
ಚಿಕ್ಕಮಗಳೂರು, ಜೂನ್. 01: ನ್ಯಾಯ ಸಿಗದಿದ್ದಕ್ಕೆ ನೊಂದ ಯುವಕನೋರ್ವ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು (Kaduru) ಕೋರ್ಟ್ (Court) ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಲ್ಲಿಕಾರ್ಜುನ (34) ವಿಷ ಸೇವಿಸಿದ ಯುವಕ. ವಿಷ ಸೇವನೆ ಬಳಿಕ ಅಸ್ವಸ್ಥಗೊಂಡ ಯುವಕನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಡೂರು ತಾಲೂಕಿನ ದೇವರಕಾರೇಹಳ್ಳಿಯ ನಿವಾಸಿಯಾಗಿರುವ ಮಲ್ಲಿಕಾರ್ಜುನ ಜಮೀನು ವಿವಾದ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ತಮ್ಮ ಪರವಾಗಿ ತೀರ್ಪು ಬಾರದ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ವಿಡಿಯೋ ರೆಕಾರ್ಡ್ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನನ್ನ ತಂದೆ ನಿಧನವಾದ ಬಳಿಕ ನನ್ನ ಜಮೀನು ಲಪಟಾಯಿಸಲು ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಮ್ಮ ವಕೀಲರು ಕೂಡ ಇದರಲ್ಲಿ ಶಾಮೀಲು ಆಗಿದ್ದಾರೆ. ನನ್ನ ಸಾವಿಗೆ ಎಂಬಿ ಷಡಕ್ಷರಪ್ಪ ತಮ್ಮಂದಿರು, ಅವರ ಅಣ್ಣನ ಮಕ್ಕಳು ಮತ್ತು ರಾಜು ಕಾರಣ. ಅಮ್ಮ ನನ್ನ ಕ್ಷಮಿಸು, ನೀನು ಚೆನ್ನಾಗಿರು. ಕೈ, ಕಾಲು ಮುಗಿದರೂ ನ್ಯಾಯಾಲಯದಲ್ಲಿ ನನ್ನನ್ನು ಏನು ಕೇಳಲಿಲ್ಲ. ನಾನು ಜಮೀನು ಉಳಿಸಿಕೊಳ್ಳಲು 20 ಲಕ್ಷ ರೂ. ಸಾಲ ಮಾಡಿದ್ದೇನೆ.
ಇದನ್ನೂ ಓದಿ: ಇನ್ಮುಂದೆ ಹೈಕೋರ್ಟ್ನ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ
ನಾನು ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಆದರೆ ನನ್ನ ಪತ್ರಕ್ಕೆ ಸ್ಪಂದಿಸಿಲ್ಲ. ಈ ಮೂಲಕ ಸಿಎಂ ಮತ್ತು ಗೃಹ ಸಚಿವರಲ್ಲಿ ಬೇಡಿಕೊಳ್ಳುವೆ ನನಗೆ ನ್ಯಾಯ ಒದಗಿಸಿಕೊಡಿ. ಈ ಔಷಧಿ ಕುಡಿದು ನ್ಯಾಯಾಲಯದಲ್ಲೇ ಸಾಯುತ್ತಿದ್ದೇನೆ ಎಂದು ಮಲ್ಲಿಕಾರ್ಜುನ್ ವಿಷ ಸೇವಿಸಿದ್ದಾರೆ.
ಏ.3 ರಂದು ಹೈಕೋರ್ಟ್ ಹಾಲ್ ನಂ 1ರಲ್ಲಿ ಮೈಸೂರು ಮೂಲದ ಶ್ರೀನಿವಾಸ ಎಂಬುವರು ಕತ್ತು ಕೋಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಶ್ರೀನಿವಾಸ್ ಅವರು ಹೈಕೋರ್ಟ್ಗೆ ಸಲ್ಲಿದ್ದ ಅರ್ಜಿಯಲ್ಲಿ ಅನ್ಯಾಯವಾಗಿದೆ ಎಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ