ಕೋರ್ಟ್​ಗೆ ಸಿಡಿ ಲೇಡಿ ಹಾಜರ್​ ಸಾಧ್ಯತೆ! ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ

ಸಿಡಿ ಲೇಡಿ ಕೊರ್ಟ್‌ಗೆ ಹಾಜರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಭೆಯಲ್ಲಿ ಸಿಡಿ ಪ್ರಕರಣದ ಬಗ್ಗೆ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಮುಂದಿನ ಪ್ರಕ್ರಿಯೆ, ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ಸಾಧ್ಯತೆಯಿದೆ.

ಕೋರ್ಟ್​ಗೆ ಸಿಡಿ ಲೇಡಿ ಹಾಜರ್​ ಸಾಧ್ಯತೆ! ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್

Updated on: Mar 30, 2021 | 12:01 PM

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಪ್ರಕರಣದಲ್ಲಿ ಸಂತ್ರಸ್ಥೆ ಎನ್ನಲಾದ ಸಿಡಿ ಲೇಡಿ ಇಂದು ಕೋರ್ಟ್​ಗೆ ಹಾಜರ್​ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ದಿಢೀರನೆ ಮಹತ್ವದ ಸಭೆ ನಡೆಸಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆದಿದೆ.

ಹೆಚ್ಚುವರಿ ಪೊಲೀಸ್ ಆಯುಕ್ತ, ಪ್ರಕರಣದ ತನಿಖಾ ಜವಾಬ್ದಾರಿ ಹೊತ್ತಿರುವ ಎಸ್​ಐಟಿ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಇಂಟಲಿಜೆನ್ಸ್ ಡಿಸಿಪಿ ಸಂತೋಷ್ ಬಾಬು ಭಾಗಿಯಾಗಿದ್ದಾರೆ. ಸಿಡಿ ಲೇಡಿ ಕೊರ್ಟ್‌ಗೆ ಹಾಜರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಭೆಯಲ್ಲಿ ಸಿಡಿ ಪ್ರಕರಣದ ಬಗ್ಗೆ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಮುಂದಿನ ಪ್ರಕ್ರಿಯೆ, ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ಸಾಧ್ಯತೆಯಿದೆ.

ಪ್ರಕರಣ ಬೆಳಕಿಗೆ ಬಂದು 27 ದಿನಗಳು ಕಳೆದಿವೆ. ಈ ಮಧ್ಯೆ ಸಿಡಿ ಯುವತಿ ಬಹಿರಂಗವಾಗಿ ಕಾಣಿಸಿಕೊಳ್ಳದೆ ವಿಡಿಯೋ ಸಂದೇಶಗಳನ್ನು ಕಾಲಕಾಲಕ್ಕೆ ರವಾನಿಸುತ್ತಿದ್ದಾರೆ. ಆದರೆ ಇದೀಗ ಆಕೆಯ ಪರ ವಕೀಲರಾದ ಜಗದೀಶ್​ ಕುಮಾರ್ ಅವರು ಇದೀಗ ಕೋರ್ಟ್​ ಆವರಣದಲ್ಲಿ ಕಾಣಿಸಿಕೊಂಡಿದ್ದು ಇನ್ನೇನು ಕೆಲವೇ ಕ್ಷಣಗಳಲ್ಲಿ ಯುವತಿಯ ಪರ ಕೋರ್ಟ್​ ಕಲಾಪದಲ್ಲಿ ಹಾಜರಾಗಲಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಅವರು ಯುವತಿ ಬೆಂಗಳೂರಿನಲ್ಲಿಯೇ ಇದ್ದು, ಕೋರ್ಟ್​ ಯಾವಾಗ ಆದೇಶ ಹೊರಡಿಸುತ್ತದೆಯೋ ಆಗ ಕೋರ್ಟ್​ಗೆ ಹಾಜರಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Follow Us