ಬ್ಯಾಂಕ್​ ಸಾಲ ಜಟಾಪಟಿ: ಲೆಕ್ಕಪತ್ರಕ್ಕಾಗಿ ಹೈಕೋರ್ಟ್​ ಮೊರೆ ಹೋದ ವಿಜಯ್​ ಮಲ್ಯ

ಸಂಪೂರ್ಣ ಸಾಲ ತೀರಿದ್ದರೂ ಬ್ಯಾಂಕ್​ಗಳು ಪ್ರಕ್ರಿಯೆ ಮುಂದುವರಿಸಿವೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರವನ್ನು ನೀಡಬೇಕು ಎಂದು ಆಗ್ರಹಿಸಿ ವಿಜಯ್​ ಮಲ್ಯ ಕರ್ನಾಟಕ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, ಬ್ಯಾಂಕ್​ಗಳ ಪರ ವಕೀಲರಿಗೆ ಮಹತ್ವದ ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿದೆ.

ಬ್ಯಾಂಕ್​ ಸಾಲ ಜಟಾಪಟಿ: ಲೆಕ್ಕಪತ್ರಕ್ಕಾಗಿ ಹೈಕೋರ್ಟ್​ ಮೊರೆ ಹೋದ ವಿಜಯ್​ ಮಲ್ಯ
ಹೈಕೋರ್ಟ್​ಗೆ ವಿಜಯ್​ ಮಲ್ಯ ಅರ್ಜಿ
Updated By: ಪ್ರಸನ್ನ ಹೆಗಡೆ

Updated on: Nov 04, 2025 | 5:46 PM

ಬೆಂಗಳೂರು, ನವೆಂಬರ್​ 04: ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗ್ತಿದೆ ಎಂದು ಆರೋಪಿಸಿ ಲೆಕ್ಕಪತ್ರ ಕೋರಿ ವಿಜಯ್​ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನಯ ಹೈಕೋರ್ಟ್ ಏಕಸದಸ್ಯ ಪೀಠ ನಡೆಸಿದೆ. ರಿಟ್ ಅರ್ಜಿಯಲ್ಲಿ ಬ್ಯಾಂಕ್​ಗಳಿಂದ ಲೆಕ್ಕಪತ್ರ ಹೇಗೆ ಕೇಳುತ್ತೀರೆಂದು ವಿಜಯ್ ಮಲ್ಯ ಪರ ವಕೀಲ ಸಜನ್ ಪೂವಯ್ಯಗೆ ಕೋರ್ಟ್​ ಪ್ರಶ್ನೆ ಮಾಡಿದ್ದು, ಆಕ್ಷೇಪಣೆ ಸಲ್ಲಿಸುವಂತೆ ಬ್ಯಾಂಕ್​ಗಳ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್​ 12ಕ್ಕೆ ಮುಂದೂಡಿದೆ.

ವಿಜಯ್​ ಮಲ್ಯ ಪರ ವಕೀಲರ ವಾದವೇನು?

ವಿಜಯ್​ ಮಲ್ಯ ಪರ ವಾದಿಸಿದ ಹಿರಿಯ ವಕೀಲ ಸಜನ್ ಪೂವಯ್ಯ, ಸಾಲ ವಸೂಲಿ ಪ್ರಾಧಿಕಾರ ಹೈಕೋರ್ಟ್ ಅಧೀನದಲ್ಲಿ ಬರುತ್ತದೆ. ಬ್ಯಾಂಕ್​ನವರು ಒಂದು ಹೇಳುತ್ತಾರೆ, ಅಫಿಷಿಯಲ್ ಲಿಕ್ವಿಡೇಟರ್ ಮತ್ತೊಂದು ಹೇಳುತ್ತಾರೆ. ಒಂದು ಕಾಲದಲ್ಲಿ UBHL ವಿಶ್ವದಲ್ಲಿ ಪ್ರಸಿದ್ಧ ಕಂಪನಿಯಾಗಿದ್ದು, ಡಾ.ವಿಜಯ್ ಮಲ್ಯ ಇದರ ನಿರ್ದೇಶಕರಾಗಿದ್ದರು. ಅಲ್ಲದೆ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸುವುದು ಸಾಂವಿಧಾನಿಕ ಹಕ್ಕೆಂದು ಹೇಳಿದ್ದಾರೆ. ಈ ವೇಳೆ ಪ್ರಶ್ನೆ ಮಧ್ಯಪ್ರವೇಶ ಮಾಡಿದ ಪೀಠ, ‘ಸುಪ್ರೀಂ’ನ ನ್ಯಾಯಾಂಗ ನಿಂದನೆ ಕೇಸ್​ನಲ್ಲಿ‌ ಮಲ್ಯ ಹಾಜರಾಗಿಲ್ಲ. ದೇಶದ ವಿವಿಧೆಡೆ ನಡೆದಿರುವ ಕೋರ್ಟ್ ವಿಚಾರಣೆಗೆ ಬಂದಿಲ್ಲ. ಹೀಗಿರುವಾಗ ರಿಟ್ ಸಲ್ಲಿಸುವ ಹಕ್ಕನ್ನು ಹೇಗೆ ಮಂಡಿಸುತ್ತೀರಿ ಎಂದು ಪ್ರಶ್ನಿಸಿದೆ. ವಿಜಯ್ ಮಲ್ಯ ಲಂಡನ್ ಕೋರ್ಟ್ನ ಕಾನೂನು ಪ್ರಕ್ರಿಯೆಗೆ ಒಳಪಟ್ಟಿದ್ದಾರೆ ಎಂದು ಈ ವೇಳೆ ಮಲ್ಯ ಪರ ವಕೀಲರು ವಾದಿಸಿದ್ದಾರೆ.

ಇದನ್ನೂ ಓದಿ: ವಿಜಯ್ ಮಲ್ಯ ಬೇರೆ ಬೇರೆ ದೇಶಗಳಲ್ಲಿ ಹೊಂದಿರುವ ಆಸ್ತಿಗಳೇನು? ಅವುಗಳ ಮೌಲ್ಯವೆಷ್ಟು?

ಬ್ಯಾಂಕ್​ಗಳ ಪರ ವಕೀಲರು ಹೇಳೋದೇನು?

ಇತ್ತ ಬ್ಯಾಂಕ್​ಗಳ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದ್ದು, ಮಲ್ಯ ದೇಶ ತೊರೆದು ದೇಶಭ್ರಷ್ಟರಾಗಿದ್ದಾರೆ. ಅವರು ಮುಗ್ದರಾಗಿದ್ದರೆ ಭಾರತಕ್ಕೆ ಮರಳಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ತಮಗೆ ಬೇಕಾದಾಗ ಮಾತ್ರ ಕೋರ್ಟ್ ಮುಂದೆ ಬರುತ್ತಾರೆಂದು ಆರೋಪಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ಕೋರ್ಟ್​ ವಿಚಾರಣೆಯನ್ನ ನವೆಂಬರ್​ 12ಕ್ಕೆ ಮುಂದೂಡಿದೆ.

ವಿಜಯ್​ ಮಲ್ಯ ಆರೋಪವೇನು?

ತಾನು ಪಾವತಿಸಬೇಕಿದ್ದ 6,200 ಕೋಟಿ ಸಾಲಕ್ಕೆ 14,000 ಕೋಟಿ ವಸೂಲಿ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಹಣಕಾಸು ಸಚಿವರೇ ಲೋಕಸಭೆಗೆ ತಿಳಿಸಿದ್ದು, 10,200 ಕೋಟಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಪ್ರಕ್ರಿಯೆ ಮುಂದುವರಿಸಲಾಗಿದೆ. ಹೀಗಾಗಿ ವಸೂಲಿಯಾದ ಲೆಕ್ಕಪತ್ರವನ್ನು ಬ್ಯಾಂಕ್​ಗಳು ನೀಡಬೇಕು ಎಂಬುದು ವಿಜಯ್​ ಮಲ್ಯ ಆಗ್ರಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.