ಎಲೆಕ್ಟ್ರಿಕ್​​ ವಾಹನ ಬಳಕೆದಾರರಿಗೆ ಬೆಸ್ಕಾಂ ಗುಡ್ ನ್ಯೂಸ್: ಹೆದ್ದಾರಿಗಳ 50 ಕಡೆಗಳಲ್ಲಿ ಚಾರ್ಜಿಂಗ್ ಸ್ಟೇಷನ್ ತೆರೆಯಲು ಸಿದ್ಧತೆ

ಪೆಟ್ರೋಲ್​ ಡೀಸೆಲ್​​, ಸಿಎನ್​ಜಿ ವಾಹನಗಳ ಬಳಿಕ ಎಲೆಕ್ಟ್ರಿಕ್​ ವಾಹನಗಳ ಕ್ರೇಜ್​ ಇತ್ತೀಚೆಗೆ ಹೆಚ್ಚಾಗಿದೆ. ಗೋ ಗ್ರೀನ್​ ಎಂದು ದಿನದಿಂದ ದಿನಕ್ಕೆ ಎಲೆಕ್ಟ್ರಿಕ್​ ವಾಹನಗಳು ಹೆಚ್ಚಾಗಿ ರಸ್ತೆಗೆ ಇಳಿಯುತ್ತಿವೆ. ಆದರೆ ಚಾರ್ಜಿಂಗ್​ ಸ್ಟೇಶನ್​ಗಳು ಮಾತ್ರ ಬೆಂಗಳೂರು ಸಹಿತ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಹೀಗಾಗಿಯೇ ದೂರದ ಪ್ರಯಾಣ ನಡೆಸುವ ಇವಿ ಚಾಲಕರಿಗೆ ಬೆಸ್ಕಾಂ ಸಿಹಿ ಸುದ್ದಿಯೊಂದನ್ನು ನೀಡಿದೆ.

ಎಲೆಕ್ಟ್ರಿಕ್​​ ವಾಹನ ಬಳಕೆದಾರರಿಗೆ ಬೆಸ್ಕಾಂ ಗುಡ್ ನ್ಯೂಸ್: ಹೆದ್ದಾರಿಗಳ 50 ಕಡೆಗಳಲ್ಲಿ ಚಾರ್ಜಿಂಗ್ ಸ್ಟೇಷನ್ ತೆರೆಯಲು ಸಿದ್ಧತೆ
ಸಾಂದರ್ಭಿಕ ಚಿತ್ರ

Updated on: Nov 05, 2025 | 7:33 AM

ಬೆಂಗಳೂರು, ನವೆಂಬರ್ 5: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ವಾಹನಗಳ (Electric Vehicles) ಸಂಖ್ಯೆ ಏರಿಕೆ ಹಿನ್ನೆಲೆ, ವಾಹನಗಳ ಸಂಖ್ಯೆಗೆ ಅನುಗುಣವಾಗಿ ಚಾರ್ಜಿಂಗ್ ಸ್ಟೇಷನ್​ಗಳ ಕೊರತೆ ಎದುರಾಗಿದೆ. ದೂರದ ಪ್ರಯಾಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೂ ಜನರು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ 3.4 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳಿವೆ. ಈ ಪೈಕಿ ದ್ವಿಚಕ್ರ ವಾಹನಗಳು 2.98 ಲಕ್ಷ, ನಾಲ್ಕು ಚಕ್ರ ವಾಹನಗಳು 23,516, ತ್ರಿಚಕ್ರ ವಾಹನಗಳು 18,246 ಇವೆ. ಆದರೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಇರುವುದು ಕೇವಲ 5,960. ಅದರಲ್ಲೂ ಬೆಂಗಳೂರು (Bengaluru) ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಅಭಾವ ತೀವ್ರವಾಗಿದೆ. ಹೀಗಾಗಿ ದೂರದ ಪ್ರಯಾಣ ಮಾಡುವ ಇವಿ ಬಳಕೆದಾರರಿಗೆ ಬೆಸ್ಕಾಂ (BESCOM) ಗುಡ್ ನ್ಯೂಸ್ ಕೊಟ್ಟಿದೆ.

ಎಲ್ಲೆಲ್ಲಿ ಇರಲಿವೆ ಬೆಸ್ಕಾಂ ಚಾರ್ಜಿಂಗ್ ಸ್ಟೇಷನ್?

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ(ಕೆಆರ್​​ಡಿಸಿಎಲ್​) ಅಭಿವೃದ್ಧಿಪಡಿಸಿರುವ 10 ರಾಜ್ಯ ಹೆದ್ದಾರಿಗಳ 30 ಕಡೆಗಳಲ್ಲಿ ಹಾಗೂ ಬೆಂಗಳೂರು-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ (NH-48) 10 ಕಡೆಗಳಲ್ಲಿ 20, ಒಟ್ಟಾರೆ 50 ಚಾರ್ಜಿಂಗ್​ ಸ್ಟೇಷನ್​ಗಳ ನಿರ್ಮಾಣಕ್ಕೆ ಬೆಸ್ಕಾಂ ಒತ್ತು ನೀಡಿದೆ. ಹಳೇಬೀಡು – ಅನೆಚುಕುರ್, ಬೀರೂರು-ದಾವಣಗೆರೆ, ಹಾವೇರಿ-ಸಾಗರ್, ಬಾಗಲಕೋಟೆ-ಬಿಳಿಗಿರಿ ರಂಗನ ಬೆಟ್ಟ, ಸಂಡೂರಿನಿಂದ ಸಿರ್ಗುಪ್ಪಳ ಸೇರಿ 10 ರಾಜ್ಯ ಹೆದ್ದಾರಿಗಳಲ್ಲಿ ಬೆಸ್ಕಾಂ ಚಾರ್ಜಿಂಗ್​ ಸ್ಟೇಶನ್​ಗಳು ಶೀಘ್ರದಲ್ಲೇ ಇವಿ ವಾಹನಗಳ ಬಳಕೆಗೆ ಲಭ್ಯವಾಗಲಿದೆ.

ಇದನ್ನೂ ಓದಿ: ಅಕ್ಟೋಬರ್‌ನಲ್ಲಿ ಅಟೋ ಮಾರುಕಟ್ಟೆ ಶೇಕ್..: ಸೇಲ್ ಆಗಿದ್ದು ಎಷ್ಟು ಕಾರು ಗೊತ್ತೇ?

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೆದ್ದಾರಿಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆಯ ಗುರಿಯನ್ನು ಬೆಸ್ಕಾಂ ಇಟ್ಟುಕೊಂಡಿದೆ. ರಾಜ್ಯದಲ್ಲಿ ಈಗಾಗಲೇ 5,960 ಚಾರ್ಜಿಂಗ್​ ಸ್ಟೇಷನ್​​ಗನ್ನುಳ ಹೊಂದುವ ಮೂಲಕ ದೇಶದಲ್ಲೇ ಮುಂಚೂಣಿಯಲ್ಲಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ