
ಬೆಂಗಳೂರು, (ಆಗಸ್ಟ್ 05) ನಗರದ ಹೆಬ್ಬಾಳ ಫ್ಲೈ ಓವರ್ ( Hebbal flyover) ಮೇಲೆಯೇ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಇದನ್ನು ನಿವಾರಿಸಲು ಪ್ಲೈ ಓವರ್ ಲೂಪ್ ರಾಂಪ್ (Bengaluru’s Hebbal flyover ramp) ನಿರ್ಮಾಣ ಮಾಡಲಾಗಿದ್ದು, ಇದೇ ಆಗಸ್ಟ್ 15ರ ಬಳಿಕ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಈ ಬಗ್ಗೆ ಸ್ವತಃ ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ನಾಗವಾರ ಕಡೆಯಿಂದ ಬರುವ ವಾಹನಗಳು ಈ ಲೂಪ್ ರಾಂಪ್ ಮೇಲೆ ಹತ್ತಿ ಮೇಖ್ರಿ ಸರ್ಕಲ್, ವಿಂಡ್ಸರ್ ಮ್ಯಾನರ್, ವಿಧಾನಸೌಧದ ಕಡೆಗೆ ಸಂಚಾರ ಮಾಡಬಹುದು. ಹೆಬ್ಬಾಳ ಪ್ಲೈ ಓವರ್ ಮೇಲಿನ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಹೊಸದಾಗಿ ಈ ಲೂಪ್ ರಾಂಪ್ ನಿರ್ಮಾಣ ಮಾಡಲಾಗಿದೆ. ಲೂಪ್ ರಾಂಪ್ ಮೂಲಕ ಈ ಮೊದಲು ಇದ್ದ ಹೆಬ್ಬಾಳ ಫ್ಲೈ ಓವರ್ಗೆ ಮತ್ತೊಂದು ಹೊಸ ರಸ್ತೆ ಸೇರ್ಪಡೆಯಾಗಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುವ ರಸ್ತೆಗಳ ಪೈಕಿ ಹೆಬ್ಬಾಳ ಪ್ಲೈ ಓವರ್ ಕೂಡ ಒಂದು.ಏರ್ ಪೋರ್ಟ್ ಗೆ ಹೋಗುವವರು, ಏರ್ ಪೋರ್ಟ್ ನಿಂದ ಬೆಂಗಳೂರು ಸಿಟಿಗೆ ಬರುವವರು ಹೆಬ್ಬಾಳ ಫ್ಲೈ ಓವರ್ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಳ್ಳುತ್ತಿದ್ದರು. ಇದನ್ನು ತಪ್ಪಿಸಲು ಹೊಸದಾಗಿ ಲೂಪ್ ರಾಂಪ್ ಅನ್ನು ನಿರ್ಮಾಣ ಮಾಡಲಾಗಿದೆ. ಈ ಲೂಪ್ ರಾಂಪ್ ಮೂಲಕ ಏರ್ ಪೋರ್ಟ್ ಕಡೆ ಸಂಚರಿಸುವ ವಾಹನಗಳು, ತುಮಕೂರು ರಸ್ತೆಯ ಕಡೆ ಸಂಚರಿಸುವ ವಾಹನಗಳಿಗೆ ಪ್ರತೇಕ ರಸ್ತೆಯ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ವರ್ಷದ ಏಪ್ರಿಲ್ ತಿಂಗಳಿಗೆ ಲೂಪ್ ರಾಂಪ್ ನಿರ್ಮಾಣ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿತ್ತು. ಆದ್ರೆ, ವಿಳಂಬವಾಗಿ ಕಾಮಗಾರಿ ಮುಗಿದಿದ್ದು, ಈಗ ಅಂತಿಮ ಟಚ್ ನೀಡಲಾಗುತ್ತಿದೆ. ಬಹುತೇಕ ಪೂರ್ಣಗೊಂಡಿದ್ದು, ಇದೇ ಆಗಸ್ಟ್ 15ರಂದು ಉದ್ಘಾಟನೆಯಾಗಲಿದೆ. ಹೆಬ್ಬಾಳ ಪ್ಲೈ ಓವರ್ಗೆ ಹೊಸದಾಗಿ ಲೂಪ್ ರಾಂಪ್ ನಿರ್ಮಾಣ ಮಾಡಿರುವುದರಿಂದ ಪೀಕ್ ಅವರ್ ಮತ್ತು ಹಬ್ಬದ ಸಂದರ್ಭಗಳಲ್ಲಿ ಏರ್ ಪೋರ್ಟ್ ಗೆ ಹೋಗುವವರು ಮತ್ತು ಬರುವವರಿಗೆ ಬೇಗನೇ ತಮ್ಮ ಸ್ಥಳ ತಲುಪಲು ಅನುಕೂಲವಾಗುತ್ತೆ.
Published On - 3:28 pm, Tue, 5 August 25