ಬ್ಯಾಂಕ್ ಸಿಬ್ಬಂದಿಗಳೇ ಸೇರಿಕೊಂಡು ಬ್ಯಾಂಕ್, ಗ್ರಾಹಕರಿಗೆ ವಂಚನೆ; ಏನಿದು ಪ್ರಕರಣ?

ಕೆಲಸ ಕೊಟ್ಟ ಬ್ಯಾಂಕ್ ಸೇರಿದಂತೆ ಗ್ರಾಹಕರಿಗೆ ಸಿಬ್ಬಂದಿಗಳೇ ಮಹಾ ಮೋಸ ಮಾಡಿದ್ದಾರೆ. ಕಷ್ಟ ಕಾಲದಲ್ಲಿ ಹಣ ಬೇಕಾದಾಗ ಬ್ಯಾಂಕ್ ನಂಬಿ ಚಿನ್ನದ ಮೇಲೆ ಲೋನ್, FD ಹಣವನ್ನ ಗ್ರಾಹಕರು ಇಟ್ಟಿದ್ದರು. ಆದ್ರೆ, ಸಿಬ್ಬಂದಿಗಳು ಮಾತ್ರ ನಂಬಿಕೆಯಿಂದ ಕೆಲಸ ಕೊಟ್ಟಿದ್ದ ಬ್ಯಾಂಕ್, ಬ್ಯಾಂಕ್ ನಂಬಿದ್ದ ಗ್ರಾಹಕರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ. ಒಂದು ಕಡೆ ಸಿಬ್ಬಂದಿಗಳಿಂದ ಬ್ಯಾಂಕ್​ ಮೋಸ ಹೋಗಿದ್ರೆ, ಮತ್ತೊಂದು ಕಡೆ ಬ್ಯಾಂಕ್ ವಿರುದ್ಧ ಗ್ರಾಹಕರು ಆಕ್ರೋಶಗೊಂಡಿದ್ದಾರೆ. ನಮ್ಮ‌ಹಣ, ಚಿನ್ನ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಬ್ಯಾಂಕ್ ಸಿಬ್ಬಂದಿಗಳೇ ಸೇರಿಕೊಂಡು ಬ್ಯಾಂಕ್, ಗ್ರಾಹಕರಿಗೆ ವಂಚನೆ; ಏನಿದು ಪ್ರಕರಣ?
ಚಿಕ್ಕಮಗಳೂರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಸಿಬ್ಬಂದಿಗಳೇ ಸೇರಿಕೊಂಡು ಬ್ಯಾಂಕ್ ಮತ್ತು ಗ್ರಾಹಕರಿಗೆ ಮೋಸ
Updated By: ಕಿರಣ್ ಹನುಮಂತ್​ ಮಾದಾರ್

Updated on: May 22, 2024 | 6:07 PM

ಚಿಕ್ಕಮಗಳೂರು, ಮೇ.22: ನಗರದ ಬೋಳರಾಮೇಶ್ವರ ದೇವಾಲಯದ ಬಳಿ ಇರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India)ದ‌ ಚಿಕ್ಕಮಗಳೂರು ನಗರ ಶಾಖೆಯಲ್ಲಿ ಸಿಬ್ಬಂದಿಗಳು ನಡೆಸಿರುವ ಕೋಟ್ಯಾಂತರ ರೂಪಾಯಿ ವಂಚನೆ ಕಳೆದ ವರ್ಷದ ನವೆಂಬರ್​ನಲ್ಲಿ ಬೆಳಕಿಗೆ ಬಂದಿತ್ತು. ಚಿಕ್ಕಮಗಳೂರು(Chikmagaluru) ಶಾಖೆಯ ಸೆಂಟ್ರಲ್ ಬ್ಯಾಂಕ್ ಮ್ಯಾನೇಜರ್ ಸಂದೀಪ್, ಸಿಬ್ಬಂದಿ ನಾರಾಯಣಸ್ವಾಮಿ ಎಂಬುವವರು ಗ್ರಾಹಕರಿಂದ ಚಿನ್ನ ಪಡೆದು ಲೋನ್ ನೀಡಿ. ಸೆಂಟ್ರಲ್ ಬ್ಯಾಂಕ್ ಲಾಕರ್​ನಲ್ಲಿ ನಕಲಿ ಚಿನ್ನವಿಟ್ಟು ಗ್ರಾಹಕರ ಚಿನ್ನವನ್ನ ಮಾರಾಟ ಮಾಡಿದ್ದರು. ಜೊತೆಗೆ FD ಹಣ ಸೇರಿದಂತೆ ಗ್ರಾಹಕರ ಖಾತೆಯಲ್ಲಿದ್ದ ಲಕ್ಷಾಂತರ ಹಣ ಲೂಟಿ ಮಾಡಿದ್ದರು.

ಬ್ಯಾಂಕ್ ಮ್ಯಾನೇಜರ್ ಸಂದೀಪ್, ಸಿಬ್ಬಂದಿ ಸೇರಿದಂತೆ 5 ಜನರ ವಿರುದ್ಧ ದೂರು

ಈ ಸಂಬಂಧ ಸೆಂಟ್ರಲ್ ಬ್ಯಾಂಕ್ ಚಿಕ್ಕಮಗಳೂರು ನಗರ ಠಾಣೆಗೆ ಕಳೆದ ವರ್ಷದ ನವೆಂಬರ್​ನಲ್ಲಿ ಬ್ಯಾಂಕ್ ಮ್ಯಾನೇಜರ್ ಸಂದೀಪ್, ಸಿಬ್ಬಂದಿ ಸೇರಿದಂತೆ 5 ಜನರ ವಿರುದ್ಧ ದೂರು ನೀಡಿತ್ತು. ಪೊಲೀಸ್ ತನಿಖೆಯಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. 6 ತಿಂಗಳ ಕಾಲ‌ ಕಾದು ಕಾದು ಆಕ್ರೋಶಗೊಂಡ ಮೋಸ ಹೋದ ಗ್ರಾಹಕರು ಇಂದು ಬ್ಯಾಂಕಿಗೆ ಬಂದು ಚಿನ್ನ ಹಣ ವಾಪಸ್ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರಾಯಚೂರಿನಲ್ಲಿ ರೈತರ ಬೆಳೆ ಪರಿಹಾರದ ಹಣ ಗೋಲ್ಮಾಲ್! 36 ದುರುಳರಿಂದ 75 ಲಕ್ಷಕ್ಕೂ ಅಧಿಕ ಹಣ ವಂಚನೆ

ಅಸಲಿ ಚಿನ್ನದ ಜಾಗದಲ್ಲಿ ನಕಲಿ ಚಿನ್ನ

ಚಿಕ್ಕಮಗಳೂರು ಶಾಖೆಯ ಸೆಂಟ್ರಲ್ ಬ್ಯಾಂಕ್​ನಲ್ಲಿ ಕೋಟ್ಯಾಂತರ ರೂಪಾಯಿ ಚಿನ್ನದ ಲೋನ್ ನೀಡಲಾಗಿತ್ತು. ದಿನನಿತ್ಯ ಲಕ್ಷಾಂತರ ರೂಪಾಯಿ ಚಿನ್ನದ ಲೋನ್ ನೀಡುತ್ತಿರುವ ಬಗ್ಗೆ ಅನುಮಾನಗೊಂಡ ಬೆಂಗಳೂರಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ತನಿಖೆ ನಡೆಸುವಂತೆ ಹಾಸನ ವಿಭಾಗದ ಮ್ಯಾನೇಜರ್​ಗೆ ಸೂಚನೆ ನೀಡಿದರು. ದಿಢೀರ್ ಚಿಕ್ಕಮಗಳೂರು ಶಾಖೆಯ ಬ್ಯಾಂಕ್​ಗೆ ಭೇಟಿ ನೀಡಿದಾಗ ನಕಲಿ ಚಿನ್ನದ ಬ್ಯಾಗ್ ಪತ್ತೆಯಾಗಿತ್ತು. ಲಾಕರ್​ನಲ್ಲಿ ನಕಲಿ ಚಿನ್ನ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದರಿಂದ ಕಂಗಾಲದ ಬ್ಯಾಂಕ್, ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರನ್ನ ನೀಡಿದ್ದು , ನಿರ್ದಿಷ್ಟ ವಂಚನೆಯ ಹಣದ ಕುರಿತು ಪ್ರತಿ ಅಕೌಂಟ್ ಅನ್ನು ಆಡಿಟ್ ಮಾಡಿದಾಗ ಕೋಟ್ಯಾಂತರ ರೂಪಾಯಿ ವಂಚನೆ ಆಗಿರುವುದು ಆಡಿಟ್ ವೇಳೆ ಪತ್ತೆಯಾಗಿತ್ತು.

ಬ್ಯಾಂಕ್ ಸಿಬ್ಬಂದಿಗಳ ಜೊತೆ ಗ್ರಾಹಕರ ವಾಗ್ವಾದ

ಇನ್ನು ಗ್ರಾಹಕರ ಚಿನ್ನ ಕೂಡ ನಾಪತ್ತೆಯಾಗಿದ್ದು, ಅಸಲಿ ಚಿನ್ನದ ಜಾಗದಲ್ಲಿ ನಕಲಿ ಚಿನ್ನ ಇಡಲಾಗಿದೆ. ಇದರಿಂದ ಕಂಗಾಲದ ಬ್ಯಾಂಕ್ ಮುಖ್ಯ ಮ್ಯಾನೇಜರ್ ನಾರಾಯಣಸ್ವಾಮಿ, ಮ್ಯಾನೇಜರ್ ಸಂದೀಪ್ ಕೊಲ್ಲೂರಿ, ಪ್ರಶಾಂತ್​ನನ್ನ ಅಮಾನತು ಮಾಡಿ ಐವರ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರನ್ನ ನೀಡಿತ್ತು. ಕಳೆದ ನವೆಂಬರ್​ನಿಂದ ಎಸ್ಕೇಪ್ ಆಗಿರುವ ಐವರು ಪೋಲೀಸರಿಗೆ ಸಿಗದೇ ಕಳ್ಳ ಪೊಲೀಸ್ ಆಟವಾಡುತ್ತಿದ್ದಾರೆ. ಇತ್ತ ಚಿನ್ನವು ಇಲ್ಲ, ಖಾತೆಯಲ್ಲಿದ್ದ ಹಣವನ್ನು ಕಳೆದುಕೊಂಡ ಗ್ರಾಹಕರು ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ. ಬ್ಯಾಂಕ್ ಸಿಬ್ಬಂದಿಗಳ ಜೊತೆ ವಾಗ್ವಾದ ನಡೆಸಿದ್ದಾರೆ.

ಒಟ್ಟಿನಲ್ಲಿ ಕೆಲಸ ಕೊಟ್ಟ ಬ್ಯಾಂಕಿಗೆ, ಬ್ಯಾಂಕ್ ನಂಬಿದ ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚನೆಯನ್ನ ಮಾಡಿ ತಲೆಮರೆಸಿಕೊಂಡಿರುವ ಐವರ ಪತ್ತೆಗಾಗಿ ಚಿಕ್ಕಮಗಳೂರಿನ ಪೊಲೀಸರು ಬಲೆ‌ ಬೀಸಿದ್ದಾರೆ . ಅದೇನೆ ಇರಲಿ ಉಂಡ ಮನೆಗೆ ದ್ರೋಹ ಅಂದ್ರೆ ಇದೆ ಅಲ್ಲವೆ. ಸಿಬ್ಬಂದಿಗಳ ವಂಚನೆಗೆ ಗ್ರಾಹಕರು ಕಂಗಾಲಾಗಿದ್ದು, ನಮ್ಮ ಹಣ, ಚಿನ್ನ ವಾಪಸ್ ಸಿಕ್ಕಿದ್ರೆ ಸಾಕು ಅಂತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ