ಕಗ್ಗಲೀಪುರದಲ್ಲಿ ಉದ್ಯಮಿ ಶೂಟೌಟ್ ಪ್ರಕರಣದ ತನಿಖೆಗೆ ಸಾಕ್ಷಿ ಕೊರತೆ: ಬಿ ರಿಪೋರ್ಟ್ ಸಲ್ಲಿಕೆ

Bengaluru news: ಕಗ್ಗಲೀಪುರ ವ್ಯಾಪ್ತಿಯಲ್ಲಿ ನಡೆದಿದ್ದ ಉದ್ಯಮಿ ಪ್ರದೀಪ್ ಶೂಟೌಟ್ ಪ್ರಕರಣವು ಸಾಕ್ಷಿ ಕೊರತೆಯಿಂದಾಗಿ ತನಿಖೆ ಮುಕ್ತಾಯಗೊಳಿಸಲಾಗಿದ್ದು, ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ.

ಕಗ್ಗಲೀಪುರದಲ್ಲಿ ಉದ್ಯಮಿ ಶೂಟೌಟ್ ಪ್ರಕರಣದ ತನಿಖೆಗೆ ಸಾಕ್ಷಿ ಕೊರತೆ: ಬಿ ರಿಪೋರ್ಟ್ ಸಲ್ಲಿಕೆ
ಕಗ್ಗಲೀಪುರದಲ್ಲಿ ಉದ್ಯಮಿ ಶೂಟೌಟ್ ಪ್ರಕರಣ ಸಂಬಂಧ ಬಿ ರಿಪೋರ್ಟ್ ಸಲ್ಲಿದ ತನಿಖಾಧಿಕಾರಿಗಳು
Rakesh Nayak Manchi

Updated on: May 31, 2023 | 7:33 PM

ಬೆಂಗಳೂರು: ನಗರದ ಕಗ್ಗಲೀಪುರ ವ್ಯಾಪ್ತಿಯಲ್ಲಿ ನಡೆದಿದ್ದ ಉದ್ಯಮಿ ಪ್ರದೀಪ್ ಶೂಟೌಟ್ (Shootout) ಪ್ರಕರಣ ಸಂಬಂಧ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಸಾಕ್ಷಿ ಆಧಾರದ ಕೊರತೆ ಹಿನ್ನೆಲೆ ಪ್ರಕರಣದ ತನಿಖೆ ಮುಕ್ತಾಯಗೊಂಡಿದೆ. ರೆಸಾರ್ಟ್ ಮಾಡುವ ವಿಚಾರದಲ್ಲಿ ಹಣ ಪಡೆದು ಮೋಸ ಮಾಡಿದ್ದಾಗಿ ಆರೋಪಿಸಿ ಉದ್ಯಮಿ ಪ್ರದೀಪ್ ಅವರು ಡೆತ್​ನೋಟ್ ಬರೆದಿಟ್ಟು ಗುಂಡು ಹಾರಿಸಿ ಆತ್ಮಹತ್ಯೆ ‌ಮಾಡಿಕೊಂಡಿದ್ದರು.

ರೆಸಾರ್ಟ್ ಮಾಡುವ ವಿಚಾರದಲ್ಲಿ ಹಣ ಪಡೆದು ಮೋಸ ಮಾಡಿದ್ದಾಗಿ ಡೆತ್​ನೋಟ್ ಬರೆದಿಟ್ಟು ಬೆಂಗಳೂರು ದಕ್ಷಿಣ ತಾಲೂಕಿನ ನೆಟ್ಟಿಗೆರೆ ಬಳಿ ಕಾರು ನಿಲ್ಲಿಸಿ ತಲೆಗೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಹೆಸರು ಪ್ರಸ್ತಾಪವಾಗಿತ್ತು. ಮೃತ ಪ್ರದೀಪ್ ಪತ್ನಿ ನೀಡಿದ್ದ ದೂರಿನ ಅನ್ವಯ ಲಿಂಬಾವಳಿ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ಸಂಬಂಧ ರಾಮನಗರ ಡಿವೈಎಸ್​ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿತ್ತು. ಅಲ್ಲದೆ, ಕೇಸ್ ಮುಚ್ಚಿಹಾಕುವ ಹುನ್ನಾರ, ಪ್ರಭಾವಿಗಳ ಕರೆಬರುತ್ತಿರುವ ಆರೋಪವೂ ಕೇಳಿಬಂದಿತ್ತು.

ಇದನ್ನೂ ಓದಿ: ಗ್ಯಾಂಗ್​ಸ್ಟರ್ ತಿಲ್ಲು ತಾಜ್​ಪುರಿಯಾ ಆಪ್ತನ ಸಹೋದರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಏನಿದು ಪ್ರಕರಣ?

ತನಗಾದ ಅನ್ಯಾಯ ಸಮಾಜಕ್ಕೆ ಗೊತ್ತಾಗಬೇಕು ಅಂತ ಆತ್ಮಹತ್ಯೆಗೂ ಮುನ್ನ ಪ್ರದೀಪ್ ಒಂದಲ್ಲ ಮೂರು ಡೆತ್​ನೋಟ್​ಗಳನ್ನು ಬರೆದಿಟ್ಟು ನಂತರ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ರೆಸಾರ್ಟ್​​ನಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಭಾಗಿಯಾದ ನಂತರ ಮೂರು ಡೆತ್ ನೋಟ್ ಬರೆದಿದ್ದ ಪ್ರದೀಪ್, ಒಂದನ್ನು ಪತ್ನಿ ನಮಿತಾ ವಾರ್ಡ್ ರೋಮ್​ನಲ್ಲಿಟ್ಟಿದ್ದರು. ಬಳಿಕ ರೆಸಾರ್ಟ್​​ಗೆ ತೆರಳಿ ಸಂಬಂಧಿಕರ ಕಾರಿನ ವೈಪರ್ ಬಳಿ ಒಂದನ್ನ ಇಟ್ಟಿದ್ದರು. ಮೂರನೇ ಡೆತ್​ನೋಟ್​ ಅನ್ನು ತನ್ನ ಕಾರಿನಲ್ಲಿ ಇಟ್ಟುಕೊಂಡಿದ್ದರು. ಡೆತ್ ನೋಟ್ ಜೊತೆಗೆ ಬ್ಯಾಂಕ್ ದಾಖಲೆಗಳನ್ನ ಕೂಡ ಇಟ್ಟಿದ್ದರು. ಆತ್ಮಹತ್ಯೆಗೂ ಮುನ್ನವೇ ಈ ಡೆತ್​ನೋಟ್ ಪ್ರದೀಪ್ ಕುಟುಂಬಸ್ಥರ ಕಣ್ಣಿಗೆ ಬಿದ್ದಿತ್ತು.

ಡೆತ್​ನೋಟ್ ಗಮನಿಸದ ಸಂಬಂಧಿಕರು ಜನವರಿ 1ರ ಸಂಜೆ ಸುಮಾರು 4 ಗಂಟೆಗೆ ರೆಸಾರ್ಟ್​​ನಿಂದ ಹೊರಟಿದ್ದರು. ಅದನ್ನ ಕಂಡ ಪ್ರದೀಪ್, ಸಂಬಂಧಿಕರು ಹೋಗುತ್ತಿದ್ದ ಕಾರನ್ನ ಓವರ್ ಟೇಕ್ ಮಾಡಿ ಮುನ್ನುಗ್ಗಿ ಹೋಗಿದ್ದರು. ಸುಮಾರು ಒಂದು‌ ಕಿ.ಮೀ ದೂರದಲ್ಲಿ‌ ನಿಟ್ಟಿಗೆರೆ ಎಂಬಲ್ಲಿ ಸಂಬಂಧಿಕರು ಹಿಂದೆ ಬರುತ್ತಿರುವುದನ್ನು ಖಾತ್ರಿ ಮಾಡಿಕೊಂಡು ಪಿಸ್ತೂಲ್ ಕೈಗೆತ್ತಿಕೊಂಡು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂಬಂಧಿಕರು ಕಾರಿನ ಬಳಿ ಬಂದು ನೋಡಿದಾಗ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾನು ಆತ್ಮಹತ್ಯೆ ಮಾಡಿಕೊಂಡರೆ ಅನಾಥ ಶವ ಆಗಬಾರದು ಅನ್ನೋ ಕಾರಣಕ್ಕೆ ಪ್ರದೀಪ್ ಇಷ್ಟೇಲ್ಲಾ ಸರ್ಕಸ್ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us