ಕಲುಷಿತ ನೀರಿನಿಂದ ಸುದ್ದಿಯಾಗಿದ್ದ ಕವಾಡಿಗರಹಟ್ಟಿಯ ಸರ್ಕಾರಿ ಶಾಲೆ ಈಗ ವಿದ್ಯಾರ್ಥಿಗಳ ಗಮನ ಸೆಳೆಯುತ್ತಿದೆ! ಏನೀ ಬದಲಾವಣೆ?

ಚಿತ್ರದುರ್ಗದಲ್ಲಿ ಕಲುಷಿತ ನೀರಿಗೆ 6 ಜನ ಬಲಿಯಾಗಿ ಸುದ್ದಿಯಾಗಿದ್ದ ಕವಾಡಿಗರಹಟ್ಟಿ ಈಗ ಸುಂದರ ಸರ್ಕಾರಿ ಶಾಲೆ ಮೂಲಕ ನಾಡಿನ ಗಮನಸೆಳೆಯುವಂತಾಗಿದೆ. ಯಾವ ಕಾನ್ವೆಂಟ್ ಗೂ ಸರ್ಕಾರಿ ಶಾಲೆ ಕಮ್ಮಿ ಇಲ್ಲ ಎಂದು ಮಕ್ಕಳು ಖುಷಿಯಿಂದ ಶಾಲೆಗೆ ಬರುವಂತಾಗಿದೆ.

ಕಲುಷಿತ ನೀರಿನಿಂದ ಸುದ್ದಿಯಾಗಿದ್ದ ಕವಾಡಿಗರಹಟ್ಟಿಯ ಸರ್ಕಾರಿ ಶಾಲೆ ಈಗ ವಿದ್ಯಾರ್ಥಿಗಳ ಗಮನ ಸೆಳೆಯುತ್ತಿದೆ! ಏನೀ ಬದಲಾವಣೆ?
ಕವಾಡಿಗರಹಟ್ಟಿಯ ಸರ್ಕಾರಿ ಶಾಲೆ ಈಗ ವಿದ್ಯಾರ್ಥಿಗಳ ಗಮನ ಸೆಳೆಯುತ್ತಿದೆ!
Edited By: ಸಾಧು ಶ್ರೀನಾಥ್​

Updated on: Dec 02, 2023 | 2:38 PM

ಸರ್ಕಾರಿ ಶಾಲೆ ಅಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಅಂತೆಯೇ ಸರ್ಕಾರಿ ಶಾಲೆಯ ದುರವಸ್ಥೆಗೆ ಕನ್ನಡಿ ಹಿಡಿಯುವ ಅನೇಕ ಉದಾಹರಣೆಗಳಿವೆ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಹಿರಿಯ ವಿದ್ಯಾರ್ಥಿಗಳು, ನಾಗರಿಕರು ಶಾಲಾ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲುವ ಮೂಲಕ ಮಾದರಿ ಶಾಲೆಯನ್ನಾಗಿಸಿದ್ದಾರೆ. ಈ ಕುರಿತು ವರದಿ ಇಲ್ಲಿದೆ. ಅಪರೂಪದ ಉಪಯುಕ್ತ ಗೋಡೆ ಚಿತ್ರಗಳ ಮೂಲಕ ವಿದ್ಯಾರ್ಥಿಗಳ (students) ಸೆಳೆಯುತ್ತಿರುವ ಶಾಲೆ. ಕಾನ್ವೆಂಟ್ ಮಾದರಿ ಶಾಲೆ ಕಂಡು ವಿದ್ಯಾರ್ಥಿಗಳು ದಿಲ್ ಖುಷ್. ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತೆ ನವೀಕರಣಗೊಂಡಿರುವ ಸರ್ಕಾರಿ ಶಾಲೆ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ (Chitradurga) ನಗರದ ಕವಾಡಿಗರಹಟ್ಟಿಯ (Kavadigarhatti) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Government School).

ಹೌದು, ಕೆಲ ತಿಂಗಳ ಹಿಂದಷ್ಟೇ ಕಲುಷಿತ ನೀರಿನ ಅವಘಡದಿಂದ ( Contaminated water) ಕವಾಡಿಗರಹಟ್ಟಿ ಭಾರೀ ಸುದ್ದಿಯಾಗಿತ್ತು. ಅದೇ ಕವಾಡಿಗರಹಟ್ಟಿಯ ಸರ್ಕಾರಿ ಶಾಲೆ ಈಗ ನಾಡಿನ ಗಮನಸೆಳೆಯುತ್ತಿದೆ. ಹಿರಿಯ ನಾಗರಿಕರು, ಹಳೇ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಕಾರ್ಯಕರ್ತರು ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಬಳಿದು ನವೀಕರಣಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯ ಗೋಡೆ ಚಿತ್ರಗಳನ್ನು ಬರೆಯುವ ಮೂಲಕ ವಿದ್ಯಾರ್ಥಿಗಳನ್ನು ಬರಸೆಳೆಯಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

Also read: ಇನ್ಮುಂದೆ ಕಲುಷಿತ ನೀರು ಸೇವಿಸಿ ಮರಣ ಹೊಂದಿದರೇ ಜಿ.ಪಂ ಸಿಇಒಗಳೇ ನೇರ ಹೊಣೆ: ಸಿಎಂ ಸಿದ್ದರಾಮಯ್ಯ

ಇನ್ನು ಶಾಲೆಯಲ್ಲಿ ಪಠ್ಯಕ್ಕೆ ಅನುಗುಣವಾಗಿ ವಿಜ್ಞಾನ, ಗಣಿತಕ್ಕೆ ಸಂಬಂಧಿಸಿದ ಚಿತ್ರಗಳು, ನಲಿ ಕಲಿ ಮಕ್ಕಳಿಗೆ ಅಕ್ಷರ ಅಭ್ಯಾಸ, ಹಣ್ಣು ತರಕಾರಿ, ವಾರಗಳು, ವಿರುದ್ಧಾರ್ಥಕ ಪದಗಳು, ಸೌರ ಮಂಡಲ, ಚಂದ್ರಯಾನ ಸೇರಿದಂತೆ ಇತರೆ ಚಿತ್ರಗಳು ವಿದ್ಯಾರ್ಥಿಗಳ ಗಮನ ಸೆಳೆಯುತ್ತಿವೆ.

ಚಿತ್ರ ಕಲಾವಿದರಾದ ಅನುಶ್ರೀ, ತೇಜಸ್ ಸೇರಿದಂತ ಸುಮಾರು 10 ಜನರ ತಂಡ ಶಾಲೆ ನವೀಕರಣಕ್ಕೆ ಟೀಮ್ ವರ್ಕ್ ಮಾಡಿದೆ. ಹೀಗಾಗಿ, ಹಿರಿಯ ನಾಗರಿಕರು, ಹಳೇ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಕಾರ್ಯಕರ್ತರ ಸತ್ಕಾರ್ಯದಿಂದ ಕವಾಡಿಗರಹಟ್ಟಿ ಶಾಲೆ ಮಾದರಿ ಸರ್ಕಾರಿ ಶಾಲೆಯಾಗಿ ರೂಪುಗೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us