆರೋಪಿ ವಾಹನಗಳಿಂದ ಪೆಟ್ರೋಲ್ ತೆಗೆಯುತ್ತಿದ್ದನ್ನು ನೋಡಿದ್ದಾರೆ. ತಕ್ಷಣ ಇತರ ಮೆಟ್ರೋ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ಈ ವೇಳೆ ಭದ್ರತಾ ಮೇಲ್ವಿಚಾರಕರು ಮತ್ತು ಇತರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆತನನ್ನು ಹಿಡಿದಿದ್ದರೆ. ಈ ವೇಳೆ ಆತ ತಪ್ಪಿಕೊಳ್ಳಲು ಸಿಬ್ಬಂದಿಗಳ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಸಿಬ್ಬಂದಿಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಇನ್ನು ಈ ಪೆಟ್ರೋಲ್ ಕದಿಯುತ್ತಿದ್ದ ವ್ಯಕ್ತಿಯನ್ನು ವಿನಾಯಕ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಸಾರ್ವಜನಿಕವಾಗಿ ಕ್ಯಾಬ್ ಡ್ರೈವರ್ಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್
ಆರೋಪಿ ವಿನಾಯಕನನ್ನು ಶ್ರೀರಾಂಪುರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ, ಮೆಟ್ರೋದಲ್ಲಿ ಇಂತಹ ಕೆಲಸವನ್ನು ಸುಮಾರು ದಿನಗಳಿಂದ ಮಾಡುತ್ತಿದ್ದಾನೆ ಎಂದು ಅನ್ನಿಸುತ್ತದೆ. ಮೆಟ್ರೋ ಭದ್ರತಾ ಸಿಬ್ಬಂದಿಗಳು, ಆತ ಪೆಟ್ರೋಲ್ ಕದಿಯುತ್ತಿದ್ದ ವೇಳೆ ಹಿಡಿದಿದ್ದಾರೆ. ಆರೋಪಿ ತಪ್ಪಿಸಿಕೊಳ್ಳಲು ಚಾಕುವಿನಿಂದ ಇರಿದು ಗಾಯ ಮಾಡಿದ್ದಾನೆ ಎಂದು ಹೇಳಿದ್ದಾರೆ. ಶ್ರೀರಾಂಪುರ ಪೊಲೀಸರು ವಿನಾಯಕ ವಿರುದ್ಧ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು, ಕ್ರಿಮಿನಲ್ ಬೆದರಿಕೆ ಮತ್ತು ಕಳ್ಳತನ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ