ಸರ್ಕಾರಿ ಕಾಲೇಜು ಕ್ರೀಡಾಕೂಟ ಪ್ರಶಸ್ತಿ ಪತ್ರದಲ್ಲಿ ಯೇಸುಕ್ರಿಸ್ತನ ಫೋಟೋ: ಡಿಡಿಪಿಐ ಹೇಳಿದ್ದಿಷ್ಟು

| Updated By: ವಿವೇಕ ಬಿರಾದಾರ

Updated on: Aug 28, 2024 | 1:00 PM

ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಮತ್ತೊಂದು ಯಡವಟ್ಟು ಮಾಡಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಪ್ರಶಸ್ತಿ ಪತ್ರದ ಮೇಲೆ ಯೇಸುಕ್ರಿಸ್ತನ ಫೋಟೋ ಹಾಕಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ಹಲವರು ಆಕ್ರೋಶ ಹೊರ ಹಾಕಿದ್ದಾರೆ.

ಸರ್ಕಾರಿ ಕಾಲೇಜು ಕ್ರೀಡಾಕೂಟ ಪ್ರಶಸ್ತಿ ಪತ್ರದಲ್ಲಿ ಯೇಸುಕ್ರಿಸ್ತನ ಫೋಟೋ: ಡಿಡಿಪಿಐ ಹೇಳಿದ್ದಿಷ್ಟು
ಸರ್ಕಾರಿ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ರನ ಫೋಟೋ
Follow us on

ಚಾಮರಾಜನಗರ, ಆಗಸ್ಟ 28: ಸರ್ಕಾರಿ ಕಾಲೇಜುಗಳ (Government College) ಕ್ರೀಡಾಕೂಟದ ಪ್ರಶಸ್ತಿ ಪತ್ರದ ಮೇಲೆ ಯೇಸುಕ್ರಿಸ್ತನ (Jesus Christ) ಫೋಟೋ ಹಾಕಿದ್ದು, ಸಹಜವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ತಿಂಗಳು ಆಗಸ್ಟ್​ 9 ರಂದು ಕ್ರಿಸ್ತರಾಜ ಪದವಿ ಪೂರ್ವ ಕಾಲೇಜು ಮತ್ತು ಸೆಂಟ್​ ಮೇರಿಸ್​ ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಹನೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ವಿಜಯಶಾಲಿಗಳಿಗೆ ಇಲಾಖೆ ಪ್ರಶಸ್ತಿ ಪತ್ರ ನೀಡಿದೆ.

ಪ್ರಶಸ್ತಿ ಪತ್ರದ ಮೇಲೆ ಸರ್ಕಾರದ ಲೋಗೋ ಹಾಕುವ ಬದಲು ಯೇಸುಕ್ರಿಸ್ತನ ಫೋಟೋ ಹಾಕಲಾಗಿದೆ. ಯೇಸುಕ್ರಿಸ್ತನ ಫೋಟೋ ಇರುವ ಪ್ರಶಸ್ತಿ ಪತ್ರ ವೈರಲ್​ ಆಗುತ್ತಿದ್ದಂತೆ ಎಚ್ಚತ್ತ ಶಾಲಾ ಇಲಾಖೆ, ಕಾಲೇಜು ಆಡಳಿತ ಮಂಡಳಿಗೆ ನೋಟಿಸ್​ ಕಳಹುಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಿದೆ.

ನೋಟಿಸ್​ನಲ್ಲಿ ಏನಿದೆ?

2024-25 ಸಾಲಿನ ಹನೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ ಕ್ರೀಡಾ ಕೂಟವನ್ನ ನಡೆಸಲು ಎರಡೂ ಕಾಲೇಜು ಆಡಳಿತ ಮಂಡಳಿಗೆ ಜವಾಬ್ದಾರಿ ನೀಡಲಾಗಿದೆ. ಆಗಸ್ಟ್​ 09 ರಂದು ನಡೆಸಿದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಗಿದೆ. ಪ್ರಶಸ್ತಿ ಪತ್ರದಲ್ಲಿ ಕರ್ನಾಟಕ ಕ್ರೀಡಾ ಕೂಟದ ಲೋಗೊವನ್ನ ಮುದ್ರಿಸದೆ ಯೇಸುಕ್ರಿಸ್ತನ ಫೋಟೊವನ್ನ ಮುದ್ರಿಸಿ ಕ್ರೀಡಾ ಕೂಟದಲ್ಲಿ ಮುದ್ರಿಸಲಾಗಿದೆ.

ಇದು ಯಾವುದೆ ಧರ್ಮಕ್ಕೆ ಸೀಮಿತವಾಗಿಲ್ಲ. ಇದು ಸರ್ಕಾರಿ ಆಯೋಜಿತ ಕಾರ್ಯಕ್ರಮ. ಇತರೆ ಧರ್ಮದ ವಿದ್ಯಾರ್ಥಿಗಳ ಧರ್ಮಕ್ಕೆ ಧಕ್ಕೆ ಉಂಟಾಗುವ ರೀತಿ ಲೋಗೋ ಹಾಕಿಸಿದ್ದೀರಿ. ಇದು ಸರ್ಕಾರದ ನೀತಿ ನಿಯಮದ ಉಲ್ಲಂಘನೆಯಾಗಿದೆ. ನೋಟಿಸ್ ತಲುಪಿದ ಮೂರು ದಿನದ ಒಳಗಾಗಿ ಸಮಂಜಸ ಉತ್ತರ ನೀಡುವಂತೆ ಇಲಾಖೆ ಎರಡೂ ಕಾಲೇಜಿಗೆ ಸೂಚಿಸಿದೆ.

ಇದನ್ನೂ ಓದಿ: ಹೈಕೋರ್ಟ್ ಆದೇಶಕ್ಕೂ ಅಧಿಕಾರಿಗಳು ಡೊಂಟ್​ಕೇರ್​; ಮಹಿಳೆಗೆ ಕೆಲಸ ನೀಡಲು ಮೀನಾಮೇಷ

ಸಹಿ ಕುರಿತು ಗಮನಕ್ಕೆ ಬಂದಿಲ್ಲ: ಡಿಡಿಪಿಐ

ಪ್ರಕರಣ ಸಂಬಂಧ ಡಿಡಿಪಿಐ ಮಂಜುನಾಥ್ ಮಾತನಾಡಿ, 700 ಸರ್ಟಿಫಿಕೆಟ್​​ಗೆ ಸಹಿ ಮಾಡುವ ಜವಾಬ್ದಾರಿ ನನ್ನದು. ನನ್ನ ಸಹಿಯನ್ನು ಸ್ಕ್ಯಾನ್ ಮಾಡಿ ವಾಟ್ಸಾಪ್​​ನಲ್ಲಿ ಕಳುಹಿಸಿದ್ದೆ. ನನ್ನ ಗಮನಕ್ಕೆ ಬಾರದೆ ನನ್ನ ಸಹಿಯನ್ನು ಹಾಕಲಾಗಿದೆ. ಈಗಾಗಲೇ ಕಾಲೇಜು ಆಡಳಿತ ಮಂಡಳಿಗೆ ನೋಟಿಸ್ ಕೊಟ್ಟಿದ್ದೇವೆ. ವಿತರಣೆಯಾಗಿರುವ ಎಲ್ಲ ಪ್ರಮಾಣ ಪತ್ರವನ್ನು ಹಿಂಪಡೆದಿದ್ದೇವೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಬೇರೆ ಪ್ರಮಾಣ ಪತ್ರವನ್ನು ನೀಡಲು ಸೂಚಿಸಿದ್ದೇನೆ. ಈ ವಿಚಾರದ ಕುರಿತು ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಕಾನೂನಾತ್ಮಕವಾಗಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ