ಮಂಗಳೂರು: ಭಾರೀ ಮಳೆಯಿಂದ ಮನೆ ಮೇಲೆ ಗುಡ್ಡ ಕುಸಿತ ಪ್ರಕರಣ: ಮೃತಪಟ್ಟವರ ಸಂಖ್ಯೆ 3 ಕ್ಕೇರಿಕೆ

ತೋಟದ ಕೆಲಸಕ್ಕೆ ಬಂದಿದ್ದ ಕೇರಳ ಮೂಲದ ಕಾರ್ಮಿಕರ ಮನೆ ಮೇಲೆ ಗುಡ್ಡ ಕುಸಿದು ಮೃತಪಟ್ಟವರ ಸಂಖ್ಯೆ 3 ಕ್ಕೇರಿಕೆ ಆಗಿದೆ.

ಮಂಗಳೂರು: ಭಾರೀ ಮಳೆಯಿಂದ ಮನೆ ಮೇಲೆ ಗುಡ್ಡ ಕುಸಿತ ಪ್ರಕರಣ: ಮೃತಪಟ್ಟವರ ಸಂಖ್ಯೆ 3 ಕ್ಕೇರಿಕೆ
ಭಾರಿ ಮಳೆಯಿಂದ ಮನೆ ಮೇಲೆ ಗುಡ್ಡ ಕುಸಿತ ಪ್ರಕರಣ: ಮೃತಪಟ್ಟವರ ಸಂಖ್ಯೆ 3 ಕ್ಕೇರಿಕೆ
Edited By:

Updated on: Jul 07, 2022 | 10:21 AM

ಮಂಗಳೂರು: ಭಾರೀ ಮಳೆಗೆ ಮನೆ ಮೇಲೆ ರಾತ್ರಿ ಗುಡ್ಡ (Landslide)  ಜರಿದು ಬಿದ್ದ ಪ್ರಕರಣ ಸಂಬಂಧ ಕೇರಳ ಮೂಲದ ಮತ್ತಿಬ್ಬರು ಸಾವನ್ನಪ್ಪಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ನಿನ್ನೆ ನಡೆದಿದೆ. ಮನೆ ಮೇಲೆ ಗುಡ್ಡ ಜರಿದ ಪರಿಣಾಮ ಮನೆಯೊಳಗೆ ನಾಲ್ವರು ಸಿಲುಕಿಕೊಂಡಿದ್ದರು. ತಕ್ಷಣ ಸ್ಥಳೀಯರಿಂದ ಇಬ್ಬರ ರಕ್ಷಣೆ ಮಾಡಲಾಗಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ನಡೆದಿತ್ತು. ಕೊಟ್ಟಾಂ ನಿವಾಸಿ ಬಾಬು (46) ಮತ್ತು ಸಂತೋಷ್ ಅಲ್ಫೊನ್ಸಾ(46) ಮೃತಪಟ್ಟ ದುರ್ದೈವಿಗಳು. ನಿನ್ನೆ ರಾತ್ರಿ ರಕ್ಷಣೆ ಮಾಡಿ ಮೂವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದವರಲ್ಲಿ ಇಬ್ಬರು ಮೃತಪಟ್ಟಿದ್ದು, ಕಣ್ಣೂರು ನಿವಾಸಿ ಜಾನ್ (44) ಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೇರಳದ ಪಾಲಕ್ಕಾಡ್ ನಿವಾಸಿ ಬಿಜು(45) ನಿನ್ನೆಯೇ ಮೃತಪಟ್ಟಿದ್ದ.

ಹೆನ್ರಿ ಕಾರ್ಲೊ ಎಂಬವರಿಗೆ ಸೇರಿದ ಕೊಠಡಿಗೆ ಗುಡ್ಡ ಜರಿದು ಬಿದ್ದಿದೆ. ಕಾರ್ಲೋ ಅವರ ಮನೆಯ ತೋಟದ ಕೆಲಸಕ್ಕೆ ಕೇರಳ ಮೂಲದ ಕಾರ್ಮಿಕರು ಬಂದಿದ್ದರು. ನಾಲ್ವರು‌ ಅನೇಕ ವರ್ಷಗಳಿಂದ ಇವರ ತೋಟದ ಕೆಲಸ ಮಾಡುತ್ತಿದ್ದರು. ಕಾರ್ಲೋ ಅವರ ಮನೆಯ ಹತ್ತಿರದಲ್ಲಿ ಪ್ರತ್ಯೇಕ ಕೊಠಡಿ ಅವರಿಗೆ ನೀಡಲಾಗಿತ್ತು. ಜೆಸಿಬಿ ಬಳಸಿ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಮಣ್ಣು ತೆರವು ಮಾಡಿದ್ದಾರೆ. ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಹೃಷಿಕೇಶ್ ಸೋನಾವಣೆ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ: COVID-19 Updates: ಭಾರತದಲ್ಲಿ ಹೊಸ ಕೊವಿಡ್ ರೂಪಾಂತರಿ ಬಿಎ 2.75 ಪತ್ತೆ; WHO ಮಾಹಿತಿ

ಮಂಗಳೂರು ಏರ್​ಪೋರ್ಟ್​​ ರನ್​ವೇ ಸಮೀಪ ರಸ್ತೆ ಕುಸಿತ

ಏರ್​ಪೋರ್ಟ್ ರನ್​ವೇ (Runway) ಬದಿಯಲ್ಲೇ ರಸ್ತೆ ಕುಸಿದಿರುವ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅದ್ಯಪಾಡಿ ಬಳಿ ಇರುವ ರನ್ ವೇ ಸಮೀಪ ಕುಸಿತವಾಗಿದ್ದು, ಅದ್ಯಪಾಡಿಯಿಂದ ಕೈ ಕಂಬ ಹೋಗುವ ರಸ್ತೆ ಬಂದ್ ಮಾಡಲಾಗಿದೆ. ಏರ್​​ರ್ಪೋರ್ಟ್ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಧಿಕ ಮಳೆ, ನೀರಿನ ಹೊರಹೊಮ್ಮುವಿಕೆಯಿಂದ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ. ನಗರದಲ್ಲಿ ಭಾರೀ ಮಳೆ‌ ಮುಂದುವರೆದಿದ್ದು, ಇಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣವು ಸೂಕ್ಷ್ಮ ಟೇಬಲ್ ಟಾಪ್ ರನ್​ವೇ (Table Top Runway) ಹೊಂದಿರುವುದರಿಂದ ಈ ವಿದ್ಯಮಾನ ದೇಶದ ಗಮನ ಸೆಳೆದಿದೆ.

ಇದನ್ನೂ ಓದಿ: ಇಂದು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್ ಸಿಗುವುದು ಡೌಟ್! ಕಾರಣವೇನು?

Published On - 10:20 am, Thu, 7 July 22