ಬೀದರ್: ಸಿಖ್ಖರ ಪವಿತ್ರ ಸ್ಥಳ ಗುರುನಾನಕ್​ ಝಿರಾ; ಧಾರ್ಮಿಕತೆ ಮತ್ತು ಪರಂಪರೆಗೆ ಹೆಸರುವಾಸಿಯಾದ ದೇವಾಲಯ

| Updated By: preethi shettigar

Updated on: Sep 13, 2021 | 7:42 AM

ಇತಿಹಾಸಕಾರರ ಪ್ರಕಾರ ಗುರುನಾನಕರು ಧರ್ಮ ಪ್ರಚಾರದ ಸಮಯದಲ್ಲಿ ಬೀದರ್​ಗೆ ಬಂದು ನೆಲೆಸಿದ್ದಲ್ಲದೆ, ತಮ್ಮ ದಿವ್ಯಜ್ಞಾನದಿಂದ ಬಳಿಗೆ ಬಂದ ಭಕ್ತರ ಕಷ್ಟ -ಕಾರ್ಪಣ್ಯಯಗಳನ್ನು ಬಗೆಹರಿಸಿದರು.

ಬೀದರ್: ಸಿಖ್ಖರ ಪವಿತ್ರ ಸ್ಥಳ ಗುರುನಾನಕ್​ ಝಿರಾ; ಧಾರ್ಮಿಕತೆ ಮತ್ತು ಪರಂಪರೆಗೆ ಹೆಸರುವಾಸಿಯಾದ ದೇವಾಲಯ
ಸಿಖ್ಖರ ಪವಿತ್ರ ಸ್ಥಳ ಗುರುನಾನಕ್ ಝಿರಾ
Follow us on

ಬೀದರ್: ಮಿನಿ ಪಂಚಾಬ್ ಎಂದು ಕರೆಯಿಸಿಕೊಳ್ಳುವ ಬೀದರ್​ನ ಗುರುನಾನಕ್​ ಝಿರಾ ಒಂದು ಪವಿತ್ರ ಸ್ಥಳವಾಗಿದೆ. ಕರ್ನಾಟಕದಲ್ಲಿಯೇ ಏಕೈಕ ಪ್ರಶಿದ್ಧ ಐತಿಹಾಸಿಕ ಸ್ಥಳವೆಂದು ಇದನ್ನು ಕರೆಯುತ್ತಾರೆ. ದೂರದ ಪಂಜಾಬ್, ಹರಿಯಾಣ, ರಾಜಸ್ಥಾನ ಸೇರಿದಂತೆ ವಿದೇಶಗಳಿಂದಲೂ ಇಲ್ಲಿ ಜನರು ಸಾಗೋರಾಪಾದಿಯಲ್ಲಿ ಹರಿದುಬರುತ್ತಾರೆ. ಇದು ಸಿಖ್ಖರ ಪವಿತ್ರ ಸ್ಥಳವಾಗಿದ್ದು, ಇದನ್ನು ಗುರುದ್ವಾರ ಎಂದು ಕರೆಯಲಾಗುತ್ತದೆ.

ಇಲ್ಲಿನ ಗುರುದ್ವಾರವು ಸಿಖ್ಖರ ಧಾರ್ಮಿಕತೆಗೆ ಮತ್ತು ಅವರ ಪರಂಪರೆಗೆ ಅನುಗುಣವಾಗಿ ನಿರ್ಮಿಸಲಾಗಿದ್ದು, ಇದನ್ನು ಸಿಖ್ಖರ ಪ್ರಥಮ ಗುರುಗಳಾದ ಗುರು ನಾನಕರಿಗೆ ಅರ್ಪಿಸಲಾಗಿದೆ. ಗುರುದ್ವಾರದ ಒಳಗಡೇ ಪ್ರವೇಶಿಸಬೇಕಾದರೆ ಶಿರದ ಮೇಲೆ ವಸ್ತ್ರವನ್ನು ಕಡ್ಡಾಯವಾಗಿ ಧರಿಸತಕ್ಕದ್ದಲ್ಲದೆ, ಪಾದಗಳನ್ನು ನೀರಿನಲ್ಲಿ ತೊಳೆದು ಒಳಗಡೆ ಹೋಗುವ ಪರಂಪರೆಯನ್ನು ಅನುಸರಿಸಲಾಗುತ್ತದೆ. ಗುರುದ್ವಾರದ ಒಳಗಡೆ ಸಿಖ್ಖರ ಪವಿತ್ರ ಧರ್ಮಗ್ರಂಥವಾದ “ಗುರು ಗ್ರಂಥ್ ಸಾಹೇಬ್” ಅನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಇತಿಹಾಸಕಾರರ ಪ್ರಕಾರ ಗುರುನಾನಕರು ಧರ್ಮ ಪ್ರಚಾರದ ಸಮಯದಲ್ಲಿ ಬೀದರ್​ಗೆ ಬಂದು ನೆಲೆಸಿದ್ದಲ್ಲದೆ, ತಮ್ಮ ದಿವ್ಯಜ್ಞಾನದಿಂದ ಬಳಿಗೆ ಬಂದ ಭಕ್ತರ ಕಷ್ಟ -ಕಾರ್ಪಣ್ಯಯಗಳನ್ನು ಬಗೆಹರಿಸಿದರು. ಬಯಲುಸೀಮೆಯ ಪ್ರದೇಶವಾದ ಬೀದರ್ ಜಿಲ್ಲೆಯಲ್ಲಿ ನೀರಿನ ಬರವಿದ್ದರಿಂದ ಎಲ್ಲ ಕಡೆ ನೀರಿಗಾಗಿ ಪರದಾಡುತ್ತಿದ್ದ ಸಮಯವದು. ಎಲ್ಲಿ ಬಾವಿ ತೊಡಿದರು ಕುಡಿಯಲು ಯೋಗ್ಯವಾದ ನೀರು ದೊರಕದಾಗಿತ್ತು . ಆ ಸಮಯದಲ್ಲಿ ಗುರುನಾನಕರು ಬೆಟ್ಟದ ಒಂದು ಭಾಗಕ್ಕೆ ಬಂದು ದೇವರ ನಾಮಸ್ಮರಣೆ ಮಾಡುತ್ತಾ ತಮ್ಮ ಕಾಲಿನ ಹೆಬ್ಬೆರಳನ್ನು ನೆಲಕ್ಕೆ ತಾಗಿಸಿ, ಮಣ್ಣಿನ ಮೇಲ್ಭಾಗವನ್ನು ಸ್ವಲ್ಪ ಕದಡಿದ್ದರಿಂದ ಅಲ್ಲಿ ಪವಿತ್ರವಾದ, ತಿಳಿಯಾದ ಕುಡಿಯುವ ನೀರಿನ ಕಾರಂಜಿ ಉಂಟಾಯಿತು ಎನ್ನುವ ಪ್ರತೀತಿ ಇದೆ. ಇದರಿಂದಾಗಿ ಈ ಪವಿತ್ರ ಸ್ಥಳಕ್ಕೆ “ನಾನಕ ಝೀರ” ಎಂದು ಹೆಸರಿಡಲಾಗಿದೆ.

ಇಂದಿಗೂ ಇಲ್ಲಿ ಸತತವಾಗಿ ನೀರಿನ ಝರಿ ಹರಿಯುತ್ತದೆ. ಬಂದವರೆಲ್ಲ ಈ ನೀರನ್ನು ಸೇವಿಸುತ್ತಾರೆ. ಇದನ್ನು ತುಂಬಾ ಪವಿತ್ರ ಸ್ಥಳವೆಂದು ತಿಳಿಯಲಾಗಿದೆ. ಈ ನೀರನ್ನು ಸೇವಿಸುವುದರಿಂದ ನಮ್ಮ ಪಾಪ – ಕರ್ಮ ಗಳೆಲ್ಲವು ಕಳೆಯುವುದೆಂಬ ಪ್ರತೀತಿ ಇದೆ. ಇಲ್ಲಿಂದ ಹರಿದು ಬಂದ ನೀರನ್ನು ಗುರುದ್ವಾರದ ಮುಂದೆ ಇರುವ ಕಲ್ಯಾಣಿಗೆ ಬಿಡಲಾಗಿದೆ. ಈ ಕಲ್ಯಾಣಿಯಲ್ಲಿ ಭಕ್ತರು ಮಿಂದು ದೇವರ ದರ್ಶನ ಪಡೆಯುತ್ತಾರೆ. ದೇವಸ್ಥಾನದ ವಸತಿ ಗೃಹಗಳಿದ್ದು, ಬಂದವರಿಗೆ ಉಳಿದುಕೊಳ್ಳಲು ಸೌಲಭ್ಯ ಕಲ್ಪಿಸಲಾಗಿದೆ. ಗುರುದ್ವಾರವನ್ನು ತುಂಬಾ ಶುಚಿಯಾಗಿ ಮತ್ತು ಉತ್ತಮವಾಗಿ ನೋಡಿಕೊಳ್ಳಲಾಗಿದ್ದು, ಈ ಪ್ರದೇಶದ ಸುತ್ತಮುತ್ತಲು ತುಂಬಾ ಹಸಿರಿನ ವಾತಾವರಣವಿದೆ. ಇಲ್ಲಿ ನಿರ್ಮಿಸಲಾಗಿದ್ದ ಹೂದೋಟ ಮತ್ತು ಉದ್ಯಾನವನ ಪ್ರೇಕ್ಷಕರ ಮನಸೆಳೆಯುತ್ತದೆ.

ಧಾರ್ಮಿಕತೆ ಮತ್ತು ಪರಂಪರೆಗೆ ಹೆಸರುವಾಸಿಯಾದ ದೇವಾಲಯ

ಗುರುನಾನಕ್​ ಝಿರಾ
ಇನ್ನೂ ಪ್ರತಿ ವರ್ಷ ಬೀದರ್​ನ ಗುರುನಾನಕ್​ ಝಿರಾದಲ್ಲಿ ಗುರುನಾನಕ್​ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಗುರುನಾನಕರ ಜಯಂತಿಗೆ ರಾಜ್ಯ ಸೇರಿದಂತೆ ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಗುರುನಾನಕ ಜಯಂತಿಯಲ್ಲಿ ಭಾಗವಹಿಸಿ ಸಿಖ್ ಧರ್ಮದ ಸಂಪ್ರದಾಯಂತೆ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ.

ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೂ ಸಾಂಪ್ರದಾಯಕ ಉಡುಗೆಯನ್ನು ತೊಟ್ಟು ಖಡ್ಗಗಳನ್ನು ಕೈಯಲ್ಲಿ ಹಿಡಿದು ನೂರಾರು ಜನ ಮೇರವಣಿಗೆಯಲ್ಲಿ ಭಾಗವಹಿಸಿ ಗುರುನಾನಕರ ಕೃಪೆಗೆ ಪಾತ್ರರಾಗುತ್ತಾರೆ. ಪ್ರತಿ ವರ್ಷ ನಡೆಯುವ ಗುರುನಾನಕರ ಜಯಂತಿ ದಿನ ಗುರುನಾಕರ ಗುರುದ್ವಾರದಲ್ಲಿ ದರ್ಶನಕ್ಕಾಗಿ ದೂರದ ಪಂಜಾಬ್, ಹರಿಯಾಣ, ದೆಹಲಿ, ಉತ್ತರಪ್ರದೇಶ ಮುಂತಾದ ಕಡೆಯಿಂದ ಸಿಖ್ ಸಮುದಾಯದವರು ಬೀದರ್​ಗೆ ಬಂದು ದರ್ಶನ ಪಡೆಯುತ್ತಾರೆ. ಅಲ್ಲದೆ ಇನ್ನೂ ವರ್ಷದ 12 ತಿಂಗಳು ಪಂಜಾಬ್, ಹರಿಯಾಣ, ದೆಹಲಿ, ಜೊತೆಗೆ ಭಕ್ತರು ಬಂದು ಇಲ್ಲಿ ನಡೆಯುವ ಕೀರ್ತನ, ಭಜನೆಯಲ್ಲಿ ಭಾಗಿಯಾಗಿ ಗುರುನಾನಕ ದರ್ಶನ ಪಡೆದು ಪುನೀತರಾಗುತ್ತಾರೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ: 

ಕುರುಡುಮಲೆ ಸಾಲಿಗ್ರಾಮ ಗಣೇಶನ ದೇವಸ್ಥಾನಕ್ಕೆ ಪೌರಾಣಿಕ ಐತಿಹ್ಯವಿದೆ; ರಾಮ, ಕೃಷ್ಣ ಸಹ ಇಲ್ಲಿ ಪೂಜೆ ಸಲ್ಲಿಸಿದ್ದಾರೆ!

ಐತಿಹಾಸಿಕ ಮಹತ್ವ ಪಡೆದಿರುವ ಮಾಲತೇಶ ದೇವಸ್ಥಾನ; ದೇವರ ಕಾರ್ಣಿಕವೇ ವರ್ಷದ ಭವಿಷ್ಯವಾಣಿ

Published On - 7:42 am, Mon, 13 September 21