Chitradurga Accident: ಗೋವಾ ಟ್ರಿಪ್ ಮುಗಿಸಿ ಬೆಂಗಳೂರಿಗೆ ಬರುವಾಗ ಅಪಘಾತ; ಮೂರು ತಿಂಗಳ ಮಗು ಸೇರಿ ಮೂವರ ಸಾವು

ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಫಾರ್ಚುನರ್ ಕಾರ್ ಡಿಕ್ಕಿ ಹೊಡೆದಿದ್ದು ಮೂರು ತಿಂಗಳ ಮಗು ಸೇರಿ ಮೂವರು ಮೃತಪಟ್ಟಿದ್ದಾರೆ. ಕುಟುಂಬ ಸಮೇತರಾಗಿ ಗೋವಾ ಟ್ರಿಪ್ ಮುಗಿಸಿ ವಾಪಸ್ ಹೊರಟಿದ್ದಾಗ ಘಟನೆ ನಡೆದಿದೆ.

Chitradurga Accident: ಗೋವಾ ಟ್ರಿಪ್ ಮುಗಿಸಿ ಬೆಂಗಳೂರಿಗೆ ಬರುವಾಗ ಅಪಘಾತ; ಮೂರು ತಿಂಗಳ ಮಗು ಸೇರಿ ಮೂವರ ಸಾವು
ಗೊಲ್ಲರಹಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದ ಅಪಘಾತ
Edited By:

Updated on: Jun 12, 2023 | 3:46 PM

ಚಿತ್ರದುರ್ಗ: ಕುಟುಂಬ ಸಮೇತರಾಗಿ ಗೋವಾ ಟ್ರಿಪ್(Goa) ಮುಗಿಸಿ ವಾಪಸ್ ಹೊರಟಿದ್ದರು. ಇನ್ನೇನು ಇನ್ನೂರು ಕಿ.ಮೀ ದೂರದಲ್ಲಿ ಊರು ಬಂದೇ ಬಿಟ್ಟಿತೆಂಬ ಖುಷಿಯಲ್ಲಿದ್ದರು(Chitradurga Accident). ಆದ್ರೆ, ಲಾರಿ ರೂಪದಲ್ಲಿ ಎದುರಾದ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಫಾರ್ಚುನರ್ ಕಾರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಕಾರ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂರು ತಿಂಗಳ ಮಗು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಚಿತ್ರದುರ್ಗ ತಾಲೂಕಿನ ವಿಜಯಪುರ ಗೊಲ್ಲರಹಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ಮೂಲದ ಕುಟುಂಬ ಗೋವಾದಿಂದ‌ ಮರಳಿ ಬೆಂಗಳೂರಿಗೆ ಹೊರಟಿತ್ತು. ಇನ್ನೇನು ಇನ್ನೂರು ಕಿ.ಮೀ ಬೆಂಗಳೂರು ಬಂದೇ ಬಿಡುತ್ತಿತ್ತು. ಆದ್ರೆ, ಇಂದು ಬೆಳಗಿನ ಜಾವ 2:30ರ ಸುಮಾರಿಗೆ ವಿಜಯಪುರ ಗೊಲ್ಲರಹಟ್ಟಿ ಬಳಿ ಫಾರ್ಚುನರ್ ಕಾರ್ ಮುಂಭಾಗದಲ್ಲಿ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಕಾರ್​ನಲ್ಲಿದ್ದ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ತಬ್ಸುಮ್(28), ಸಂಬಂಧಿ ಜಾಕೀರ್ ಅಹ್ಮದ್ (60) ಸ್ಥಳದಲ್ಲೇ ಮೃತಪಟ್ಟಿದ್ದರೆ ತಬ್ಸುಮ್ ಪುತ್ರಿ ಮೂರು ತಿಂಗಳ ಮಗು ಫಾತಿಮಾ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಕಾರ್​ನಲ್ಲಿದ್ದ ಆರು ಜನ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Mysuru Accident: KSRTC ಬಸ್​ ಡಿಕ್ಕಿಯಾಗಿ ಕಾರಿನಲ್ಲಿದ್ದ ನಿಲುವಾಗಿಲು ಗ್ರಾ.ಪಂ. ಸದಸ್ಯ ಸಾವು

ಇನ್ನು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪಘಾತ ಸಂಖ್ಯೆ ಹೆಚ್ಚಳ ಆಗಿದೆ. ಕಳೆದ ಒಂದು ವಾರದಲ್ಲಿ ಎರಡು ಮೇಜರ್ ಅಪಘಾತಗಳು ಸಂಭವಿಸಿದ್ದು ಆರು ಜನ ಸಾವಿಗೀಡಾಗಿದ್ದಾರೆ. ಹೊಸ ಬೈಪಾಸ್ ಹೆದ್ದಾರಿಯಲ್ಲಿ ನಿತ್ಯ ಅಪಘಾತ ಸಂಭವಿಸುತ್ತಿದ್ದು ಸಾವು ನೋವು ಘಟಿಸುತ್ತಿವೆ. ಹೆದ್ದಾರಿಗಳು ಹೆಮ್ಮಾರಿಯಂತಾಗಿದ್ದು ಜನರಲ್ಲಿ ಆತಂಕ ಸೃಷ್ಠಿ ಆಗಿದೆ ಎಂದು ಜನ ಕಿಡಿ ಕಾರುತ್ತಿದ್ದಾರೆ. ಈ ಬಗ್ಗೆ ಎಸ್ಪಿ ಕೆ.ಪರಶುರುಮ್ ಅವ್ರನ್ನು ಪ್ರಶ್ನಿಸಿದಾಗ ಅಪಘಾತಗಳ ಸಂಖ್ಯೆ ಹೆಚ್ಚಿದ್ದು ನಿಜ. ಈಗಾಗಲೇ ಹಲವೆಡೆ ಸಿಸಿಟಿವಿ ಅಳವಡಿಸಲಾಗಿದೆ. ಅತಿ ವೇಗ, ನಿಯಮ ಮೀರಿ ವಾಹನ ಚಾಲನೆ, ಹೆದ್ದಾರಿ ಬದಿ ವಾಹನ ನಿಲುಗಡೆ ಬಗ್ಗೆ ಪರಿಶೀಲಿಸಿ ಅಪಘಾತಗಳ ಕಡಿವಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹೇಳಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ತಾಲೂಕಿನ ವಿಜಯಪುರ ಗೊಲ್ಲರಹಟ್ಟಿ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:40 pm, Mon, 12 June 23

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us