
ಚಿಕ್ಕಮಗಳೂರು, ಮಾ.31: ಬೆಂಗಳೂರು ನಗರದ ವೈಟ್ಫೀಲ್ಡ್ ಬಳಿಯ ರಾಮೇಶ್ವರಂ ಕೆಫೆ (Rameshwram Cafe) ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್ಐಎ (NIA) ತೀವ್ರ ತನಿಖೆ ನಡೆಸುತ್ತಿದ್ದು, ಒಂದೊಂದೇ ವಿಚಾರಗಳು ಬಹಿರಂಗವಾಗುತ್ತಿದೆ. ಇದೀಗ, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಇನ್ಸ್ಪೆಕ್ಟರ್ ಜೊತೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮುಜಾಮಿಲ್ ಸಂಪರ್ಕದಲ್ಲಿದ್ದ ಎನ್ನುವ ಸ್ಫೋಟಕ ವಿಚಾರ ಬಹಿರಂಗವಾಗಿದೆ. ಅಲ್ಲದೆ, ಎನ್ಐಎ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ತುಂಗಾ ತೀರದ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್ , ರಾಮೇಶ್ವರಂ ಬ್ಲಾಸ್ಟ್ ಪ್ರಕರಣ ಸಂಬಂಧ ಎನ್ಐಎ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ತಲೆಮರೆಸಿಕೊಂಡಿರುವ ಅಬ್ದುಲ್ ಮತೀನ್ ತಾಹ ಈ ಮೂರು ಸ್ಫೋಟ ಪ್ರಕರಣಗಳ ಹ್ಯಾಂಡ್ಲರ್ ಆಗಿದ್ದಾನೆ.
ಸದ್ಯ ಎನ್ಐಎ ಅಧಿಕಾರಿಗಳು ಹ್ಯಾಂಡ್ಲರ್ ತಾಹ ಮತ್ತು ಬಾಂಬರ್ ಜೊತೆ ಸಂಪರ್ಕದಲ್ಲಿದ್ದ ಬಂಧಿತ ಆರೋಪಿ ಮುಜಾಮಿಲ್ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅದರಂತೆ, ಪೊಲೀಸ್ ಇನ್ಸ್ಪೆಕ್ಟರ್ ಬಾಡಿಗೆ ಮನೆ ಕೊಡಿಸಿದ್ದರ ಬಗ್ಗೆ ಬಾಯಿಬಿಟ್ಟಿದ್ದಾನೆ.
ಇದನ್ನೂ ಓದಿ: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಉಗ್ರರು ಮಾಡಿದ ಖರ್ಚು 4,500 – 5 ಸಾವಿರ!
ಬಾಡಿಗೆ ಮನೆ ಕೊಡಿಸುವಂತೆ ಮುಜಾಮಿಲ್, ಪೊಲೀಸ್ ಇನ್ಸ್ಪೆಕ್ಟರ್ ಸಹಾಯ ಕೇಳಿದ್ದಾನೆ. ಚಿಕ್ಕಮಗಳೂರು ನಗರದ ಅಯ್ಯಪ್ಪ ನಗರದಲ್ಲಿರುವ ಮಾಲೀಕರೊಬ್ಬರನ್ನು ಸಂಪರ್ಕಿಸಿ ಮುಜಾಮಿಲ್ಗೆ ಬಾಡಿಗೆ ಮನೆ ನೀಡುವಂತೆ ಇನ್ಸ್ಪೆಕ್ಟರ್ ಸೂಚಿಸುತ್ತಾರೆ. ಅದರಂತೆ, ಮುಜಾಮಿಲ್ಗೆ ಮಾಲೀಕರು ಬಾಡಿಗೆ ಮನೆ ನೀಡಿದ್ದರು.
ಒಂದು ವರ್ಷದ ಹಿಂದೆ ಬಾಡಿಗೆ ಮನೆಯನ್ನು ತನ್ನ ಹೆಸರಿನಲ್ಲೇ ಪಡೆದಿದ್ದ ಮುಜಾಮಿಲ್, ತನ್ನ ತಾಯಿಯೊಂದಿಗೆ ನೆಲೆಸಿದ್ದನು. 6 ತಿಂಗಳಿನಿಂದ ಅಯ್ಯಪ್ಪ ನಗರದ ಬಾಡಿಗೆ ಮನೆಯಲ್ಲೇ ಇದ್ದ ಮುಜಾಮಿಲ್, ರಾಮೇಶ್ವರಂ ಕೆಫೆ ಸ್ಫೋಟ ನಡೆಯುವ 20 ದಿನದ ಹಿಂದೆ ಬೆಂಗಳೂರಿಗೆ ತೆರಳಿದ್ದನು. ಬಳಿಕ ಮುಜಾಮಿಲ್ ಬಂಧನ ಬೆನ್ನಲೇ ಆತನ ತಾಯಿ ಬಾಡಿಗೆ ಮನೆಗೆ ಬೀಗ ಹಾಕಿ ಹೋಗಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಎನ್ಐಎ ಅಧಿಕಾರಿಗಳು, ಅಯ್ಯಪ್ಪ ನಗರದ ಬಾಡಿಗೆ ಮನೆಯ ಮೇಲು ದಾಳಿ ಮಾಡಿದ್ದರು. ಆದರೆ, ಕಳೆದ ಮೂರು ದಿನಗಳಿಂದ ಬಾಡಿಗೆ ಮನೆಗೆ ಬೀಗ ಹಾಕಲಾಗಿದೆ. ಸದ್ಯ, ಮುಜಾಮಿಲ್ಗೆ ಬಾಡಿಗೆ ಮನೆ ಕೊಡಿಸಿದ್ದ ಇನ್ಸ್ಪೆಕ್ಟರ್ ಕುರಿತು ಎನ್ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಮುಜಾಮಿಲ್ ಜೊತೆ ಸಂಪರ್ಕದಲ್ಲಿದ್ದವರನ್ನು ವಿಚಾರಣೆ ನಡೆಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ